Advertisement

ದೇವಿಂದರ್ ಗಿತ್ತೇ ISI ಸಂಪರ್ಕ ; ಈತನ ಮಕ್ಕಳು ಬಾಂಗ್ಲಾದಲ್ಲಿ ಕಲಿಯುತ್ತಿರುವುದೇಕೆ?

10:03 AM Jan 20, 2020 | Team Udayavani |

ನವದೆಹಲಿ: ಹಿಜ್ಬುಲ್ ಮುಜಾಹಿದ್ದೀನ್ ಉಗ್ರಸಂಘಟನೆಯ ಸ್ವಯಂಘೋಷಿತ ಕಮಾಂಡರ್ ನವೀದ್ ಬಾಬು ಹಾಗೂ ಅತೀಫ್ ಮತ್ತು ವಕೀಲ ಇರ್ಫಾನ್ ಮಿರ್ ಅವರನ್ನು ತನ್ನ ಪೊಲೀಸ್ ವಾಹನದಲ್ಲಿ ಕರೆದೊಯ್ಯುತ್ತಿದ್ದಾಗ ಭದ್ರತಾ ಪಡೆಗಳ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವ ಡಿಎಸ್.ಪಿ. ದೇವಿಂದರ್ ಸಿಂಗ್ ಅವರನ್ನು ಎನ್.ಐ.ಎ. ಕಳೆದ ಕೆಲವು ದಿನಗಳಿಂದ ತೀವ್ರ ತಪಾಸಣೆಗೆ ಒಳಪಡಿಸುತ್ತಿದೆ.

Advertisement

ಇದೀಗ ಕೇಂದ್ರ ಗೃಹಸಚಿವಾಲಯದ ಆದೇಶದ ಮೇಲೆ ರಾಷ್ಟ್ರೀಯ ತನಿಖಾ ತಂಡವು ದೇವಿಂದರ್ ಮೇಲೆ ಅಧಿಕೃತ ಪ್ರಕರಣವನ್ನು ದಾಖಲು ಮಾಡಿಕೊಂಡಿದೆ. ಮತ್ತು ಪಾಕಿಸ್ಥಾನಿ ಗುಪ್ತಚರ ಇಲಾಖೆ ಐ.ಎಸ್.ಐ. ಜೊತೆಗೆ ದಾವಿಂದರ್ ಗಿರುವ ನಂಟಿನ ಜಾಡಿನಲ್ಲಿ ತನ್ನ ತನಿಖೆಯನ್ನು ಮುಂದುವರಿಸಿದೆ.

2019ರಲ್ಲಿ ದೇವಿಂದರ್ ಬಾಂಗ್ಲಾದೇಶಕ್ಕೆ ಮೂರು ಸಲ ಭೇಟಿ ಕೊಟ್ಟಿರುವುದು ಹಲವಾರು ಸಂಶಯಗಳನ್ನು ಹುಟ್ಟುಹಾಕಿದೆ.  ತಮ್ಮ ಈ ಮೂರು ಭೇಟಿಯ ಅವಧಿಯಲ್ಲೂ ಸಹ ದೇವಿಂದರ್ ಅಲ್ಲಿ ಹಲವು ದಿನಗಳ ಕಾಲ ತಂಗಿದ್ದರು. ಮಾತ್ರವಲ್ಲದೇ ದೇವಿಂದರ್ ಅವರ ಇಬ್ಬರು ಪುತ್ರಿಯರು ಬಾಂಗ್ಲಾದೇಶದಲ್ಲಿ ಕಲಿಯುತ್ತಿರುವ ಮಾಹಿತಿಯೂ ಸಹ ತನಿಖಾ ಸಂಸ್ಥೆಗಳಿಗೆ ಲಭ್ಯವಾಗಿದ್ದು, ಐ.ಎಸ್.ಐ. ಸಂಘಟನೆಯೇ ಇವರಿಬ್ಬರ ಕಲಿಕಾ ಖರ್ಚು-ವೆಚ್ಚಗಳನ್ನು ನೋಡಿಕೊಳ್ಳುತ್ತಿರುವ ಸಂದೇಹ ಇದೀಗ ವ್ಯಕ್ತವಾಗಿದೆ.

ಈ ಎಲ್ಲಾ ಹಿನ್ನಲೆಯಲ್ಲಿ ದೇವಿಂದರ್ ಅವರು ಐ.ಎಸ್.ಐ. ಏಜೆಂಟ್ ಗಳನ್ನು ಢಾಕಾ ಅಥವಾ ಬಾಂಗ್ಲಾದೇಶದಲ್ಲಿ ಭೇಟಿಯಾಗಿದ್ದರೇ ಎಂಬುದನ್ನು ತಿಳಿದುಕೊಳ್ಳುವ ನಿಟ್ಟಿನಲ್ಲಿ ಅವರ ವಿಚಾರಣೆಯನ್ನು ತೀವ್ರಗೊಳಿಸುವ ಸಾಧ್ಯತೆಗಳಿವೆ. ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಇಲಾಖೆ ಹಾಗೂ ಇತರೇ ಏಜೆನ್ಸಿಗಳು ಈಗಾಗಲೇ ದೇವಿಂದರ್ ಅವರ ಬ್ಯಾಂಕ್ ಅಕೌಂಟ್ ಗಳ ಪರಿಶೀಲನೆಯನ್ನು ನಡೆಸಿದ್ದು ಯಾವುದಾದರೂ ಶಂಕಾಸ್ಪದ ಹಣಕಾಸಿನ ವ್ಯವಹಾರಗಳು ನಡೆದಿವೆಯೋ ಎಂಬ ಪರಿಶೀಲನೆಯನ್ನೂ ಸಹ ನಡೆಸಿವೆ. ಆದರೆ ದೇವಿಂದರ್ ಸಿಂಗ್ ಅವರ ಮನೆಯಲ್ಲಿ ಸಿಕ್ಕಿದ 7.5 ಲಕ್ಷ ರೂಪಾಯಿ ಹಣದ ಮೂಲ ಮಾತ್ರ ಇದುವರೆಗೂ ಪತ್ತೆಯಾಗಿಲ್ಲ.

ದೇವಿಂದರ್ ಜೊತೆ ಕಾರಿನಲ್ಲಿ ಸೆರೆ ಸಿಕ್ಕಿದ ಹಿಜ್ಬುಲ್ ಉಗ್ರ ನವೀದ್ ಬಾಬು ತಲೆಯ ಮೇಲೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಈಗಾಗಲೇ 20 ಲಕ್ಷ ರೂಪಾಯಿಗಳ ಬಹುಮಾನವನ್ನು ಘೋಷಿಸಿದ್ದರು. ಆದರೆ ಅತನನ್ನು ಬಂಧಿಸುವ ಬದಲು ದೇವಿಂದರ್ ಸಿಂಗ್ ಆತನನ್ನು ಸುರಕ್ಷಿತವಾಗಿ ದೆಹಲಿ ತಲುಪಿಸಲು ಆತನಿಂದ 12 ಲಕ್ಷ ರೂಪಾಯಿಗಳನ್ನು ಪಡೆದುಕೊಂಡಿರುವುದು ವಿಚಿತ್ರವಾಗಿದೆ.

Advertisement

ದೇವಿಂದರ್ ಈ ಮೊದಲು 1990ರಲ್ಲಿ ಪಾಕಿಸ್ಥಾನದ ಉಗ್ರ ಮಹಮ್ಮದ್ ಗೆ ಕಾಶ್ಮೀರದಿಂದ ದೆಹಲಿಗೆ ಸುರಕ್ಷಿತವಾಗಿ ಹೋಗಲು ಸಹಾಯ ಮಾಡಿದ್ದ. ಇದೇ ಮಹಮ್ಮದ್ ಬಳಿಕ 2001ರ ಸಂಸತ್ ಭವನದ ಮೇಲಿನ ದಾಳಿಯಲ್ಲಿ ಭದ್ರತಾ ಪಡೆಗಳ ಕೈಯಿಂದ ಹತನಾಗಿದ್ದ. ಮಾತ್ರವಲ್ಲದೇ ದೇವಿಂದರ್ 2005ರಲ್ಲಿ ಬಂಧನಕ್ಕೊಳಗಾಗಿದ್ದ ನಾಲ್ಕು ಜನ ಕಾಶ್ಮೀರಿ ಉಗ್ರರಿಗೂ ಸಹ ದೇವಿಂದರ್ ಸುರಕ್ಷಿತವಾಗಿ ಸಾಗಲು ಸಹಾಯ ಮಾಡಿದ್ದ ಎಂಬ ವಿಚಾರ ಇದೀಗ ಬೆಳಕಿಗೆ ಬಂದಿದೆ. ಇವರಲ್ಲಿ ಒಬ್ಬ ಉಗ್ರನಿಗೆ ವಯರ್ ಲೆಸ್ ಸೆಟ್, ಒಂದು ಪಿಸ್ತೂಲ್ ಹಾಗೂ ಸುರಕ್ಷಿತವಾಗಿ ಪಾರಾಗಲು ಅಗತ್ಯವಾಗಿದ್ದ ಶಿಫಾರಸು ಪತ್ರವನ್ನೂ ಸಹ ನೀಡಿದ್ದ ಎಂಬ ಮಾಹಿತಿ ಲಭಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next