ಶ್ರೀನಗರ: ಕೇಂದ್ರ ಸರಕಾರವು 370ನೇ ವಿಧಿಯನ್ನು ರದ್ದುಗೊಳಿಸಿದ ಬಳಿಕ ಕಣಿವೆ ರಾಜ್ಯದಲ್ಲಿ ಮೊದಲನೇ ಬಕ್ರಿದ್ ಆಚರಣೆ ಸೋಮವಾರದಂದು ನಡೆಯಲಿದೆ. ಈ ವಿಶೇಷ ಸ್ಥಾನಮಾನ ನೀಡುವ ವಿಧಿ ರದ್ದತಿಯ ವಿರುದ್ಧ ಕಾಶ್ಮೀರಿಗರು ಯಾವ ರೀತಿಯಲ್ಲಿ ಪ್ರತಿಕ್ರಿಯಿಸಬಹುದೆಂಬ ಗೊಂದಲ ಎಲ್ಲರಲ್ಲಿಯೂ ಇತ್ತು.
ಇನ್ನೊಂದೆಡೆ ಗುರುವಾರದಂದು ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೂ ಸಹ ಈ ಬಾರಿ ಕಣಿವೆ ರಾಜ್ಯದಲ್ಲಿ ಶಾಂತಿಯುತ ಬಕ್ರಿದ್ ಆಚರಣೆಗೆ ಸರ್ವ ನೆರವನ್ನು ನೀಡುವುದಾಗಿ ಜಮ್ಮು ಕಾಶ್ಮೀರದ ಜನತೆಗೆ ಆಶ್ವಾಸನೆ ನೀಡಿದ್ದರು.
ಇದೀಗ ಭಾರತೀಯ ಸೇನೆ ಮತ್ತು ಜಮ್ಮು ಕಾಶ್ಮೀರ ಪೊಲೀಸರು ಕಣಿವೆ ರಾಜ್ಯದಲ್ಲಿ ಬಿಗಿ ಭದ್ರತೆಯನ್ನು ಕೈಗೊಂಡಿದ್ದಾರೆ. ಇದರ ನಡುವೆ ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಅಧಿಕಾರಿ ಇಮ್ತಿಯಾಝ್ ಹುಸೈನ್ ಅವರು ಶ್ರೀನಗರ ಆದಿತ್ಯವಾರದಂದು ಹೇಗಿತ್ತು ಎಂಬ ಚಿತ್ರಣವನ್ನು ವಿಡಿಯೋ ಮೂಲಕ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಈ ವಿಡಿಯೋದಲ್ಲಿ ಅವರು ಲಾಲ್ ಚೌಕ, ಜೆಹಾಂಗೀರ್ ಚೌಕ, ಬಟ್ಮಾಲೂ, ದಾಲ್ ಗೇಟ್ ಮೊದಲಾದ ಪ್ರದೇಶಗಳ ಚಿತ್ರಣವನ್ನು ನೀಡಿದ್ದಾರೆ. ಇದರಲ್ಲಿ ಕಾಣಿಸುವಂತೆ ಎಲ್ಲೆಡೆಯೂ ಜನಜೀವನ ಶಾಂತಿಯುತವಾಗಿರುವಂತೆ ಕಾಣಿಸುತ್ತಿದೆ.
ಕಾಶ್ಮೀರ ಕಣಿವೆ ಪ್ರಮುಖ ಪಟ್ಟಣವಾಗಿರುವ ಶ್ರೀನಗರವು ಜಮ್ಮು ಮತ್ತು ಕಾಶ್ಮೀರದ ಬೇಸಿಗೆ ಕಾಲದ ರಾಜಧಾನಿಯಾಗಿದೆ ಮತ್ತಿದು ಝೀಲಂ ನದಿಯ ತೀರದಲ್ಲಿದೆ. ವಿಶ್ವಪ್ರಸಿದ್ಧ ದಾಲ್ ಸರೋವರ ಇರುವುದು ಶ್ರೀನಗರದಲ್ಲಿಯೇ.