Advertisement

ಒಂದು ಕಡೆ ಬಡತನ, ಇನ್ನೊಂದು ಕಡೆ ಕ್ರೀಡೆ: ಪ್ಯಾರಾ ಅಥ್ಲೀಟ್‌ ಗೆ ಕಾಡುತ್ತಿದೆ ಭವಿಷ್ಯದ ಚಿಂತೆ

09:15 AM Nov 12, 2021 | Team Udayavani |

ಹುಬ್ಬಳ್ಳಿ: ಈಕೆಯ ಹೆಸರು ನಿಲೋಫ‌ರ್‌ ಧಾರವಾಡ. ಎಡಗೈಯಿಲ್ಲ. ರಾಷ್ಟ್ರಮಟ್ಟದ ಪ್ರತಿಭಾವಂತ ಪ್ಯಾರಾ ಅಥ್ಲೀಟ್‌. ಹೀಗೆಯೇ ಮುನ್ನುಗ್ಗಿದರೆ ಅದ್ಭುತ ಭವಿಷ್ಯವಂತೂ ಎದುರಿಗಿದೆ. ದುರದೃಷ್ಟಕ್ಕೆ ಹಮಾಲಿ ವೃತ್ತಿ ಮಾಡುವ ಈಕೆಯ ತಂದೆ; ಕೇವಲ ಒಂದೂವರೆ ತಿಂಗಳ ಹಿಂದೆ ಅಕಾಲಿಕ ಮರಣಕ್ಕೀಡಾಗಿದ್ದಾರೆ. ಈಕೆಗೀಗ ಕ್ರೀಡೆಯನ್ನು ಮುಂದುವರಿಸಬೇಕೋ? ಕಡುಬಡತನ ದಲ್ಲಿರುವ ಕುಟುಂಬದ ಸಹಾಯಕ್ಕೆ ನಿಲ್ಲಬೇಕೋ ಎಂಬ ಪ್ರಶ್ನೆ ಕಾಡುತ್ತಿದೆ. ಪ್ಯಾರಾ ವಿಭಾಗದ ಜಾವೆಲಿನ್‌ ಮತ್ತು ಓಟದಲ್ಲಿ ಪ್ರತಿಭಾವಂತೆಯಾಗಿರುವ ಈಕೆಯನ್ನು ಈಗ ಸಮಾಜವೇ ಕಾಯಬೇಕಾಗಿದೆ.

Advertisement

11ನೇ ವಯಸ್ಸಲ್ಲಿ ಎಡಗೈ ಇಲ್ಲವಾಯ್ತು: ನಿಲೋಫರ್‌ ಹುಬ್ಬಳ್ಳಿಯ ಕಲ್ಮೇಶ್ವರ ನಗರದ ಬಾಡಿಗೆ ಮನೆಯಲ್ಲಿ ನೆಲೆಸಿದ್ದಾರೆ. ಕಡು ಬಡತನದಲ್ಲೂ ತಂದೆ ಶಂಶುದ್ದೀನ ಧಾರವಾಡದಲ್ಲಿ ಹಮಾಲಿ ವೃತ್ತಿ ಮಾಡಿಕೊಂಡು ಮಗಳ ಸಾಧನೆಗೆ ನೀರೆದಿದ್ದಾರೆ. ನಿಲೋಫ‌ರ್‌ 11ನೇ ವಯಸ್ಸಿನಲ್ಲಿದ್ದಾಗ ಮನೆ ಮೇಲೆ ಬಟ್ಟೆ ಒಣಗಿಸಲು ಹೋಗಿದ್ದರು. ಆಗ ತುಂಡಾಗಿ ಬಿದ್ದ ವಿದ್ಯುತ್‌ ತಂತಿ ತಾಗಿ ಎಡಗೈ ಸಂಪೂರ್ಣ ಇಲ್ಲವಾಗಿದೆ. ಇಂತಹ ಸ್ಥಿತಿಯಲ್ಲೂ ಇನ್ನೊಬ್ಬರ ನೆರವು ಬಯಸದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸುವ ಹಂಬಲ ಹೊಂದಿ ದ್ದಾರೆ. ಆದರೆ ಬಡತನ ಅಡ್ಡಿಯಾಗಿದೆ.

ಇದನ್ನೂ ಓದಿ:ಕಿರಿಯರ ಹಾಕಿ ವಿಶ್ವಕಪ್‌: ವಿವೇಕ್‌ ಸಾಗರ್‌ ನಾಯಕ

ಬಹುಮುಖ ಪ್ರತಿಭೆ: ಕೇವಲ ಒಂದೂವರೆ ವರ್ಷದ ಸ್ವಪ್ರಯತ್ನ, ಸ್ಥಳೀಯ ತರಬೇತುದಾರರ ತರಬೇತಿ, ಕ್ರೀಡಾಪಟುಗಳ ಮಾರ್ಗ ದರ್ಶನ ದಿಂದ ನಿಲೋಫರ್‌ ರಾಷ್ಟ್ರಮಟ್ಟದವರೆಗೆ ತಲುಪಿ ದ್ದಾರೆ. 2019 ಡಿಸೆಂಬರ್‌ ತಿಂಗಳಲ್ಲಿ ಪೂರ್ಣಪ್ರಮಾಣದಲ್ಲಿ ಕ್ರೀಡೆಗಳಲ್ಲಿ ತೊಡಗಿಕೊಂಡ ಪರಿಣಾಮ 2020ರಲ್ಲಿ ಮೈಸೂರಿನಲ್ಲಿ ನಡೆದ 30ನೇ ರಾಜ್ಯ ಮಟ್ಟದ ಪ್ಯಾರಾ ಕ್ರೀಡಾ ಕೂಟದ 100 ಮೀಟರ್‌ ಓಟದ ಸ್ಪರ್ಧೆಯಲ್ಲಿ ಬೆಳ್ಳಿ, ಜಾವೆಲಿನ್‌ ಎಸೆತದಲ್ಲಿ ಬೆಳ್ಳಿ ಪದಕ ಗಳಿಸಿ ದರು. 2021ರಲ್ಲಿ ನಡೆದ 31ನೇ ರಾಜ್ಯಮಟ್ಟದ ಪ್ಯಾರಾ ಕ್ರೀಡಾಕೂಟದಲ್ಲಿ ಗುಂಡು ಎಸೆತದಲ್ಲಿ ಚಿನ್ನ, ಹಾಗೂ ಜಾವೆಲಿನ್‌ ಎಸೆತದಲ್ಲಿ ಬೆಳ್ಳಿ ಪದಕ ತನ್ನದಾಗಿಸಿಕೊಂಡರು. ಬೆಂಗಳೂರಿನಲ್ಲಿ ಈ ವರ್ಷ ನಡೆದ ರಾಷ್ಟ್ರಮಟ್ಟದ ಪ್ಯಾರಾ ಅಥ್ಲೆಟಿಕ್‌ ಚಾಂಪಿಯನ್‌ಶಿಪ್‌ನ ಜಾವೆಲಿನ್‌ ಎಸೆತದಲ್ಲಿ (19.82 ಮೀ) ಕಂಚಿನ ಪದಕ ಗೆದ್ದಿದ್ದಾರೆ. ಈ ವೇಳೆ ಅವರ ತಂದೆ ಹಾಸಿಗೆ ಹಿಡಿದಿದ್ದರು.

Advertisement

ತರಬೇತಿ: ನೆಹರೂ ಕಾಲೇಜಿನಲ್ಲಿ ಪದವಿ ದ್ವಿತೀಯ ವರ್ಷದಲ್ಲಿದ್ದಾಗ ಕ್ರಿಕೆಟ್‌ ಆಟದ ಸಂದರ್ಭದಲ್ಲಿ ಕಾಲೇಜಿನ ದೈಹಿಕ ನಿರ್ದೇಶಕ ಇಮಾಮ್‌ ಹುಸೇನ ಮಕ್ಕುಬಾಯಿ ಇವರ ಪ್ರತಿಭೆ ಗುರುತಿಸಿ ಕ್ರೀಡೆಯ ಬಗ್ಗೆ ಆಸಕ್ತಿ ಮೂಡಿಸಿದರು. ಮುಂದೆ ಬಾಲಚಂದ್ರ ಸಾಖೆ ಒಂದಿಷ್ಟು ದೈಹಿಕ ಕಸರತ್ತು, ತರಬೇತಿ ನೀಡಿದರು. ರಾಷ್ಟ್ರಮಟ್ಟಕ್ಕೆ ಆಯ್ಕೆ ಯಾದ ಮೇಲೆ ಮಹಾಂತೇಶ ಬಳ್ಳಾರಿ ಎನ್ನುವವರ ಬಳಿ ಒಂದಿಷ್ಟು ತರಬೇತಿ ಪಡೆದಿದ್ದಾರೆ.

ತನ್ನ ವಿದ್ಯಾಭ್ಯಾಸ, ತಂಗಿಯರ ಭವಿಷ್ಯದ ಚಿಂತೆ: ಎರಡು ವರ್ಷಗಳ ಅಂತರದಲ್ಲಿ ಪರಿಣಿತರ ತರಬೇತಿಯಿಲ್ಲದೆ ರಾಷ್ಟ್ರಮಟ್ಟದವರಿಗೆ ತಲುಪುವುದು ಸುಲಭವಲ್ಲ. ಆದರೆ ಸಾಧಿಸಬೇಕು ಎನ್ನುವ ಛಲ ರಾಷ್ಟ್ರ ಮಟ್ಟಕ್ಕೆ ಕೊಂಡೊಯ್ದಿದೆ. ಬಿಕಾಂ ಅಂತಿಮ ಸೆಮಿಸ್ಟರ್‌ ಪರೀಕ್ಷೆ ಬರೆದಿರುವ ನಿಲೋಫರ್‌ ಮುಂದೇನು ಎನ್ನುವ ಪ್ರಶ್ನೆ ಹೊಂದಿದ್ದಾರೆ. ಸಹೋದರನೂ ಹಮಾಲಿ ಕೆಲಸ ಮಾಡುತ್ತಿದ್ದಾರೆ. ಇಬ್ಬರ ತಂಗಿಯರ ಶಿಕ್ಷಣವೂ ನಡೆಯಬೇಕು. ಹಾಗಾಗಿ ಹಣದ ತೀವ್ರ ತೊಂದರೆ ಎದುರಿಸುತ್ತಿದ್ದಾರೆ. ಯಾವುದಾದರೂ ಕೆಲಸ ಸಿಕ್ಕರೆ ಸಾಕು ಎಂದು ಅಲೆಯುತ್ತಿದ್ದಾರೆ.

ಹೇಮರಡ್ಡಿ ಸೈದಾಪುರ

Advertisement

Udayavani is now on Telegram. Click here to join our channel and stay updated with the latest news.

Next