Advertisement

ನೀರಾ ಮಾರುತ್ತಿದ್ದ ರೈತನ ಬಂಧನ ಖಂಡಿಸಿ ಪ್ರತಿಭಟನೆ

03:27 PM Dec 04, 2019 | Team Udayavani |

ಶ್ರೀರಂಗಪಟ್ಟಣ: ತಾಲೂಕು ಮೇಳಾಪುರ ಗ್ರಾಮದಲ್ಲಿ ನೀರಾ ಮಾರುತ್ತಿದ್ದ ರೈತನನ್ನು ಬಂಧಿಸಿರುವ ಕ್ರಮ ಖಂಡಿಸಿ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ತಾಲೂಕು ಅಬಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

Advertisement

ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶೀ ಮಂಜೇಶ್‌ಗೌಡ ನೇತೃತ್ವದಲ್ಲಿ ಪ್ರತಿಭಟನಾಕಾರರು ಜಮಾಯಿಸಿ ಅಬಕಾರಿ ಇಲಾಖೆ ಅಧಿಕಾರಿಗಳ ವಿರುದ್ಧಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬೆಳೆ ನಷ್ಟ ಅನುಭವಿಸಿದ ರೈತ ಲೋಕೇಶ್‌ ತೆಂಗಿನ ಮರದಿಂದ ನೀರಾ ಇಳಿಸಿ ಮಾರಾಟ ಮಾಡಿ ಜೀವನ ನಡೆಸುತ್ತಿದ್ದ. ಅಬಕಾರಿ ಇಲಾಖೆ ಅಧಿಕಾರಿಗಳು ಅಮಾಯಕ ರೈತನ ಮೇಲೆ ದೌರ್ಜನ್ಯ ನಡೆಸಿ ಬಂಧಿಸಿ ಪ್ರಕರಣ ದಾಖಲು ಮಾಡಿದ್ದಾರೆ. ಆದರೆ, ಹೆದ್ದಾರಿ ರಸ್ತೆ ಬದಿ ಡಾಬಾಗಳಲ್ಲಿ, ಪೆಟ್ಟಿ ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದರೂ, ಅದನ್ನು ತಡೆಗಟ್ಟುವಲ್ಲಿ ವಿಫ‌ಲರಾಗಿದ್ದಾರೆ. ಬಡ ರೈತನ ಮೇಲೆ ನೀರಾ ಮಾರಾಟದ ಪ್ರಕರಣ ದಾಖಲಿಸಿದ್ದಾರೆ ಎಂದು ರೈತ ಮುಖಂಡ ಮಂಜೇಶ್‌ಗೌಡ ಆರೋಪಿಸಿದರು.

ದಲಿತ ಕುಟುಂಬದ ರೈತನ ಮೇಲಿನ ಪ್ರಕರಣ ರದ್ದು ಮಾಡಿ, ಆತನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ರವಿಚಂದ್ರ ಒತ್ತಾಯಿಸಿದರು.

ಅಬಕಾರಿ ಇನ್ಸ್‌ಪೆಕ್ಟರ್‌ ಉಮ್ಮೆ ರುಬಾಬ್‌ ಮಾತನಾಡಿ, ಕಾನೂನಿನ ನಿಯಮಾನುಸಾರ ನೀರಾ ಮಾರಾಟದ ಕ್ರಮ ಕೈಗೊಳ್ಳಲಾಗಿದೆ. ಮೇಲಧಿಕಾರಿಗಳ ಜತೆ ಚರ್ಚಿಸಿ ರೈತರಿಗೆ ಆಗುವ ತೊಂದರೆ ತಪ್ಪಿಸಲಾಗುವುದು ಎಂದರು. ಪ್ರತಿಭಟನೆಯಲ್ಲಿ ರೈತ ಸಂಘದ ತಾಲೂಕು ಅಧ್ಯಕ್ಷ ಶ್ರೀಕಂಠಯ್ಯ, ಜಿಲ್ಲಾ ಸಂಚಾಲಕ ಕುಬೇರ, ಜಿಲ್ಲಾ ರೈತ

ಸಂಘದ ಉಪಾಧ್ಯಕ್ಷ ನಾಗೇಂದ್ರಸ್ವಾಮಿ, ಸಿದ್ದೇಗೌಡ, ಮುಂಡುಗದೊರೆ ಮೋಹನ್‌, ಕೃಷ್ಣೇಗೌಡ, ಪುಟ್ಟಸ್ವಾಮಿ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿ ಅಬಕಾರಿ ಇನ್ಸ್ ಪೆಕ್ಟರ್‌ ಉಮ್ಮೆ ರುಬಾಬ್‌ ಅವರಿಗೆ ಮನವಿ ಸಲ್ಲಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next