Advertisement

ಪಂಚಭೂತಗಳ ಆರಾಧನೆಯಿಂದ ಭಗವಂತನ ಸಾನ್ನಿಧ್ಯ

11:22 AM Oct 09, 2021 | Team Udayavani |

ಮೀರಾರೋಡ್: ಶುದ್ಧ ಪ್ರಾಣವಾಯು, ಪ್ರಕೃತಿ ಸಹಜವಾಗಿರುವ ಔಷಧೀಯ ಗುಣಗಳಿರುವ ಗಿಡ, ಮರ, ಬಳ್ಳಿಗಳು, ಫಲವತ್ತಾದ ಭೂಮಿ, ತಂಪಾಗಿರುವ ವಾತಾವರಣದ ತಿರುಪತಿ ತಿರುಮಲ ಬೆಟ್ಟಕ್ಕೆ ನಾಲ್ಕು ಯುಗಗಳ ಇತಿಹಾಸ ಇದೆ. ಶ್ರೀನಿವಾಸ ದೇವರ ವಾಸ ಸ್ಥಳವಾಗಿರುವ ಈ ಬೆಟ್ಟವನ್ನು ಕೃತ ಯುಗದಲ್ಲಿ ವೃಷಭಾಚಲ ಬೆಟ್ಟ ಎಂದೂ ತ್ರೇತಾ ಯುಗದಲ್ಲಿ  ಅಂಜನಾದ್ರಿ ಬೆಟ್ಟ ಎಂದೂ ದ್ವಾಪರ ಯುಗದಲ್ಲಿ  ಶೇಷಾಚಲ ಬೆಟ್ಟ ಎಂದೂ ಕಲಿಯುಗದಲ್ಲಿ  ವೆಂಕಟಾಚಲ ಬೆಟ್ಟ ಎಂಬ ನಾಮಾಂಕಿತದಲ್ಲಿ  ಗುರುತಿಸಿಕೊಂಡಿದೆ. ಯುಗಗಳು ಉರುಳಿದರೂ ಕಾಲದ ವೇಗಕ್ಕೆ ಅಳಿಯದೆ ತಿರುಮಲೆ ಬೆಟ್ಟ ತನ್ನ ಯಥಾ ಸ್ಥಿತಿಯನ್ನು ಕಾಯ್ದುಕೊಂಡಿದೆ. ನಾಲ್ಕು ಯುಗಗಳ ಸಂಬಂಧ ಕೊಂಡಿಯನ್ನು ಉಳಿಸಿದ ಈ ಬೆಟ್ಟ ಗತ ಕಾಲದ ಚರಿತ್ರೆಯನ್ನು ನೆನಪಿಸುತ್ತದೆ ಎಂದು ಪಲಿಮಾರು ಮಠದ ಹಿರಿಯ ಮಠಾಧೀಶ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ತಿಳಿಸಿದರು.

Advertisement

ಅ. 7ರಂದು ಮೀರಾರೋಡ್‌ ಪೂರ್ವದ ಪಲಿಮಾರು ಮಠದ ಶ್ರೀ ಬಾಲಾಜಿ ಸನ್ನಿಧಿಯಲ್ಲಿ  ವಾರ್ಷಿಕ ನವರಾತ್ರಿ ಉತ್ಸವಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದ ಶ್ರೀಗಳು, ಕೊರೊನಾ ಸಾಂಕ್ರಾಮಿಕ ಕಾಲದಲ್ಲಿ  ಬದುಕಿನ ನೂತನ ಪಾಠವನ್ನು ಅರಿತಿದ್ದೀವೆ. ಅದರಂತೆ ಮುಂದೆ ಎಚ್ಚರಿಕೆಯ ನಡೆ ನಮ್ಮದಾಗಿರಲಿ. ನವರಾತ್ರಿ ಸಮಯದಲ್ಲಿ  ದೇವಸ್ಥಾನದ ಬಾಗಿಲು ತೆರೆದು, ನಮ್ಮ ಪಾಲಿಗೆ ಹಗಲಾಗಿ ಗೋಚರಿಸಿತು. ದಸರಾ ಉತ್ಸವವು ಜಗದೊಡೆಯ ಶ್ರೀನಿವಾಸ ದೇವರ ಕಲ್ಯಾಣೋತ್ಸವದ ಘಟ್ಟವಾದರೆ, ಮತ್ತೂಂದು ಕಡೆ ಜಗಜನನಿ ಶ್ರೀದುರ್ಗಾ ದೇವಿಯ ಪೂಜಾ ವೈಭವ.  ಇದು ಒಂದು ರೀತಿಯಲ್ಲಿ ಮಾತಾ-ಪಿತರನ್ನು ಪೂಜಿಸುವ ದಿನವಾಗಿದೆ ಎಂದರು.

ವೃಷಭ ರಾಕ್ಷಸನ ಬಗ್ಗೆ ವಿವರಿಸಿದ ಶ್ರೀಗಳು, ಆತ ದೈತ್ಯನಾದರೂ ಅಚಲವಾದ ಶ್ರದ್ಧಾಭಕ್ತಿಯಿಂದ ಭಗವಂತನಲ್ಲಿ ಯುದ್ಧ  ಮಾಡಿ ಆತನನ್ನು ಸ್ಪರ್ಶಿಸಿ ಮುಕ್ತಿ ಮಾರ್ಗ ಹೊಂದಿದ. ಆಕಾಶ, ವಾಯು, ಆಗ್ನಿ, ಜಲ, ಪೃಥ್ವಿ ಇವುಗಳು ಭಗವಂತ ಸೃಷ್ಟಿಸಿದ ಪಂಚ ಭೂತಗಳು. ಇವುಗಳ ಆರಾಧನೆಯಲ್ಲಿ ನಾವು ಭಗವಂತನನ್ನು ಕಂಡು ಸಾನಿಧ್ಯ ಪಡೆಯೋಣ ಎಂದು ತಿಳಿಸಿ ಶುಭ ಹಾರೈಸಿದರು.

ಪಲಿಮಾರು ಮಠದ ಕಿರಿಯ ಶ್ರೀ ವಿದ್ಯಾರಾಜೇಶ್ವರ ತೀರ್ಥ ಅವರು ಆಚಾರ್ಯ ಮಧ್ವರ ಚರಿತ್ರೆಯನ್ನು ತಿಳಿಸಿ, ಹನುಮಂತನ ಸ್ವಾಮಿ ನಿಷ್ಠೆ, ಭೀಮಸೇನನ ಸಾಧನೆಯ ಬಗ್ಗೆ ವಿವರಿಸಿದರು. ಪಲಿಮಾರು ಮಠದ ಟ್ರಸ್ಟಿ ಮತ್ತು ಪ್ರಬಂಧಕ ವಿದ್ವಾನ್‌ ವಾಸುದೇವ ಎಸ್‌. ಉಪಾಧ್ಯಾಯ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.

ಇದೇ ಸಂದರ್ಭದಲ್ಲಿ  ಪಲಿಮಾರು ಶ್ರೀಗಳಿಂದ ಶ್ರೀನಿವಾಸ ದೇವರಿಗೆ ವಿಶೇಷ ಪೂಜೆ ಮತ್ತು ದುರ್ಗಾದೇವಿಗೆ ದೀಪಾರಾಧನೆ ನಡೆಯಿತು. ಬೆಳಗ್ಗೆ ದೇವರಿಗೆ ತುಳಸಿ ಆರ್ಚನೆ, ಪ್ರಸನ್ನ ಪೂಜೆ, ಚಂಡಿಕಾ ಯಾಗ, ದುರ್ಗಾದೇವಿಗೆ ಕಲಶಾಭಿಷೇಕ ಮತ್ತು ಶ್ರೀ ಬಾಲಾಜಿ ಭಜನ ಮಂಡಳಿ ಸದಸ್ಯರಿಂದ ಭಜನೆ ನೆರವೇರಿತು. ಪೂಜಾ ಕಾರ್ಯಗಳಲ್ಲಿ  ಧರೆಗುಡ್ಡೆ ಶ್ರೀನಿವಾಸ ಭಟ್‌, ಗೋಪಾಲ ಭಟ್‌, ಭಕ್ರೆ ಮಠ ಸಂತೋಷ ಭಟ್‌, ಕೃಷ್ಣಮೂರ್ತಿ ಉಪಾಧ್ಯಾಯ, ರಾಮಚಂದ್ರ ಹಿಪ್ಪರಗಿ, ಪ್ರಶಾಂತ್‌ ಭಟ್‌, ಅನಂತರಾಮ ಭಟ್‌ ಸಹಕರಿಸಿದರು. ಭಕ್ತರ ವ್ಯವಸ್ಥೆಯಲ್ಲಿ ಕರಮಚಂದ ಗೌಡ ಸಹಕರಿಸಿದರು.

Advertisement

ಪಲಿಮಾರು ಮಠದ ಮಠಾಧೀಶರಾದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಮತ್ತು ಕಿರಿಯ ಶ್ರೀಗಳಾದ ವಿದ್ಯಾರಾಜೇಶ್ವರ ತೀರ್ಥ ಶ್ರೀಗಳ ಉಪಸ್ಥಿತಿ ಹಾಗೂ ಆಶೀರ್ವಾದಗಳೊಂದಿಗೆ ಅ. 14ರ ವರೆಗೆ ದಸರಾ ಉತ್ಸವದ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಪಟ್ಟದ ದೇವರಾದ ಶ್ರೀರಾಮಚಂದ್ರ ದೇವರ ಪೂಜೆಯೊಂದಿಗೆ ಆರಂಭವಾಗುವ ಉತ್ಸವದಲ್ಲಿ ದಿನಪ್ರತಿ ಬೆಳಗ್ಗೆ 8.30ರಿಂದ ಚಂಡಿಕಾ ಹೋಮ, ಪೂರ್ವಾಹ್ನ 11.30ರಿಂದ ಶ್ರೀರಾಮ ಚಂದ್ರ ದೇವರ ಸಂಸ್ಥಾನ ಪೂಜೆ, ಮಧ್ಯಾಹ್ನ ಶ್ರೀನಿವಾಸ ದೇವರ ಪೂಜೆ, ಸಂಜೆ 5.30ರಿಂದ ಶ್ರೀಗಳಿಂದ ಪ್ರವಚನ, ರಾತ್ರಿ 7.45ಕ್ಕೆ ಮಹಾಪೂಜೆಯನ್ನು ಆಯೋಜಿಸಲಾಗಿದೆ.ಸಚ್ಚಿದಾನಂದ ರಾವ್‌, ಟ್ರಸ್ಟಿ, ಪಲಿಮಾರು ಮಠ ಮೀರಾರೋಡ್‌

ಚಿತ್ರ-ವರದಿ: ರಮೇಶ ಅಮೀನ್‌

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next