Advertisement

ಹುಣಸೂರು: ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ

08:58 AM Sep 12, 2022 | Team Udayavani |

ಹುಣಸೂರು: ಅರಣ್ಯ-ವನ್ಯಜೀವಿ ಸಂರಕ್ಷಣೆಯಲ್ಲಿ, ದೇಶದ ರಕ್ಷಣೆಯಲ್ಲಿ ಸೈನಿಕರಂತೆ ಅರಣ್ಯ ಸಿಬ್ಬಂದಿಗಳು ಸರಿಸಮಾನವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಅರಣ್ಯ ಸಿಬ್ಬಂದಿಗಳು ಪ್ರಾಣದ ಹಂಗನ್ನು ತೊರೆದು ನಿರ್ಭೀತಿಯಿಂದ ಕಾರ್ಯನಿರ್ವಹಿಸುತ್ತಿದ್ದಾರೆಂದು ಎಂಟನೇ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮೋಹನ್‌ಕುಮಾರ್ ಬಿ. ಪಾಟೀಲ್ ಪ್ರಶಂಸಿಸಿದರು.

Advertisement

ಅರಣ್ಯ ಇಲಾಖೆ ವತಿಯಿಂದ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಕಚೇರಿ ಆವರಣದಲ್ಲಿ ರಾಷ್ಟ್ರೀಯ ಹುತಾತ್ಮರ ದಿನಾಚರಣೆ ಅಂಗವಾಗಿ ನ್ಯಾಯಾಧೀಶರು, ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಹುತಾತ್ಮರ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿದ ಬಳಿಕ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ಅರಣ್ಯ ನಾಶವಾಗಿದ್ದರ ಪರಿಣಾಮ ಹವಾಮಾನ ವೈಪರಿತ್ಯದಿಂದ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದೇವೆ. ಮುಂದಿನ ಪೀಳಿಗೆಗೂ ತೊಂದರೆಯಾಗಲಿದ್ದು, ಅರಣ್ಯ ಮತ್ತು ವನ್ಯಜೀವಿ ಸಂಪತ್ತನ್ನು ರಕ್ಷಿಸುವ ಕೆಲಸ ಎಲ್ಲರದ್ದಾಗಲೆಂದು ಆಶಿಸಿ, ಸುಪ್ರಿಂಕೋರ್ಟ್ ಅರಣ್ಯ ಮತ್ತು ಪರಿಸರ ಸಂರಕ್ಷಣೆಗಾಗಿ ಸಾಮಾಜಿಕ ಅರಣ್ಯ, ಬಫರ್ ಜೋನ್ ಸೇರಿದಂತೆ ಒತ್ತುವರಿಯಿಂದ ಅರಣ್ಯವನ್ನು ಸಂರಕ್ಷಿಸಲು ಕ್ರಮ ವಹಿಸಿದೆ ಎಂದರು.

ಹುಣಸೂರು ಎಸಿಎಫ್ ದಯಾನಂದ ಡಿ.ಎಸ್. ಹುತಾತ್ಮರ ದಿನಾಚರಣೆ ಕುರಿತು ಮಾತನಾಡಿ, ಕಾಡುಗಳ್ಳ ವೀರಪ್ಪನ್‌ನಿಂದ 1991ರ ನ.10 ರಂದು ಡಿ.ಸಿ.ಎಫ್. ಶ್ರೀನಿವಾಸನ್ ಹತ್ಯೆಯಾದ ದಿನವನ್ನು ರಾಜ್ಯದಲ್ಲಿ ಅರಣ್ಯ ಹುತಾತ್ಮರ ದಿನವನ್ನಾಗಿ ಆಚರಿಸಲಾಗುತ್ತಿತ್ತು, 1730, ಸೆ.11 ರಂದು ರಾಜಸ್ಥಾನದ ಜೋಧ್‌ಪುರದ ಮಹಾರಾಜ ಅಭಯಸಿಂಗ್ ತನ್ನ ಹೊಸ ಅರಮನೆ ನಿರ್ಮಾಣಕ್ಕಾಗಿ ಸೈನಿಕರು ಕೆಜರಾಲಿ ಎಂಬ ಗ್ರಾಮದಲ್ಲಿ ಬನ್ನಿ(ಕೆಜರಿ) ಮರಗಳನ್ನು ಕಡಿಯಲು ವಿರೋದಿಸಿದ 360 ಬುಡಕಟ್ಟು ಮಂದಿ ಅರಣ್ಯ ರಕ್ಷಣೆಗಾಗಿ ಪ್ರಾಣ ತ್ಯಾಗ ಮಾಡಿ ರಕ್ಷಣೆ ಮಾಡಿದ ಧ್ಯೋತಕವಾಗಿ ಭಾರತ ಸರಕಾರದ ನಿರ್ದೇಶನದಂತೆ ಪ್ರತಿ ವರ್ಷ ಸೆ.11 ರಾಷ್ಟ್ರೀಯ ಅರಣ್ಯ ಹುತಾತ್ಮರದಿನವನ್ನಾಗಿ ಆಚರಿಸಲಾಗುತ್ತಿದೆ ಎಂದರು.

ನಾಗರಹೊಳೆ ಉದ್ಯಾನದ ನಿರ್ದೇಶಕರಾಗಿದ್ದ ಆದರ್ಶ ವ್ಯಕ್ತಿತ್ವದ ಡಾ.ಎಸ್. ಮಣಿಕಂದನ್ 2018 ಮಾ.3 ರಂದು ಕರ್ತವ್ಯದ ಸಂದರ್ಭದಲ್ಲೇ ಕಾಡಾನೆ ದಾಳಿಗೆ ಸಿಲುಕಿ ಬಲಿಯಾದರು. ಅದೇ ರೀತಿ 2020 ಡಿ.24 ರಂದು ನಾಗರಹೊಳೆ ವನ್ಯಜೀವಿ ವಲಯದ ಕ್ಷೇಮಾಭಿವೃದ್ದಿ ನೌಕರ ಟಿ. ಗುರುರಾಜ್ ಸಹ ಆನೆ ದಾಳಿಗೆ ಬಲಿಯಾಗಿದ್ದನ್ನು ಸ್ಮರಿಸಿ, 1966 ರಿಂದ ಈವರೆಗೆ ರಾಜ್ಯಾದ್ಯಂತ ಒಟ್ಟು 54 ಮಂದಿ ಹುತಾತ್ಮರಾಗಿದ್ದಾರೆ. ಅವರ ಕರ್ತವ್ಯವನ್ನು ಸ್ಮರಿಸುವುದು ನಮ್ಮೆಲ್ಲರದಾಗಿದೆ ಎಂದರು.

ಎಸಿಎಫ್ ರಂಗಸ್ವಾಮಿ ಈ ತನಕ ಹುತಾತ್ಮರಾದ 54 ಮಂದಿ ಅರಣ್ಯಾಧಿಕಾರಿ ಹಾಗೂ ಸಿಬ್ಬಂದಿಗಳ ಸೇವೆಯನ್ನು ಸ್ಮರಿಸಿದರು.

Advertisement

ಮೈಸೂರು ಸಶಸ್ತ್ರ ಮೀಸಲು ಪಡೆಯ ಬ್ಯಾಂಡ್‌  ಮಾಸ್ಟರ್ ವಸಂತ ಕುಮಾರ್, ಪೆರೆಡ್‌ ಕಮಾಂಡರ್ ಐದೊಡ್ಡಿ ಮಹದೇವ್ ನೇತೃತ್ವದ ಕವಾಯತು ತಂಡ ಮೂರು ಸುತ್ತು ಕುಶಲ ತೋಪು  ಹಾರಿಸಿ ಗೌರವ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಉಪವಿಭಾಗಾಕಾರಿ ವರ್ಣಿತ್‌ ನೇಗಿ, ಪ್ರಭಾರ ಡಿಸಿಎಫ್ ಡಾ.ವಿ. ಕರಿಕಾಳನ್, ಎಸಿಎಫ್ ಅನುಷಾ, ಆರ್‌ಎಫ್‌ಓ. ಗಿರೀಶ್‌ ಚೌಗುಲೆ ಹಾಗೂ ಪ್ರತಿ ವಿಭಾಗದಿಂದ ಹುತಾತ್ಮರ ಸ್ಮಾರಕಕ್ಕೆ ಪುಷ್ಪ ಗುಚ್ಚವಿರಿಸಿ ಗೌರವ ಸಲ್ಲಿಸಿದರು.

ಆರ್.ಎಫ್.ಓ.ಗಳಾದ ಸಿದ್ದರಾಜು, ಹನುಮಂತರಾಜು, ನಮನ್‌ ನಾರಾಯಣ್ ನಾಯಕ್, ರತನ್‌ ಕುಮಾರ್, ಮಧು, ಕಿರಣ್‌ಕುಮಾರ್ ಸೇರಿದಂತೆ ಸಿಬ್ಬಂದಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next