Advertisement

ಪಾಲಿಕೆ ನಿರ್ಲಕ್ಷ್ಯ; ಹುತಾತ್ಮರ ಸ್ಮಾರಕ ಅನಾಥ

06:04 PM Aug 13, 2022 | Team Udayavani |

ಹುಬ್ಬಳ್ಳಿ: ಸ್ವಾತಂತ್ರ್ಯ ಅಮೃತ ಮಹೋತ್ಸವ ಸಂದರ್ಭದಲ್ಲಿ ಮನೆ ಮನೆ ಮೇಲೆ ತಿರಂಗಾ ಹಾರಾಡುವ ಸಂತಸ ಮೂಡಿದೆ. ಆದರೆ ಮಹಾನಗರದಲ್ಲಿರುವ ಸ್ವಾತಂತ್ರ್ಯ ಸಂಗ್ರಾಮದ ಕಿಚ್ಚನ್ನು ನೆನಪಿಸುವ ಹುತಾತ್ಮರ ಸ್ಮಾರಕಕ್ಕೆ ಮಾತ್ರ ಇದ್ಯಾವ ಸಂಭ್ರಮ ಸಡಗರವಿಲ್ಲ. ಬ್ರಿಟಿಷರ ಗುಂಡಿಗೆ ಎದೆಯೊಡ್ಡಿದ್ದ ವೀರ ಬಾಲಕ ಹಾಗೂ ಜೈಲಿನಿಂದ ತಪ್ಪಿಸಿಕೊಳ್ಳುತ್ತಿದ್ದ ವೀರ ಸೇನಾನಿಯ ಸ್ಮಾರಕ ಅನಾಥವಾಗಿದೆ.

Advertisement

ಮಹಾನಗರದ ಅದೆಷ್ಟೋ ಜನರಿಗೆ ಇಂತಹ ಸ್ಮಾರಕ ನಗರದಲ್ಲಿದೆ ಎಂಬುದು ಗೊತ್ತಿಲ್ಲ. ಇದರ ಮುಂದೆ ಓಡಾಡುತ್ತಿದ್ದರೂ ಸ್ಮಾರಕದ ದುರವಸ್ಥೆ ಕಂಡು ಇದೊಂದು ನೆಟ್ಟಿರುವ ಕಲ್ಲು ಎನ್ನುವ ಭಾವನೆ ಮೂಡಿದೆ. ಈ ಹುತಾತ್ಮರ ಸ್ಮಾರಕ ಇರುವುದು ಲ್ಯಾಮಿಂಗ್ಟನ್‌ ಶಾಲೆ ಮುಂಭಾಗದ ರಸ್ತೆಯಲ್ಲಿ.

ಭಾರತ ಬಿಟ್ಟು ತೊಲಗಿ ಚಳವಳಿಯಲ್ಲಿ ಬ್ರಿಟಿಷರ ಗುಂಡಿಗೆ ಹುತಾತ್ಮರಾದ 13 ವರ್ಷದ ಬಾಲಕ ನಾರಾಯಣ ಗೋವಿಂದಪ್ಪ ಡೋಣಿ ಹಾಗೂ ಎಂತಹ ಜೈಲಿಗೆ ಹಾಕಿದರೂ ಅಲ್ಲಿಂದ ಪರಾರಿಯಾಗುವ ಮೂಲಕ ಸಿಂಹಸ್ವಪ್ನರಾಗಿದ್ದ ಮೂರುಸಾವಿರಪ್ಪ ಈಚಗೇರಿ ಅವರ ಹುತಾತ್ಮ ಸ್ಮಾರಕವಿದು. ಒಂದು ಭಾಗದಲ್ಲಿ ಹುತಾತ್ಮರ ಹೆಸರು, ಇನ್ನೊಂದು ಭಾಗದಲ್ಲಿ ಸಂವಿಧಾನದ ಪ್ರಸ್ತಾವನೆಯಿದೆ.

50 ವರ್ಷದ ಸ್ಮಾರಕ: ದೇಶಕ್ಕೆ ಸ್ವಾತಂತ್ರ್ಯ ದೊರಕಿದ 25 ವರ್ಷದ ಸಂದರ್ಭದಲ್ಲಿ ಭಾರತ ಸರಕಾರದಿಂದ ಈ ಸ್ಮಾರಕ ಸ್ಥಾಪಿತವಾಗಿದೆ. 1972 ಆ.15ರಿಂದ 1973 ಆ.14ರ ವರೆಗಿನ ವರ್ಷಾಚರಣೆ ಸಂದರ್ಭದಲ್ಲಿ ಈ ಸ್ಮಾರಕ ಕೇಂದ್ರ ಸರಕಾರದಿಂದ ಅನಾವರಣಗೊಂಡಿದೆ. ಆದರೆ ಈಗ ಅಮೃತ ಮಹೋತ್ಸವ ಸಂಭ್ರಮದಲ್ಲಿ ಪಾಲಿಕೆ ಈ ಸ್ಮಾರಕವನ್ನೇ ಮರೆತಿದೆ.

ನಿರ್ವಹಣೆ ಕೊರತೆ: ರಸ್ತೆ ವಿಭಜಕದಲ್ಲಿರುವ ಕಾರಣ ವಾಹನದಲ್ಲಿ ಹೋಗುವವರು ಉಗಿದಿರುವ ಗುಟ್ಕಾ, ಎಲೆ ಅಡಿಕೆ ಕಲೆಗಳಿವೆ. ಇನ್ನೂ ಸುತ್ತಲಿನವರು ಕಸ ತಂದು ಹಾಕುತ್ತಿದ್ದಾರೆ. ಮಳೆಯಿಂದಾಗಿ ಸುತ್ತಲೂ ಕಸ ಬೆಳೆದು ರಸ್ತೆ ವಿಭಜಕ ಹಾಗೂ ಸ್ಮಾರಕಕ್ಕೆ ಯಾವುದೇ ವ್ಯತ್ಯಾಸ ಇಲ್ಲದಂತಾಗಿದೆ. ಹಲವು ವರ್ಷಗಳಿಂದ ಸಂಘಟನೆಯೊಂದು ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಒಂದಿಷ್ಟು ಪೂಜೆ ಸಲ್ಲಿಸಿ ಯುವಕರಿಗೆ ಸ್ಮಾರಕದ ಬಗ್ಗೆ ತಿಳಿಸುವ ಕೆಲಸ ಆಗುತ್ತಿತ್ತು. ಆದರೆ ಪಾಲಿಕೆಯಿಂದ ಯಾವುದೇ ಸಹಕಾರ ಸಿಗದ ಕಾರಣ ಅವರೂ ದೂರವಾಗಿದ್ದಾರೆ.

Advertisement

ಮೂರುಸಾವಿರಪ್ಪ ಈಚಗೇರಿ ಅವರ ಕುಟುಂಬದವರು ಬಂದು ಪೂಜೆ ಸಲ್ಲಿಸುತ್ತಾರೆ. ಅಮೃತ ಮಹೋತ್ಸವ ಸಂಭ್ರಮದಲ್ಲೂ ಸ್ವಾತಂತ್ರ್ಯ ಸಂಗ್ರಾಮದ ಹುತಾತ್ಮರ ಸ್ಮಾರಕ ನಿರ್ಲಕ್ಷಿರುವುದು ಎಷ್ಟು ಸರಿ ಎನ್ನುವುದು ಪ್ರಜ್ಞಾವಂತರ ಪ್ರಶ್ನೆಯಾಗಿದೆ.

ಅಧಿಕಾರಿಗಳ ಗೊಂದಲ
ವಿಪರ್ಯಾಸ ಅಂದರೆ ಇದೊಂದು ಸ್ಮಾರಕವೇ ಎನ್ನುವ ಗೊಂದಲಗಳು ಪಾಲಿಕೆ ಅಧಿಕಾರಿಗಳಲ್ಲಿದೆ. ಈ ಕುರಿತು ಯಾವುದೇ ದಾಖಲೆಗಳು ಇಲ್ಲ. ಪಾಲಿಕೆಯಿಂದ ನಿರ್ವಹಣೆ ಮಾಡುವುದಾದರೂ ಹೇಗೆ ಎನ್ನುವ ಮಾತುಗಳಿವೆ. ಆದರೆ ಜನರಿಗೆ ಬೇಡವಾದ ವಸ್ತುಗಳ ನಿರ್ವಹಣೆ, ವಾರಸುದಾರರು ಇಲ್ಲದ ಶವದ ಅಂತ್ಯ ಸಂಸ್ಕಾರವನ್ನು ಪಾಲಿಕೆ ಮಾಡುತ್ತಿದೆ. ಹೀಗಿರುವಾಗ ಇಬ್ಬರು ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕ ಇವರೆಡಕ್ಕಿಂತಲೂ ಕಡೆಯೇ ಎನ್ನುವ ಪ್ರಶ್ನೆ ಸಾರ್ವಜನಿಕರದ್ದಾಗಿದೆ.

ಸ್ವತ್ಛಗೊಳಿಸಿದ್ದ ಎಬಿವಿಪಿಯಿಂದ
ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಈ ಹಿಂದೆ ಎಬಿವಿಪಿ ಕಾರ್ಯಕರ್ತರು ಸ್ವತ್ಛಗೊಳಿಸುತ್ತಿದ್ದರು. ಹಿಂದೆ ಎಬಿವಿಪಿಯಲ್ಲಿದ್ದವರು ಇದೀಗ ಬಿಜೆಪಿಯಲ್ಲಿ ಉತ್ತಮ ಸ್ಥಾನಗಳಲ್ಲಿದ್ದಾರೆ. ಇದೀಗ ಅಮೃತ ಮಹೋತ್ಸವ ಪ್ರಯುಕ್ತ ಪಕ್ಷದಿಂದ ಡಾ| ಬಿ.ಆರ್‌.ಅಂಬೇಡ್ಕರ್‌ ಅವರ ಮೂರ್ತಿಯನ್ನು ಎಸ್ಸಿ ಮೋರ್ಚಾ, ಡಾ| ಬಾಬು ಜಗಜೀವನರಾಂ ಅವರ ಮೂರ್ತಿಯನ್ನು ಎಸ್ಟಿ ಮೋರ್ಚಾ, ಸಂಗೊಳ್ಳಿ ರಾಯಣ್ಣ ಮೂರ್ತಿಯನ್ನು ಒಬಿಸಿ ಮೋರ್ಚಾ ಮೂಲಕ ಸ್ವತ್ಛಗೊಳಿಸುವ ಮಹತ್ತರ ಕಾರ್ಯ ಕೈಗೊಂಡಿದ್ದಾರೆ.

ಆದರೆ ಯಾವುದೇ ಜಾತಿಯಿಲ್ಲದೆ ಸ್ವಾತಂತ್ರ್ಯಕ್ಕಾಗಿ ಹುತಾತ್ಮರಾದವರ ಸ್ಮಾರಕ ಸ್ವತ್ಛಗೊಳಿಸುವ ಕಾರ್ಯ ಕೈಗೆತ್ತಿಕೊಳ್ಳಬೇಕಾಗಿತ್ತು. ಹಿಂದೆ ಜನಪ್ರತಿನಿಧಿಗಳಿಬ್ಬರ ಭರವಸೆಯಂತೆ ಸೂಕ್ತ ಸ್ಥಳಕ್ಕೆ ಸ್ಮಾರಕ ಸ್ಥಳಾಂತರ ಮಾಡಿ ಪಾವಿತ್ರತೆ ಕಾಪಾಡುವ ಕೆಲಸವಾಗಲಿ ಎಂಬುದು ಬಿಜೆಪಿಯ
ಮುಖಂಡರೊಬ್ಬರ ನೋವಿನ ನುಡಿಯಾಗಿದೆ.

ಎಂಭತ್ತರ ದಶಕದಿಂದ ಈ ಸ್ಮಾರಕದ ಬಗ್ಗೆ ಮಾಹಿತಿಯಿದೆ. ಹಿಂದೆ ರಾಷ್ಟ್ರೀಯ ಹಬ್ಬಗಳ ಸಂದರ್ಭದಲ್ಲಿ ಪಾಲಿಕೆಯಿಂದ ಸ್ವತ್ಛಗೊಳಿಸಿ ಶೃಂಗರಿಸುವ ಕೆಲಸ ಆಗುತ್ತಿತ್ತು. ದಾಖಲೆಗಳಿಲ್ಲ, ಅದು ಸ್ಮಾರಕವೋ ಎನ್ನುವ ಗೊಂದಲ ಬೇಡ. ಇದೇ ಕಾರಣಕ್ಕೆ ಡಾ| ಪಾಟೀಲ ಪುಟ್ಟಪ್ಪ ಅವರು ಪಾಲಿಕೆಗೆ ಪತ್ರ ಬರೆದಿದ್ದರು. ಹುತಾತ್ಮರ ಸ್ಮಾರಕ ನಿರ್ವಹಣೆ ಹಾಗೂ ಗೌರವ ಸೂಚಿಸುವುದು ಪಾಲಿಕೆ ಕರ್ತವ್ಯ.
ಡಾ| ಪಾಂಡುರಂಗ ಪಾಟೀಲ,
ಮಾಜಿ ಮಹಾಪೌರರು

ಹೇಮರಡ್ಡಿ ಸೈದಾಪುರ

Advertisement

Udayavani is now on Telegram. Click here to join our channel and stay updated with the latest news.

Next