Advertisement

PWD: ಸಾರ್ವಜನಿಕರಿಂದ ದೂರು ಪಡೆಯಲು ಹೊಸ ವೆಬ್‌ಸೈಟ್‌: ಸತೀಶ್‌ ಜಾರಕಿಹೊಳಿ

11:51 PM Aug 15, 2023 | Team Udayavani |

ಬೆಳಗಾವಿ: ಲೋಕೋಪಯೋಗಿ ಇಲಾಖೆಯ ಯಾವುದೇ ಕಾಮಗಾರಿಗಳ ಪರಿಶೀಲನೆ ನಡೆಸಿ ಸಮರ್ಪಕ ಎನಿಸಿದರೆ ಮಾತ್ರ ಬಿಲ್‌ ಪಾವತಿ ಮಾಡಲಾಗುವುದು ಎಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಯಾವುದೇ ಕಾಮಗಾರಿ ಬಗ್ಗೆ ಸಾರ್ವಜನಿಕರು ಫೋಟೋ ಸಹಿತ ದೂರು ನೀಡಲು ಅವಕಾಶ ಕೊಡಲಾಗುತ್ತದೆ. ಅದಕ್ಕಾಗಿ ಇಲಾಖೆ ವತಿಯಿಂದ ಪ್ರತ್ಯೇಕ ವೆಬ್‌ಸೈಟ್‌ ಆರಂಭ ಮಾಡಲಾಗುತ್ತದೆ ಎಂದರು.

Advertisement

ಬೆಳಗಾವಿಯಲ್ಲಿ ಮಾತನಾಡಿದ ಅವರು ಇನ್ನೊಂದು ವಾರದಲ್ಲಿ ಅದು ಶುರುವಾಗಲಿದೆ. ಇಲಾಖೆಯಿಂದ ಗುತ್ತಿಗೆದಾರರು ನಡೆಸುವ ಕಾಮಗಾರಿಗಳು ಕಳಪೆ ಗುಣಮಟ್ಟ
ದಿಂದ ಕೂಡಿವೆ ಎಂದು ಫೋಟೋ ಆಥವಾ ವೀಡಿಯೋ ಸಮೇತ ದೂರು ಸಲ್ಲಿಸಿದರೆ ಅವುಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದರು. ಈಗಾಗಲೇ ಇಂತಹ ಮೂರು ದೂರುಗಳು ಬಂದಿದ್ದು ಅದರ ತನಿಖೆ ನಡೆದಿದೆ. ಯಾವುದೇ ಬಿಲ್‌ ಪಾವತಿ ಮಾಡುವ ಮುನ್ನ ಕಾಮಗಾರಿಗಳನ್ನು ಪರಿಶೀಲಿಸಲಾಗುವುದು ಎಂದರು.

ಸಾವಿರಾರು ಕೋ. ರೂ. ಬಾಕಿ
ಹಿಂದಿನ ಬಿಜೆಪಿ ಸರಕಾರದ ನೀತಿ ಗಳಿಂದ ರಾಜ್ಯದಲ್ಲಿ ಗುತ್ತಿಗೆದಾರರ ಸಾವಿರಾರು ಕೋಟಿ ರೂ. ಬಿಲ್‌ ಬಾಕಿ ಉಳಿದಿದೆ. ಲೋಕೋಪಯೋಗಿ ಇಲಾಖೆಯೊಂದರಲ್ಲೇ 6,000 ಕೋಟಿ ಬಾಕಿ ಇದೆ. ಇಲಾಖೆಗೆ ಇರುವ ಮೊತ್ತ 1,500 ಕೋಟಿ ರೂ. ಟೆಂಡರ್‌ ನಿಯಮಗಳ ಪ್ರಕಾರ ಒಂದು ಬಾರಿಗೆ ಮೂರನೇ ಒಂದು ಭಾಗದಷ್ಟು (ಶೇ. 33) ಬಿಲ್‌ ಕೊಡಬೇಕಾಗಿದೆ. ಇದನ್ನು ನೋಡಿದರೆ ಗುತ್ತಿಗೆದಾರರ ಬಾಕಿ ಪಾವತಿಗೆ ಎರಡರಿಂದ ಮೂರು ವರ್ಷ ಬೇಕಾಗುತ್ತದೆ. ಈ ಬಿಲ್‌ಗ‌ಳು ಬಾಕಿ ಉಳಿಯಲು ಕಾಂಗ್ರೆಸ್‌ ಸರಕಾರ ಕಾರಣ ಅಲ್ಲ. ಹಿಂದಿನ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರ ಕಾರಣ ಎಂದರು ಸತೀಶ್‌.

ಬೊಮ್ಮಾಯಿ ಸರಕಾರ ಮಂಡಿಸಿದ್ದ ಬಜೆಟ್‌ನ ಹಣವನ್ನು ನಮ್ಮ ಸರಕಾರ ಬೇರೆ ಕಡೆ ತಿರುಗಿಸಿಲ್ಲ. ಸಿಎಂ ಸಿದ್ದರಾಮಯ್ಯ ಮಂಡಿಸಿದ ಬಜೆಟ್‌ನಲ್ಲಿ ವಿವಿಧ ಸಂಪನ್ಮೂಲಗಳಿಂದ 40 ಸಾವಿರ ಕೋಟಿ ರೂ.ಗಳನ್ನು ಐದು ಗ್ಯಾರಂಟಿ ಯೋಜನೆಗಳಿಗೆ ಒದಗಿಸಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next