ಬೆಂಗಳೂರು: ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಅವರ ಲೋಕಸಭೆ ಸದಸ್ಯತ್ವವನ್ನು ಅನರ್ಹತೆ ಮಾಡಿದ್ದನ್ನು ಖಂಡಿಸಿ ಎಪ್ರಿಲ್ನಲ್ಲಿ ದೇಶಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಕೇಂದ್ರ ಮಾಜಿ ಸಚಿವ ಆನಂದ್ ಶರ್ಮಾ ತಿಳಿಸಿದರು.
ತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವ ಮೊದಲೇ ಅನರ್ಹಗೊಳಿಸಲಾಗಿದೆ. ಅಷ್ಟಕ್ಕೂ ಸಂವಿಧಾನದ ಪ್ರಕಾರ ಸಂಸತ್ತಿನ ಮುಖ್ಯಸ್ಥರು ರಾಷ್ಟ್ರಪತಿಗಳು ಅನರ್ಹತೆ ಬಗ್ಗೆ ತೀರ್ಮಾನ ಮಾಡಬೇಕು. ಆದರೆ ರಾಹುಲ್ ಪ್ರಕರಣದಲ್ಲಿ ರಾಷ್ಟ್ರಪತಿಗಳಿಗೆ ಈ ಸಂಬಂಧ ಪ್ರಸ್ತಾವನೆ ಸಲ್ಲಿಕೆಯಾಗಿಲ್ಲ. ಈ ಅನರ್ಹತೆಯು ಕೇವಲ ಒಂದು ಪಕ್ಷದ ನಾಯಕರ ಪ್ರಶ್ನೆ ಅಲ್ಲ; ಇಡೀ ಭಾರತೀಯ ಪ್ರಜಾಪ್ರಭುತ್ವ ವ್ಯವಸ್ಥೆಯ ಪ್ರಶ್ನೆಯಾಗಿದೆ. ಇದನ್ನು ಖಂಡಿಸಿ ದೇಶದಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಚುನಾಯಿತ ಪ್ರತಿನಿಧಿಗೆ ಸಂಸತ್ತಿನಲ್ಲಿ ಮಾತನಾಡಲು ಅವಕಾಶ ತಿರಸ್ಕರಿಸಲಾಗುತ್ತಿದೆ. ರಾಹುಲ್ ಗಾಂಧಿ ಲಂಡನ್ನಲ್ಲಿ ವಿದೇಶಗಳನ್ನು ಭಾರತಕ್ಕೆ ನೆರವಾಗಿ ಎಂದು ಕೇಳಿ¨ªಾರೆ ಎಂಬ ಸುಳ್ಳನ್ನು ಹೇಳಿದರು. ಈ ಬಗ್ಗೆ ಸಂಸತ್ತಿನಲ್ಲಿ ಉತ್ತರ ನೀಡಲು ರಾಹುಲ್ಗೆ ಅವಕಾಶ ನೀಡುತ್ತಿಲ್ಲ ಎಂದರು.
2019ರ ಮಾರ್ಚ್ 13ರಂದು ರಾಹುಲ್ ಮಾಡಿದ ಭಾಷಣದಲ್ಲಿ ಯಾವುದೇ ಸಮುದಾಯವನ್ನು ಟೀಕಿಸಿರಲಿಲ್ಲ. ಹೀಗಾಗಿ ಕ್ರಿಮಿನಲ್ ಮಾನಹಾನಿಗೆ ಅವಕಾಶವೇ ಇರಲಿಲ್ಲ. ನೀರವ್ ಮೋದಿ ಹಾಗೂ ಲಲಿತ್ ಮೋದಿ ಅವರ ಕುರಿತಾಗಿ ಮಾಡಿದ ಭಾಷಣ ಅದಾಗಿತ್ತು. ಹಿಂದೂ, ಮುಸ್ಲಿಂ ಹಾಗೂ ಪಾರ್ಸಿಗಳಲ್ಲಿ ಮೋದಿ ಎಂಬ ಉಪನಾಮ ಹೊಂದಿವೆ. ಮೋದಿ ಅವರನ್ನು ಟೀಕೆ ಮಾಡಿ ಹಿಂದುಳಿದ ವರ್ಗಗಳನ್ನು ಅವಮಾನಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ನೀರವ್ ಮೋದಿ ಆಗಲಿ, ಲಲಿತ್ ಮೋದಿ ಆಗಲಿ ಹಿಂದುಳಿದ ವರ್ಗಕ್ಕೆ ಸೇರಿದವರಲ್ಲ. ಹಾಗಾದರೆ ರಾಹುಲ್ ಗಾಂಧಿ ಹೇಗೆ ಹಿಂದುಳಿದ ವರ್ಗಗಳಿಗೆ ಅಪಮಾನ ಮಾಡಿದಂತಾಗುತ್ತದೆ ಎಂದರು.