Advertisement

ಅಭಿಷೇಕ್‌ ಜೊತೆ ನಿರೂಪ್‌ ಭಂಡಾರಿ

11:23 AM Sep 03, 2018 | |

ಅನೂಪ್‌ ಭಂಡಾರಿ ನಿರ್ದೇಶನದ “ರಾಜರಥ’ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದ ನಿರೂಪ್‌ ಭಂಡಾರಿ, ರಾಕ್‌ಲೈನ್‌ ವೆಂಕಟೇಶ್‌ ನಿರ್ಮಾಣದ ಚಿತ್ರದಲ್ಲಿ ನಟಿಸುತ್ತಿರುವುದು ಗೊತ್ತೇ ಇದೆ. ಇನ್ನು ಮೂರ್‍ನಾಲ್ಕು ದಿನಗಳ ಚಿತ್ರೀಕರಣ ನಡೆದರೆ, ಆ ಚಿತ್ರ ಪೂರ್ಣಗೊಳ್ಳಲಿದೆ. ಈಗ ನಿರೂಪ್‌ ಭಂಡಾರಿ ಸದ್ದಿಲ್ಲದೆಯೇ ಮತ್ತೂಂದು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅದೊಂದು ಅತಿಥಿ ಪಾತ್ರ.

Advertisement

ಹೌದು, ಅಂಬರೀಷ್‌ ಪುತ್ರ ಅಭಿಷೇಕ್‌ ಅಭಿನಯದ ಚೊಚ್ಚಲ ಚಿತ್ರ “ಅಮರ್‌’ ಚಿತ್ರದಲ್ಲಿ ನಿರೂಪ್‌ ಭಂಡಾರಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಕುರಿತು ಸ್ವತಃ ನಿರೂಪ್‌ ಭಂಡಾರಿ ಅವರೇ “ಉದಯವಾಣಿ’ಗೆ ಸ್ಪಷ್ಟಪಡಿಸಿದ್ದಾರೆ. “ಅಮರ್‌’ ಚಿತ್ರದಲ್ಲಿ ನಟಿಸುವ ಬಗ್ಗೆ ಹೇಳಿಕೊಳ್ಳುವ ನಿರೂಪ್‌ ಭಂಡಾರಿ, “ನಿರ್ದೇಶಕ ನಾಗಶೇಖರ್‌ ಅವರು ಒಮ್ಮೆ ಫೋನ್‌ ಮಾಡಿ, “ಅಮರ್‌’ ಚಿತ್ರದಲ್ಲೊಂದು ವಿಶೇಷ ಪಾತ್ರವಿದೆ.

ಮಾಡಿ ಅಂತ ಕೇಳಿದರು. ಅವರು ಕಥೆ ಹಾಗು ಪಾತ್ರದ ಬಗ್ಗೆ ವಿವರಿಸಿದರು. ತಕ್ಷಣವೇ ಒಪ್ಪಿಕೊಂಡೆ. ಆ ಚಿತ್ರದಲ್ಲಿ ನಾನು ಅತಿಥಿ ಕಲಾವಿದನಾಗಿ ನಟಿಸಲು ಮುಖ್ಯವಾಗಿ ಎರಡು ಕಾರಣ. ಅದೊಂದು ಒಳ್ಳೆಯ ಪಾತ್ರ ಅನ್ನುವುದು ಮತ್ತು ಅಂಬರೀಷ್‌, ಸುಮಲತಾ ಅವರ ಪುತ್ರ ಅಭಿಷೇಕ್‌ ಅವರ ಮೊದಲ ಚಿತ್ರ ಎಂಬುದು. ಆ ಕಾರಣಕ್ಕೆ ನಾನು “ಅಮರ್‌’ ಚಿತ್ರದಲ್ಲಿ ನಟಿಸಲು ಒಪ್ಪಿದ್ದೇನೆ.

ಕಥೆಗೊಂದು ಮುಖ್ಯವಾದ ತಿರುವು ಕೊಡುವಂತಹ ಪಾತ್ರ ನನ್ನದು. ನಾನು ಇದುವರೆಗೂ ಅಭಿಷೇಕ್‌ ಅವರನ್ನು ಭೇಟಿ ಮಾಡಿಲ್ಲ. ಆದರೆ, ಅವರ ವೀಡಿಯೋ ನೋಡಿದ್ದೇನೆ. ಅವರ ಮಾತುಗಳನ್ನು ಕೇಳಿದ್ದೇನೆ. ಎಲ್ಲೋ ಒಂದು ಕಡೆ ಅವರನ್ನು ನೋಡುವಾಗ, ಅಂಬರೀಷ್‌ ಸರ್‌ ನೆನಪಾಗುತ್ತಾರೆ. ಅವರ ವಾಯ್ಸ ಕೂಡ ಸಖತ್‌ ಆಗಿದೆ. “ಅಮರ್‌’ ಬಗ್ಗೆ ಎಲ್ಲೆಡೆ ನಿರೀಕ್ಷೆ ಇದೆ. ನನಗೂ ದೊಡ್ಡ ನಿರೀಕ್ಷೆ ಇದೆ. ಅಂತಹ ಚಿತ್ರದಲ್ಲಿ ನಾನು ನಟಿಸುತ್ತಿದ್ದೇನೆ ಎಂಬುದೇ ಹೆಮ್ಮೆ’ ಎಂಬುದು ನಿರೂಪ್‌ ಭಂಡಾರಿ ಮಾತು.

ಅಂದಹಾಗೆ, ಮೈಸೂರಿನಲ್ಲಿ ಸೆಪ್ಟೆಂಬರ್‌ 4 ರಿಂದ ನಿರೂಪ್‌ ಭಂಡಾರಿ ಅವರ ಭಾಗದ ಚಿತ್ರೀಕರಣ ಶುರುವಾಗಲಿದೆ. ಸುಮಾರು ಐದು ದಿನಗಳ ಕಾಲ ಚಿತ್ರೀಕರಣದಲ್ಲಿ ಭಾಗವಹಿಸುತ್ತಿದ್ದಾರೆ. ಸದ್ಯಕ್ಕೆ ನಿರೂಪ್‌ ಭಂಡಾರಿ ಅವರು ಒಂದಷ್ಟು ಕಥೆಗಳನ್ನು ಕೇಳುತ್ತಿದ್ದಾರೆ. ಆದರೆ, ಯಾವ ಕಥೆಯನ್ನೂ ಒಪ್ಪಿಕೊಂಡಿಲ್ಲ. ಹೊಸತನದ ಕಥೆ, ಪಾತ್ರಕ್ಕಾಗಿ ಎದುರು ನೋಡುತ್ತಿದ್ದಾರೆ. ಇನ್ನು, ಅವರ ಸಹೋದರ ಅನೂಪ್‌ ಭಂಡಾರಿ ಸ್ಕ್ರಿಪ್ಟ್ ಮಾಡುತ್ತಿದ್ದು, ಅವರೊಂದಿಗೆ ಇನ್ನೊಂದು ಸಿನಿಮಾ ಮಾಡುವ ಯೋಚನೆಯೂ ಅವರಿಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next