Advertisement

ಸ್ವಾವಲಂಬನೆ ಬದುಕಿಗೆ ಎನ್‌ಇಪಿ ಪೂರಕ

04:53 PM Jul 30, 2022 | Team Udayavani |

ಮೈಸೂರು: ಹೊಸ ಶಿಕ್ಷಣ ನೀತಿಯು ಸ್ವಾವಲಂಬನೆ ಮತ್ತು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಪೂರಕವಾಗಿದೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಹೇಳಿದರು.

Advertisement

ನಗರ ಹೊರವಲಯದ ಬೋಗಾದಿಯ ಬಾಪೂಜಿ ಬಡಾವಣೆಯಲ್ಲಿ ಶುಕ್ರವಾರ ಜೆಎಸ್‌ಎಸ್‌ ಬಾಲಕಿಯರ ಪದವಿ ಪೂರ್ವ ಕಾಲೇಜು ಉದ್ಘಾಟಿಸಿ ಮಾತನಾಡಿದಅವರು, ಸಮಾಜಮುಖೀಯಾದ ಶಿಕ್ಷಣ ನೀತಿಯಿಂದ ಭವಿಷ್ಯದಲ್ಲಿ ಭಾರತವು ಪರಮ ಗುರು ಆಗಿ ರೂಪಗೊಳ್ಳಲಿದ್ದು, ಪರಿಪೂರ್ಣ ದೇಶವಾಗಿಯೂ ತನ್ನಕಾಲ ಮೇಲೆ ನಿಂತುಕೊಳ್ಳುವಷ್ಟು ಸ್ವಾವಲಂಬನೆಯಾಗಲಿದೆ ಎಂದು ವಿವರಿಸಿದರು.

ಪಾಲಕರ ಹೊಣೆಗಾರಿಕೆಯಿಂದ ವಿಮುಕ್ತ: ಇಂದಿನ ಶಿಕ್ಷಣವು ಆರ್ಥಿಕ ಮನುಷ್ಯರನ್ನು ಸೃಷ್ಟಿಸುತ್ತಿದೆಯೇ ಹೊರತು, ಸಾಮಾಜಿಕ ಮನುಷ್ಯರನ್ನು ತಯಾರು ಮಾಡುತ್ತಿಲ್ಲ. ವಿದ್ಯಾವಂತರು ಅಮೆರಿಕಾ, ಇಂಗ್ಲೆಂಡ್‌ ನಂತಹ ವಿದೇಶಗಳಿಗೆ ಅಥವಾ ಬೇರೆ ಊರಿನ ಕಡೆಗೆವಲಸೆ ಹೋಗುವ ಮೂಲಕ ತಮ್ಮ ಸಾಮಾಜಿಕ,ಪಾಲಕರ ಹೊಣೆಗಾರಿಕೆಯಿಂದ ವಿಮುಕ್ತರಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

ಸ್ವಾವಲಂಬನೆ ಜೀವನ ವ್ಯವಸ್ಥೆ ಹಾಳು: ದೇಶವನ್ನು ಆಳಿದ ಬ್ರಿಟಿಷರು ಗುರುಕುಲ ಶಿಕ್ಷಣ ಪದ್ಧತಿಯನ್ನು ತೆಗೆದು ಹಾಕಿ, ಮೆಕಾಲೆ ಶಿಕ್ಷಣ ನೀತಿ ಜಾರಿಗೊಳಿಸಿದರು. ಇದರಿಂದ ಸ್ವಾತಂತ್ರ್ಯ ಮತ್ತು ಸ್ವಾವಲಂಬನೆ ಜೀವನ ವ್ಯವಸ್ಥೆಯನ್ನು ಹಾಳು ಮಾಡಿದರು. ಭಾರತೀಯರನ್ನು ಪರಾವಲಂಬನೆ ಮಾಡಲು ಏನು ಬೇಕೋ ಅದೆನ್ನೆಲ್ಲವನ್ನೂ ಮಾಡಿದರು. ಅವರಿಗೆ ಶಿಕ್ಷಣದಿಂದಪರಿವರ್ತನೆ ಬೇಕಿರಲಿಲ್ಲ. ಅವರಿಗೆ ತಮ್ಮ ಆಡಳಿತ ವ್ಯವಸ್ಥೆಗೆ ಕೆಲಸಗಾರರನ್ನು ಸೃಷ್ಟಿಸುವ ಶಿಕ್ಷಣವನ್ನು ಮಾತ್ರ ಉಳಿಸಿಕೊಂಡರು. ಇದನ್ನು ನಿವಾರಣೆ ಮಾಡುವುದು ಸ್ವಾತಂತ್ರ್ಯ ಹೋರಾಟಗಾರರ ಆಶಯವಾಗಿತ್ತು. ಬಳಿಕ ಬಂದ ಸರ್ಕಾರಗಳು ಈ ವಿಷಯದಲ್ಲಿ ನಿಧಾನ ಮಾಡಿದ್ದವು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸ್ವಾವಲಂಬಿ ಭಾರತ ನಿರ್ಮಾಣಕ್ಕೂ ಪೂರಕ: 1968ರಲ್ಲಿ ಇಂದಿರಾ ಗಾಂಧಿ ಸರ್ಕಾರ ಮತ್ತು1986ರಲ್ಲಿ ರಾಜೀವ್‌ಗಾಂಧಿ ಸರ್ಕಾರದ ಅವಧಿಯಲ್ಲಿ ಶಿಕ್ಷಣ ನೀತಿಯನ್ನು ಜಾರಿಗೆ ತರಲಾಯಿತು. ಆದರೆ, ಅದನ್ನು ಚರ್ಚೆಗೂ ಒಳಪಡಿಸಲಿಲ್ಲ. ಮಕ್ಕಳನ್ನೂಗಣನೆಗೆ ತೆಗೆದುಕೊಳ್ಳಲಿಲ್ಲ. ಆದರೆ, ಈ ಲೋಪವನ್ನು ನಿವಾರಣೆ ಮಾಡಿರುವ ಈಗಿನ ಕೇಂದ್ರ ಸರ್ಕಾರವು ನೂತನ ಶಿಕ್ಷಣ ನೀತಿಯನ್ನು ಮಕ್ಕಳ ಆಧಾರಿತವಾಗಿ ರೂಪಿಸಿದೆ. ಇದು ಸ್ವಾವಲಂಬಿ ಭಾರತ ನಿರ್ಮಾಣಕ್ಕೂ ಪೂರಕವಾಗಿದೆ ಎಂದು ವಿವರಿಸಿದರು.

Advertisement

ಗುಣಮಟ್ಟದ ಶಿಕ್ಷಣ: ಈಗಿನ ವ್ಯವಸ್ಥೆ ಕೆಟ್ಟುಹೋಗಿದೆ. ಸ್ವಾರ್ಥ ಹೆಚ್ಚಾಗಿ, ಅನೈತಿಕತೆ ವಿಜೃಂಭಿಸುತ್ತಿದೆ. ಮನುಷ್ಯ ಮನುಷ್ಯ ನಡುವೆ ನಂಬಿಕೆಯೇ ಇಲ್ಲವಾಗಿದೆ. ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಸರ್ಕಾರವು ಮಾಡಲು ಸಾಧ್ಯವಾಗದಂತಹ ಸಂಸ್ಕಾರಯುಕ್ತ ಕೆಲಸವನ್ನು ಸುತ್ತೂರು ಮಠ ಶಿಕ್ಷಣದ ಮೂಲಕ ಮಾಡುತ್ತಿವೆ. ಇದು ಮನುಷ್ಯರಿಗೆ ಬೇಕಾದ ಗುಣಮಟ್ಟದ ಶಿಕ್ಷಣನೀಡುತ್ತಿದೆ. ಜತೆಗೆ, ರಾಷ್ಟ್ರೀಯ ನೀತಿ ಅಳವಡಿಕೆಯಲ್ಲೂ ರಾಜ್ಯ ಸರ್ಕಾರಕ್ಕಿಂತ ಒಂದು ಹೆಜ್ಜೆ ಮುಂದಿದೆ ಎಂದು ಹೇಳಿದರು.

ಸಹ ಶಿಕ್ಷಣ ಪದ್ಧತಿಗೆ ಈಗಲೂ ಹಿಂದೇಟು: ಬಾಲಕ ಮತ್ತು ಬಾಲಕಿಯರು ಒಟ್ಟಿಗೆ ಕಲಿಯುವ ಸಹ ಶಿಕ್ಷಣ ಪದ್ಧತಿಗೆ (ಕೋ ಎಜುಕೇಷನ್‌) ಈಗಲೂ ಪಾಲಕರು ಹೆದರುತ್ತಾರೆ. ಇಂತಹ ಶಾಲಾ-ಕಾಲೇಜುಗಳಿಗೆ ಹೆಣ್ಣು ಮಕ್ಕಳನ್ನು ಕಳುಹಿಸಲು ಹಿಂದೇಟು ಹಾಕುತ್ತಾರೆ. ಈ ಹಿನ್ನೆಲೆಯಲ್ಲಿ ಬಾಲಕಿಯರಿಗಾಗಿ ಜೆಎಸ್‌ಎಸ್‌ ಮಹಾ ವಿದ್ಯಾಪೀಠವು ಬಾಲಕಿಯರಿಗಾಗಿ ಹೊಸ ಕಾಲೇಜು ಕಟ್ಟಿದೆ. ಅದು ನಗರದ ಹೃದಯಭಾಗಕ್ಕೆ ಸೀಮಿತವಾಗದೆ, ನಗರ ಹೊರವಲಯದ ವಿದ್ಯಾರ್ಥಿ ಗಳಿಗೂ ಅನುಕೂಲ ಕಲ್ಪಿಸಿಕೊಟ್ಟಿದೆ ಎಂದು ಹೇಳಿದರು.

ಹೊಸ ಕಾಲೇಜಿನಲ್ಲಿ ಸುಸಜ್ಜಿತ ಪ್ರಯೋಗಾಲಯ, ಆಧುನಿಕ ತಂತ್ರಜ್ಞಾನ ಪರಿಕರಗಳು ಲಭ್ಯವಿವೆ. ಗುಣಮಟ್ಟದ ಶಿಕ್ಷಣವನ್ನು ಜೆಎಸ್‌ಎಸ್‌ ಸಂಸ್ಥೆಯು ನೀಡುವ ಮೂಲಕ ಮಾದರಿಯಾಗಿದೆ. ಅಂತಾ ರಾಷ್ಟ್ರೀಯ ಮಟ್ಟದಲ್ಲೂ ಹೆಸರು ಮಾಡಿದೆ ಎಂದರು.

ಕಾರ್ಯಕ್ರಮದಲ್ಲಿ ಸುತ್ತೂರು ಮಠದ ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಮಾಜಿ ಎಂಎಲ್ಸಿ ಅರುಣ್‌ಶಹಾಪುರ, ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಜಿ.ಡಿ.ಹರೀಶ್‌ ಗೌಡ, ಜೆಎಸ್‌ಎಸ್‌ ಮಹಾವಿದ್ಯಾಪೀಠದ ಕಾರ್ಯ ನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ. ಬೆಟಸೂರಮಠ, ವೀಣಾ ನಾಗೇಶ್‌ ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next