ಮಡಿಕೇರಿ: ಚಾಲನೆಯಲ್ಲಿದ್ದ ಹಿಟ್ಟಿನ ಗಿರಣಿ ಬೆಲ್ಟ್ಗೆ ಆಕಸ್ಮಿಕವಾಗಿ ತಾಯಿಯ ತಲೆ ಸಿಲುಕಿದಾಗ ಸಮಯ ಪ್ರಜ್ಞೆ ಮೆರೆದು ಪ್ರಾಣ ಉಳಿಸಿದ ಒಂಬತ್ತು ವರ್ಷದ ಬಾಲಕ ದೀಕ್ಷಿತ್ 2022-23ನೇ ಸಾಲಿನ ರಾಷ್ಟ್ರೀಯ ಶೌರ್ಯ ಪ್ರಶಸ್ತಿಗೆ ಪಾತ್ರನಾಗಿದ್ದಾನೆ.
ದೀಕ್ಷಿತ್ ತಾಯಿ ಅರ್ಪಿತಾ ಕೂಡೂರು ಗ್ರಾಮದ ಹಿಟ್ಟಿನ ಗಿರಣಿಯಲ್ಲಿ ಅಕ್ಕಿ ಪುಡಿ ಮಾಡಿಸುತ್ತಿದ್ದ ಸಂದರ್ಭ ಆಕಸ್ಮಿಕವಾಗಿ ಗಿರಣಿಯ ಬೆಲ್ಟ್ಗೆ ಅವರ ತಲೆ ಸಿಲುಕಿಕೊಂಡು ಜೋರಾಗಿ ಕಿರುಚಿಕೊಂಡರು. ಪಕ್ಕದಲ್ಲೇ ಆಟವಾಡುತ್ತಿದ್ದ ಬಾಲಕ ತಾಯಿಯ ಕೂಗು ಕೇಳಿಸಿಕೊಂಡು ಓಡಿ ಬಂದು ಗಿರಣಿಯ ವಿದ್ಯುತ್ ಸರಬರಾಜಿನ ಸ್ವಿಚ್ ಆಫ್ ಮಾಡುವ ಮೂಲಕ ಸಮಯ ಪ್ರಜ್ಞೆ ಮೆರೆದು ತಾಯಿಯನ್ನು ಪಾರು ಮಾಡಿದ್ದನು.
ದಿಲ್ಲಿಯಲ್ಲಿ ಜ. 26ರಂದು ಗಣರಾಜ್ಯೋತ್ಸವ ಅಂಗವಾಗಿ ನಡೆಯಲಿರುವ 2022-23ನೇ ಸಾಲಿನ ರಾಷ್ಟ್ರೀಯ ಶೌರ್ಯ ಪ್ರಶಸ್ತಿ ವಿತರಣ ಸಮಾರಂಭದಲ್ಲಿ ದೀಕ್ಷಿತ್ ರಾಷ್ಟ್ರೀಯ ಶೌರ್ಯ ಪ್ರಶಸ್ತಿ ಸ್ವೀಕರಿಸಲಿದ್ದಾನೆ ಎಂದು ಪೋಷಕರು ತಿಳಿಸಿದ್ದಾರೆ. ಈತ ಇಲ್ಲಿನ ಕೂಡೂರು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 3ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾನೆ.
ಇದನ್ನೂ ಓದಿ: ಧರ್ಮಸ್ಥಳದ ಗೋಶಾಲೆಗೆ 5 ಪುಂಗನೂರು ಹಸುಗಳ ಆಗಮನ