ಹೊಸದಿಲ್ಲಿ : ಛತ್ತೀಸ್ಗಢದ ದಾಂತೇವಾಡದಲ್ಲಿ ನಕ್ಸಲರು ಇಂದು ಶುಕ್ರವಾರ IED ಬಾಂಬ್ ಬ್ಲಾಸ್ಟ್ ಮಾಡುವ ಮೂಲಕ ಅಟ್ಟಹಾಸ ಮೆರೆದಿದ್ದು, ಬಿಜೆಪಿ ಶಾಸಕ ಭೀಮಾ ಮಾಂಡವಿ ಮತ್ತು ನಕ್ಸಲ್ ನಿಗ್ರಹ ಕಾರ್ಯಾಚರಣೆ ದಳದ ಡಿಐಜಿ ಪಿ ಸುಂದರ್ ರಾಜ್ ಸಹಿತ ಐವರು ಪೊಲೀಸರನ್ನು ಬಲಿ ಪಡೆದಿದ್ದಾರೆ.
2019ರ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಇನ್ನು ಕೇವಲ 36 ತಾಸುಗಳು ಮಾತ್ರವೇ ಬಾಕಿ ಉಳಿದಿರುವ ಈ ಸಂದರ್ಭದಲ್ಲಿ ನಕ್ಸಲರು ಆರು ಜೀವಗಳನ್ನು ಬಲಿ ಪಡೆದಿರುವುದು ಚುನಾವಣೆಯ ಮೇಲೆ ಕರಾಳ ಛಾಯೆ ಕವಿದಂತಾಗಿದೆ.
ಸಿಆರ್ಪಿಎಫ್ ಅಧಿಕಾರಿಗಳನ್ನು ಉಲ್ಲೇಖೀಸಿ ಎಎನ್ಐ ಮಾಡಿರುವ ವರದಿಯ ಪ್ರಕಾರ ನಕ್ಸಲ್ ದಾಳಿ ಇಂದು ದಾಂತೇವಾಡದ ಕುವಾಕೋಂತಾ ಮತ್ತು ಶ್ಯಾಮಗಿರಿ ನಡುವಿನ ಸ್ಥಳದಲ್ಲಿ ನಡೆದಿದೆ.
ರಾಜ್ಯ ಪೊಲೀಸರ ಎಸ್ಕಾರ್ಟ್ ವಾಹನಗಳು ನಕ್ಸಲರ ಬಾಂಬ್ ದಾಳಿಗೆ ಸಿಲುಕಿದವು. ನಕ್ಸಲರು ಐಇಡಿ ಬ್ಲಾಸ್ಟ್ ಮಾಡುವ ಮೂಲಕ ಈ ದಾಳಿಯನ್ನು ನಡೆಸಿದ್ದಾರೆ. ಐಇಡಿ ಬಾಂಬ್ ಗಳನ್ನು ರಸ್ತೆಯಲ್ಲಿ ಹುಗಿದಿರಿಸಲಾಗಿತ್ತು.
ಘಟನೆ ನಡೆದೊಡನೆಯೇ ಹೆಚ್ಚಿನ ಸಿಆರ್ಪಿಎಫ್ ಪಡೆಯನ್ನು ಸ್ಥಳಕ್ಕೆ ಕಳುಹಿಸಲಾಗಿದೆ ಎಂದು ವರದಿಗಳು ತಿಳಿಸಿವೆ.