Advertisement

ತಿಂಗಳೊಳಗೆ ಹೊಸ ʼಸೆಂಟ್ರಲ್‌ ಮಾರುಕಟ್ಟೆ’ಕಾಮಗಾರಿ ಆರಂಭ?

11:14 AM Jun 28, 2022 | Team Udayavani |

ಸ್ಟೇಟ್‌ಬ್ಯಾಂಕ್‌: ಎಲ್ಲವೂ ಅಂದುಕೊಂಡಂತೆ ಆದರೆ 1 ತಿಂಗಳೊಳಗೆ ಮಂಗಳೂರಿನ ಬಹು ಚರ್ಚಿತ ನೂತನ ಸೆಂಟ್ರಲ್‌ ಮಾರುಕಟ್ಟೆ ನಿರ್ಮಾಣ ಕಾಮಗಾರಿಗೆ ಚಾಲನೆ ದೊರೆಯುವ ಸಾಧ್ಯತೆಯಿದೆ. ಮೂರು ವರ್ಷಗಳೊಳಗೆ ಈ ಕಾಮಗಾರಿಯನ್ನು ಪೂರ್ಣಗೊಳಿಸಬೇಕಾಗಿದೆ.

Advertisement

ಇಲ್ಲಿನ ಒಟ್ಟು 3.61 ಎಕರೆ ಸ್ಥಳದಲ್ಲಿ ಸರಕಾರಿ ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ಒಟ್ಟು 114 ಕೋ.ರೂ. ವೆಚ್ಚದಲ್ಲಿ ಹೊಸ ಮಾರುಕಟ್ಟೆ ನಿರ್ಮಿಸಲು ಸ್ಮಾರ್ಟ್‌ ಸಿಟಿ ಉದ್ದೇಶಿಸಿದೆ. ಹೊಸ ಮಾರುಕಟ್ಟೆಯಲ್ಲಿ ನೆಲ ಅಂತಸ್ತು ಮತ್ತು ಅದರ ಮೇಲ್ಗಡೆ 5 ಮಹಡಿಗಳಿರುತ್ತವೆ. ತಳಭಾಗದ ಎರಡು ಅಂತಸ್ತುಗಳು ವಾಹನ ಪಾರ್ಕಿಂಗ್‌ಗೆ ಮೀಸಲಾಗಿರುತ್ತದೆ.

ಸೆಂಟ್ರಲ್‌ ಮಾರುಕಟ್ಟೆ ನಿರ್ಮಾಣವಾಗುವ ಸ್ಥಳದಲ್ಲಿ ಕಾಮಗಾರಿ ಸಂದರ್ಭ ಬೇಸ್‌ಮೆಂಟ್‌ಗಾಗಿ ಅಗೆಯಲಾಗುತ್ತದೆ. ಈ ವ್ಯಾಪ್ತಿ ಹಾಗೂ ಇದರ ಸುತ್ತಲೂ ಶೀಟ್‌ ಅಳವಡಿಸಿ ಬಂದ್‌ ಮಾಡಲಾಗುತ್ತದೆ. ಇದರಿಂದಾಗಿ ಸದ್ಯ ರಸ್ತೆ ಬದಿ ವ್ಯಾಪಾರ ಮಾಡುವವರಿಗೆ ಮುಂದೆ ಅವಕಾಶ ಸಿಗುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಜತೆಗೆ ಕಾಮಗಾರಿ ವೇಳೆ ವಾಹನ ಸಂಚಾರಕ್ಕೂ ಇಲ್ಲಿ ಸಮಸ್ಯೆ ಆಗಲಿದೆ.

ಶೀಘ್ರ ಭೂಮಿಪೂಜೆ

ಹಳೆಯ ಸೆಂಟ್ರಲ್‌ ಮಾರ್ಕೆಟ್‌ ಇದ್ದ ಜಾಗದಲ್ಲಿಯೇ ಸ್ಮಾರ್ಟ್‌ಸಿಟಿ ವತಿಯಿಂದ ಹೊಸದಾಗಿ ಮಾರುಕಟ್ಟೆ ನಿರ್ಮಿಸುವ ಯೋಜನೆ ಇದೀಗ ಅಂತಿಮ ಹಂತದಲ್ಲಿದ್ದು, 1 ತಿಂಗಳೊಳಗೆ ಇದರ ಕಾಮಗಾರಿಯೂ ಆರಂಭವಾಗಲಿದೆ. ಅದಕ್ಕಾಗಿ ಕೆಲವೇ ದಿನಗಳಲ್ಲಿ ಭೂಮಿಪೂಜೆ ನಡೆಯಲಿದೆ. -ಪ್ರೇಮಾನಂದ ಶೆಟ್ಟಿ, ಮೇಯರ್‌, ಮಂಗಳೂರು ಪಾಲಿಕೆ

Advertisement

ತ್ರಾಸವಾಗಿದೆ ಕಲ್ಲು ಮಣ್ಣಿನ ತೆರವು!

ಸೆಂಟ್ರಲ್‌ ಮಾರುಕಟ್ಟೆ ಇದ್ದ ಸ್ಥಳದಲ್ಲೀಗ ಕಲ್ಲು ಮಣ್ಣಿನ ರಾಶಿಯಿದ್ದು, ತೆರವು ಕಾರ್ಯಾಚರಣೆ ಮುಂದುವರಿದಿದೆ. ನಗರದಲ್ಲಿ ಕಟ್ಟಡ ನಿರ್ಮಾಣ ಮತ್ತು ತೆರವು ತ್ಯಾಜ್ಯವನ್ನು ಹಾಕಲು ಸೂಕ್ತ ಸ್ಥಳದ ಕೊರತೆ ಇರುವುದರಿಂದ ಸೆಂಟ್ರಲ್‌ ಮಾರ್ಕೆಟ್‌ ತೆರವು ಕಾಮಗಾರಿಯ ತ್ಯಾಜ್ಯ ವಿಲೇವಾರಿ ಕಾರ್ಯಾಚರಣೆಗೂ ಸಮಸ್ಯೆಯಾಗಿದೆ. ಜತೆಗೆ ಹಗಲು ಮಾರುಕಟ್ಟೆ ಪ್ರದೇಶ ವಾಹನ, ಜನ ದಟ್ಟಣೆಯಿಂದ ಕೂಡಿರುವುದರಿಂದ ಟಿಪ್ಪರ್‌ಗಳ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಪ್ರಸ್ತುತ ಈ ತ್ಯಾಜ್ಯವನ್ನು ಇತರ ನಿರ್ಮಾಣ ಸ್ಥಳಗಳಿಗೆ “ಲ್ಯಾಂಡ್‌ ಫಿಲ್ಲಿಂಗ್‌’ಗೆ ಸಹಿತ ವಿವಿಧ ಉದ್ದೇಶಗಳಿಗಾಗಿ ಬಳಸಲಾಗುತ್ತಿದೆ. ಉಳಿದ ಕಲ್ಲು, ಜಲ್ಲಿ ಹುಡಿ ಮೊದಲಾದವುಗಳನ್ನು ಗುತ್ತಿಗೆದಾರರೇ ಬೇರೆಡೆಗಳಲ್ಲಿ ಕಾಮಗಾರಿಗಳಿಗೆ ನೀಡುತ್ತಿದ್ದಾರೆ. ಕಾರ್ಯಾಚರಣೆ ನಡೆದಿರುವಂತೆಯೇ ಒಂದೆರಡು ಕಡೆಗಳಲ್ಲಿ ಹೊರಗಿನವರು ಇಲ್ಲಿಗೆ ತ್ಯಾಜ್ಯ ತಂದು ಸುರಿಯುವ ಘಟನೆಯೂ ನಡೆಯುತ್ತಿದೆ.

 

Advertisement

Udayavani is now on Telegram. Click here to join our channel and stay updated with the latest news.

Next