Advertisement

ದೇಶಾದ್ಯಂತ ನವನವೀನ ನವರಾತ್ರಿ; ಒಂದು ರಾಜ್ಯಗಳಲ್ಲಿ ಒಂದೊಂದು ವಿಶೇಷ

06:21 PM Sep 25, 2022 | Team Udayavani |

ಭಾರತದಲ್ಲಿ ನವರಾತ್ರಿಯ ದಿನಗಳು, ದೇವಿ ಆರಾಧಕರಿಗೆ, ಶ್ರೀರಾಮಭಕ್ತರಿಗೆ ಅತ್ಯಂತ ಮಹತ್ವದ ಸಮಯ. ಉಳಿದ ಆರಾಧನಾಕ್ರಮ ಹೊಂದಿರುವ ಹಿಂದೂಗಳಿಗೂ ಇದು ದೈವೀಕವೇ ಆಗಿರುತ್ತದೆ. ಈ ಸಂದರ್ಭದಲ್ಲಿ ಇಡೀ ವಾತಾವರಣದಲ್ಲಿ ಒಂದು ಪಾವಿತ್ರ್ಯ ಎಲ್ಲರ ಅನುಭವಕ್ಕೆ ಬರುತ್ತಿರುತ್ತದೆ. ಹಾಗಾಗಿ ಎಲ್ಲ ರೀತಿಯ ಆಧ್ಯಾತ್ಮಿಕ ಸಾಧಕರಿಗೂ ಇದು ಪವಿತ್ರವೆನಿಸಿಕೊಳ್ಳುತ್ತದೆ. ಉತ್ತರಭಾರತದಲ್ಲಿ ನವರಾತ್ರಿ ಆಚರಣೆ ಬಹಳ ವಿಶೇಷ. ಆದಿ ಪರಾಶಕ್ತಿ ಮಹಿಷಾಸುರನನ್ನು ಇದೇ ಅವಧಿಯಲ್ಲಿ ವಧಿಸುತ್ತಾಳೆ. ಶ್ರೀರಾಮ ರಾವಣನನ್ನು ಸಂಹರಿಸಿದ ಸಮಯವೂ ಹೌದು. ಹಾಗಾಗಿ ದೇಶಾದ್ಯಂತ ಈ ಅವಧಿಯಲ್ಲಿ ಬಹಳ ಆಧ್ಯಾತ್ಮಿಕ ಚಟುವಟಿಕೆಗಳು ನಡೆಯುತ್ತವೆ. ದೇಶದ ಯಾವ್ಯಾವ ಭಾಗಗಳಲ್ಲಿ ಏನೇನು ಆಚರಣೆಗಳಿವೆ ಎಂಬ ಮಾಹಿತಿ ಇಲ್ಲಿದೆ.

Advertisement

ದುರ್ಗಾ ಅಂದರೆ…
ಯಾರು ದುರಿತಗಳು ಅಂದರೆ ಕಷ್ಟಗಳನ್ನು ನಿವಾರಿಸುತ್ತಾಳ್ಳೋ ಅವಳು ದುರ್ಗಾ. ದುರ್ಗಮನೆಂಬ ರಾಕ್ಷಸನನ್ನು ಕೊಂದಿದ್ದರಿಂದಲೂ ಆಕೆ ದುರ್ಗಾ. ಗಮಿಸಲು ಕಷ್ಟಕರವಾದ ಸಂಸಾರ ಸಾಗರವನ್ನು ದಾಟಿಸುವವಳಾದ್ದರಿಂದಲೂ ಅವಳು ದುರ್ಗಾ. ದೇವಿಯನ್ನು ಪುಟ್ಟ ಬಾಲಕಿಯಿಂದ ಹಿಡಿದು ಪ್ರೌಢ ಸ್ತ್ರೀರೂಪಗಳಲ್ಲಿ ಪೂಜಿಸಲಾಗುತ್ತದೆ. ಇಲ್ಲಿ ದೇವಿಯ 9 ವರ್ಷದ ಬಾಲಕಿಯ ಸ್ವರೂಪಕ್ಕೂ ದುರ್ಗಾ ಎಂದು ಕರೆಯುತ್ತಾರೆ. ಯಾವ ದೇವಿ ಮಧುಕೈಟಭರನ್ನು ನಾಶ ಮಾಡಿದಳ್ಳೋ, ಯಾರು ಮಹಿಷಾಸುರನನ್ನು ಕೊಂದಳ್ಳೋ, ಯಾವಾಕೆ ಶುಂಭ, ನಿಶುಂಭರನ್ನು ನಿರ್ನಾಮ ಮಾಡಿ, ಜಗತ್ತನ್ನು ಸಂಕಟದಿಂದ ಪಾರು ಮಾಡಿದಳ್ಳೋ ಅವಳು ದುರ್ಗಾ. ಹೀಗಾಗಿ ಯಾವುದೇ ಸ್ತ್ರೀದೇವತೆಯನ್ನು ದುರ್ಗಾ ಎಂದರೆ ತಪ್ಪಿಲ್ಲ. ಆದರೂ ಸಿಂಹವಾಹಿನಿಯಾದ ದೇವಿಯರನ್ನು ಮಾತ್ರ ದುರ್ಗಾ ಎನ್ನುವ ಪದ್ಧತಿಯೊಂದು ಚಾಲ್ತಿಯಲ್ಲಿದೆ.

ಪ.ಬಂಗಾಳದಲ್ಲಿ ಎಲ್ಲೆಲ್ಲೂ ದೇವಿಯೇ
ಇಡೀ ದೇಶದಲ್ಲಿ ನವರಾತ್ರಿ ಹೊತ್ತಿನಲ್ಲಿ ದುರ್ಗಾ ಸಪ್ತಶತೀಯನ್ನು ಗರಿಷ್ಠ ಪಾರಾಯಣ ಮಾಡುವುದು, ದೇವಿಯನ್ನು ವಿವಿಧ ರೂಪಗಳಲ್ಲಿ ಆರಾಧನೆ ಮಾಡುವುದು ಪಶ್ಚಿಮ ಬಂಗಾಳದಲ್ಲಿ. ತ್ರಿಶೂಲ, ಚಕ್ರ, ಗದೆಯಂತಹ ಶಸ್ತ್ರಗಳನ್ನು ಹಿಡಿದ ದೇವಿಯರನ್ನು ಶಕ್ತಿ ರೂಪದಲ್ಲಿ ಅರ್ಚಿಸಲಾಗುತ್ತದೆ. ಇವರನ್ನು ಶಾಕ್ತರು ಎನ್ನುತ್ತಾರೆ. ಇವರು ತಂತ್ರಮಾರ್ಗದಲ್ಲೂ ದೇವಿಯನ್ನು ಆರಾಧಿಸುತ್ತಾರೆ. ಇನ್ನು ಸರಸ್ವತೀ, ಲಕ್ಷಿ$¾àಯ ರೂಪದಲ್ಲೂ ಪೂಜಿಸಲಾಗುತ್ತದೆ. ಇವರದ್ದು ಸೌಮ್ಯ ಸ್ವಭಾವ.

ಬೀದಿಬೀದಿಗಳಲ್ಲೂ ಪೆಂಡಾಲ್‌ಗ‌ಳನ್ನು ಹಾಕಿ, ಸಿಂಹವಾಹಿನಿ, ಮಹಿಷಾಸುರಮರ್ದಿನಿಯ ರೂಪದಲ್ಲಿರುವ ದೇವಿಯ ಮಣ್ಣಿನ ವಿಗ್ರಹವನ್ನು ಪೂಜಿಸಲಾಗುತ್ತದೆ. 9 ದಿನಗಳ ಕಾಲ ಅದಕ್ಕೆ ಪೂಜೆ ಸಲ್ಲಿಸಿ, 10ನೇ ಅಂದರೆ ವಿಜಯದಶಮಿಯಂದು ವಿಗ್ರಹವನ್ನು ನೀರಿನಲ್ಲಿ ವಿಸರ್ಜಿಸಲಾಗುತ್ತದೆ. ಹಾಗೆಯೇ ವೇದಿಕೆಗಳಲ್ಲಿ ಹಾಡು, ನರ್ತನ, ನಾಟಕಗಳನ್ನು ಆಡಿಸಲಾಗುತ್ತದೆ. ಇಲ್ಲೆಲ್ಲ ದೇವಿಯ ರೂಪ, ಮಹಿಷಾಸುರನ ನಾಶವನ್ನೇ ವರ್ಣಿಸಲಾಗುತ್ತದೆ. 9ನೇ ದಿನ ಎಂದಿನಂತೆ ಆಯುಧಪೂಜೆ ನಡೆಯುತ್ತದೆ. ವಿಜಯದಶಮಿಯಂದು ಮಹಿಳೆಯರು ವಿವಿಧ ಬಣ್ಣಗಳ ಸೀರೆಗಳನ್ನುಟ್ಟುಕೊಂಡು, ಪರಸ್ಪರರ ಹಣೆಗೆ ಕುಂಕುಮವನ್ನು ಹಚ್ಚುತ್ತಾರೆ. ಹಾಗೆಯೇ ದೇವಿಯ ಪಾದ, ಹಣೆಗೂ ಸಿಂಧೂರವನ್ನು ಬಳಿಯುತ್ತಾರೆ. ಇದನ್ನು ಸಿಂಧೂರ ಖೇಲಾ ಎಂದೇ ಕರೆಯುತ್ತಾರೆ.

ಮೈಸೂರಿನಲ್ಲಿ ನವರಾತ್ರಿ ಉದ್ಘಾಟಿಸಲಿದ್ದಾರೆ ರಾಷ್ಟ್ರಪತಿ ಮುರ್ಮು
ದೇವಿಯ 51 ಶಕ್ತಿಪೀಠಗಳಲ್ಲಿ ಮೈಸೂರಿನ ಚಾಮುಂಡಿಬೆಟ್ಟದಲ್ಲಿರುವ ಚಾಮುಂಡೇಶ್ವರಿ ದೇಗುಲವೂ ಒಂದು. ಹಾಗಾಗಿ ಇಡೀ ಮೈಸೂರು ವಲಯದಲ್ಲಿ ಅದ್ಧೂರಿ ಆಚರಣೆಗಳಿರುತ್ತವೆ. ರಾಜ್ಯ ಸರ್ಕಾರ ಮತ್ತು ಮೈಸೂರು ರಾಜಮನೆತನಗಳು ಹತ್ತುದಿನಗಳ ಕಾರ್ಯಕ್ರಮ ನಡೆಸುತ್ತವೆ. ಇದು ವಿಶ್ವದಲ್ಲೇ ಜನಪ್ರಿಯವಾಗಿದೆ. ಈ ಅವಧಿಯಲ್ಲಿ ವಿವಿಧ ಕ್ರೀಡಾಸ್ಪರ್ಧೆಗಳು ನಡೆಯುತ್ತವೆ. ಈ ರಾಷ್ಟ್ರಪತಿ ದ್ರೌಪದಿ ಮುರ್ಮು ನವರಾತ್ರಿಯನ್ನು ಮೈಸೂರಿನಲ್ಲಿ ಉದ್ಘಾಟಿಸಲಿದ್ದಾರೆ.

Advertisement

ಕರ್ನಾಟಕದ ವಿವಿಧ ಭಾಗಗಳಲ್ಲಿ…
ಕರ್ನಾಟಕದ ಶೃಂಗೇರಿ, ಹೊರನಾಡು ಅನ್ನಪೂರ್ಣೇಶ್ವರಿ, ಕೊಲ್ಲೂರು ಮೂಕಾಂಬಿಕೆ, ಕಟೀಲು ದುರ್ಗಾ ಪರಮೇಶ್ವರಿ, ಸವದತ್ತಿ ಎಲ್ಲಮ್ಮ ಇವೆಲ್ಲ ಪ್ರಸಿದ್ಧ ದೇವಿ ಕ್ಷೇತ್ರಗಳು. ಈ ಅಷ್ಟೂ ಜಾಗಗಳಲ್ಲಿ ದೊಡ್ಡ ಪ್ರಮಾಣದಲ್ಲಿ ದೇವಿ ಆರಾಧನೆ ನಡೆಯುತ್ತದೆ. ಎಲ್ಲವೂ ಸಂಪ್ರದಾಯಬದ್ಧವಾಗಿರುತ್ತದೆ. ಇನ್ನು ಉಳಿದಂತೆ ದುರ್ಗಾ ಸಪ್ತಶತೀಯನ್ನು ಸಾಮೂಹಿಕ ಪಾರಾಯಣ ಮಾಡುವ ದೊಡ್ಡ ವರ್ಗವೇ ಈಗ ಹುಟ್ಟಿಕೊಂಡಿದೆ. ಅದಕ್ಕಾಗಿ ದುರ್ಗಾ ಸಪ್ತಶತೀ ಆಂದೋಲನವನ್ನೇ ನಡೆಸಲಾಗುತ್ತಿದೆ.

ತಮಿಳುನಾಡು, ಆಂಧ್ರಪ್ರದೇಶಗಳಲ್ಲಿ ಗೊಂಬೆಗಳ ಪೂಜೆ
ಇಲ್ಲೂ ದೇಶಾದ್ಯಂತ ನಡೆಯುವಂತೆಯೇ ಸಾಂಪ್ರದಾಯಿಕ ಕ್ರಮದಲ್ಲಿ ದೇವಿ ಪೂಜೆ ನಡೆಯುತ್ತದೆ. ಕನ್ನಿಕೆ, ಕುಮಾರಿಕೆಯರ (9 ವರ್ಷದೊಳಗಿನ ಬಾಲಕಿಯರು) ಪೂಜೆ ನಡೆಯುತ್ತದೆ. ಮುತ್ತೈದೆಯನ್ನು ಮನೆಗೆ ಕರೆದು ಅರಿಶಿನ, ಕುಂಕುಮ, ಬಾಗಿನ ಕೊಡಲಾಗುತ್ತದೆ. ಈ ಎರಡೂ ರಾಜ್ಯಗಳಲ್ಲಿ ಗಮನಿಸಲೇಬೇಕಾದ ಸಂಗತಿಯೆಂದರೆ ಗೊಂಬೆಗಳ ಪೂಜೆ ನಡೆಸುವುದು. ತಮಿಳುನಾಡಿನಲ್ಲಿ ಇದನ್ನು ಬೊಮ್ಮಾಯಿ ಗೊಲು, ಆಂಧ್ರಪ್ರದೇಶದಲ್ಲಿ ಬೊಮ್ಮಲ ಕೊಲುವು ಎಂದು ಕರೆಯಲಾಗುತ್ತದೆ. ಇಲ್ಲಿ ದೇವದೇವಿಯರು, ಸಾಧುಸಂತರ ಸಣ್ಣಸಣ್ಣ ಗಾತ್ರದ ಆಟಿಕೆಗಳಂತಹ ಗೊಂಬೆಗಳನ್ನು ಜೋಡಿಸಲಾಗುತ್ತದೆ. 9 ಮೆಟ್ಟಿಲುಗಳನ್ನು ಮಾಡಿ, ಪ್ರತೀ ಮೆಟ್ಟಿಲಿನ ಮೇಲೆ ಈ ಆಟಿಕೆಗಳನ್ನು ಕೂರಿಸಲಾಗುತ್ತದೆ. ಮೇಲಿನ ಮೆಟ್ಟಿಲಿನಲ್ಲಿ ದೇವಿಯನ್ನು ಮೂರ್ತಿಗಳನ್ನು ಇಡಲಾಗುತ್ತದೆ. ಇದು ಕರ್ನಾಟಕದ ಹಲವು ಭಾಗಗಳಲ್ಲೂ ನಡೆಯುತ್ತದೆ. 10ನೇ ದಿನ ಈ ಗೊಂಬೆಗಳನ್ನು ತೆಗೆದು, ಸುರಕ್ಷಿತವಾಗಿ ಕಟ್ಟಿಡಲಾಗುತ್ತದೆ.

ಆಂಧ್ರ, ತೆಲಂಗಾಣದಲ್ಲಿ ಬತುಕಮ್ಮ ಪಂಡುಗ…
ಆಂಧ್ರಪ್ರದೇಶದಲ್ಲಿ ಗೊಂಬೆ ಪೂಜೆ ಮಾಡುವುದರ ಜೊತೆಗೆ ಬತುಕಮ್ಮ ಪಂಡುಗ ಮಾಡುತ್ತಾರೆ. ಅಂದರೆ ಗೌರಿ ದೇವಿಯ ಹಬ್ಬ. ಕನ್ನಡದಲ್ಲಿ ಬದುಕು ಎನ್ನುವುದನ್ನೇ ತೆಲುಗಿನಲ್ಲಿ ಬತುಕು ಎನ್ನಲಾಗುತ್ತದೆ. ಅರ್ಥಾತ್‌ ಇಲ್ಲಿ ಬದುಕಿನ ಹಬ್ಬ ಮಾಡಲಾಗುತ್ತದೆ. ಔಷಧೀಯ ಗುಣಗಳಿರುವ ವಿವಿಧ ಹೂವುಗಳಿಂದ ಗೋಪುರಗಳನ್ನು ಮಾಡಲಾಗುತ್ತದೆ. ಅದನ್ನೇ ಪೂಜಿಸಲಾಗುತ್ತದೆ. ಇಲ್ಲಿ ಬಣ್ಣಬಣ್ಣದ ವಿವಿಧ ಹೂವಿನ ಮಾಲೆಗಳಿರುತ್ತವೆ. ಒಟ್ಟಾರೆ ಈ ಹೂವುಗಳ ಗೋಪುರಗಳನ್ನು ಮಾಡಿ ಗೌರಿಯನ್ನು ಆರಾಧಿಸಲಾಗುತ್ತದೆ. 10ನೇ ದಿನ ಈ ಹೂವಿನ ಗೋಪುರಗಳನ್ನು ವಿಸರ್ಜಿಸಲಾಗುತ್ತದೆ. ವಿಶೇಷವೆಂದರೆ ಪ್ರತೀವರ್ಷ ಮಹಾಲಯ ಅಮಾವಾಸ್ಯೆಗೆ ಇದು ಆರಂಭವಾಗುತ್ತದೆ.

ಕೇರಳದಲ್ಲಿ ಶಕ್ತಿ, ಸರಸ್ವತೀ ಪೂಜೆ
ಕೇರಳದಲ್ಲಿ ದೇವಿ ಆರಾಧಕರ ಸಂಖ್ಯೆ ಜಾಸ್ತಿ. ಇಲ್ಲಿ ತಾಂತ್ರಿಕರ ಸಂಖ್ಯೆಯೂ ಹೆಚ್ಚು. ಹಾಗಾಗಿ ನವರಾತ್ರಿಯನ್ನು ಸಾಂಪ್ರದಾಯಿಕವಾಗಿ ಆರಾಧಿಸಲಾಗುತ್ತದೆ. ವಿಶೇಷವಾಗಿ ವಿದ್ಯಾದೇವಿ ಸರಸ್ವತೀಯನ್ನು ಪೂಜಿಸಲಾಗುತ್ತದೆ. ಉತ್ಸವದ ಕೊನೆಯ ಮೂರುದಿನಗಳಲ್ಲಿ ಪುಸ್ತಕಗಳನ್ನಿಟ್ಟು ಪೂಜಿಸಲಾಗುತ್ತದೆ. ಕೊನೆಯ ದಿನದಂದು ಈ ಹೊತ್ತಿಗೆಗಳನ್ನು ತೆರೆದು ಪಾರಾಯಣ ಮಾಡಲಾಗುತ್ತದೆ.

ಉತ್ತರಭಾರತದಲ್ಲಿ ಶ್ರೀರಾಮಲೀಲಾ
ಶ್ರೀರಾಮ, ರಕ್ಕಸ ರಾವಣನನ್ನು ಸಂಹರಿಸಿದ್ದು ನವರಾತ್ರಿಯ ಪೈಕಿ 9ನೇ ದಿನ. 10ನೇ ದಿನ ಅದರ ಸಂಭ್ರಮಾಚರಣೆ ಎಂಬ ವಿವರಗಳು ವಾಲ್ಮೀಕಿ ರಾಮಾಯಣದಲ್ಲಿದೆ. ಹೀಗಾಗಿ ಶ್ರೀರಾಮನನ್ನು ಬಹಳ ಪೂಜಿಸುವ ಉತ್ತರಪ್ರದೇಶ, ಉತ್ತರಾಖಂಡ, ಮಧ್ಯಪ್ರದೇಶ, ಹರ್ಯಾಣ, ಗುಜರಾತ್‌, ಬಿಹಾರ, ದೆಹಲಿಯಲ್ಲಿ ಶ್ರೀರಾಮಲೀಲೆ ನಡೆಸಲಾಗುತ್ತದೆ. ದೆಹಲಿಯಲ್ಲಂತೂ ಶ್ರೀರಾಮಲೀಲಾ ನಾಟಕಗಳು ಬಹಳ ಜನಪ್ರಿಯ. 10ನೇ ದಿನ ಹತ್ತು ತಲೆಗಳ ರಾವಣನ ಮೂರ್ತಿಯನ್ನು ಮಾಡಿ ಅದನ್ನು ಸುಟ್ಟು ಹಾಕಲಾಗುತ್ತದೆ. ಈ 9 ದಿನಗಳಲ್ಲಿ ವಿವಿಧ ಸಿಹಿತಿನಿಸುಗಳನ್ನು ಮಾಡಲಾಗುತ್ತದೆ. ಸ್ತ್ರೀಪುರುಷರು 9 ದಿನಗಳ, ನೀರನ್ನು ಮಾತ್ರ ಸೇವಿಸುತ್ತ ಉಪವಾಸವಿರುತ್ತಾರೆ. ಈ ಹಬ್ಬ ಅಲ್ಲಿ ಬಹಳ ಅದ್ಧೂರಿಯಾಗಿ ನಡೆಯುತ್ತದೆ.

ಪಶ್ಚಿಮಭಾರತದಲ್ಲಿ
ಗೋವಾ, ಗುಜರಾತ್‌, ಮಹಾರಾಷ್ಟ್ರಗಳು ಪಶ್ಚಿಮ ಭಾರತದ ಪ್ರಮುಖ ರಾಜ್ಯಗಳು. ಇಲ್ಲಿ ದೇವಿ ಆರಾಧನೆ ಮಾಮೂಲಿಯಂತೆ, ಅಷ್ಟೇ ಅದ್ಧೂರಿಯಾಗಿ ನಡೆಯುತ್ತದೆ. ದೇವಸ್ಥಾನಗಳಿಗೆ ಹೋಗುವುದು, ದುರ್ಗಾ ಸಪ್ತಶತೀ, ಲಲಿತಾ ಸಹಸ್ರನಾಮ, ಖಡ್ಗಮಾಲಾ ಸ್ತೋತ್ರಗಳನ್ನು ಓದುವುದು ಸಹಜ. ಮುಖ್ಯವಾಗಿ ಗುಜರಾತ್‌ನಲ್ಲಿ ರಾತ್ರಿ ಹೊತ್ತು ಅಲ್ಲಿನ ಸಾಂಪ್ರದಾಯಿಕ ನೃತ್ಯ “ಗರ್ಬ’ ನಡೆಯುತ್ತದೆ. ಇಲ್ಲಿ ಸ್ತ್ರೀ-ಪುರುಷರಿಬ್ಬರೂ ಸೇರಿ ನರ್ತಿಸುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next