ನವದೆಹಲಿ: ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಶಿಕ್ಷೆ ಪ್ರಕಟಿಸಿದ ಗುಜರಾತ್ನ ಸೂರತ್ ಜುಡಿಶಿಯಲ್ ಮ್ಯಾಜಿಸ್ಟ್ರೇಟ್ ಹರೀಶ್ ಹಸ್ಮುಖ್ಬಾಯ್ ವರ್ಮಾ ಬಡ್ತಿಗೆ ತಡೆ ನೀಡಲಾಗಿದೆ ಎಂದು ಮಾಧ್ಯಮಗಳಲ್ಲಿ ಬಂದಿರುವ ಸುದ್ದಿಯು ಸತ್ಯಕ್ಕೆ ದೂರವಾದದ್ದು. ನ್ಯಾಯಾಲಯದ ಆದೇಶವನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
ಮೆರಿಟ್ಗಿಂತ ಹಿರಿತನದ ಆಧಾರದಲ್ಲಿ 68 ನ್ಯಾಯಾಧೀಶರಿಗೆ ಜಿಲ್ಲಾ ನ್ಯಾಯಾಧೀಶರನ್ನಾಗಿ ಬಡ್ತಿ ನೀಡುವ ಗುಜರಾತ್ ಹೈಕೋರ್ಟ್ನ ನಿರ್ಧಾರ ಮತ್ತುಗುಜರಾತ್ ಸರ್ಕಾರದ ಅಧಿಸೂಚನೆಗೆ ಸುಪ್ರೀಂಕೋರ್ಟ್ ಇತ್ತೀಚೆಗೆ ತಡೆ ನೀಡಿತ್ತು.
ಈ ಕುರಿತು ಸ್ಪಷ್ಟನೆ ನೀಡಿರುವ ಸುಪ್ರೀಂ ಕೋರ್ಟ್ ನ್ಯಾ. ಎಂ.ಆರ್.ಶಾ, “ಈ ಪ್ರಕರಣದ ಕುರಿತು ಮಾಧ್ಯಮಗಳಲ್ಲಿ ತಪ್ಪಾಗಿ ಸುದ್ದಿ ಬಿತ್ತರಿಸಲಾಗಿದೆ. ಇದು ಒಬ್ಬ ವ್ಯಕ್ತಿಗೆ ಸಂಬಂಧಪಟ್ಟ ಆದೇಶವಲ್ಲ. ಇದು ಎಲ್ಲಾ 68 ನ್ಯಾಯಾಧೀಶರಿಗೆ ಸಂಬಂಧಪಟ್ಟ ಆದೇಶವಾಗಿದೆ,’ ಎಂದು ತಿಳಿಸಿದ್ದಾರೆ. “ನ್ಯಾ. ಹರೀಶ್ ವರ್ಮಾ ಅವರಿಗೆ ಬಡ್ತಿ ಸಿಗುತ್ತಿಲ್ಲ ಎಂಬುದು ಸುಳ್ಳು. ಅವರಿಗೆ ಮೆರಿಟ್ ಆಧಾರದಲ್ಲಿ ಬಡ್ತಿ ಸಿಗುತ್ತದೆ,’ ಎಂದು ನ್ಯಾ. ಎಂ.ಆರ್.ಶಾತಿಳಿಸಿದ್ದಾರೆ.
“ಈ ಆದೇಶದಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಮೆರಿಟ್ ಆಧಾರದಲ್ಲಿ ಬಡ್ತಿ ಪಡೆದವರಿಗೆ ಈ ಆದೇಶ ಅನ್ವಯವಾಗುವುದಿಲ್ಲ. ಕೇವಲ ಹಿರಿತನ ಆಧಾರದಲ್ಲಿ ಬಡ್ತಿ ನೀಡಲಾದ 68 ನ್ಯಾಯಾಧೀಶರ ಕ್ರಮಕ್ಕೆ ತಡೆ ನೀಡಲಾಗಿದೆ. ಇದು ಒಬ್ಬ ವ್ಯಕ್ತಿಗೆ ಸಂಬಂಧಿಸಿದ ಆದೇಶವಲ್ಲ,’ ಎಂದು ಸ್ಪಷ್ಟನೆ ನೀಡಿದ್ದಾರೆ.