Advertisement

ಮೂಡಲಗಿ: ನೂತನ ನ್ಯಾಯಾಲಯ ಸಂಕೀರ್ಣಕ್ಕೆ ಶಂಕುಸ್ಥಾಪನೆ

07:37 PM Sep 26, 2021 | Team Udayavani |

ಮೂಡಲಗಿ: ಅತ್ಯಾಧುನಿಕ ತಂತ್ರಜ್ಞಾನದಿಂದ ನ್ಯಾಯಾಲಯದ ಕಟ್ಟಡಗಳಂತೆ ಮೂಡಲಗಿಯಲ್ಲಿ ಸುಸಜ್ಜಿತ ಕಟ್ಟಡದೊಂದಿಗೆ ನ್ಯಾಯಾಲಯಕ್ಕೆ ಬೇಕಾಗಿರುವ ವ್ಯವಸ್ಥೆಯನ್ನೊಳಗೊಂಡ  ನ್ಯಾಯಾಲಯ ಕಟ್ಟಡ ಇನ್ನು 18 ತಿಂಗಳೊಳಗೆ ಸ್ಥಾಪನೆಗೊಳ್ಳಲಿದೆ ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಜಸ್ಟಿಸ್ ಸಚೀನ ಮಗದುಮ್ಮ ಹೇಳಿದರು.

Advertisement

ರವಿವಾರದಂದು ಪಟ್ಟಣದ ಗುರ್ಲಾಪೂರ ರಸ್ತೆಯ ಎಪಿಎಂಸಿಯ 4 ಎಕರೆ ನಿವೇಶನದಲ್ಲಿ 7.95 ಕೋಟಿ ರೂ, ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ನೂತನ ನ್ಯಾಯಾಲಯ ಸಂಕೀರ್ಣ ಹಾಗೂ ನ್ಯಾಯಾಧೀಶರ ವಸತಿ ಗೃಹ ಇವುಗಳ ಕಟ್ಟಡದ ಶಂಕುಸ್ಥಾಪನಾ ಸಮಾರಂಭದಲ್ಲಿ ಶಿಲಾನ್ಯಾಸ ನೆರವೇರಿಸಿದ ನಂತರ ವೇದಿಕೆಯ ಕಾರ್ಯಕ್ರಮವನ್ನು ಜೋತ್ಯಿ ಬೆಳಗಿಸುವ ಮೂಕಲ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸೌಹಾರ್ಧತೆಯ ಸಮಾಜ ನಿಮಾರ್ಣ ಮಾಡಲು ಪತ್ರಿಯೊಬ್ಬ ನಾಗರೀಕರಿಗೆ ಕಾನೂನಿನ ಅರಿವು ಮೂಡಿಸುವಂತ ಕಾರ್ಯಗಳನ್ನು ಸ್ಥಳೀಯ ವಕೀಲ ಬಾಂಧವರು ಮಾಡಬೇಕೆಂದು ತಿಳಿ ಹೇಳಿದರು.

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಚಂದ್ರಶೇಖರ ಜೋಶಿ ಮಾತನಾಡಿ, ಉತ್ತಮ ಸಮಾಜ ನಿರ್ಮಾಣದಲ್ಲಿ ನ್ಯಾಯಾಂಗದ ಪಾತ್ರ ಬಹುದೊಡ್ಡದು, ದೂರುಗಳಲ್ಲಿ ಕ್ರಿಮಿನಲ್ ಕೇಸುಗಳು ಹೆಚ್ಚಾಗಿದ್ದರೆ ಅದು ನಮ್ಮ ಸಮಾಜ ಹೋಗುತ್ತಿರುವ ದಾರಿಯನ್ನು ಸೂಚಿಸುತ್ತದೆ. ನ್ಯಾಯಾಂಗದ ಮೇಲೆ ಗೌರವ ಹೆಚ್ಚಾಗಬೇಕಾದರೆ ಐದು ವರ್ಷ, ಹತ್ತು ವರ್ಷಗಳ ಹಿಂದಿನ ಕೇಸುಗಳನ್ನು ಮೊದಲು ಮುಗಿಸಬೇಕು ಇಲ್ಲದಿದ್ದರೆ ನಾವು ಸಮಾಜಕ್ಕೆ ಉತ್ತರ ನೀಡಬೇಕಾಗುತ್ತದೆ ಎಂದರು. ನ್ಯಾಯಾಲಯಕ್ಕೆ ಹೊಸ ಕಟ್ಟಡ ಬಂದರೆ ವಕೀಲರ ಹೊಣೆಗಾರಿಕೆ ಜಾಸ್ತಿಯಾದಂತೆ ಎಂಬುದನ್ನು ನಾವು ತಿಳಿದುಕೊಳ್ಳಬೇಕು. ಈ ಕಟ್ಟಡ ನ್ಯಾಯ ದೇಗುಲವಾಗಲಿ ಮತ್ತು ಎಲ್ಲರಿಗೂ ನ್ಯಾಯ ಸಿಗಲಿ ಎಂದರು.

ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ ಮಾತನಾಡಿ,  ವ್ಯವಸ್ಥೆ ಬಲಿಷ್ಠವಾದಾಗ ಅದರ ವಿರುದ್ಧ ಮಾತನಾಡಲು ಸಾಮಾನ್ಯರು ನ್ಯಾಯಾಲಯಕ್ಕೆ ಬರಬೇಕಾಗುತ್ತದೆ. ಅತ್ಯಂತ ವಿಶ್ವಾಸಾರ್ಹ ಕ್ಷೇತ್ರವಾಗಿ ಉಳಿದಿರುವ ಅಂಗವೆಂದರೆ ಅದು ನ್ಯಾಯಾಂಗ. ಈ ಕಟ್ಟಡವು ಎಲ್ಲರಿಗೂ ನ್ಯಾಯ ಒದಗಿಸುವ ಪವಿತ್ರ ಸ್ಥಾನವಾಗಲಿದೆ ಎಂಬ ನಂಬಿಕೆಯಿದೆ, ಸಂಸದರ ನಿಧಿಯಿಂದ ನೂತನ ನ್ಯಾಯಾಲಯದಲ್ಲಿ ಡಿಜಿಟಲ್ ಗೃಂಥಾಲಯ ನಿರ್ಮಾಣ ಮಾಡಲು ಸುಮಾರು 10ಲಕ್ಷ ರೂ.ಗಳ ಅನುದಾನ ನೀಡುವುದಾಗಿ ಘೋಷಣೆ ಮಾಡಿದರಲ್ಲದೆ ನ್ಯಾಯಾಲಯದ ಕಾರ್ಯಕಲಾಪಗಳು ಸ್ಥಳೀಯ ಭಾಷೆಯಲ್ಲಿ ನಡೆಯಬೇಕೆಂಬುದು ನ್ಯಾಯಾಧೀಶರಲ್ಲಿ ಮನಿವಿ ಮಾಡಿಕೊಂಡರು.

ಕರ್ನಾಟಕ ಉಚ್ಛ ನ್ಯಾಯಾಲಯ ಬೆಂಗಳೂರು ಹಾಗೂ ಬೆಳಗಾವಿ ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶ ಅರವಿಂದ ಕುಮಾರ ಅವರು ವಿಡಿಯೋ ಕಾನ್ಫರನ್ಸ್ ಮೂಲಕ ಮಾತನಾಡಿ,  ಸರ್ಕಾರ ನೀಡುತ್ತಿರುವ ಕೋರ್ಟ್ ಕಟ್ಟಡದ ಸದುಪಯೋಗ ಮಾಡಿಕೊಂಡು ನೊಂದ ಕಕ್ಷಿದಾರರಿಗೆ ನ್ಯಾಯ ಕೊಡಿಸುವ ಕೆಲಸ ವಕೀಲರು ಮಾಡಬೇಕು. ರಾಜ್ಯದಲ್ಲಿ 6.13 ಲಕ್ಷ ಸಿವಿಲ್ ಕೇಸುಗಳು, 7.20 ಲಕ್ಷ ಕ್ರಿಮಿನಲ್ ಕೇಸುಗಳು ಪೆಂಡಿಂಗ್ ಇವೆ. ಇವು ಬೇಗ ಮುಗಿಯಬೇಕು. ವಕೀಲರು ಕೇವಲ ಕೇಸು ನಡೆಸಿದರೆ ಸಾಲದು ಹಳ್ಳಿಗಳಿಗೆ ಹೋಗಿ ಕಾನೂನು ತಿಳಿವಳಿಕೆ ನೀಡಬೇಕು ಎಂದರು.

Advertisement

ನ್ಯಾಯವಾದಿ ಕೆ ಎಲ್ ಹುಣಶಾಳ ಪ್ರಾಸ್ತಾವಿಕ ಮಾತನಾಡಿ, 2007 ರಲ್ಲಿ ಮೂಡಲಗಿ ನ್ಯಾಯಾಲಯ ಸ್ಥಾಪನೆಯ ಹೋರಾಟ ಸಂದರ್ಭದಲ್ಲಿ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರು, ನ್ಯಾಯಾಧೀಶರುಗಳು, ವಕೀಲರುಗಳು, ಅಧಿಕಾರಿಗಳು ಮೂಡಲಗಿ ಸುತ್ತಮುತ್ತಲಿನ ಗ್ರಾಮಗಳ ನಾಗರೀಕರು, ಹೋರಾಟವನ್ನು ಪ್ರಚುರ ಪಡಿಸಿದ ಮಾಧ್ಯಮಗಳ ಕಾರ್ಯ ಕೂಡ ಅಭಿನಂದನೀಯ. ನ್ಯಾಯಾಲಯಕ್ಕೆ ಜಾಗ ನೀಡಲು ಎಪಿಎಂಸಿ ಕೂಡ ಮುಂದೆ ಬಂದು ಹಲವಾರು ಪ್ರಯತ್ನಗಳ ನಂತರ ಕೋರ್ಟ್ ಕಟ್ಟಡ ಹಾಗೂ ನ್ಯಾಯಾಧೀಶರ ವಸತಿಗೃಹ ಕಟ್ಟಡಗಳಿಗೆ ಇಂದು ಶಂಕುಸ್ಥಾಪನೆ ನೆರವೇರಿದೆ ಎಂದರು.

ಸಮಾರಂಭದ ವೇದಿಕೆಯಲ್ಲಿ ರಾಜ್ಯ ವಕೀಲ ಪರಿಷತ್ ಉಪಾಧ್ಯಕ್ಷ ಕಲ್ಮೇಶ ಕಿವಡ, ಸದಸ್ಯ ಕೆ ಬಿ ನಾಯಕ, ಮಾಜಿ ಅಧ್ಯಕ್ಷ, ಸದಸ್ಯ ವಿನೋದ ಮಾಂಗಳೇಕರ, ಲೋಕೋಪಯೋಗಿ ಅಧಿಕಾರಿ ವಿ.ಎನ್.ಪಾಟೀಲ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಗೋಕಾಕ ನ್ಯಾಯಾಧೀಶರು ಹಾಗೂ ಮೂಡಲಗಿ, ಗೋಕಾಕ, ರಾಮದುರ್ಗ ವಿವಿಧ ನ್ಯಾಯವಾಧಿಗಳ ಸಂಘದವರು ಮತ್ತು ನ್ಯಾಯವಾಧಿಗಳು, ಮೂಡಲಗಿ ತಹಶೀಲ್ದಾರ ಡಿ.ಜಿ.ಮಹಾತ, ಪುರಸಭೆ ಅಧ್ಯಕ್ಷ ಹನಮಂತ ಗುಡ್ಲಮನಿ ಮತ್ತಿತರು ಇದ್ದರು.

ಮೂಡಲಗಿ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಕೆ.ಪಿ.ಮಗದುಮ್ ಸ್ವಾಗತಿಸಿದರು,  ಕಾರ್ಯದರ್ಶಿ   ಎಲ್.ವೈ.ಅಡಿಹುಡಿ ಪರಿಚಯಸಿದರು, ಪ್ರೊ. ಸಂಗಮೇಶ ಗುಜಗೊಂಡ ಮತ್ತು ಬಾಲಶೇಖರ ಬಂದಿ   ನಿರೂಪಿಸಿದರು. ಸ್ಥಳೀಯ ನ್ಯಾಯಾಧೀಶ ಸುರೇಶ ಎಸ್.ಎನ್ ವಂದಿಸಿದರು

Advertisement

Udayavani is now on Telegram. Click here to join our channel and stay updated with the latest news.

Next