Advertisement

ಕರಾವಳಿಯಲ್ಲಿ ಎಚ್ಚರಿಕೆ ಅಗತ್ಯ; ಕೇರಳದಲ್ಲಿ ಹಬ್ಬುತ್ತಿದೆ ನ್ಯೂರೊ ವೈರಾಣು ಸೋಂಕು

02:11 AM Nov 23, 2021 | Team Udayavani |

ಕುಂದಾಪುರ: ಕೊರೊನಾ ಹಾವಳಿ ಇಳಿಮುಖವಾಗುತ್ತ ಜನರಲ್ಲಿ ನೆಮ್ಮದಿ ಮೂಡಿಸುತ್ತಿದೆ ಎನ್ನುವಷ್ಟರಲ್ಲಿ ಕೇರಳದಲ್ಲಿ ಹೊಸ ನ್ಯೂರೊ ವೈರಸ್‌ ಸೋಂಕು ಕಾಣಿಸಿಕೊಂಡಿದ್ದು, ನಿಧಾನಕ್ಕೆ ಹಬ್ಬುತ್ತಿದೆ.

Advertisement

ಕೇರಳದೊಂದಿಗೆ ನಿಕಟ ಸಂಪರ್ಕದಲ್ಲಿರುವ ಕರ್ನಾಟಕದ ಕರಾವಳಿಯಲ್ಲಿ ಸದ್ಯ ಈ ವೈರಾಣು ಸೋಂಕಿನ ಪ್ರಕರಣಗಳು ವರದಿಯಾಗಿಲ್ಲ. ಆದರೂ ನೆರೆಯ ಜಿಲ್ಲೆಗಳಾಗಿರುವುದರಿಂದ ಮಂಗಳೂರು ಮತ್ತು ಉಡುಪಿಯಲ್ಲಿ ಮುಂಜಾಗ್ರತೆ ಅಗತ್ಯ.

ವಾಂತಿ – ಭೇದಿ, ಹೊಟ್ಟೆನೋವು ಮತ್ತು ಸಣ್ಣದಾಗಿ ಜ್ವರ ಈ ಸೋಂಕಿನ ಪ್ರಮುಖ ಲಕ್ಷಣಗಳು. ಇದು ನೀರು, ಆಹಾರದ ಮೂಲಕ ಹರಡುತ್ತದೆ. ಸೋಂಕುಪೀಡಿತ ವ್ಯಕ್ತಿ ಬಳಸಿದ ನೀರು, ಆಹಾರವನ್ನು ಆರೋಗ್ಯವಂತರು ಹಂಚಿಕೊಂಡರೆ ತಗಲುವ ಸಾಧ್ಯತೆಯಿರುತ್ತದೆ. ಅಲ್ಲದೆ ಸೋಂಕು ಪೀಡಿತರ ಮಲ, ವಾಂತಿ ಅಂಶಗಳಿಂದಲೂ ಹರಡುವ ಸಾಧ್ಯತೆಗಳಿರುತ್ತವೆ.

ನಿಗಾ ವಹಿಸಲು ಸೂಚನೆ
ಕೇರಳದ ವಯನಾಡಿನಲ್ಲಿ ಕೆಲವು ದಿನಗಳ ಹಿಂದೆ ಮೊದಲ ಬಾರಿಗೆ 13 ಮಂದಿಗೆ ಈ ನ್ಯೂರೊ ವೈರಸ್‌ ಸೋಂಕು ಕಾಣಿಸಿಕೊಂಡಿತ್ತು. ಆದ್ದರಿಂದ ಉಡುಪಿ, ದಕ್ಷಿಣ ಕನ್ನಡದಲ್ಲಿ ನಿಗಾ ಇರಿಸುವಂತೆ ಆರೋಗ್ಯ ಇಲಾಖೆ ಸೂಚಿಸಿದೆ.

ಸಾಮೂಹಿಕ ವೆಂಬಂತೆ ಹೊಟ್ಟೆನೋವು, ವಾಂತಿ, ಭೇದಿ ಕಾಣಿಸಿ ಕೊಂಡಲ್ಲಿ ತತ್‌ಕ್ಷಣ ಕ್ರಮ ಕೈಗೊಳ್ಳಲು ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಶಿಕ್ಷಣ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ.

Advertisement

ಹವಾಮಾನ ಏರುಪೇರು: ಮುಂಜಾಗ್ರತೆಯಿರಲಿ
ಅಕಾಲಿಕ ಮಳೆ, ಕೆಲವೊಮ್ಮೆ ವಿಪರೀತ ಸೆಕೆ, ಮತ್ತೂಮ್ಮೆ ಚಳಿ ಹೀಗೆ ಆಗಾಗ ಹವಾಮಾನ ವ್ಯತ್ಯಯ ಉಂಟಾಗುತ್ತಿರುವುದರಿಂದ ಎಲ್ಲರೂ ಮುಂಜಾಗ್ರತೆ ವಹಿಸುವುದು ಅತೀ ಅಗತ್ಯ. ಇದು ಜಾತ್ರೆ, ಶುಭ ಸಮಾರಂಭಗಳು ನಡೆಯುವ ಸಮಯವಾಗಿರುವುದರಿಂದ ಎಲ್ಲರೂ ಕಾಳಜಿ ವಹಿಸುವುದು ಅಗತ್ಯ.

ಇದನ್ನೂ ಓದಿ:ತೀವ್ರ ವಿರೋಧಕ್ಕೆ ಮಣಿದ ಆಂಧ್ರಪ್ರದೇಶ ಸಿಎಂ; ವಿವಾದಿತ 3 ರಾಜಧಾನಿಗಳ ಮಸೂದೆ ವಾಪಸ್

ಮುನ್ನೆಚ್ಚರಿಕೆ ಹೇಗೆ?
-ವಾಂತಿ, ಭೇದಿ, ಹೊಟ್ಟೆನೋವು ಕಂಡು ಬಂದರೆ ತತ್‌ಕ್ಷಣ ಸಮೀಪದ ಆಸ್ಪತ್ರೆಗೆ ಭೇಟಿ ನೀಡಿ, ಅಗತ್ಯ ಚಿಕಿತ್ಸೆ ಪಡೆಯುವುದು ಉತ್ತಮ.
-ಊಟ, ತಿಂಡಿ-ತಿನಿಸುಗಳ ಬಗ್ಗೆ ಆದಷ್ಟು ಎಚ್ಚರಿಕೆ ವಹಿಸಬೇಕು. ನೀರಿನ ಮೂಲಗಳನ್ನು ಆಗಾಗ ಸ್ವಚ್ಛ ಮಾಡುತ್ತಿರಬೇಕು. ಕುದಿಸಿ ಆರಿ ಸಿದ ಅಥವಾ ಬಿಸಿ ನೀರು ಕುಡಿಯಬೇಕು. ಹೊರಗಿನ ಆಹಾರ ಬೇಡ, ಮನೆಯ ಅಡುಗೆ ಯನ್ನೇ ಸೇವಿಸಿ.
-ವೈಯಕ್ತಿಕ ಸ್ವಚ್ಛತೆ ಅತೀ ಅಗತ್ಯ. ಆಗಾಗ ಸಾಬೂನು ಬಳಸಿ ಕೈ ತೊಳೆಯುತ್ತಿರಬೇಕು.
-ಶೌಚಾಲಯದ ಸ್ವಚ್ಛತೆ ಅಗತ್ಯ.
-ಗಾಳಿಯಿಂದ ಹರಡುವ ಸೋಂಕು ಅಲ್ಲ. ಹೀಗಾಗಿ ಭೀತಿ ಬೇಡ.
-ಸಾಮಾನ್ಯವಾಗಿ ಈ ಸೋಂಕು ಕಾಣಿಸಿಕೊಂಡ ವ್ಯಕ್ತಿಗೆ ಸೂಕ್ತ ಚಿಕಿತ್ಸೆ ಕೊಡಿಸಿದರೆ 2-3 ದಿನದಲ್ಲಿ ಗುಣಮುಖವಾಗುತ್ತಾರೆ. ಇದು ಮಾರಾಣಾಂತಿಕವಲ್ಲ.

ವಾಂತಿ ಭೇದಿ ಹೆಚ್ಚಳ: ನಿರ್ಜಲೀಕರಣ ಉಂಟಾಗದಂತೆ ಎಚ್ಚರ
ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ಹಲವೆಡೆ ಒಂದೆರಡು ವಾರಗಳಿಂದ ವಾಂತಿಭೇದಿ ಪ್ರಕರಣ ಗಳು ವ್ಯಾಪಕವಾಗಿದ್ದು, ಹವಾಮಾನ ಏರುಪೇರು ಇದಕ್ಕೆ ಕಾರಣವಾಗಿರುವ ಸಾಧ್ಯತೆಗಳಿವೆ.

ಇದು ನ್ಯೂರೋ ವೈರಸ್‌ ಸೋಂಕು ಹೌದೇ ಅಲ್ಲವೇ ಎಂಬುದನ್ನು ಪರೀಕ್ಷೆ ನಡೆಸಿದರೆ ಮಾತ್ರ ಖಚಿತಪಡಿಸಿಕೊಳ್ಳುವುದು ಸಾಧ್ಯ.ವಾಂತಿಭೇದಿ ಉಂಟಾದ ಸಂದರ್ಭದಲ್ಲಿ ದೇಹದಲ್ಲಿ ನಿರ್ಜಲೀ ಕರಣ ಆಗದಂತೆ ಎಚ್ಚರ ವಹಿಸುವುದು ತುಂಬಾ ಮುಖ್ಯ. ಇದಕ್ಕಾಗಿ ಒಂದು ಲೋಟ ಕುದಿಸಿ ಆರಿಸಿದ ನೀರಿಗೆ ಒಂದು ಚಮಚೆ ಸಕ್ಕರೆ, ಅರ್ಧ ಚಮಚೆ ಉಪ್ಪು ಬೆರೆಸಿ ಆಗಾಗ ಸ್ವಲ್ಪ ಸ್ವಲ್ಪವೇ ಕುಡಿಯಬೇಕು. ಔಷಧ ಅಂಗಡಿಗಳಲ್ಲಿ ಸಿಗುವ ಒಆರ್‌ಎಸ್‌ ಪುಡಿ ಅಥವಾ ದ್ರಾವಣದ ಉಪಯೋಗವನ್ನೂ ಮಾಡಬಹುದು. ಮಕ್ಕಳು ವಾಂತಿಭೇದಿಗೆ ತುತ್ತಾದರೆ ಬೇಗನೆ ನಿರ್ಜಲೀಕರಣ ಉಂಟಾಗಬಹುದಾಗಿದ್ದು, ಹೆಚ್ಚು ಕಾಳಜಿ ಅಗತ್ಯ.

ಕೇರಳದಲ್ಲಿ ನ್ಯೂರೋ ಸೋಂಕು ಕಾಣಿಸಿಕೊಂಡಿ ರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರವು ಚಾಮ ರಾಜನಗರ, ಕೊಡಗು ಸಹಿತ ಗಡಿಯಲ್ಲಿ ನಿಗಾ ವಹಿ ಸಲು ಸೂಚಿಸಿದೆ. ಕರಾವಳಿ ಮಾತ್ರವಲ್ಲದೆ ರಾಜ್ಯದ ಇತರೆಡೆಯೂ ವಾಂತಿಭೇದಿ ವರದಿಯಾಗಿವೆ.

ಇದು ಮಾರಾಣಾಂತಿಕ ಕಾಯಿಲೆಯಲ್ಲ. ಗಾಳಿಯಿಂದ ಹರಡುವುದಿಲ್ಲ. ಆದ್ದರಿಂದ ಭಯ ಬೇಡ. ಮುನ್ನೆಚ್ಚರಿಕೆ ಇರಲಿ. ನಿಗಾ ವಹಿಸುವಂತೆ ಜಿಲ್ಲೆಯ ಎಲ್ಲ ತಾಲೂಕು, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ತಿಳಿಸಲಾಗಿದೆ. ಈವರೆಗೆ ಯಾವುದೇ ಪ್ರಕರಣ ಕಂಡುಬಂದಿಲ್ಲ.
-ಡಾ. ಕಿಶೋರ್‌ ಕುಮಾರ್‌,
ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ

ಉಡುಪಿ ಜಿಲ್ಲೆಯಲ್ಲಿ ಈ ಸೋಂಕಿನ ಪ್ರಕರಣಗಳು ಪತ್ತೆಯಾಗಿಲ್ಲ. ಆದರೂ ಎಚ್ಚರ ವಹಿಸಿದ್ದೇವೆ. ವಾಂತಿ ಭೇದಿ, ಜ್ವರದ ಬಗ್ಗೆ ನಿಗಾ ವಹಿಸಲು ಸೂಚಿಸಲಾಗಿದೆ. ವಿಶೇಷ ಪ್ರಕರಣಗಳಿದ್ದರೆ ಕೂಡಲೇ ಗಮನಕ್ಕೆ ತರುವಂತೆ ಎಲ್ಲ ಆಸ್ಪತ್ರೆಗಳಿಗೂ ಸೂಚಿಸಿದ್ದೇವೆ. ಜಿಲ್ಲೆಯಲ್ಲಿರುವ 1,027 ಆಶಾ ಕಾರ್ಯಕರ್ತೆಯರಿಗೂ ಈ ಬಗ್ಗೆ ಗಮನಹರಿಸುವಂತೆ ತಿಳಿಸಲಾಗಿದೆ.
-ಡಾ. ನಾಗಭೂಷಣ ಉಡುಪ,
ಉಡುಪಿ ಜಿಲ್ಲಾ ಆರೋಗ್ಯಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next