Advertisement

ಸರಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಸೆಂಟರ್ ಉದ್ಘಾಟನೆ

07:41 PM Jun 01, 2021 | Team Udayavani |

ಮಹಾಲಿಂಗಪುರ: ಕಳೆದ ಒಂದು ತಿಂಗಳಲ್ಲಿ ಸುಮಾರು 7 ಬಾರಿ ಜಿಲ್ಲಾ ಪ್ರವಾಸ ಮಾಡಿ, ತಾಲೂಕಾಮಟ್ಟದ ಎಲ್ಲಾ ಆಸ್ಪತ್ರೆಗಳಿಗೆ ಭೇಟಿ, ಸಭೆಗಳನ್ನು ನಡೆಸಿ ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ಬೇಕಾದ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಹೇಳಿದರು.

Advertisement

ಮಂಗಳವಾರ ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಸಹಿತ ೧೦ ಹಾಸಿಗೆಯ ಕೋವಿಡ್ ಸೆಂಟರ್‌ನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಳೆದ ತಿಂಗಳು ೫ ರಂದು ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿ ಬಾಗಲಕೋಟೆಯಲ್ಲಿ ೯೫೦೦ ಕೊರೊನಾ ಪಾಜಿಟೀವ್ ಕೇಸ್‌ಗಳಿದ್ದವು. ಎರಡು ಬಾರಿ ಜಿಲ್ಲೆಯ ಎಲ್ಲಾ ತಾಲೂಕಾ ಮಟ್ಟದ ಅಧಿಕಾರಿಗಳು ಮತ್ತು ವೈದ್ಯರ ಸಭೆ ನಡೆಸಿ, ಜಿಲ್ಲಾಡಳಿತದ ಸಹಕಾರದೊಂದಿಗೆ ಕೊರೊನಾ ನಿಯಂತ್ರಣಕ್ಕಾಗಿ ಅಗತ್ಯಕ್ರಮಗಳನ್ನು ಕೈಗೊಂಡ ಪರಿಣಾಮ ಜೂನ್ ೧ ರಂದು ಇಂದು ಜಿಲ್ಲೆಯಲ್ಲಿ ೨೨೪೫ ಕೊರೊನಾ ಸಕ್ರೀಯ ಕೇಸ್‌ಗಳು ಇವೆ. ೧೨೦೦ ಜನರು ಹೋಮ್ ಕ್ವಾರಂಟೈನ್ ಇದ್ದಾರೆ. ಬರುವ ಜೂನ ೭ರೊಳಗೆ ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣ ಆಗುವ ಸಾಧ್ಯತೆ ಇದೆ ಎಂದರು.

ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್‌ಗೆ ಬನ್ನಿ : ಜಿಲ್ಲೆಯಲ್ಲಿ ಜೂನ ೧ ರಿಂದ ಪತ್ತೆಯಾಗುವ ಪ್ರತಿಯೊಬ್ಬರ ಕೊರೊನಾ ಪಾಜಿಟೀವ್ ವ್ಯಕ್ತಿಗಳನ್ನು ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರಗೆ ದಾಖಲಿಸಲು ಜಿಲ್ಲಾಧಿಕಾರಿಗಳ ಮೂಲಕ ಎಲ್ಲಾ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕೋವಿಡ್ ಕೇರ್ ಸೆಂಟರ್‌ನಲ್ಲಿ ಮನೆಯ ಊಟದಷ್ಠೆ ಶುಚಿ-ರುಚಿಯಾದ ಊಟದ ವ್ಯವಸ್ಥೆ ಹಾಗೂ ಅಗತ್ಯ ಉಪಚಾರ ನೀಡಿ, ೭ ದಿನಗಳಲ್ಲಿ ನೆಗಟೀವ್ ವರದಿ ಬರುವದರಿಂದ ಪ್ರತಿಯೊಬ್ಬ ಕೋವಿಡ್ ಪಾಜಿಟೀವ್ ವ್ಯಕ್ತಿಗಳು ದಯವಿಟ್ಟು ಕೋವಿಡ್ ಸೆಂಟರ್‌ಗೆ ದಾಖಲಾಗಿರಿ. ಕೋವಿಡ್ ಸೆಂಟರ್‌ನಲ್ಲಿ ಊಟ ಮಾಡಲು ಜನ ಭಯಪಡುತ್ತಿರುವ ಕಾರಣ, ಮಾಧ್ಯಮ ಮಿತ್ರರು ಕೋವಿಡ್ ಸೆಂಟರ್‌ನಲ್ಲಿ ಊಟ ಮಾಡಿಬಂದು, ಜನತೆಗೆ ವಾಸ್ತವ ಸಂಗತಿಯ ಕುರಿತು ಜಾಗೃತಿ ಮೂಡಿಸಲು ವಿನಂತಿಸಿದರು.

೩ನೇ ಅಲೆ ಎದುರಿಸಲು ಸಿದ್ದತೆ : ಕೊರೊನಾ ಮೂರನೇ ಅಲೆಯು ಸಣ್ಣ ಮಕ್ಕಳಿಗೆ ಬರುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.  ಭಗವಂತನ ಕೃಪೆಯಿಂದ ಮೂರನೇ ಅಲೆಯು ಬರುವದು ಬೇಡ ಎಂದು ನಾನು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ನೀವು ಭಗವಂತನ ಪ್ರಾರ್ಥಿಸಿ. ಒಂದು ವೇಳೆ ಮೂರನೇ ಬಂದರು ಸಹ, ಯಾವುದೇ ತೊಂದರೆಯಾಗದಂತೆ ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ ಎಂದರು.

ಬೀಜ ವಿತರಣೆಗೆ ಅಗತ್ಯ ಕ್ರಮ : ಮುಂಗಾರು ಹಂಗಾಮು ಪ್ರಾರಂಭವಾಗಿರುವ ಕಾರಣ ಜಿಲ್ಲೆಯಲ್ಲಿ ರೈತರಿಗೆ ಬೀಜ ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಪ್ರತಿನಿತ್ಯ ಮುಂಜಾನೆ ೬ ರಿಂದ ೧೦ರವರೆಗೆ ೧೦೦ ಜನರಿಗೆ ಮಾತ್ರ ಆಯಾ ರೈತ ಸೊಸಾಯಿಟಿಯಲ್ಲಿ ಬೀಜಗಳನ್ನು ವಿತರಿಸಲು ಸೂಚಿಸಲಾಗಿದೆ. ಜಿಲ್ಲೆಗೆ ಬೇಕಾದಷ್ಟು ಬೀಜಗಳ ದಾಸ್ತಾನು ಇದ್ದು, ಯಾವುದೇ ಕಾರಣಕ್ಕೂ ರೈತರು ಗಲಾಟೆ ಮಾಡದೇ ಸಾಮಾಜಿಕ ಅಂತರ, ಮಾಸ್ಕ್ಧಾರಣೆಯೊಂದಿಗೆ ಸೊಸೈಟಿಗಳಿಗೆ ಆಗಮಿಸಿ ಬೀಜಗಳನ್ನು ಪಡೆದುಕೊಳ್ಳಬೇಕು ಎಂದು ರೈತರಿಗೆ ವಿನಂತಿಸಿದರು.

Advertisement

ಕೊರೊನಾ ಮುಕ್ತ ಜಿಲ್ಲೆಯಾಗಿಸಲು ಸಹಕರಿಸಿ : ಮುಂಬೈ ಕರ್ನಾಟಕದಲ್ಲೇ ಪ್ರಥಮವಾಗಿ ಬಾಗಲಕೋಟೆ ಜಿಲ್ಲೆಯನ್ನು ಕೊರೊನಾ ಮುಕ್ತ ಜಿಲ್ಲೆಯನ್ನಾಗಿಸಲು ಎಲ್ಲಾ ಶಾಸಕರು, ಜಿಲ್ಲಾಡಳಿತ, ಖಾಸಗಿ ಮತ್ತು ಸರಕಾರಿ ವೈದ್ಯರು ಸೇರಿದಂತೆ ಕೊರೊನಾ ವಾರಿರ‍್ಸ್ ಪ್ರಯತ್ನಿಸುತ್ತಿದ್ದಾರೆ. ಇದಕ್ಕೆ ಜಿಲ್ಲೆಯ ಎಲ್ಲಾ ಸಾರ್ವಜನಿಕರು ಸಹ ಕೋವಿಡ್ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಕೊರೊನಾ ಮುಕ್ತ ಜಿಲ್ಲೆಯನ್ನಾಗಿಸಲು ಸಹಕಾರ ನೀಡಬೇಕು. ಬಹುಶ: ಜೂನ್ ೭ರೊಳಗೆ ಕೊರೊನಾ ಮುಕ್ತಜಿಲ್ಲೆಯಾಗಿ, ಲಾಕ್‌ಡೌನ್ ತೆರವಾಗುತ್ತದೆ ಎಂಬ ವಿಶ್ವಾಸವಿದೆ ಎಂದರು.

ಶಾಸಕ ಸಿದ್ದು ಸವದಿ ಮಾತನಾಡಿ ಬಹಳ ದಿನಗಳ ಬೇಡಿಕೆಯಂತೆ ಮಹಾಲಿಂಗಪುರ ಸರಕಾರಿ ಆಸ್ಪತ್ರೆಯಲ್ಲಿ ೧೦ ಬೆಡ್‌ಗಳ ಆಕ್ಸಿಜನ್ ಸಹಿತ ಕೋವಿಡ್ ಸೆಂಟರ್‌ನ್ನು ಉದ್ಘಾಟಿಸಲಾಗಿದೆ. ಬಡ ರೋಗಿಗಳಿಗೆ ವರದಾನವಾಗಲಿದೆ. ತೇರದಾಳ ಮತಕ್ಷೇತ್ರದಾದ್ಯಂತ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರ ಮೂಲಕ ಸುಮಾರು ೧೪-೧೫ ಸಾವಿರ ಕೋವಿಡ್ ಮಾತ್ರೆಗಳ ಆರೋಗ್ಯ ಕಿಟ್ ವಿತರಿಸಲಾಗಿದೆ. ಇದರಿಂದಾಗಿ ಮತಕ್ಷೇತ್ರದಲ್ಲಿ ಕಳೆದ ೧೦ ದಿನಗಳಲ್ಲಿ ಕೊರೊನಾ ನಿಯಂತ್ರಣಕ್ಕೆ ಬಂದಿದೆ, ಸಮೀಪದ ಸಮೀರವಾಡಿಯ ಗೋದಾವರಿ ಸಕ್ಕರೆ ಕಾರ್ಖಾನೆಯವರು ೪ ಆಕ್ಸಿಜನ್ ಕಾನ್ಸಂಟ್ರೇಟರ್‌ಗಳನ್ನು ನೀಡಿದ್ದಾರೆ. ಮುಂಬರುವ ದಿನಗಳಲ್ಲಿ ಇನ್ನು ೬ ನೀಡುವದಾಗಿ ತಿಳಿಸಿದ್ದಾರೆ. ಅಲ್ಲದೇ ಸದ್ಯ ಸರಕಾರಿ ಆಸ್ಪತ್ರೆಯಲ್ಲಿ ೧೦ ಜಂಬೋ ಸಿಲಿಂಡರ್‌ಗಳು ಇರುವವದರಿಂದ ಸದ್ಯಕ್ಕೆ ಯಾವುದೇ ತೊಂದರೆಯಿಲ್ಲ. ಸರಕಾರಿ ಆಸ್ಪತ್ರೆಯಲ್ಲಿ ಈಗ ಮೂರು ಜನ ಗುತ್ತಿಗೆ ವೈದ್ಯರ ಜೊತೆಗೆ ಡಾ.ಪ್ರಕಾಶ ಹುಗ್ಗಿ ಎಂಬ ಮತ್ತೊಬ್ಬ ವೈದ್ಯರು ಆಗಮಿಸಿದ್ದಾರೆ. ತಹಶೀಲ್ದಾರ ಹಾಗೂ ಟಿಎಚ್‌ಓ ಅವರ ಜೊತೆಗೆ ಚರ್ಚಿಸಿ ಕೋವಿಡ್ ಕೇರ್ ಸೆಂಟರ್‌ಗೆ ಸೂಕ್ತವಾದ ವೈದ್ಯರನ್ನು ನೇಮಕಗೊಳಿಸುತ್ತೇವೆ ಎಂದರು.

ರಬಕವಿ-ಬನಹಟ್ಟಿ ತಹಶೀಲ್ದಾರ ಸಂಜಯ ಇಂಗಳೆ, ತಾಲೂಕಾ ವೈದ್ಯಾಧಿಕಾರಿ ಜಿ.ಎಸ್.ಗಲಗಲಿ, ತೇರದಾಳ ಉಪತಹಶೀಲ್ದಾರ ಎಸ್.ಬಿ.ಮಾಯನ್ನವರ, ಗೋದಾವರಿ ಕಾರ್ಖಾನೆಯ ಬಿ.ಆರ್.ಭಕ್ಷಿ, ಮಜದ್ದೂರ ಯುನಿಯನ್ ಅಧ್ಯಕ್ಷ ಬಸವರಾಜ ಪೂಜಾರಿ, ರಾಮಚಂದ್ರ ಸೋನವಾಲ್ಕರ್, ಪುರಸಭೆ ಮುಖ್ಯಾಧಿಕಾರಿ ಎಚ್.ಎಸ್.ಚಿತ್ತರಗಿ, ಬಿಜೆಪಿ ಮುಖಂಡರಾದ ಬಾಬಾಗೌಡ ಪಾಟೀಲ, ಆನಂದ ಕಂಪು, ಮಹಾಲಿಂಗಪ್ಪ ಕೋಳಿಗುಡ್ಡ, ಶಿವಾನಂದ ಅಂಗಡಿ, ಪ್ರಕಾಶ ಅರಳಿಕಟ್ಟಿ, ಚನ್ನಪ್ಪ ಪಟ್ಟಣಶೆಟ್ಟಿ, ಕಂದಾಯ ನಿರೀಕ್ಷಕ ಬಿ.ಆರ್. ತಾಳಿಕೋಟಿ, ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಬಿ.ಗೋಣಿ, ಪುರಸಭೆಯ ಕಿರಿಯ ಆರೋಗ್ಯ ನಿರೀಕ್ಷಕರಾದ ರಾಜು ಹೂಗಾರ, ಸಿದ್ದು ಅಳ್ಳಿಮಟ್ಟಿ, ವೈದ್ಯರಾದ ಡಾ. ಬಿ.ಎಸ್.ಅಂಬಿ, ಡಾ.ವಿಶ್ವನಾಥ ಗುಂಡಾ, ಡಾ. ಸಂಜಯ ಮುರಗೋಡ ಸೇರಿದಂತೆ ಹಲವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next