Advertisement

ಜಂಕ್ಷನ್‌ ಗೊಂದಲವೇ ಇಲ್ಲಿ ಹೆದ್ದಾರಿಯ ವಿಶೇಷ !

10:15 AM Sep 27, 2019 | mahesh |

ಬ್ರಹ್ಮಾವರ ಆಕಾಶವಾಣಿ, ಸಾಲಿಗ್ರಾಮಗಳಲ್ಲಿ ಇವು ಸದಾ ಅಪಘಾತ ತಾಣಗಳು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಉಡುಪಿಯಿಂದೀಚೆಗೆ ಕಾಣಿಸುವ ಸಮಸ್ಯೆಗಳು ಬ್ರಹ್ಮಾವರದಿಂದಾಚೆಗೂ ಮುಂದುವರಿದಿವೆ. ಜಂಕ್ಷನ್‌ಗಳಲ್ಲಿ ಪಾದಚಾರಿಗಳು, ವಾಹನ ಸವಾರರಿಗೆ ಗೊಂದಲ ನಿತ್ಯದ ಸಮಸ್ಯೆ. ಸರ್ವೀಸ್‌ ರಸ್ತೆಗಳು ಇಲ್ಲೂ ನೇರ್ಪಾಗಿಲ್ಲ. ಫ್ಲೈಓವರ್‌ಗಳು ಉಪಕಾರದ ಬದಲು ತೊಂದರೆಯನ್ನೇ ಸೃಷ್ಟಿಸಿವೆ. ಚತುಷ್ಪಥ ಹೊಸ ಹೆದ್ದಾರಿ ಪ್ರತಿದಿನದ ಬದುಕಿಗೆ ಇಲ್ಲೂ ಮುಳ್ಳಾಗಿದೆ.

Advertisement

ಉಡುಪಿ: ನೀವು ಫ್ಲೈ ಓವರ್‌ ಹತ್ತಿ ಇಳಿದರೆನ್ನಿ. ಎದುರಾಗುವುದೇ ಬ್ರಹ್ಮಾವರದ ಪ್ರಸಿದ್ಧ ಆಕಾಶವಾಣಿ ಜಂಕ್ಷನ್‌. ಇಕ್ಕಟ್ಟಿನಿಂದ ಕೂಡಿದ ಈ ಜಾಗದಲ್ಲಿ ಎಂಟು ರಸ್ತೆಗಳು ಸಂಧಿಸುತ್ತವೆ! ಇಲ್ಲಿನ ಮತ್ತೂಂದು ತೊಂದರೆ ಎಂದರೆ ಬಸ್‌ಗಳ ನಿಲುಗಡೆ. ಇಲ್ಲಿ ಬ್ರಹ್ಮಾವರದಿಂದ ಫ್ಲೈಓವರ್‌ನಲ್ಲಿ ಬಂದವರು ಬಲಕ್ಕೆ ತಿರುಗಿ ಬಾರಕೂರಿಗೆ ಹೋಗುತ್ತಾರೆ. ಸೀದಾ ಹೋಗುವವರು ಕುಂದಾಪುರ ತಲುಪುತ್ತಾರೆ. ಇದು ಚತುಷ್ಪಥವಾಗಿರುವುದ ರಿಂದ ನಾಲ್ಕು ರಸ್ತೆಗಳ ವಾಹನಗಳು ಬರುತ್ತವೆ. ಇದಕ್ಕೆ ಬಾರಕೂರಿನಿಂದ ಬರುವ ವಾಹನಗಳು ಮತ್ತು ಫ್ಲೈಓವರ್‌ಗೆ ಹೊಂದಿಕೊಂಡ ಸರ್ವಿಸ್‌ ರಸ್ತೆಯಲ್ಲಿ ಬರುವ ಸ್ಥಳೀಯ ವಾಹನಗಳೂ ಸೇರಿಕೊಳ್ಳುತ್ತವೆ. ಜತೆಗೆ ಕುಂದಾಪುರದಿಂದ ಬರುವ ಬಸ್‌ಗಳೂ ಫ್ಲೈ ಓವರ್‌ ಪಕ್ಕದಲ್ಲೇ ಪ್ರಯಾಣಿಕರನ್ನು ಇಳಿಸಿ ಬ್ರಹ್ಮಾವರ ಬಸ್‌ ನಿಲ್ದಾಣ ಪ್ರವೇಶಿಸುತ್ತವೆ. ಹಾಗಾಗಿ ಆಕಾಶ ವಾಣಿ ಜಂಕ್ಷನ್‌ನಲ್ಲಿ ವಾಹನಗಳ ದಟ್ಟಣೆ ಸದಾ ಹೆಚ್ಚು. ಇಲ್ಲಿ ವಾಹನಗಳ ನಡುವೆ ಸಂಘರ್ಷದ ಸ್ಥಿತಿ. ಬಸ್‌ ನಿಲ್ದಾಣ ಇರುವಲ್ಲಿ ಬಸ್‌ಗಳು ನಿಲ್ಲುವುದಿಲ್ಲ; ಪ್ರಯಾಣಿಕರೂ ಅತ್ತ ತೆರಳುವುದಿಲ್ಲ. ಬಸ್‌ಗಳು ಕೂಡ ಜಂಕ್ಷನ್‌ನಲ್ಲಿಯೇ ದ್ವಾರದ ಪಕ್ಕದಲ್ಲಿ ನಿಲ್ಲುತ್ತವೆ. “ಈ ಜಾಗವನ್ನು ವಿಸ್ತಾರಗೊಳಿಸಿ ವೃತ್ತ ನಿರ್ಮಿಸಿದರೆ ಮಾತ್ರ ಸಮಸ್ಯೆಗೆ ಪರಿಹಾರ’ ಎನ್ನುತ್ತಾರೆ ಸ್ಥಳೀಯ ವ್ಯಾಪಾರಿ ಉದಯ ಅವರು.

ಬ್ರಹ್ಮಾವರ ರಥಬೀದಿಗೆ ಹೋಗುವವರೂ ಇಲ್ಲಿಯೇ ರಸ್ತೆ ಆಯ್ಕೆ ಮಾಡಿಕೊಳ್ಳಬೇಕು. ಇದರಿಂದ ಯಾವಾಗಲೂ ಸಮಸ್ಯೆ ಇದ್ದದ್ದೇ. ಇಲ್ಲಿಯೂ ರಾಷ್ಟ್ರೀಯ ಹೆದ್ದಾರಿ ಇಲಾಖೆ ಹಾಗೂ ಕಾಮಗಾರಿ ನಿರ್ವಹಿಸಿದ ಕಂಪೆನಿಯವರು ಜನರ ನಿತ್ಯದ ಸಮಸ್ಯೆಗಳನ್ನು ಗಮನಿಸಿ ಪರಿಹಾರ ಹುಡುಕಬೇಕಿತ್ತು. ಆದರೆ ಅದಾಗಲಿಲ್ಲ. ಹಾಗಾಗಿ ಫ್ಲೈ ಓವರ್‌ ಕೆಳಗಿಳಿಯುವಾಗ (ಎರಡೂ ಕಡೆ-ಕುಂದಾಪುರದಿಂದ ಬ್ರಹ್ಮಾವರಕ್ಕೆ ಸೇರುವಲ್ಲಿ, ಉಡುಪಿಯಿಂದ ಬರುವವರಿಗೆ ಫ್ಲೈ ಓವರ್‌ ಮುಗಿದ ಕೂಡಲೇ) ಪೊಲೀಸರು ಇರಿಸಿರುವ ಬ್ಯಾರಿಕೇಡ್‌ಗಳು ಸ್ವಾಗತಿಸುತ್ತವೆ.

ಸಾಲಿಗ್ರಾಮ ಜಂಕ್ಷನ್‌

ದ್ವಿಚಕ್ರಿಗಳ “ಕಳ್ಳದಾರಿ’!
ಬ್ರಹ್ಮಾವರದಿಂದ ಕೋಟದವರೆಗೂ ಅಲ್ಲಲ್ಲಿ ರಸ್ತೆಯ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ನೀರು ಹರಿಯುವುದಕ್ಕಾಗಿ ಮೀಸಲಿಟ್ಟ ಜಾಗದಲ್ಲಿ ದ್ವಿಚಕ್ರ ವಾಹನಗಳು ನುಸುಳಿಕೊಂಡು ರಸ್ತೆ ದಾಟುತ್ತಿವೆ. ಇದು ಕೂಡ ಅಪಘಾತಗಳಿಗೆ ದಾರಿಯಾಗುತ್ತಿದೆ. ಈ ಹಿಂದೊಮ್ಮೆ ಸಾರ್ವಜನಿಕರ ಬೇಡಿಕೆಯಂತೆ ಈ ಕಳ್ಳದಾರಿಗೆ ಕಬ್ಬಿಣದ ಸರಳನ್ನು ಅಡ್ಡಲಾಗಿ ಇಡಲಾಗಿತ್ತು. ಆದರೆ ಹಲವೆಡೆ ಸರಳುಗಳನ್ನು ಕಿತ್ತು ತೆಗೆದು ದ್ವಿಚಕ್ರ ವಾಹನಗಳನ್ನು ನುಗ್ಗಿಸಲಾಗುತ್ತಿದೆ. ಇದರಲ್ಲಿ ಕೆಲವೆಡೆ ಶಾಲಾ ವಿದ್ಯಾರ್ಥಿಗಳು ಕೂಡ ತಮ್ಮ ಸೈಕಲ್‌ಗ‌ಳನ್ನೂ ನುಗ್ಗಿಸುತ್ತಿದ್ದಾರೆ.

Advertisement

ಭೂ ಸ್ವಾಧೀನವಾದರೂ ಕಾಮಗಾರಿಯಾಗಿಲ್ಲ!
ಸಾಲಿಗ್ರಾಮದ ಜಂಕ್ಷನ್‌ ನಿತ್ಯ ಅಪಘಾತ ತಾಣವಾಗಿದೆ. ಇಲ್ಲಿ ಒಂದು ಬದಿ ಗುರುನರಸಿಂಹ ದೇವಸ್ಥಾನ, ಇನ್ನೊಂದು ಬದಿ ಆಂಜನೇಯ ದೇವಸ್ಥಾನವಿದೆ. ಇಲ್ಲಿನ ಹೆದ್ದಾರಿಯೇ ತಿರುವಿನಿಂದ ಕೂಡಿದೆ. ಜಂಕ್ಷನ್‌ನಲ್ಲಿ ವಾಹನ ತಿರುಗಿಸುವವರಿಗೆ ಹೆದ್ದಾರಿಯಲ್ಲಿ ಬರುವ ವಾಹನಗಳು ಕಾಣಿಸುತ್ತಿಲ್ಲ. ಇಲ್ಲಿ ಇಕ್ಕೆಲಗಳಲ್ಲಿಯೂ ಸರ್ವೀಸ್‌ ರಸ್ತೆ ನಿರ್ಮಾಣಕ್ಕೆ ಭೂ ಸ್ವಾಧೀನವಾಗಿದೆ. ಆದರೆ ರಸ್ತೆ ನಿರ್ಮಾಣಗೊಂಡಿಲ್ಲ. ಹಾಗಾಗಿ ವಿರುದ್ಧ ದಿಕ್ಕಿನ ಸಂಚಾರ. ಕಾರ್ಕಡ ಕ್ರಾಸ್‌ನಿಂದ ಮೀನು ಮಾರುಕಟ್ಟೆಯವರೆ ಗಾದರೂ ಸರ್ವೀಸ್‌ ರಸ್ತೆ ಬೇಕು ಎನ್ನುವುದು ಸ್ಥಳೀಯರ ಬೇಡಿಕೆ. 50 ಮೀ. ಸಾಗುವ ಬದಲು 2.5 ಕಿ.ಮೀ. ಸುತ್ತುವರಿದು ಬರುವ ಅನಿವಾರ್ಯ ಇಲ್ಲಿನವರದು. ಕೋಟದಲ್ಲೂ ಸರ್ವೀಸ್‌ ರಸ್ತೆಯ ಬೇಡಿಕೆ ಈಡೇರಿಲ್ಲ.

ಬ್ಯಾರಿಕೇಡ್‌
ತೆಕ್ಕಟ್ಟೆಯಿಂದ ಮುಂದೆ ಹೆದ್ದಾರಿಯಲ್ಲಿ ಹೊಂಡಗುಂಡಿಗಳಿಲ್ಲದೆ ಸ್ವಲ್ಪ ನಿರಾಳವಾಗಿ ಬರಬಹುದು. ತೆಕ್ಕಟ್ಟೆ, ಕುಂಭಾಶಿ, ಕೋಟೇಶ್ವರ, ಹಂಗಳೂರು, ಸರ್ಜನ್‌ ಆಸ್ಪತ್ರೆ ಬಳಿ, ದುರ್ಗಾಂಬಾ ಬಳಿ ಎಂದು ಒಟ್ಟು 6 ಕಡೆ ಬ್ಯಾರಿಕೇಡ್‌ ಇಡಲಾಗಿದೆ. ಬೀಜಾಡಿಯಿಂದ ಕೋಟೇಶ್ವರವರೆಗೆ ಸರ್ವಿಸ್‌ ರಸ್ತೆಯ ಬೇಡಿಕೆ ಇದ್ದರೂ ಸತತ ಹೋರಾಟದ ಬಳಿಕ ಒಂದು ಕಡೆ ಮಾತ್ರ ರಚನೆಯಾಗಿದೆ. ಕೋಟೇಶ್ವರದಿಂದ ಸಂಗಮ್‌ವರೆಗೆ ಇಕ್ಕೆಲಗಳಲ್ಲಿ ಸರ್ವಿಸ್‌ ರಸ್ತೆ ಆಗಿದೆ. ಆದರೆ ಕುಂದಾಪುರ ಪೇಟೆಯ ಪ್ರವೇಶ ಸುಲಭದಲ್ಲಿ ತಿಳಿಯುವುದೇ ಹೆದ್ದಾರಿ ಮುಗಿಯುವ ಮೂಲಕ.

ಸಾಲಿಗ್ರಾಮದಲ್ಲಿ ಸರ್ವೀಸ್‌ ರಸ್ತೆ
ಇಲ್ಲದಿರುವುದು, ಹೆದ್ದಾರಿ ತಿರುವಿನಿಂದ ಕೂಡಿರುವುದು, ಅಗತ್ಯ ಸ್ಥಳಗಳಲ್ಲಿ ಡೈವರ್ಷನ್‌ಗಳನ್ನು ನೀಡದಿರುವುದರಿಂದ ಸಮಸ್ಯೆಯಾಗಿದೆ. ರಿಕ್ಷಾವನ್ನು ದೂರದಿಂದ ತಿರುಗಿಸಿ ಬರೋಣವೆಂದು ಹೋದರೆ ಪ್ರಯಾಣಿಕರು ಅರ್ಧದಲ್ಲೇ ಇಳಿದು ಆಚೆ ಬದಿಗೆ ನಡೆದುಕೊಂಡು ಹೋಗುತ್ತಾರೆ. ನಾವು ಮಾತ್ರ ವಾಪಸಾಗುವಾಗ ಸುತ್ತು ಬಳಸಿ ಬರಬೇಕು. ನಮಗೆ ನಷ್ಟ. ಸಾಸ್ತಾನ ಟೋಲ್‌ಗೇಟ್‌ ಸಮೀಪ ಡೈವರ್ಷನ್‌ ಅಗತ್ಯವಿರಲಿಲ್ಲ. ಸಾಲಿಗ್ರಾಮ ಜಂಕ್ಷನ್‌ನಲ್ಲಿ 8 ರಸ್ತೆಗಳು ಸಂಧಿಸುತ್ತವೆ. ಈ ರಸ್ತೆ ನಿರ್ಮಾಣವಾದ ಮೇಲೆ ಹಲವು ಮಂದಿ ಅಪಘಾತಕ್ಕೆ ಬಲಿಯಾಗಿದ್ದಾರೆ.
-ರಾಘವೇಂದ್ರ, ರಿಕ್ಷಾ ಚಾಲಕರು, ಸಾಲಿಗ್ರಾಮ

ನೀವೂ ಸಮಸ್ಯೆ ತಿಳಿಸಿ
ಉಡುಪಿ ಜಿಲ್ಲೆಯಲ್ಲಿ ಹಾದು ಹೋಗುವ ರಾ.ಹೆ. 66ರಲ್ಲಿ ಹೆಚ್ಚುತ್ತಿರುವ ಅಪಘಾತಗಳು ಕೊನೆಯಾಗಬೇಕೆನ್ನು ವುದು ಉದಯವಾಣಿ ಕಾಳಜಿ. ಈ ರಾಷ್ಟ್ರೀಯ ಹೆದ್ದಾರಿಗೆ ಸಂಬಂಧಿಸಿದ ನಿಮ್ಮ ಸಲಹೆ- ಅಭಿಪ್ರಾಯ, ಸಮಸ್ಯೆಯನ್ನು 9632369999 ಈ ಸಂಖ್ಯೆಗೆ ಫೋಟೋ ಸಮೇತ ವಾಟ್ಸಾಪ್‌ ಮಾಡಿ.

Advertisement

Udayavani is now on Telegram. Click here to join our channel and stay updated with the latest news.

Next