Advertisement

ನವ ನಾಮ, ನವ ರೂಪ ಧಾರಿಣೀ ನಮೋಸ್ತುತೇ

12:06 AM Sep 26, 2022 | Team Udayavani |

ಆಶ್ವಿ‌ನ ಮಾಸಕ್ಕೆ ನಿಯಾಮಕ ಪದ್ಮನಾಭ. ಈ ಮಾಸದ ಪ್ರಥಮ ದಿನದಂದು ಶರತ್ಕಾಲ ಆರಂಭವಾಗುತ್ತದೆ. ಮನೆಯಿಂದ ಹೊರ ಬಂದು ಆಕಾಶಾದಿ ಪ್ರಕೃತಿಯನ್ನು ದಿಟ್ಟಿಸಿ ನೋಡಿದಾಗ ಎಲ್ಲೆಡೆ ಸಸ್ಯಗಳು, ಪೈರುಗಳು, ಹುಲ್ಲುಗಳು ಹಸನಾಗಿ ಬೆಳೆದಿದ್ದು ಭೂದೇವಿ ಸೀಮಂತಿನೀ ಹಸುರು ಸೀರೆಯನ್ನುಟ್ಟ ಗರ್ಭಿಣಿಯಂತೆ ಭಾಸವಾಗುತ್ತಾಳೆ. ಇಂತಹ ಪ್ರಕೃತಿಯ ಸೊಬಗಿನ ಶರತ್ಕಾಲದಲ್ಲಿ ಪ್ರಕೃತಿ ಮಾತೆಯೆನಿಸಿದ ದುರ್ಗಾ ದೇವಿಯ ಆರಾಧನೆ ವಿಹಿತವಾಗಿದೆ. “ಶರತ್ಕಾಲೇ ಮಹಾಪೂಜಾ ಕ್ರಿಯತೇ ಯಾ ಚ ವಾರ್ಷಿಕೀ’ಪಿತೃಪಕ್ಷದ ಕೊನೆಯ ದಿನ ಅಮಾವಾಸ್ಯೆಯ ಮರುದಿನವಾದ ಆಶ್ವಿ‌àನ ಶುಕ್ಲ ಪ್ರತಿಪತ್‌ನಿಂದ ಒಂಬತ್ತು ದಿನಗಳು ನವರಾತ್ರಿಯ ದಿನಗಳು. ಈ ಒಂಬತ್ತು ದಿನಗಳಲ್ಲದೆ ಮುಂದಿನ ವಿಜಯ ದಶಮಿಯಂದೂ ದುರ್ಗಾ ಪೂಜೆಯು ಮುಂದುವರಿದು ನವರಾತ್ರಿಯು ದಶರಾತ್ರಿ ಯೆಂದೂ ಕರೆಸಿಕೊಳ್ಳಲ್ಪಡುತ್ತದೆ. ದಶ ರಾತ್ರಿಯೇ ಕನ್ನಡದಲ್ಲಿ ಅಲ್ಪ ವ್ಯತ್ಯಾಸದೊಂದಿಗೆ “ದಸರಾ’ ಎಂದಾಯಿತು.

Advertisement

ನವರಾತ್ರಿಯ ಆಚರಣೆಯ ಹತ್ತು ಕಡೆಯಲ್ಲಿ ಹತ್ತಾರು ಬಗೆ. ಈ ಸಮಯದಲ್ಲಿ ತಿರುಪತಿಯಲ್ಲಿ ಹತ್ತಾರು ಉತ್ಸವಗಳೊಂದಿಗೆ ಬ್ರಹ್ಮೋತ್ಸವ ನಡೆಯುತ್ತದೆ. ಕರ್ನಾಟಕದ ಮನೆ ಮನೆಯಲ್ಲೂ ನಮ್ಮ ದೇಶದ ಮೂಲೆಮೂಲೆಯಲ್ಲೂ ಮಣ್ಣಿನ ಪ್ರತೀಕವನ್ನು (ಬೊಂಬೆ) ಇಟ್ಟು ಪೂಜಿಸಿ ಸಿಹಿತಿಂಡಿ ವಿತರಣೆಯ ಸಡಗರ ನಡೆಯುತ್ತದೆ. ತುಳುನಾಡಿನ ಪರಿಸರದಲ್ಲಿ ಒಂಬತ್ತು ದಿನ ಹಗಲು-ರಾತ್ರಿಗಳಲ್ಲಿ ದೇವೀ ಮಹಾತೆ¾ ಪಾರಾಯಣ, ಪಂಚಾಮೃತ ಅಭಿಷೇಕ ಪೂರ್ವಕ ಕಲೊ³àಕ್ತ ಪೂಜೆ, ಸುವಾಸಿನೀ ಆರಾಧನೆಗಳು ಶ್ರೀದೇವಿಯ ದೇವಾಲಯಗಳಲ್ಲಿ ನಡೆಯುತ್ತವೆ.

ನವರಾತ್ರಿಯಲ್ಲಿ ಒಂಬತ್ತು ದಿನ ಆರಾಧಿತಳಾಗುವ ದುರ್ಗೆಗೆ ಒಂಬತ್ತು ಹೆಸರುಗಳು ಇವೆ. ದುರ್ಗಾ, ಆರ್ಯಾ, ಭಗವತೀ, ಕುಮಾರಿ, ಅಂಬಿಕಾ, ಮಹಿಷ ಮರ್ದಿನೀ, ಚಂಡಿಕಾ, ಸರಸ್ವತಿ, ವಾಗೀಶ್ವರೀ ಈ ಒಂಬತ್ತು ನಾಮಗಳಿಂದ ಪ್ರತ್ಯೇಕವಾಗಿ ಅಷ್ಟೋತ್ತರ ಮೂಲಮಂತ್ರಗಳು  ಪೂಜೆಗಳಿಂದ ಹಾಗೂ ಚಂಡಿಕಾ ಯಾಗ, ದುರ್ಗಾಯಾಗ, ಲಕ್ಷ್ಮೀ ಹೃದಯ ಹೋಮ, ಶ್ರೀಸೂಕ್ತ ಹೋಮ, ಲಲಿತಾ ಕದಳೀ ಯಜ್ಞ ಇನ್ನೂ ಅನೇಕ ವಿಧವಾದ ಪೂಜೆಗಳಿಂದ ಆರಾಧಿಸಿ ಭಕ್ತರು ಧನ್ಯರಾಗುತ್ತಾರೆ.

ಭಕ್ತಜನರಿಂದ ಆರಾಧಿತಳಾದ ಈ ದುರ್ಗೆ ಯು ಪ್ರತೀದಿನವೂ ವಿವಿಧ ರೂಪಗಳಿಂದ ಹೃದಯದ ಕಣ್ಣಿಗೆ ಗೋಚರಿಸುತ್ತಾಳೆ ಎಂಬುದು ದಾರ್ಶನಿಕರ ಮಾತು. ಮಾರ್ಕಂಡೇಯ ಪುರಾಣವು ಇದನ್ನೇ ಉಲ್ಲೇಖೀಸುತ್ತದೆ: ಪ್ರಥಮ ಶೈಲ ಪುತ್ರೀತಿ, ದ್ವಿತೀಯ ಬ್ರಹ್ಮಚಾರಿಣೀ, ತೃತೀಯಂ ಚಂದ್ರ ಘಂಟೇತಿ, ಕೂಷ್ಮಾಂಡೇತಿ ಚತು ರ್ಥಕಮ್‌, ಪಂಚಮಂ ಸ್ಕಂದ ಮಾತೇತಿ, ಷಷ್ಠಂ ಕಾತ್ಯಾ ಯಿನೀತಿಚ, ಸಪ್ತಮಂ ಕಾಲರಾತ್ರಿಶ್ಚ ಮಹಾ ಗೌರೀತಿ ಚಾಷ್ಟಮಮ್‌, ನವಮಂ ಸಿದ್ಧಿಧಾತ್ರೀಚ, ನವದುರ್ಗಾಃ ಪ್ರಕೀರ್ತಿತಾಃ ಎಂದು.

ಮಹಿಷಮರ್ದಿನಿಯಾದ ದುರ್ಗಾದೇವಿ ದುಷ್ಟಮರ್ದಿನಿ. ಒಂಬತ್ತು ರಾತ್ರಿಗಳಲ್ಲಿ ದುಷ್ಟ ರಾಕ್ಷಸರೊಡನೆ ಯುದ್ಧ ನಡೆಯಿತಂತೆ. ಧೂಮ್ರಲೋಚನ. ರಕ್ತಬೀಜ, ಚಂಡ, ಮುಂಡ, ಶುಂಭ, ನಿಶುಂಭ ಎಂಬ ರಕ್ಕಸರನ್ನು ತರಿದು ಲೋಕಕ್ಕೆ ನೆಮ್ಮದಿಯಿತ್ತ ದುರ್ಗೆಯ ಆರಾಧನೆ ಈ ಒಂಬತ್ತು ದಿನಗಳಲ್ಲಿ ನಡೆದು ಕೊನೆಯ ದಿನ ಆಯುಧಗಳನ್ನು ತೊಳೆದಿಟ್ಟು ದೇವತೆಗಳೆಲ್ಲ ಸೇರಿಕೊಂಡು “ಸರ್ವ ಸ್ವರೂಪೇ ಸರ್ವೇಶೇ ಸರ್ವಶಕ್ತಿ ಸಮನ್ವಿತೇ| ಭಯೇಭ್ಯಃ ತ್ರಾಹಿ ನೋ ದೇವೀ ದುಗೇìದೇವೀ ನಮೋಸ್ತುತೇ’ ಎಂದು ಪೂಜಿಸುತ್ತಾರೆ. ಈ ಸಂದರ್ಭದಲ್ಲಿ ನಮ್ಮಲ್ಲಿಯೂ ಆಯುಧ ಪೂಜೆ ನಡೆಯುತ್ತದೆ. ಪಾಂಡವರು ಅಜ್ಞಾತ ವಾಸ ಮುಗಿಸಿ ಆಯುಧ ಪೂಜೆ ಮಾಡಿದುದು ಈ ದಿನವೇ.

Advertisement

ಲಲಿತಾ ಪಂಚಮಿ
ಐದನೇ ದಿನ ಲಲಿತಾ ಪಂಚಮೀ “ಹೃದಯೇ ಲಲಿತಾದೇವೀ’ ಎಂದು ಕವಚ ಮಂತ್ರವು ಉಲ್ಲೇಖೀಸುವ ಹೃದಯದಲ್ಲಿ ನಿಂತು ಲಾಲಿತ್ಯ ವನ್ನಿತ್ತು ಪೊರೆಯುವ “ಲಲಿತಾ’ ಎಂಬ ಹೆಸರಿನ ದುರ್ಗೆಯನ್ನು ನಾನಾ ತೆರನಾದ ಪರಿಮಳ ಯುಕ್ತ ಪುಷ್ಪಗಳಿಂದ ಅರ್ಚನೆ ಮಾಡಿ ವಿಶಿಷ್ಟ ವಾಗಿ ಅನ್ನಾರಾಧನೆಯನ್ನು ಮಾಡುತ್ತಾರೆ. ಈ ದಿನದ ಪೂಜೆಯಿಂದ ಸಂತುಷ್ಟಳಾದ ಭಗವತಿ ಲಲಿತೆಯು ನಮ್ಮ ಮನಸ್ಸನ್ನು ಸುಖ ಸಂತೋಷದೆಡೆಗೆ ಒಯ್ಯುತ್ತಾಳೆ.

ಸರಸ್ವತೀ ಪೂಜೆ
ನವರಾತ್ರಿಯ ಮಧ್ಯೆ ಬರುವ ಮೂಲಾ ನಕ್ಷತ್ರದಂದು ಸರಸ್ವತೀ ಪೂಜೆಯ ಆರಂಭ. ಶ್ರವಣ ನಕ್ಷತ್ರ ಕೊನೆಯ ಭಾಗದಲ್ಲಿ ಪೂಜಾ ವಿಸರ್ಜನೆ ಮಾಡುವುದು. “ಮೂಲೇನಾ ವಾಹಯೇದ್‌ ದೇವೀಂ ಶ್ರವಣಾಂತೇ ವಿಸರ್ಜಯೇತ್‌’ ಎಂಬುದು ಶಾಸ್ತ್ರದ ಮಾತು. ಮೂಲ, ಶ್ರವಣಗಳು ಮಧ್ಯಾಹ್ನ ವ್ಯಾಪಿನಿಯಾಗಿರಬೇಕು. ಮೂಲಾ ನಕ್ಷತ್ರದ ದಿನದಂದು ದೇವ ಪೂಜೆಯಾದ ಮೇಲೆ ದೇವರ ಸನಿಹದಲ್ಲಿ ಮಣಿ ವ್ಯಾಸಪೀಠವನ್ನು ಇಟ್ಟು ಪುಸ್ತಕಗಳನ್ನು ಪ್ರೇರಿಸಿ ಇಡಬೇಕು. ಗೀತಾ ಪುಸ್ತಕ , ವೇದ ಪುಸ್ತಕವಲ್ಲದೆ ಪ್ರಾಚೀನ ತಾಡವಾಲೆಗಳಿದ್ದಲ್ಲಿ ಅದನ್ನೂ ಶುಚಿಗೊಳಿಸಿ ಪೀಠದಲ್ಲಿಡಬೇಕು. ವೀಣೆ, ಅಕ್ಷರ ಮಾಲೆ ಗಳನ್ನೂ ಸನಿಹದಲ್ಲಿಟ್ಟು ವ್ಯಾಸ ಪ್ರತಿಷ್ಠೆ ಮಾಡಿ ಶಾರದೆಯನ್ನು ಪೂಜಿಸಬೇಕು.

ಪುಷ್ಪಾಕ್ಷತೆಯನ್ನು ಹಾಕಿ ವ್ಯಾಸದೇವರನ್ನೂ ಸರಸ್ವತೀ ದೇವಿಯನ್ನೂ ಪುಸ್ತಕದಲ್ಲಿ ಆವಾಹಿಸಬೇಕು ಮತ್ತು ಶ್ರೀ ದೇವರಿಗೆ ಮಧುರ ಪದಾರ್ಥವನ್ನು ನಿವೇದಿಸಿ ಆರತಿಯನ್ನು ಬೆಳಗಿಸಬೇಕು. ಅನಂತರ ಪ್ರಾರ್ಥನೆ ಮಾಡಬೇಕು.
ನಮಸ್ತೇ ಶಾರದಾ ದೇವೀ ಕಾಶ್ಮೀರ ಪುರವಾಸಿನೀತ್ವಾಮಹಂ ಪ್ರಾರ್ಥಯೇನ್ನಿತ್ಯಂ ವಿದ್ಯಾಂ ಬುದ್ಧಿಂ ಚ ದೇಹಿಮೇ
ಎಂಬುದಾಗಿ ಪ್ರಾರ್ಥಿಸಿ ಶ್ರೀಕೃಷ್ಣಾರ್ಪಣವೆನ್ನಬೇಕು. ಪ್ರತೀದಿನ ಅಂದರೆ ಪ್ರತಿಷ್ಠೆ ಅನಂತರ ಸಪ್ತಮಿ, ಅಷ್ಟಮಿ, ನವಮಿಯಂದು ಪೂಜೆಯಾಗಿ ವಿಜಯದಶಮಿಯಂದು ಶ್ರವಣ ನಕ್ಷತ್ರದ ಮಧ್ಯಾಹ್ನ ವ್ಯಾಪಿನಿಯಾದ ಸಮಯ ದಲ್ಲಿ ಶಾರದಾ ಪೂಜೆ ಮಾಡಿ ಶಾರದಾ ವಿಸರ್ಜನೆ ಮಾಡಬೇಕು. ಈ ದಿನದ ತನಕ ಅನಧ್ಯಯನ ಇರುತ್ತದೆ. ವೇದ ವೇದಾಂತಗಳ ಪಾಠ ಮಾಡುವಂತಿಲ್ಲ. ಈ ದಿನ ನಾಲ್ಕು ಅಕ್ಷರವನ್ನು ಪ್ರತಿಯೊಬ್ಬರೂ ಬರೆಯಬೇಕು. ಈ ದಿನ ಸಣ್ಣ ಮಕ್ಕಳಿಗೆ ಅಕ್ಷರಾಭ್ಯಾಸವನ್ನು ಮಾಡಿಸುವ ಸಂಪ್ರದಾಯವಿದೆ.

ಆಯುಧ ಪೂಜೆ
ಮಹಾನವಮಿಯಂದು ತಪ್ಪಿದರೆ ವಿಜಯ ದಶಮಿಯಂದು ಆಯುಧಪೂಜೆ ಯನ್ನು ಮಾಡಬೇಕು. ಆ ಸಮಯದಲ್ಲಿ ನಮ್ಮ ಸೌಕರ್ಯದ ವಾಹನಗಳನ್ನು, ಬೃಹತ್‌ ಯಂತ್ರಗಳನ್ನು ಹಾಗೆಯೇ ಇತರ ಮಾರಕ ಆಯುಧಗಳನ್ನೂ ತೊಳೆದು ಪೂಜಿಸಬೇಕು.

ಯಂತ್ರ ದೇವತೆಗಳಾದ ದುರ್ಗೆ ಮತ್ತು ನರಸಿಂಹ ದೇವರನ್ನು ಪೂಜಿಸಿ ಪ್ರಾರ್ಥನೆ ಮಾಡಬೇಕು. ಮಂಗಳಾರತಿ ಮಾಡಿ ದೃಷ್ಟಿ ತೆಗೆಯಬೇಕು. ಬೂದು ಕುಂಬಳಕಾಯಿ ಅಥವಾ ತೆಂಗಿನಕಾಯಿಯಲ್ಲಿ ಕರ್ಪೂರ ದೀಪವನ್ನು ಹಚ್ಚಿ ವಾಹನಾದಿಗಳಿಗೆ ಒಂದು ಸುತ್ತು ತಂದು ನೆಲಕ್ಕೆ ಹೊಡೆದು ಒಡೆಯಬೇಕು. ಪ್ರಾರ್ಥಿಸಿ ದೇವರ ಪ್ರಸಾದವನ್ನು ಸ್ವೀಕರಿಸಿ ಯಂತ್ರವನ್ನು ಚಾಲನೆ ಮಾಡಬೇಕು.

ಅಶ್ವಯುಜ ಮಾಸದ ಶುಕ್ಲ ಪಕ್ಷದ ಈ ದಿನಗಳು ನಮ್ಮನ್ನು ಭಗ ವಂತನ ಚಿಂತನೆಯೆಡೆಗೆ ಒಯ್ಯುತ್ತದೆ. ದೈಹಿಕ, ಮಾನಸಿಕ ಮತ್ತು ವ್ಯವಹಾರಿಕವಾದ ತೊಂದರೆಗಳು ನಿವಾರಣೆಯಾಗಿ ಸಸ್ಯ ಸಂಪತ್ತು ಸಮೃದ್ಧಿಯಾಗಿ, ಸಕಲ ಪ್ರಾಣಿಗಳು ಮತ್ತು ಮನುಕುಲ ಆರೋಗ್ಯದಿಂದ ಬಾಳುವಂತಾಗಲಿ ಎಂದು ನಾವೆಲ್ಲರೂ ಜಗದಂಬಿಕೆಯಲ್ಲಿ ಪ್ರಾರ್ಥಿಸುವ.

– ವಿದ್ವಾನ್‌ ಜನಾರ್ದನ ಆಚಾರ್ಯ, ನಂದಿಕೂರು

Advertisement

Udayavani is now on Telegram. Click here to join our channel and stay updated with the latest news.

Next