Advertisement

ರಾಷ್ಟ್ರೀಯ ಹೆದ್ದಾರಿ ಚತುಷ್ಪಥ : 94.20 ಹೆಕ್ಟೇರ್‌ ಭೂಸ್ವಾಧೀನ

11:11 PM May 11, 2019 | Team Udayavani |

ಕಾಸರಗೋಡು: ಮಹತ್ವಾಕಾಂಕ್ಷೆಯ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಅಂಗವಾಗಿ ಕಾಸರಗೋಡು ಜಿಲ್ಲೆಯಲ್ಲಿ ಈಗಾಗಲೇ 94.20 ಹೆಕ್ಟೇರ್‌ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದೆ. ತಲಪಾಡಿಯಿಂದ ಕಾಲಿಕಡವಿನ ವರೆಗಿನ 87 ಕಿಲೋ ಮೀಟರ್‌ ನೀಳದಲ್ಲಿ 45 ಮೀಟರ್‌ ಅಗಲದಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ಅಭಿವೃದ್ಧಿಗೊಳಿಸಲು ಕೇಂದ್ರ ಸರಕಾರ ಮಹತ್ವದ ಯೋಜನೆಯನ್ನು ರೂಪಿಸಿದೆ.

Advertisement

ಇದರಂಗವಾಗಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ ಅಗತ್ಯವಾದ ಭೂ ಸ್ವಾಧೀನ ಪ್ರಕ್ರಿಯೆಯನ್ನು ರಾಜ್ಯ ಸರಕಾರ ಪೂರ್ತಿಗೊಳಿಸಿ ಕೇಂದ್ರ ಸರಕಾರಕ್ಕೆ ಹಸ್ತಾಂತರಿಸಬೇಕು. ಈ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಈಗಾಗಲೇ 94.20 ಹೆಕ್ಟೇರ್‌ಭೂಪ್ರದೇಶ ಸ್ವಾಧೀನ ಮಾಡಿಕೊಳ್ಳಲಾಗಿದೆ.

ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ ತೀರ್ಮಾನಿಸಲಾಗಿದ್ದ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಸಂಬಂಧಪಟ್ಟ ಅಧಿಕಾರಿಗಳು ಹೇಳುತ್ತಿದ್ದು, ಈ ಸಂಬಂಧ 3 ಡಿ ವಿಜ್ಞಾಪನೆಯನ್ನು ಹೊರಡಿಸಲಾಗಿದೆ. ಈ ಪೈಕಿ 43.28 ಹೆಕ್ಟೇರ್‌ಭೂಪ್ರದೇಶದ ನಷ್ಟಪರಿಹಾರ ನೀಡಲಿರುವ 3 ಜಿ ವಿಜ್ಞಾಪನೆಯನ್ನೂ ಹೊರಡಿಸಲಾಗಿದೆ. ಭೂಸ್ವಾಧೀನ ಮಾಡಿಕೊಂಡ ಸ್ಥಳದಲ್ಲಿರುವ 2500 ಕಟ್ಟಡಗಳನ್ನು ಪೂರ್ಣವಾಗಿಯೋ ಅಥವಾ ಭಾಗಿಕವಾಗಿಯೋ ತೆರವುಗೊಳಿಸಬೇಕಾಗುವುದು. ರಾಷ್ಟ್ರೀಯ ಹೆದ್ದಾರಿಯನ್ನು ಚತುಷ್ಪಥವಾಗಿ ಅಭಿವೃದ್ಧಿಪಡಿಸಲು 110 ಹೆಕ್ಟರ್‌ ಭೂಪ್ರದೇಶವನ್ನು ಸ್ವಾಧೀನ ಮಾಡಿಕೊಳ್ಳಬೇಕಾಗಿ ಬರಬಹುದೆಂದು ಆರಂಭದಲ್ಲಿ ಅಂದಾಜಿಸಲಾಗಿತ್ತು. ಆದರೆ ಸರ್ವೆಯ ಬಳಿಕ ಭೂಸ್ವಾಧೀನ ಪ್ರಮಾಣ ಕಡಿಮೆಯಾಗಿದೆ. ಸರ್ವೆ ಬಳಿಕ 94.20ಹೆಕ್ಟೇರ್‌ಭೂಪ್ರದೇಶ ಸ್ವಾಧೀನಗೊಳಿಸಬೇಕಾಯಿತು. ಸ್ವಾಧೀನ ಪಡಿಸಿಕೊಂಡ 22 ಹೆಕ್ಟರ್‌ ಪ್ರದೇಶ ಸರಕಾರದ್ದಾಗಿದೆ. ಉಳಿದ ಸ್ಥಳ ಖಾಸಗಿ ವ್ಯಕ್ತಿಗಳದ್ದು.

ಹೊಸದುರ್ಗ, ಕಾಸರಗೋಡು, ಮಂಜೇಶ್ವರ ತಾಲೂಕುಗಳ 33 ವಿಲೇಜ್‌ಗಳಿಗೆ ಸೇರಿದ ಭೂಸ್ವಾಧೀನ ಈಗಾಗಲೇ ಸಾಧ್ಯವಾಗಿದೆ. ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗಾಗಿ ಆರಾಧನಾಲಯಗಳು, ವ್ಯಾಪಾರ ಸಂಸ್ಥೆಗಳು ಸಹಿತ ಹಲವು ಕಟ್ಟಡಗಳನ್ನು ತೆರವುಗೊಳಿಸಬೇಕಾಗಿರುವುದರಿಂದ ಇದರ ವಿರುದ್ಧ ವ್ಯಾಪಕ ಪ್ರತಿಭಟನೆ ಈ ಹಿಂದೆ ವ್ಯಕ್ತವಾಗಿತ್ತು.

ನಷ್ಟ ಪರಿಹಾರ ಕುರಿತಾಗಿ ಈ ವರೆಗೂ ಸ್ಪಷ್ಟ ಖಚಿತತೆ ಲಭಿಸದ ಹಿನ್ನೆಲೆ ಕೂಡ ಪ್ರತಿಭಟನೆಗೆ ಕಾರಣವಾಗಿತ್ತು. ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ ಅಥೋರಿಟಿ ಮಂಜೂರು ಮಾಡುವ ನಷ್ಟ ಪರಿಹಾರ ಮೊತ್ತ ಇನ್ನೂ ಲಭಿಸದವರಿಗೆ ಶೀಘ್ರವೇ ನೀಡಲಾಗುವುದೆಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ. ಹದಿನೇಳು ಗ್ರಾಮಗಳಲ್ಲಾಗಿ 1546 ಮಂದಿಗೆ 365.3 ಕೋಟಿ ರೂ. ನಷ್ಟ ಪರಿಹಾರ ಮಂಜೂರು ಮಾಡಲಾಗಿತ್ತು. ಈ ಪೈಕಿ 1206 ಮಂದಿಗೆ 253.66 ಕೋಟಿ ರೂ. ನಷ್ಟ ಪರಿಹಾರವಾಗಿ ನೀಡಲಾಗಿದೆ. ಬಾಕಿ ಇರುವವರು ನಷ್ಟ ಪರಿಹಾರಕ್ಕಾಗಿ ಹಲವು ತಿಂಗಳ ಹಿಂದೆಯೇ ಅರ್ಜಿ ಸಲ್ಲಿಸಿದ್ದರೂ ಈ ವರೆಗೂ ಲಭಿಸಿಲ್ಲ ಎಂಬ ಆರೋಪ ವ್ಯಾಪಕವಾಗಿ ಕೇಳಿ ಬರುತ್ತಿದೆ. ಇವರಿಗೆ ಶೀಘ್ರವೇ ನಷ್ಟ ಪರಿಹಾರ ನೀಡಬೇಕೆಂಬ ಬೇಡಿಕೆ ತೀವ್ರಗೊಳ್ಳುತ್ತಿದೆ.

Advertisement

ಸಾರ್ವಜನಿಕರನ್ನು ಕಾಡುತ್ತಿರುವ ಪ್ರಶ್ನೆಗಳು.
ಭೂಸ್ವಾಧೀನದ ಹಿನ್ನೆಲೆಯಲ್ಲಿ ನಷ್ಟಪರಿಹಾರವಾಗಿ ನೀಡಬೇಕಾದ ಮೊತ್ತ ಮತ್ತು ಅದಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳು ಹೇಗೆ ನಡೆದಿವೆ ಮತ್ತು ಹೇಗೆ ನಡೆಯುತ್ತಿವೆ ಎಂಬ ಪ್ರಶ್ನೆ ಭೂ ಕಳೆದುಕೊಂಡವರಲ್ಲಿ ಸಹಜವಾಗಿ ಉದ್ಭವಿಸಿದೆ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಚೇರಿಗೆ ಇದರ ಮೊದಲು ಯಾವಾಗ ಹಣ ಬಂದಿತ್ತು ? ನಷ್ಟ ಪರಿಹಾರ ನೀಡಲು ಬಾಕಿ ಎಷ್ಟು ಫೈಲುಗಳಿವೆ ? ಅವುಗಳಲ್ಲಿ ಎಷ್ಟು ಶಿಫಾರಸು ಮಾಡಲಾಗಿದೆ ? ಯಾವಾಗ? ಶಿಫಾರಸು ಮಾಡಿದ ಫೈಲುಗಳಲ್ಲಿ ಎಷ್ಟು ಮಂಜೂರಾಗಿದೆ ? ಎಷ್ಟು ಹಣ ಸಂದಾಯವಾಗಿದೆ ?ಎಲ್ಲಾ ಕಾರ್ಯಗಳು ಮುಗಿಯಲು ಎಷ್ಟು ಸಮಯ ತಗಲಬಹುದು? ಈಗ ಇರುವ ಕಟ್ಟಡ ಮುರಿದ ಬಳಿಕ, ಉಳಿಯುವ ಸ್ಥಳದಲ್ಲಿ ಪುನ: ಕಟ್ಟಡ ಕಟ್ಟಲು ನಿಯಮಗಳಲ್ಲಿ ರಿಯಾಯಿತಿ ಇದೆಯೇ ? ಈಗ ಸ್ಥಳ/ಕಟ್ಟಡವನ್ನು ಸರಕಾರ ವಶಪಡಿಸಿಕೊಂಡ ಬಳಿಕ, ಉಳಿದ ಸ್ಥಳ ಅತ್ಯಲ್ಪವಾಗಿ, ಉಪಯೋಗಿಸಲಾರದ ಪರಿಸ್ಥಿತಿಯಲ್ಲಿ ಏನು ಪರಿಹಾರ ? ಸ್ಥಳ/ಕಟ್ಟಡವನ್ನು ವಶಪಡಿಸಲಾಗುವುದೆಂಬ ವಿಷಯದಿಂದ ಬಾಡಿಗೆದಾರರು ಈ ಮೊದಲೇ ಬಿಟ್ಟು ಹೋಗಿದ್ದು, ಮಾಲಕರಿಗೆ ಬಾಡಿಗೆ ನಷ್ಟವಾಗುತ್ತದೆ. ಇದಕ್ಕೇನು ಪರಿಹಾರ ? (ಸರಕಾರದ ವಿಳಂಬದ ಕಾರಣದಿಂದ ಈ ಸಮಸ್ಯೆ ಇನ್ನಷ್ಟು ಜಟಿಲ)

-ಪ್ರದೀಪ್‌ ಬೇಕಲ್‌

Advertisement

Udayavani is now on Telegram. Click here to join our channel and stay updated with the latest news.

Next