Advertisement

ನವರಾತ್ರಿ: ಮಾತೃ ಹೃದಯಿ, ಸಂತಾನ ಭಾಗ್ಯ ಸಹಿತ ಸಕಲ ಅಭೀಷ್ಟಗಳ ಕ್ಷಿಪ್ರಪ್ರದಾಯಕಿ

10:25 PM Sep 29, 2022 | Team Udayavani |

ದೇವತೆ: ಸ್ಕಂದಮಾತಾ

Advertisement

ಬಣ್ಣ : ಹಸುರು

ಶರದೃತು ಆಶ್ವಯುಜ

ಶುದ್ಧ  ಪಂಚಮಿ

ಶರನ್ನವರಾತ್ರಿ ಪರ್ವಕಾಲದಲ್ಲಿ ಐದನೇ ದಿನದಂದು ಜಗನ್ಮಾತೆ ದುರ್ಗಾ ದೇವಿಯು ಸ್ಕಂದಮಾತೆ ಎಂಬ ಅಭಿದಾನದ ಮೂಲಕ ಪೂಜಿಸಲ್ಪಡುತ್ತಾಳೆ.

Advertisement

ಸ್ಕಂದ ಎಂದರೆ ಸಾಕ್ಷಾತ್‌ ಸುಬ್ರಹ್ಮಣ್ಯ ದೇವರು. ಮಾತೆ ಎಂದರೆ ಸುಬ್ರಹ್ಮಣ್ಯ ದೇವರ ಜನ್ಮಕ್ಕೆ ಕಾರಣೀಕರ್ತಳಾದವಳು ಅರ್ಥಾತ್‌ ಪರಶಿವನ ಅರ್ಧಾಂಗಿ ಶ್ರೀ ಪಾರ್ವತಿ ದೇವಿ. ವಿಶಿಷ್ಟ ಯೋಗ್ಯತೆಯುಳ್ಳ ಸ್ಪಂದನ ಲಹರಿಗಳಿಂದ ಯುಕ್ತವಾ ದಂತಹ ತೇಜಸ್ಸು. ಶಿವ ಹಾಗೂ ಪಾರ್ವತಿ ದೇವಿಯರಿಂದ ಜನ್ಮ ತಾಳಿದ ಶ್ರೀ ಸುಬ್ರಹ್ಮಣ್ಯ ದೇವರು.

ತಾರಕಾಸುರ ಎನ್ನುವ ಅಸುರ ದೈತ್ಯ ರಾಕ್ಷಸನ ಸಂಹಾರಕ್ಕಾಗಿ ಮೈದಾಳಿದ ದುರ್ಗಾರೂಪವೇ ದೇವಿ ಸ್ಕಂದ ಮಾತೆ. ಸ್ಕಂದ ಅರ್ಥತ್‌ ಶ್ರೀ ಸುಬ್ರಹ್ಮಣ್ಯ ದೇವ ರಿಗೆ ಜನ್ಮವನ್ನಿತ್ತು ಪರೋಕ್ಷವಾಗಿ ತಾರಕನ ಸಂಹಾರಕ್ಕೆ  ಕಾರಣಕರ್ತಳಾಗುತ್ತಾಳೆ.

ಸ್ಕಂದಮಾತೆಯ ಸ್ವರೂಪ ತ್ರಿಲೋಕ ಸೌಂದರ್ಯಯುತವಾದದ್ದು. ಸಿಂಹಾ ರೂಢಳಾಗಿರುವ ಶ್ವೇತವರ್ಣೆ. ಚತುರ್ಬಾಹು, ಚತುಭುìಜಗಳು. ಎರಡು ಹಸ್ತ ಗಳಲ್ಲಿ ರುದ್ರಾಕ್ಷಿಯ ಜಪಮಣಿ ಕಮಂಡಲಗಳಿವೆ. ತನ್ನ ಪಾರ್ಶ್ವ ಹಸ್ತದಲ್ಲಿ ಅರ್ಥಾತ್‌ ಬಲ ಕೈಯಲ್ಲಿ ಸ್ಕಂದನನ್ನು ಹಾಗೂ ವರದ ಹಸ್ತವು ಅಭಯ ಮುದ್ರೆಯಲ್ಲಿದ್ದು, ಅವಳ ಬಲ ಕಾಲಂದುಗೆಯಲ್ಲಿ ಬಲತೊಡೆಯ ಮೇಲೆ ಬಾಲರೂಪಿಯಾದ ಸ್ಕಂದ ಕುಮಾರನು ವಿರಾಜಮಾನನಾಗಿದ್ದಾನೆ.

ಇನ್ನೊಂದು ಅರ್ಥದಲ್ಲಿ ಹೇಳಬಹುದಾದರೆ ಭೂಲೋಕದಿಂದ ಸತ್ಯಲೋಕ ದವರೆಗಿನ ವ್ಯಾಹ್ಯತಿಗಳ ಮೇಲೆ ಸ್ಕಂದರೇಷೆಯ ನಿಯಂತ್ರಣವಿದೆ. ವ್ಯಾಹ್ಯತಿ ಅಂದರೆ ಗೂಢ ಸ್ವರ ಅಥವಾ ಮಂತ್ರ. ಸಪ್ತಲೋಕಗಳ ಹೆಸರುಗಳಂತೆ ಅನುಕ್ರಮ ವಾಗಿ ಭೂಃ, ಭುವಃ, ಸ್ವಃ, ಮಹಃ, ಜನಃ, ತಪಃ ಮತ್ತು ಸತ್ಯ ಇವು ಏಳು ವ್ಯಾಹ್ಯತಿ ಗಳಾಗಿವೆ. ಈ ಏಳೂ ಲೋಕಗಳ ನಿಯಂತ್ರಕರ ಮಾತೆಯೇ ಸ್ಕಂದಮಾತೆ. ಈ ಏಳೂ ಲೋಕಗಳಿಂದ ಪಾರಾಗಿ ಹೋಗಲು ಯಾರ ಸಹಾಯ ಬೇಕಾಗುತ್ತದೆಯೋ ಅವಳಿಗೆ ಸ್ಕಂದಮಾತೆ ಎನ್ನುತ್ತಾರೆ.

ಪೂಜಾಫ‌ಲ: ಸ್ಕಂದಮಾತಾಳದ್ದು ಕರುಣೆ ತುಂಬಿದ ತಾಯಿಯ ಸುಂದರ ರೂಪ. ದೇವಿಯನ್ನು ಆರಾಧಿಸುವ ಭಕ್ತರು ಮಾತೆಯ ಆಶೀರ್ವಾದ ಮಾತ್ರವಲ್ಲದೇ ಮಗನಾದ ಸ್ಕಂದನ ಆಶೀರ್ವಾದವನ್ನೂ ಪಡೆಯಬಹುದು. ಈ ಅವತಾರವನ್ನು ಪೂಜಿಸುವುದರಿಂದ ಭಕ್ತರು ಎಲ್ಲ ಕಷ್ಟಗಳಿಂದ ಮುಕ್ತರಾಗಿ ದೇವಿಯ ಕೃಪೆಗೆ ಪಾತ್ರರಾಗುತ್ತಾರೆ. ಉತ್ತಮ ಪುತ್ರ ಪೌತ್ರ ಸಂತಾನಕ್ಕಾಗಿ ಪ್ರಥಮ ಆದ್ಯತೆಯನ್ನು ಸ್ಕಂದಮಾತೆಯ ಆರಾಧನೆಯು ಸೂಚಿಸುತ್ತದೆ. ಭಕ್ತರ ಭಕ್ತಿಗೆ ಅತೀ ಶೀಘ್ರದಲ್ಲಿ ದೇವಿಯು ಮಾರುಹೋಗಿ ಬೇಡಿದ ಸಕಲ ಕಾಮಿತಾರ್ಥಗಳನ್ನು ಕ್ಷಣಮಾತ್ರದಲ್ಲೇ ಕರುಣಿಸುವ ಹಾಗೂ ಅವರವರ ಇಷ್ಟಾರ್ಥ ಮನೋ ಸಂಕಲ್ಪಗಳನ್ನು ಸಿದ್ಧಿಸುವಂತೆ ಆಶೀರ್ವದಿಸುತ್ತಾಳೆ.

ಶುದ್ಧ ಮನಸ್ಸಿನಿಂದ, ಭಕ್ತಿಪೂರ್ವಕವಾಗಿ ಯಾರು ಈಕೆಯ ಆರಾಧನೆ ಮಾಡು ತ್ತಾರೋ ಅವರಿಗೆ ಶ್ರೀದೇವಿಯು ಉನ್ನತ ಪದವಿ, ಹೆಸರು, ಕೀರ್ತಿ, ಖ್ಯಾತಿ, ಸಮಗ್ರ ಅಭಿವೃದ್ಧಿಯನ್ನು  ಸಂಪತ್ತು ಹಾಗೂ ಸಮೃದ್ಧಿಯನ್ನು ನೀಡುತ್ತಾ ಜನ್ಮ ಕುಂಡಲಿಯಲ್ಲಿ ಬುಧನು ಪ್ರತಿಕೂಲ ಸ್ಥಾನದಲ್ಲಿದ್ದರೆ ಉಂಟಾಗಬಹುದಾದ ಸಮಸ್ತ ಸಂಕಷ್ಟಗಳನ್ನು ಸ್ಕಂದಮಾತೆಯು ನಿವಾರಿಸುತ್ತಾಳೆ.

 

ಹರೀಶ್‌ ಐತಾಳ

ಅರ್ಚಕರು, ಮಂಗಳಾದೇವಿ ದೇವಸ್ಥಾನ, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next