ಸುಳ್ಯ: ದ.ಕ. ಜಿಲ್ಲೆಯ ಏಕೈಕ ಮೀಸಲು ಕ್ಷೇತ್ರ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲೀಗ ಮೂರೂವರೆ ದಶಕಗಳ ಬಳಿ ಕ ಬಿಜೆಪಿ ಹಾಗೂ ಎರಡು ದಶಕದ ಬಳಿಕ ಕಾಂಗ್ರೆಸ್ ಹೊಸ ಮುಖ ಕಣಕ್ಕಿಳಿಸುವ ಯೋಚನೆ ಮಾಡಿರುವುದೇ ಈ ತನಕದ ಹೈಲೈಟ್ಸ್.
ಅಭ್ಯರ್ಥಿಗಳಿಗಾಗಿಯೇ ಹುಡುಕಾಟ ನಡೆಸಬೇಕಿದ್ದ ಕ್ಷೇತ್ರದಲ್ಲೀಗ ಪ್ರಮುಖ ಎರಡು ಪಕ್ಷಗಳಲ್ಲಿ ಆಕಾಂಕ್ಷಿಗಳ ದಂಡೇ ತುಂಬಿದೆ. ಹೀಗಾಗಿ ಹೈಕಮಾಂಡ್ಗೆ ಅಭ್ಯರ್ಥಿ ಹೆಸರು ಅಂತಿಮ ಮಾಡುವುದೇ ದೊಡ್ಡ ಸವಾಲು.
ತರುಣ ಪ್ರಯೋಗ: ಮೂವತ್ತೆ$çದು ವರ್ಷಗಳ ಹಿಂದೆ ಕಾಂಗ್ರೆಸ್ ಭದ್ರಕೋಟೆಯನ್ನು ಕೆಡವಲು ಬಿಜೆಪಿ ಪ್ರಯೋಗಿಸಿದ್ದು ತರುಣ ಅಭ್ಯರ್ಥಿ ಪ್ರಯೋಗ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಚಾರಕರಾಗಿದ್ದ 27 ವರ್ಷದ ಅಂಗಾರ ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಲಾಗಿತ್ತು. 1989ರ ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್ನ ಕುಶಲ ಅವರ ವಿರುದ್ಧ ಅಂಗಾರ ಸೋತರೂ 1994ರಿಂದ 2018ರ ತನಕ ನಿರಂತರ ಗೆಲುವು ದಾಖಲಿಸಿದ್ದಾರೆ. ಈ ಬಾರಿ ಬಿಜೆಪಿ ಅಂಗಾರ ಅವರನ್ನು ಬದಲಾಯಿಸಿ ಮತ್ತೆ ತರುಣ ಅಭ್ಯರ್ಥಿ ಕಣಕ್ಕಿಳಿಸುವ ಪ್ರಯೋಗ ಮಾಡುವ ಸಾಧ್ಯತೆ ಇದೆ ಅನ್ನುವುದು ಪ್ರಚಲಿತದಲ್ಲಿರುವ ಮಾತು.
ಅಂದ ಹಾಗೆ, ಸುಳ್ಯ ಸಂಘ ಪರಿವಾರದ ಭದ್ರಕೋಟೆ. 2013ರಲ್ಲಿ ದ.ಕ. ಜಿಲ್ಲೆಯಲ್ಲಿನ 8 ಸ್ಥಾನಗಳ ಪೈಕಿ ಬಿಜೆಪಿ 7ರಲ್ಲಿ ಸೋತಿತ್ತು. ಇನ್ನೇನು ಸೋತೇ ಬಿಟ್ಟಿತು ಎಂದು ಭಾವಿಸಲಾಗಿದ್ದ ಸುಳ್ಯ ಕ್ಷೇತ್ರದಲ್ಲಿ ಗೆಲುವು ದಾಖಲಿಸಿ ಬಿಜೆಪಿ ಭದ್ರಕೋಟೆ ಅನ್ನುವುದನ್ನು ಸಾಬೀತುಪಡಿಸಿತು. ಇಲ್ಲಿ ಬಿಜೆಪಿಯ ಭವಿಷ್ಯ ಇರುವುದು ಸಂಘದ ಕೈಯಲ್ಲಿ. ಪಕ್ಷದೊಳಗಿನ ಭಿನ್ನಾಭಿಪ್ರಾಯಗಳು ಸಾರ್ವಜನಿಕವಾಗಿ ಪ್ರಕಟಗೊಳ್ಳುವುದೇ ಇಲ್ಲಿ ಅಪರೂಪ. ಸಂಘ ಸೂಚಿಸುವ ವ್ಯಕ್ತಿಯೇ ಇಲ್ಲಿ ಅಭ್ಯರ್ಥಿಯಾಗುವುದು ಈ ತನಕದ ಪರಿಪಾಠ.
Related Articles
ಅವಕಾಶ ಸಿಕ್ಕರೆ ಸ್ಪರ್ಧೆ: ಇತ್ತೀ ಚಿನ ತನಕ ಅಂಗಾರ ಅವರು ಈ ಬಾರಿ ಸ್ಪರ್ಧಿಸುವುದಿಲ್ಲ ಅನ್ನುವುದೇ ಕ್ಷೇತ್ರದಲ್ಲಿ ಕೇಳಿಬ ರು ತ್ತಿದ್ದ ಮಾತು. ಆದರೆ ಸ್ವತಃ ಅಂಗಾರ ಅವರೇ ಈ ಅಭಿಪ್ರಾಯ ತಳ್ಳಿ ಹಾಕಿರುವುದು ಆಕಾಂಕ್ಷಿಗಳಲ್ಲಿ ಸಂಚಲನ ಮೂಡಿಸಿದೆ. ಪಕ್ಷ ಅವಕಾಶ ಕೊಟ್ಟರೆ ಎಂಟನೆ ಬಾರಿ ಸ್ಪರ್ಧಿಸುವುದಾಗಿ ಬಹಿರಂಗವಾಗಿ ಹೇಳಿರುವುದರಿಂದ ಅವರು ಸ್ಪರ್ಧಾ ಕಣದಲ್ಲಿರುವುದು ಸ್ಪಷ್ಟವಾಗಿದೆ.
ಒಂದು ವೇಳೆ ಅಂಗಾರ ಅವರನ್ನು ಬದಲಾಯಿಸಿ ಹೊಸ ಮುಖಕ್ಕೆ ಅವಕಾಶ ನೀಡುವುದಿದ್ದರೆ ಮೊದಲ ಹೆಸರು ಕೇಳಿ ಬರುತ್ತಿರುವುದು 31ರ ಹರೆಯದ ಪದವೀಧರ, ಬ್ಯಾಂಕ್ ಉದ್ಯೋಗಿ ಶಿವಪ್ರಸಾದ್ ಪೆರುವಾಜೆ. ಸಂಘದ ಕಟ್ಟಾಳು ಅನ್ನುವುದು ಇವರಿಗೆ ಇರುವ ಪ್ಲಸ್ ಪಾಯಿಂಟ್. ಕಳೆದ ಎರಡು ಅವಧಿಯಿಂದಲೂ ಪ್ರಬಲವಾಗಿ ಕೇಳಿಬರುತ್ತಿರುವ ಇನ್ನೊಂದು ಹೆಸರು ಜಿ. ಪಂ. ಮಾಜಿ ಸದಸ್ಯೆ ಭಾಗೀರಥಿ. ಇವೆರಡು ಟಿಕೆಟ್ ಅಂಗಳದಲ್ಲಿರುವ ಪ್ರಮುಖ ಹೆಸರುಗಳು. ಉಳಿದಂತೆ ಉಪನ್ಯಾಸಕ ಪದ್ಮಕುಮಾರ್ ಗುಂಡ್ಯಡ್ಕ, ತಾ.ಪಂ. ಮಾಜಿ ಅಧ್ಯಕ್ಷ ಚನಿಯ ಕಲ್ತಡ್ಕ, ಶಂಕರ ಪೆರಾಜೆ, ಶೀನಪ್ಪ ಬಯಂಬು, ಸಂಜಯಕುಮಾರ್, ಲತೀಶ್ ಗುಂಡ್ಯ, ಜಗನ್ನಾಥ, ಪುತ್ತೂರಿನವರಾದ ಜಿ. ಪಂ. ಮಾಜಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಸಹಿತ ಹತ್ತಾರು ಹೆಸರುಗಳು ಚಾಲ್ತಿಯಲ್ಲಿವೆ. ಕೆಲವು ಆಕಾಂಕ್ಷಿಗಳು ಸಾಮಾಜಿಕ ಜಾಲ ತಾಣಗಳಲ್ಲಿ ಗ್ರೂಪ್ ರಚಿಸಿ ಆಕಾಂಕ್ಷೆ ತೋರ್ಪಡಿಸುತ್ತಿದ್ದಾರೆ. ಈ ಮಧ್ಯೆ ಸುಳ್ಯ ಕ್ಷೇತ್ರಕ್ಕೆ ಹೊರಗಿನ ಅಭ್ಯರ್ಥಿಗಳನ್ನು ಕಣಕ್ಕಿಳಿಸಬಾರದು ಎಂದು ಆಗ್ರಹಿಸಿ ಸುಳ್ಯದ ದಲಿತ ಮುಖಂಡರು ಪತ್ರಿಕಾಗೋಷ್ಠಿ ನಡೆಸಿರುವುದು ಕೂಡ ಗಮನಾರ್ಹ ಸಂಗತಿ.
ಕಾಂಗ್ರೆಸ್ ನಲ್ಲಿ ಹೊಸ ಮುಖ
ಕಾಂಗ್ರೆಸ್ ನಿಂದ ಸ್ಪರ್ಧಿಸಿ ಸತತ 4 ಬಾರಿ ಸೋತಿರುವ ಡಾ| ರಘು ಅವರು ಸ್ಪರ್ಧಾ ಕಣದಿಂದ ಹಿಂದೆ ಸರಿದಿದ್ದಾರೆ. ಅವರ ಪುತ್ರರಾದ ಪ್ರಹ್ಲಾದ್, ಅಭಿಷೇಕ್ ಅವರು ಟಿಕೆಟ್ ಆಕಾಂಕ್ಷೆ ವ್ಯಕ್ತಪಡಿಸಿ ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದಾರೆ. ಉಳಿದಂತೆ ಮಡಿಕೇರಿ ನಗರಸಭೆ ಮಾಜಿ ಅಧ್ಯಕ್ಷ ನಂದ ಕುಮಾರ್, ಜಿ. ಕೃಷ್ಣಪ್ಪ. ನಂದಕುಮಾರ್ ಕಳೆದ ಕೆಲವು ವರ್ಷಗಳಿಂದ ಕ್ಷೇತ್ರಾದ್ಯಂತ ಓಡಾಟ ನಡೆಸುತ್ತಿದ್ದಾರೆ. ಜಿ. ಕೃಷ್ಣಪ್ಪ ಕೂಡ ಸಭೆ, ಸಮಾವೇಶಗಳಲ್ಲಿ ಮುಂಚೂಣಿಯಲ್ಲಿದ್ದಾರೆ. ಉಳಿದಂತೆ ಮಾಜಿ ಕಾರ್ಪೊರೇಟರ್ ಅಪ್ಪಿ ಮೊದಲಾದವರ ಹೆಸರು ಕೇಳಿ ಬಂದಿದೆ. ಕಾಂಗ್ರೆಸ್ನಿಂದ ಸುಳ್ಯದ ಕೊನೆಯ ಶಾಸಕರಾಗಿದ್ದ ಮಾಜಿ ಶಾಸಕ ಕುಶಲ ಅವರ ಪುತ್ರಿ ಈ ಬಾರಿ ಆಮ್ ಆದ್ಮಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಬಹುತೇಕ ನಿಶ್ಚಿತ. ಈ ಮಧ್ಯೆ ಕುಶಲ ಅವರ ನಡೆ ಏನಿರಬಹುದು ಅನ್ನುವ ಕುತೂಹಲ ಇದೆ.
– ಕಿರಣ್ ಪ್ರಸಾದ್ ಕುಂಡಡ್ಕ