Advertisement

ಇಂದು ಹೊಸವರ್ಷದ ಪ್ರಶಸ್ತಿ ಪ್ರದಾನ

11:27 PM Jan 13, 2022 | Team Udayavani |

ಉಡುಪಿ: ಮಣಿಪಾಲ ಅಕಾಡೆಮಿ ಆಫ್ ಜನರಲ್‌ ಎಜುಕೇಶನ್‌, ಮಣಿಪಾಲ ಅಕಾಡೆಮಿ ಆಫ್ ಹೈಯರ್‌ ಎಜುಕೇಶನ್‌, ಮಣಿಪಾಲ ಎಜು ಕೇಶನ್‌ ಆ್ಯಂಡ್‌ ಮೆಡಿಕಲ್‌ ಗ್ರೂಪ್‌ ಇಂಡಿಯಾ ಪೈ.ಲಿ. ಬೆಂಗಳೂರು, ಮಣಿಪಾಲ್‌ ಮೀಡಿಯಾ ನೆಟ್‌ವರ್ಕ್‌ ಲಿ. ವತಿಯಿಂದ ಹೊಸವರ್ಷ 2022ರ ಪ್ರಶಸ್ತಿ ಪ್ರದಾನ ಸಮಾರಂಭ ಜ. 14ರಂದು ಸಂಜೆ 5.30ಕ್ಕೆ ನಡೆಯಲಿದೆ. ಆಡಳಿತ ನಿರ್ವಹಣ ತಜ್ಞ ಭಾಸ್ಕರ ಭಟ್‌, ವೈದ್ಯ ಶಿಕ್ಷಣ ತಜ್ಞೆ  ಡಾ| ಪ್ರಜ್ಞಾ ರಾವ್‌, ವೈದ್ಯ ಶಿಕ್ಷಣದ ಮಹಾದಾನಿ ಡಾ| ಸುರೇಶ್‌ ಎಸ್‌. ರಾವ್‌, ಶ್ರೇಷ್ಠ ಯಕ್ಷ ಕಲಾವಿದ ತೀರ್ಥಹಳ್ಳಿ ಗೋಪಾಲ ಆಚಾರ್ಯ ಅವರನ್ನು ಸಮ್ಮಾನಿಸಲಾಗುವುದು.

Advertisement

ಭಾಸ್ಕರ ಭಟ್‌ :

1978ರಲ್ಲಿ ಗೋದ್ರೆಜ್‌ ಕಂಪೆನಿಗೆ ಆಡಳಿತದಲ್ಲಿ ತರಬೇತಿಗಾಗಿ ಸೇರಿಕೊಂಡ ಭಾಸ್ಕರ ಭಟ್ಟರು ಐದು ವರ್ಷಗಳ ಬಳಿಕ ಟಾಟಾ ಕಂಪೆನಿಗೆ ಸೇರಿದರು. 2002ರಿಂದ 2019ರ ವರೆಗೆ ಟೈಟನ್‌ ಕಂಪೆನಿಯ ಆಡಳಿತ ನಿರ್ದೇಶಕರಾಗಿ ಸೇವೆ ಸಲ್ಲಿಸಿದ ಅವರು 1988ರಿಂದ ಅದರ ಆಡಳಿತಾಧಿಕಾರಿಯಾಗಿದ್ದರು. ತಮ್ಮ ಆಡಳಿತ, ನಿರ್ದೇಶಕತ್ವಗಳ ಅವಧಿಯಲ್ಲಿ ಕಂಪೆನಿಯ ಉತ್ಪಾದನ ಸಾಮರ್ಥ್ಯವನ್ನು ಹಲವು ನೆಲೆಗಳಲ್ಲಿ ವರ್ಧಿಸುವಂತೆ ಮಾಡಿದರು.

ಅನೇಕ ಸಂಸ್ಥೆಗಳ ಆಡಳಿತ ಮಂಡಳಿಗಳ ಸದಸ್ಯರಾಗುವ ಮೂಲಕ ಅವುಗಳಿಗೆ ಮಾರ್ಗದರ್ಶನ ನೀಡಿದ ಹೆಗ್ಗಳಿಕೆಯೂ ಅವರಿಗಿದೆ. ನ್ಯಾಶನಲ್‌ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿ, ಟಿ.ಎ. ಪೈ ಮ್ಯಾನೇಜ್‌ಮೆಂಟ್‌ ಇನ್‌ಸ್ಟಿಟ್ಯೂಟ್‌, ನ್ಯಾಶನಲ್‌ ಇನ್‌ಸ್ಟಿಟ್ಯೂಟ್‌ ಆಫ್ ಡಿಸೈನ್‌ ಮುಂತಾದ ಸಂಸ್ಥೆಗಳ ಆಡಳಿತ ಮಂಡಳಿಗಳಲ್ಲಿ ಅವರು ಸದಸ್ಯರಾಗಿದ್ದರು. ಪ್ರತಿಷ್ಠಿತ ಐಐಟಿ ಮದ್ರಾಸಿನಲ್ಲಿ ಮೆಕ್ಯಾನಿಕಲ್‌ ಎಂಜಿ ನಿಯರಿಂಗ್‌ ಪದವಿ ಪಡೆದು ಅಹಮದಾಬಾದಿನ ಐಐಎಂ ಮ್ಯಾನೇಜ್‌ಮೆಂಟ್‌ ಇನ್‌ಸ್ಟಿಟ್ಯೂಟ್‌ನಿಂದ ಆಡಳಿತದಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಪಡೆದಿದ್ದರು.

ಡಾ| ಸುರೇಶ್‌ ಎಸ್‌. ರಾವ್‌ :

Advertisement

1953ರಲ್ಲಿ ಕಟೀಲಿನಲ್ಲಿ ಜನಿಸಿದ ಸುರೇಶ್‌ ರಾವ್‌, ಪ್ರಾಥಮಿಕ ವಿದ್ಯಾಭ್ಯಾಸದ ಬಳಿಕ ಮುಂಬಯಿಯಲ್ಲಿ ಮಾಧ್ಯಮಿಕ ಶಿಕ್ಷಣ ಪಡೆದರು. ನಾಯರ್‌ ಆಸ್ಪತ್ರೆಯಲ್ಲಿ ವೈದ್ಯಕೀಯ ಪದವಿ ತರಗತಿಗೆ ಮೆರಿಟ್‌ ಆಧಾರದಲ್ಲಿ ಪ್ರವೇಶ ಪಡೆದು ಎಂಬಿಬಿಎಸ್‌ ಮತ್ತು ಶಸ್ತ್ರ ಚಿಕಿತ್ಸೆಯಲ್ಲಿ ಎಂ.ಡಿ. ಪದವಿ ಗಳಿಸಿದರು. 1971ರಿಂದ 1984ರ ವರೆಗೆ ನಾಯರ್‌ ಆಸ್ಪತ್ರೆಯಲ್ಲಿ ಉದ್ಯೋಗ ನಡೆಸಿ ಬಳಿಕ ವೈದ್ಯಕೀಯ ಸಲಹಾ ತಜ್ಞರಾದರು.

1988ರಲ್ಲಿ ತಮ್ಮದೇ ಆದ 14 ಹಾಸಿಗೆಗಳ ಸಂಜೀವಿನಿ ಆಸ್ಪತ್ರೆ ತೆರೆದರು. ಅನಂತರ ಇದು 50 ಹಾಸಿಗೆಗಳ ವಿವಿಧ ಚಿಕಿತ್ಸೆಯ ಸೌಲಭ್ಯಗಳುಳ್ಳ ಆಸ್ಪತ್ರೆಯಾಯಿತು. ಅಲ್ಲಿ 20 ವರ್ಷಗಳ ಅವಧಿಯಲ್ಲಿ ಆರ್ಥಿಕವಾಗಿ ಹಿಂದುಳಿದ 5,000 ಕ್ಷಯ ರೋಗಿಗಳನ್ನು ಉಚಿತವಾಗಿ ಉಪಚರಿಸಲಾಗಿದೆ. ತಿಂಗಳಿಗೆ ಸುಮಾರು 300 ರಕ್ತ ಮರುಪೂರಣ ಚಿಕಿತ್ಸೆಗಳನ್ನು ಮಿತ ದರದಲ್ಲಿ ನಿರ್ವಹಿಸಲಾಗುತ್ತಿದೆ. 2004ರಲ್ಲಿ ಅವರು ವೈದ್ಯಕೀಯ ಸಲಹಾ ತಜ್ಞರ ಮಂಡಳಿಯ ಅಧ್ಯಕ್ಷರಾದರು. ಗ್ರಾಮೀಣ ಪ್ರದೇಶ ಕಟೀಲಿನಲ್ಲಿ 100 ಹಾಸಿಗೆಗಳುಳ್ಳ ಆಸ್ಪತ್ರೆ ಸ್ಥಾಪಿಸಿ ನಿರ್ವಹಣೆಗಾಗಿ ಮಣಿಪಾಲ ಸಮೂಹದ ಆಸ್ಪತ್ರೆಗಳಿಗೆ ನೀಡಿದ್ದಾರೆ.

ಡಾ| ಪ್ರಜ್ಞಾ ರಾವ್‌ :

ಮಣಿಪಾಲದ ಕಸ್ತೂರ್ಬಾ ಮೆಡಿಕಲ್‌ ಕಾಲೇಜು ರೂಪಿಸಿದ ಶ್ರೇಷ್ಠ ವೈದ್ಯಕೀಯ ಶಿಕ್ಷಣ ತಜ್ಞರಲ್ಲಿ ಒಬ್ಬರಾದ ಡಾ| ಪ್ರಜ್ಞಾ ರಾವ್‌ 1961ರಲ್ಲಿ ಜನಿಸಿದರು. 1983ರಲ್ಲಿ ಮುಂಬಯಿಯ ಗ್ರಾಂಟ್‌ ಮೆಡಿಕಲ್‌ ಕಾಲೇಜಿನಲ್ಲಿ ಎಂಬಿಬಿಎಸ್‌ ಪದವಿ ಪಡೆದರು. 1986ರಲ್ಲಿ ಶರೀರ ರಸಾಯನ ಶಾಸ್ತ್ರ(ಬಯೋಕೆಮಿಸ್ಟ್ರಿ)ಯಲ್ಲಿ ಎಂ.ಡಿ. ಹಾಗೂ 1991ರಲ್ಲಿ ಮಂಗಳೂರು ವಿ.ವಿ.ಯ ಪಿಎಚ್‌.ಡಿ. ಪದವಿಯನ್ನು ಮಣಿಪಾಲದ ಕೆಎಂಸಿಯಿಂದ ಪಡೆದರು.

ವೃತ್ತಿ ಜೀವನದಲ್ಲಿ ಯಶಸ್ಸಿನ ಒಂದೊಂದೇ ಹಂತಗಳನ್ನು ಮೇಲೇರುತ್ತ ಬಂದು 2015ರಲ್ಲಿ ಕೆಎಂಸಿಯ ಅಸೋಸಿಯೇಟ್‌ ಡೀನ್‌, 2017ರಲ್ಲಿ ಡೀನ್‌ ಆಗಿ ನಿಯುಕ್ತರಾದರು. ವಿಷನ್‌ ಗ್ರೂಪ್‌ ಇನ್‌ ಸೈನ್ಸ್‌ ಆ್ಯಂಡ್‌ ಟೆಕ್ನಾಲಜಿ ಸಂಸ್ಥೆಯಿಂದ ಕೆಎಂಸಿಯ ವೈದ್ಯಕೀಯ ಶಿಕ್ಷಣದ ಅತ್ಯುತ್ತಮ ನಿರ್ವಹಣೆಗಾಗಿ ಅನುದಾನ ಪಡೆದ ಯಶಸ್ಸಿನಲ್ಲಿ ಅವರ ಕೊಡುಗೆ ಅಪಾರ.

ಅವರಿಗೆ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗಳು ಸಂದಿವೆ. ಅನೇಕ ಜಾಗತಿಕ ಮಟ್ಟದ ಗೋಷ್ಠಿಗಳಲ್ಲೂ ಅವರು ಭಾಗವಹಿಸಿದ್ದಾರೆ.

ತೀರ್ಥಹಳ್ಳಿ ಗೋಪಾಲ ಆಚಾರ್ಯ :

ಪ್ರಾಥಮಿಕ ವಿದ್ಯಾಭ್ಯಾಸವನ್ನಷ್ಟೇ ಪಡೆದು ಯಕ್ಷಗಾನ ರಂಗ ಸೇರಿ ಯಶಸ್ಸು, ಪ್ರಸಿದ್ಧಿ ಪಡೆದ ಕಲಾವಿದ ಪ್ರಮುಖ ರಲ್ಲಿ ತೀರ್ಥಹಳ್ಳಿ ಗೋಪಾಲ ಆಚಾರ್ಯರೂ ಒಬ್ಬರು.

ಅವರದು ಸುದೀರ್ಘ‌ವಾದ ಯಕ್ಷಗಾನ ರಂಗಸ್ಥಳದ ಅನುಭವ. ನಾಟ್ಯ, ನೃತ್ಯ, ಅಭಿನಯ, ಮಾತುಗಾರಿಕೆ ಕಲಾವಿದರನ್ನು ಉನ್ನತಿಗೇರಿಸುವ ವಿಪುಲ ಅಂಶಗಳು ಅವರಲ್ಲಿರುವುದರಿಂದ ಅನೇಕ ಮೇಳ ಗಳು ಅವರನ್ನು ಆಮಂತ್ರಿಸಿದವು. ಪೆರ್ಡೂರು ಮೇಳದಲ್ಲಿ 27 ವರ್ಷಗಳ ಸೇವೆಯೊಂದಿಗೆ ಅವರಿಗೆ 47 ವರ್ಷಗಳ ದೀರ್ಘ‌ಕಾಲದ ಸೇವಾನುಭವ. ರಂಜದಕಟ್ಟೆ, ನಾಗರಕೋಡಿಗೆ, ಗೋಳಿಗರಡಿ, ಸಾಲಿಗ್ರಾಮ, ಶಿರಸಿಯ ಪಂಚಲಿಂಗೇಶ್ವರ ಮೇಳಗಳಲ್ಲಿ ಅವರು ಕಲಾವಿದರಾಗಿ ಸೇವೆ ಸಲ್ಲಿಸಿದ್ದಾರೆ.

ತಮ್ಮ ಅನುಪಮ ಕಲಾ ಸೇವೆಗಾಗಿ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. 2021ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, 2018ರಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಅವರಿಗೆ ಸಂದಿವೆ.

ಹಲವಾರು ಸಂಘ-ಸಂಸ್ಥೆಗಳು ಅವರನ್ನು ಸಮ್ಮಾನಿಸಿ ಗೌರವಿಸಿವೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next