Advertisement

ಮಾ.25ಕ್ಕೆ ನಿಖಿಲ್‌ ನಾಮಪತ್ರ ; ಮಂಡ್ಯದ ಅಳಿಯನಾಗ್ತಾರಾ ನಿಖಿಲ್‌?

06:14 AM Mar 22, 2019 | Team Udayavani |

ಮಂಡ್ಯ: ಹೈ ವೋಲ್ಟೇಜ್‌ ಚುನಾವಣಾ ಕಣವಾಗಿ ಪರಿವರ್ತಿತಗೊಂಡಿರುವ ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಅಂಬರೀಷ್‌ ಅವರು ಈಗಾಗಲೇ ನಾಮಪತ್ರ ಸಲ್ಲಿಸಿದ್ದಾರೆ. ಇದೀಗ ಈ ಕ್ಷೇತ್ರದಿಂದ ಆಯ್ಕೆ ಬಯಸಿರುವ ಕಾಂಗ್ರೆಸ್‌ – ಜೆಡಿಎಸ್‌ ಪಕ್ಷದ ಮೈತ್ರಿ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿ ಅವರು ನಾಮಪತ್ರ ಸಲ್ಲಿಸಲು ದಿನಗಣನೆ ಪ್ರಾರಂಭಗೊಂಡಿದೆ. ಮಾರ್ಚ್‌ 25ರ ಸೋಮವಾರದಂದು ನಿಖಿಲ್‌ ಕುಮಾರಸ್ವಾಮಿಯವರು ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಾಯಕರು ಇಂದು ಜಂಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Advertisement

ನಿಖಿಲ್‌ ನಾಮಪತ್ರ ಸಲ್ಲಿಕೆ ವಿಚಾರವನ್ನು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಸಚಿವ ಪುಟ್ಟರಾಜು ಅವರು ಮಾಹಿತಿ ನೀಡಿದರು. ನಾಮಪತ್ರ ಸಲ್ಲಿಸುವ ದಿನದಂದು ತಮ್ಮ ಯುವ ನಾಯಕನನ್ನು ಬೆಂಬಲಿಸಿ ಮಂಡ್ಯ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ 8 ವಿಧಾನಸಭಾ ಕ್ಷೇತ್ರಗಳಿಂದ ಸುಮಾರು 2 ಲಕ್ಷ ಜೆಡಿಎಸ್‌ ಕಾರ್ಯಕರ್ತರು ಆಗಮಿಸುವ ನಿರೀಕ್ಷೆ ಇದೆ ಎಂದು ಸಚಿವರು ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದರು. ಕಾರ್ಯಕರ್ತರ ಜೊತೆ ಮೆರವಣಿಗೆಯಲ್ಲಿ ತೆರಳಿ ನಿಖಿಲ್‌ ಅವರು ಜಿಲ್ಲಾಧಿಕಾರಿಯವರ ಕಛೇರಿಯಲ್ಲಿ ನಾಮಪತ್ರವನ್ನು ಸಲ್ಲಿಸಲಿದ್ದಾರೆ. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿಯವರೂ ಭಾಗವಹಿಸಲಿದ್ದಾರೆ ಎಂದು ಪುಟ್ಟರಾಜು ತಿಳಿಸಿದರು.

ಮಂಡ್ಯದ ಅಳಿಯನಾಗ್ತಾರಾ ನಿಖಿಲ್‌?
ಇಂದಿನ ಈ ಪತ್ರಿಕಾಗೋಷ್ಠಿಯಲ್ಲಿ ನಿಖಿಲ್‌ ಕುಮಾರಸ್ವಾಮಿಯವರೂ ಹಾಜರಿದ್ದರು. ಈ ಹಿಂದೆ ಜೆಡಿಎಸ್‌ ನ ಸುರೇಶ್‌ ಗೌಡ ಅವರು ನಿಖಿಲ್‌ ಮಂಡ್ಯದ ಅಳಿಯನಾಗುವವರು ಎಂಬರ್ಥದ ಹೇಳಿಕೆಯೊಂದನ್ನು ನೀಡಿದ್ದರು. ಈ ಕುರಿತಾಗಿ ಪತ್ರಕರ್ತರು ಇಂದು ನಿಖಿಲ್‌ ಅವರನ್ನು ಪ್ರಶ್ನಿಸಿದಾಗ, ‘ನನಗೆ ಮದುವೆ ಮಾಡಿಸಲು ಮನೆಯಲ್ಲಿ ಹೆಣ್ಣು ಹುಡುಕುತ್ತಿದ್ದಾರೆ. ಮಂಡ್ಯದ ಹುಡುಗಿಯೇ ಸಿಕ್ಕಿದ್ರೆ ನಾನು ಈ ಊರಿನ ಅಳಿಯನಾಗುತ್ತೇನೆ’ ಎಂದು ನಗುತ್ತಲೇ ಉತ್ತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next