Advertisement

ಹೊಸ ನಿರೀಕ್ಷೆ ಹುಟ್ಟಿಸಿದ ಪುನಾರಚನೆ

12:30 AM Dec 29, 2018 | |

ಮೈತ್ರಿ ಸರ್ಕಾರದ ಸಂಪುಟ ಪುನಾರಚನೆ ಹಾಗೂ ನಂತರದ ಬೆಳವಣಿಗೆಗಳು ಕಾಂಗ್ರೆಸ್‌-ಜೆಡಿಎಸ್‌ ಹೊಂದಾಣಿಕೆ ಬಗ್ಗೆ ಅಪನಂಬಿಕೆ ಹುಟ್ಟು ಹಾಕಿದೆ. ಬದಲಾದ ಸನ್ನಿವೇಶದಲ್ಲಿ ಕಾಂಗ್ರೆಸ್‌ನಲ್ಲಿ ಆಂತರಿಕ ತುಮುಲ ಆರಂಭವಾಗಿದ್ದರೆ, ಮೈತ್ರಿ ಧರ್ಮ ಪಾಲನೆ ಆಗುತ್ತಿಲ್ಲ ಎಂದು ಜೆಡಿಎಸ್‌ ಅಲವತ್ತುಕೊಂಡಿದೆ. ಇನ್ನೊಂದೆಡೆ, ಜೆಡಿಎಸ್‌ ನಾಯಕರು ಪ್ರಧಾನಿ ಸೇರಿದಂತೆ ಬಿಜೆಪಿ ರಾಷ್ಟ್ರೀಯ ನಾಯಕರನ್ನು ಭೇಟಿಯಾಗಿರುವುದು ಬಿಜೆಪಿಯಲ್ಲಿ ಹೊಸ ಲೆಕ್ಕಾಚಾರವನ್ನು ಸೃಷ್ಟಿಸಿದೆ. ಸದ್ಯ ಕಾಂಗ್ರೆಸ್‌, ಜೆಡಿಎಸ್‌ ಮತ್ತು ಬಿಜೆಪಿ ಪಾಳಯದಲ್ಲಿ ಗರಿಗೆದರಿದ ತೆರೆಮರೆ ರಾಜಕೀಯ, ಸರ್ಕಾರ ಉಳಿಸುವ, ಉರುಳಿಸುವ ಕುರಿತಾಗಿ ಹೆಣೆದಿರುವ ತಂತ್ರಗಾರಿಕೆ ಕುರಿತು ಇಣುಕುನೋಟ ಇಲ್ಲಿದೆ.

Advertisement

ಕಗ್ಗಂಟಾದ ಪುನಾರಚನೆ ಕಸರತ್ತು
ಬೆಂಗಳೂರು: ಸಂಪುಟ ಪುನಾರಚಣೆ ನಂತರದ ಖಾತೆಗಳ ಹಂಚಿಕೆ, ನಿಗಮ ಮಂಡಳಿ ಅಧ್ಯಕ್ಷರು ಹಾಗೂ ಇತರ ನೇಮಕಗಳ ಪಟ್ಟಿ ವಿಚಾರದಲ್ಲಿ ಜೆಡಿಎಸ್‌ನಲ್ಲಿ ತೀವ್ರ ಅಸಮಾಧಾನವಂತೂ ಇದೆ. ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಹಾಗೂ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಇಬ್ಬರೂ ಈ ವಿಚಾರದಲ್ಲಿ ರಾಜ್ಯ ಕಾಂಗ್ರೆಸ್‌ ನಾಯಕರು, ಅದರಲ್ಲಿಯೂ ಖಾತೆ ಹಂಚಿಕೆಯಲ್ಲಿ ಪಟ್ಟು ಹಿಡಿದಿದ್ದರು ಎನ್ನಲಾಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಗ್ಗೆ ಅಸಮಾಧಾನಗೊಂಡಿದ್ದಾರೆ ಎಂದು ಹೇಳಲಾಗಿದೆ.
ಖಾತೆಗಳ ಹಂಚಿಕೆ, ನಿಗಮ ಮಂಡಳಿ ಅಧ್ಯಕ್ಷರು ಹಾಗೂ ಸಂಸದೀಯ ಕಾರ್ಯದರ್ಶಿಗಳ ಪಟ್ಟಿ ತಯಾರಿಕೆ ಸಂದರ್ಭದಲ್ಲಿ ಸೌಜನ್ಯಕ್ಕೂ ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರೊಂದಿಗೆ ರಾಜ್ಯ ಕಾಂಗ್ರೆಸ್‌ ನಾಯಕರು ಚರ್ಚಿಸಿಲ್ಲ. ಜೆಡಿಎಸ್‌ ಸಚಿವರ ಖಾತೆಗಳ ವ್ಯಾಪ್ತಿಗೆ ಬರುವ ನಿಗಮ ಮಂಡಳಿಗಳಿಗೂ ಕಾಂಗ್ರೆಸ್‌ ಶಾಸಕರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಉದಾಹರಣೆಗೆ, ಲೋಕೋಪಯೋಗಿ ಇಲಾಖೆ ವ್ಯಾಪ್ತಿಯ ಕೆಆರ್‌ಐಡಿಎಲ್‌ಗೆ ದೊಡ್ಡಬಳ್ಳಾಪುರ ಕಾಂಗ್ರೆಸ್‌ ಶಾಸಕ ವೆಂಕಟರಮಣಯ್ಯ ಅವರನ್ನು ನೇಮಿಸಲಾಗಿದೆ. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹುದ್ದೆಗೆ ಕಾಂಗ್ರೆಸ್‌ನ ಮುನಿಯಪ್ಪರನ್ನು ನೇಮಿಸಲಾಗಿದೆ. ಈ ರೀತಿ
ಮಾಡಿರುವುದು ಜೆಡಿಎಸ್‌ ವಲಯದಲ್ಲಿ ತೀವ್ರ ಅಸಮಾಧಾನ ಉಂಟುಮಾಡಿದೆ. 

ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿಗೆ ವಿಶ್ವನಾಥ್‌ ನೇಮಕ ಮಾಡಿಕೊಳ್ಳುವುದಕ್ಕೂ ಒಪ್ಪುತ್ತಿಲ್ಲ. ಅಲ್ಲದೆ, ನಿಗಮ ಮಂಡಳಿ ಇತರೆ ನೇಮಕ ಸಂಬಂಧ ಮುಖ್ಯಮಂತ್ರಿ ಕುಮಾರಸ್ವಾಮಿ, ಜೆಡಿಎಸ್‌ ಅಧ್ಯಕ್ಷ ಎಚ್‌.ವಿಶ್ವನಾಥ್‌ ಅವರೊಂದಿಗೆ ಚಿರ್ಚಿಸಬೇಕಿತ್ತು. ಅದನ್ನು ಬಿಟ್ಟು ಏಕಪಕ್ಷೀಯವಾಗಿ ಕಾಂಗ್ರೆಸ್‌ ನಾಯಕರು ತೀರ್ಮಾನ ತೆಗೆದುಕೊಂಡಿದ್ದಾರೆಂದು ರಾಹುಲ್‌ ಗಾಂಧಿಗೆ ದೂರು ನೀಡಲಾಗಿದೆ. ಈ ಮಧ್ಯೆ ಕುಮಾರಸ್ವಾಮಿ ಅವರ ದೆಹಲಿ ಪ್ರವಾಸದ ವೇಳೆ ದೂರವಾಣಿ ಮೂಲಕ ರಾಹುಲ್‌ ಗಾಂಧಿ ಅವರನ್ನು ಸಂಪರ್ಕಿಸಿ ರಾಜ್ಯದ ಎಲ್ಲ ವಿದ್ಯಮಾನಗಳ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. 
● ಎಸ್‌. ಲಕ್ಷ್ಮಿನಾರಾಯಣ

ದೋಸ್ತಿ ಮೇಲೆ ಅಪನಂಬಿಕೆ
ಬೆಂಗಳೂರು: ಜೆಡಿಎಸ್‌ ವರಿಷ್ಠ ದೇವೇಗೌಡರ ವಿರೋಧದ ನಡುವೆಯೂ ಕಾಂಗ್ರೆಸ್‌ನಲ್ಲಿ ಸಂಪುಟ ಪುನಾರಚನೆ ಮಾಡಿ, ನಿಗಮ ಮಂಡಳಿಗಳಿಗೆ ಜೆಡಿಎಸ್‌ ನಾಯಕರೊಂದಿಗೆ ಚರ್ಚಿಸದೇ ತೀರ್ಮಾನ ಮಾಡಿರುವುದು ಕಾಂಗ್ರೆಸ್‌ ನಡೆಯ ಬಗ್ಗೆ ಜೆಡಿಎಸ್‌ ನಾಯಕರು ಬಹಿರಂಗವಾಗಿಯೇ ಅಸಮಾಧಾನವನ್ನು ಹೊರ ಹಾಕುವಂತೆ ಮಾಡಿದೆ. ಸಂಪುಟ ವಿಸ್ತರಣೆಯ ಬೆನ್ನಲ್ಲೇ ಸಚಿವ ಸ್ಥಾನ ಕಳೆದುಕೊಂಡಿರುವ ರಮೇಶ್‌ ಜಾರಕಿಹೊಳಿ ಬಂಡಾಯ ಸಾರಿ ಪಕ್ಷದ ನಾಯಕರ ಕೈಗೆ ಸಿಗದೇ ಸಮ್ಮಿಶ್ರ ಸರ್ಕಾರಕ್ಕೆ ಆತಂಕ
ಸೃಷ್ಟಿಸಿದ್ದು, ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ತೀರ್ಮಾನ ಇಷ್ಟೆಲ್ಲ ಗೊಂದಲಕ್ಕೆ ಕಾರಣವಾಗಿದೆ ಎನ್ನುವುದು ಕಾಂಗ್ರೆಸ್‌ ಹಾಗೂ ಜೆಡಿಎಸ್‌ ವಲಯದಲ್ಲಿ ಕೇಳಿ ಬರುತ್ತಿರುವ ಮಾತು. ಈ ಬೆಳವಣಿಗೆಯ ನಡುವೆಯೇ ಮುಖ್ಯಮಂತ್ರಿ ಕುಮಾರಸ್ವಾಮಿ, ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌ .ಡಿ.ದೇವೇಗೌಡ ಹಾಗೂ ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ 
ಒಟ್ಟಿಗೆ ಸೇರಿ ಒಂದೇ ದಿನ ಕೇಂದ್ರದ ಬಿಜೆಪಿ ನಾಲ್ವರು ಹಿರಿಯ ಸಚಿವರು ಹಾಗೂ ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿ ಮಾಡಿ ರಾಜ್ಯದ ಅಭಿವೃದ್ಧಿ ವಿಷಯಗಳ ಕುರಿತು ಚರ್ಚೆ ಮಾಡುವ ನೆಪದಲ್ಲಿ ಮಾತುಕತೆ ನಡೆಸಿರುವುದು ಕಾಂಗ್ರೆಸ್‌ ನಾಯಕರು ಅನುಮಾನದಿಂದ ನೋಡುವಂತೆ ಮಾಡಿದೆ. ಕೇಂದ್ರ ಸಚಿವ ನಿತಿನ್‌ ಗಡ್ಕರಿ ಕೂಡ ರಾಜ್ಯದ ಲೋಕೋಪಯೋಗಿ ಇಲಾಖೆಗಳ
ಬಹುತೇಕ ಯೋಜನೆಗಳಿಗೆ ವೇಗವಾಗಿ ಗ್ರೀನ್‌ ಸಿಗ್ನಲ್‌ ನೀಡುತ್ತಿದ್ದು, ಜೆಡಿಎಸ್‌ ನಾಯಕರು ಬಿಜೆಪಿಯೊಂದಿಗೆ ಸ್ನೇಹ ಬೆಳೆಸುವ ಸೂಚನೆ ನೀಡಿ, ಕಾಂಗ್ರೆಸ್‌ ನಾಯಕರಿಗೆ ಪರೋಕ್ಷ ಎಚ್ಚರಿಕೆ ಸಂದೇಶ ರವಾನಿಸುವ ಪ್ರಯತ್ನ ನಡೆಸುತ್ತಿದ್ದಾರೆ ಎಂಬ ಮಾತುಗಳು ಕಾಂಗ್ರೆಸ್‌ ವಲಯದಲ್ಲಿ ಕೇಳಿ ಬರುತ್ತಿವೆ.
● ಶಂಕರ ಪಾಗೋಜಿ

ಬಿಜೆಪಿ ನಾಯಕರಲ್ಲಿ ಹೊಸ ಲೆಕ್ಕಾಚಾರ
ಬೆಂಗಳೂರು: ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌ .ಡಿ.ದೇವೇಗೌಡ, ಮುಖ್ಯಮಂತ್ರಿ ಎಚ್‌ .ಡಿ.ಕುಮಾರಸ್ವಾಮಿ ಹಾಗೂ ಸಚಿವ ಎಚ್‌.ಡಿ.ರೇವಣ್ಣ ದೆಹಲಿಯಲ್ಲಿ ಪ್ರಧಾನಿ ಹಾಗೂ ಕೇಂದ್ರದ ಕೆಲ ಸಚಿವರನ್ನು ಭೇಟಿಯಾಗಿರುವುದು ರಾಜ್ಯ ಬಿಜೆಪಿಯಲ್ಲಿ ಸಂಚಲನ ಮೂಡಿಸಿದ್ದು, ಕ್ಷಿಪ್ರ ರಾಜಕೀಯ ಬೆಳವಣಿಗೆಯ ನಿರೀಕ್ಷೆ ಮೂಡಿಸಿದೆ. ರಾಜ್ಯದ ಅಭಿವೃದ್ಧಿಗೆ ಸಂಬಂಧಪಟ್ಟಂತೆ  ಕುಮಾರಸ್ವಾಮಿಯವರು ಬುಧವಾರ ಹಾಗೂ ಗುರುವಾರ ದೆಹಲಿಯಲ್ಲಿ ಕೆಲ ಸಚಿವರನ್ನು ಭೇಟಿಯಾಗಿದ್ದರು. ಆದರೆ ಈ ವೇಳೆ ಕಾಂಗ್ರೆಸ್‌ನ ಯಾವ ಸಚಿವರು ಇರಲಿಲ್ಲ ಎಂಬುದು ಗಮನಾರ್ಹ ಅಂಶ. ಅಲ್ಲದೇ ಪ್ರಧಾನಿ ಸೇರಿ ಕೇಂದ್ರ ಸಚಿವ ಸಂಪುಟದಲ್ಲಿ ಪ್ರಭಾವಿ ನಾಯಕರಾದವರನ್ನೇ ಭೇಟಿಯಾಗಿ ಚರ್ಚಿಸಿರುವ ಬಗ್ಗೆ ಬಿಜೆಪಿಯಲ್ಲೇ ನಾನಾ ವಿಶ್ಲೇಷಣೆ ಕೇಳಿ ಬಂದಿದೆ. ದೇವೇಗೌಡರು, ಕುಮಾರಸ್ವಾಮಿ ಹಾಗೂ ರೇವಣ್ಣ ಅವರು ಕೇಂದ್ರ ಸಚಿವ ಪಿಯೂಷ್‌ ಗೋಯೆಲ್‌ ಅವರನ್ನು ಭೇಟಿಯಾಗಿ ಚರ್ಚಿಸಿದ್ದಾರೆ. ಪಿಯೂಷ್‌
ಗೋಯೆಲ್‌ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರ ಆಪೆಷ್ಟರಾಗಿರುವುದರಿಂದ ಭೇಟಿಯ ಹಿಂದೆ ರಾಜಕೀಯ ಲೆಕ್ಕಾಚಾರವಿರಬಹುದು ಎನ್ನಲಾಗುತ್ತಿದೆ. ಜತೆಗೆ ಮತ್ತೂಬ್ಬ ಪ್ರಭಾವಿ ಕೇಂದ್ರ ಸಚಿವರಾದ ಅರುಣ್‌ ಜೇಟ್ಲಿ ಅವರನ್ನು ಭೇಟಿಯಾಗಿ
ಚರ್ಚಿಸಿರುವುದು ಸಹ ರಾಜಕೀಯವಾಗಿ ಮಹತ್ವ ಪಡೆದುಕೊಂಡಿದೆ. ಅಂತಿಮವಾಗಿ ಪ್ರಧಾನಿ ನರೇಂದ್ರ ಮೋದಿಯವರನ್ನು ಕುಮಾರಸ್ವಾಮಿಯವರು ಭೇಟಿಯಾಗಿ ಮಾತುಕತೆ ನಡೆಸಿರುವುದು ರಾಜ್ಯ ಬಿಜೆಪಿಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

Advertisement

ಮಹಾಘಟಬಂಧನ ಛಿದ್ರಗೊಳಿಸುವ ತಂತ್ರ: ಜೆಡಿಎಸ್‌ ನಾಯಕರ ಭೇಟಿ ಬೆನ್ನಲ್ಲೇ ಹೊಸ ನಿರೀಕ್ಷೆಗಳನ್ನು ಹುಟ್ಟಿಸಿರಬಹುದು. ಈ ನಡುವೆ ಸಚಿವ ಎಚ್‌ .ಡಿ.ರೇವಣ್ಣ ಅವರು ಕಾಂಗ್ರೆಸ್‌ ವಿರುದ್ಧ  ಪರೋಕ್ಷವಾಗಿ ವಾಗ್ಧಾಳಿ ನಡೆಸಿದ್ದು, ಮುಖ್ಯಮಂತ್ರಿ  ಕುಮಾರಸ್ವಾಮಿಯವರು ಎಷ್ಟು ದಿನ ಸಹಿಸುತ್ತಾರೋ ಎಂದು ಹೇಳಿಕೆ ನೀಡಿರುವುದು ಸಹ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಬಿಜೆಪಿ ಸರ್ಕಾರ ರಚನೆ ಪ್ರಯತ್ನದ ಹಿಂದೆ ದಕ್ಷಿಣ ಭಾರತದ ಪ್ರಮುಖ ರಾಜ್ಯವೊಂದರಲ್ಲಿ ಅಧಿಕಾರ 
ಹಿಡಿಯುವ ಉದ್ದೇಶದಂತೆ ಮೇಲ್ನೋಟಕ್ಕೆ ಕಂಡು ಬಂದರೂ ರಾಷ್ಟ್ರ ರಾಜಕಾರಣದಲ್ಲಿ ಬಿಜೆಪಿ ವಿರುದ್ಧ ಮಹಾಘಟಬಂಧನ ಹೆಸರಿನಲ್ಲಿ ಪ್ರತಿಪಕ್ಷಗಳ ಒಗ್ಗೂಡಲು ವೇದಿಕೆ ರಚನೆಯಾಗಿದ್ದು ಕರ್ನಾಟಕದಲ್ಲಿ. ಹಾಗಾಗಿ ಇಲ್ಲಿಯೇ ಬಿಜೆಪಿ- ಜೆಡಿಎಸ್‌ ಮೈತ್ರಿಯಾದರೆ
ಮಹಾಘಟಬಂಧನ ರಚನೆಯಾದ ಸ್ಥಳದಲ್ಲೇ ಪತನಗೊಂಡಂತಾಗಲಿದೆ. ಒಟ್ಟಾರೆ ದೇವೇಗೌಡ, ಕುಮಾರಸ್ವಾಮಿ, ರೇವಣ್ಣ ಅವರ ದೆಹಲಿ ಭೇಟಿ ರಾಜ್ಯ ಬಿಜೆಪಿ ನಾಯಕರಲ್ಲಿ ಹೊಸ ನಿರೀಕ್ಷೆಗಳನ್ನು ಹುಟ್ಟಿಸಿರುವುದು ಸುಳ್ಳಲ್ಲ. ರಾಜ್ಯದಲ್ಲಿ ಮತ್ತೆ ಹೊಸ ಶಕೆ 
ಶುರುವಾಗುವುದೇ ಎಂಬ ನಿರೀಕ್ಷೆಯಲ್ಲಿ ಬಿಜೆಪಿ ನಾಯಕರಿದ್ದಾರೆ.

● ಎಂ. ಕೀರ್ತಿಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next