Advertisement

ಬಡವರ-ರೈತರಿಗೆ ಆಶಾಕಿರಣವಾದ “ನರೇಗಾ’

10:12 AM May 11, 2021 | Team Udayavani |

ವರದಿ: ಕೇಶವ ಆದಿ

Advertisement

ಬೆಳಗಾವಿ: ಕೊರೊನಾ ಎರಡನೇ ಅಲೆ ರೈತ ಸಮುದಾಯ ಹಾಗೂ ಬಡ ಕಾರ್ಮಿಕ ಕುಟುಂಬಗಳ ಮೇಲೆ ಮತ್ತೆ ಕಾರ್ಮೋಡ ಕವಿಯುವಂತೆ ಮಾಡಿದೆ. ಒಂದು ಕಡೆ ಸೋಂಕಿನ ತೀವ್ರತೆ ಮತ್ತೂಂದು ಕಡೆ ಕೈಯಲ್ಲಿದ್ದ ಬೆಳೆದ ಬೆಳೆ ಮಾರುಕಟ್ಟೆಗೆ ತೆಗೆದುಕೊಂಡು ಹೋಗಲಾರದೆ ಬಹಳ ನಷ್ಟ ಅನುಭವಿಸಿರುವ ಬಡ ವರ್ಗದ ಜನರ ದಿಕ್ಕುತಪ್ಪಿಸಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆ ಬಡವರ ಅದರಲ್ಲೂ ರೈತ ಸಮುದಾಯದ ಪಾಲಿಗೆ ಹೊಸ ಆಶಾಕಿರಣವಾಗಿ ಬಂದಿದೆ.

ಕೊರೊನಾದ ಈ ಸಂಕಷ್ಟದಲ್ಲಿ ಜಿಲ್ಲೆಯ ಗ್ರಾಮೀಣ ಪ್ರದೇಶದ ಜನರು ಯಾವುದೇ ಕಾರಣಕ್ಕೂ ಕೂಲಿ ಕೆಲಸಕ್ಕಾಗಿ ಬೇರೆಡೆ ವಲಸೆ ಹೋಗಬಾರದು. ಸಾಧ್ಯವಾದಷ್ಟು ಅವರಿಗೆ ಇಲ್ಲೇ ಉದ್ಯೋಗ ನೀಡಬೇಕೆಂಬ ಆಲೋಚನೆಯೊಂದಿಗೆ ಕಾರ್ಯಕ್ಕಿಳಿದ ಜಿಲ್ಲಾ ಪಂಚಾಯಿತಿ ಹಾಗೂ ಕೃಷಿ ಇಲಾಖೆಗೆ ನಿರೀಕ್ಷಿಸಿದಂತೆ ಉತ್ತಮ ಸ್ಪಂದನೆ ಸಿಕ್ಕಿದೆ. ವ್ಯರ್ಥವಾಗಿ ಹರಿದು ಹೋಗುವ ಮಳೆ ನೀರನ್ನು ತಡೆದು ಇಂಗಿಸುವುದರಿಂದ ಸುತ್ತಲಿನ ತೆರೆದಬಾವಿ, ಕೊಳವೆಬಾವಿಗಳು ಮರು ಜೀವ ಪಡೆಯುತ್ತವೆ. ಕೃಷಿ ಚಟುವಟಿಕೆಗಳಿಗೆ ನೀರಿನ ಲಭ್ಯತೆ ಉಂಟಾಗುತ್ತದೆ. ಈ ಹಿನ್ನೆಲೆಯಲ್ಲಿ 2020-21ನೇ ಸಾಲಿನಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಸುಮಾರು 12 ಲಕ್ಷ ಮಾನವ ದಿನಗಳನ್ನು ಸೃಷ್ಟಿಸಲಾಗಿದೆ.

ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಕೃಷಿ ಹೊಂಡ, ಬದುವುಗಳ ನಿರ್ಮಾಣ, ಜಲಸಂಗ್ರಹ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಕೊರೊನಾದ ಆತಂಕದ ಈ ದಿನಗಳಲ್ಲಿ ನಗರ ಪ್ರದೇಶಗಳಿಂದ ತಮ್ಮ ಹಳ್ಳಿಗಳಿಗೆ ಬಂದ ಜನರಿಗೆ ಇಲ್ಲಿಯೇ ಉದ್ಯೋಗ ನೀಡಲು ಆದ್ಯತೆ ನೀಡಲಾಗಿದೆ. ಇದರಿಂದ ವಲಸೆ ಹೋಗುವುದು ನಿಂತಿದೆ. ಗ್ರಾಮಗಳ ಜನರು ಇದರಲ್ಲಿ ಸಕ್ರಿಯವಾಗಿ ತೊಡಗಿದ್ದಾರೆ. ಈಗ 17 ಸಾವಿರಕ್ಕೂ ಹೆಚ್ಚು ಕಾರ್ಮಿಕರು, ರೈತರು ಇದರಲ್ಲಿ ಕೆಲಸ ಮಾಡುತ್ತಿದ್ದಾರೆಂಬುದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ಹೇಳಿಕೆ. 2016-17ನೇ ಸಾಲಿನಲ್ಲಿ ವೈಜ್ಞಾನಿಕ ತಳಹದಿ ಮೇಲೆ ಉದ್ಯೋಗ ಖಾತ್ರಿ ಯೋಜನೆಯಡಿ ಬೆಳಗಾವಿ ಜಿಲ್ಲೆಯಲ್ಲಿ ಆರಂಭಿಸಲಾದ “ಜಲಾಮೃತ’ ಹೆಸರಿನ ಯೋಜನೆ ಬಹಳ ಪರಿಣಾಮ ಬೀರಿದೆ.

ಆಗ ಕೃಷಿ ಇಲಾಖೆಯನ್ನು ಯೋಜನೆಯ ನೋಡಲ್‌ ಇಲಾಖೆ ಎಂದು ಗುರುತಿಸಲಾಗಿತ್ತು. ಇದಕ್ಕೆ ಮೊದಲು ದಿಬ್ಬದಿಂದ ಕಣಿವೆ ಯೋಜನೆ ಎಂಬ ಹೆಸರಿತ್ತು. ನಂತರ ಬದಲಾದ ಈ ಯೋಜನೆ ರೈತರಿಗೆ ಅನುಕೂಲ ಮಾಡಿಕೊಟ್ಟಿದ್ದಷ್ಟೇ ಅಲ್ಲ ಜಿಲ್ಲೆಗೆ 2016-17ನೇ ಸಾಲಿನಲ್ಲಿ ರಾಷ್ಟ್ರಮಟ್ಟದ ಪ್ರಶಸ್ತಿ ತಂದು ಕೊಟ್ಟಿತು ಎನ್ನುತ್ತಾರೆ ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ ಮನೋಹರಗೌಡ ಎಸ್‌. ಈ ಯೋಜನೆಯಡಿ ಮುಖ್ಯವಾಗಿ ಕ್ಷೇತ್ರ ಬದು, ಕೃಷಿ ಹೊಂಡ, ತೋಟಗಾರಿಕೆ ಕೃಷಿ ಅರಣ್ಯೀಕರಣ ಚಟುವಟಿಕೆ ಕೈಗೊಳ್ಳಲಾಯಿತು.

Advertisement

ಇದರಲ್ಲಿ ಮಣ್ಣು-ನೀರು ಸಂರಕ್ಷಣಾ ಕಾಮಗಾರಿಗಳಿಗೆ ಹೆಚ್ಚು ಒತ್ತು ನೀಡಲಾಯಿತು. 2020-21ನೇ ಸಾಲಿನಲ್ಲಿ ಕೃಷಿ-ಜಲಾನಯನ ಅಭಿವೃದ್ಧಿ ಇಲಾಖೆ ಮೂಲಕ ಅನುಷ್ಠಾನ ಮಾಡಿದ ಕಾರ್ಯಕ್ರಮದಲ್ಲಿ ಬೆಳಗಾವಿ ಜಿಲ್ಲೆ ರಾಜ್ಯದಲ್ಲೇ ಅತೀ ಹೆಚ್ಚು ಅಂದರೆ 1186870 ಮಾನವ ದಿನಗಳನ್ನು ಸೃಜನೆ ಮಾಡಿದ ಹೆಗ್ಗಳಿಕೆ ಪಡೆಯಿತು. ಪರಿಣಾಮಕಾರಿಯಾದ ಕೃಷಿಹೊಂಡ: ಜಿಲ್ಲೆಯಲ್ಲಿ ಕಳೆದ ಸಾಲಿನಲ್ಲಿ 1918 ಕೃಷಿ ಹೊಂಡಗಳ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು. ಅದರಂತೆ ಮಾರ್ಚ ಅಂತ್ಯದವರೆಗೆ 848 ಕೃಷಿ ಹೊಂಡಗಳ ಕಾಮಗಾರಿ ಪೂರ್ಣಗೊಂಡಿದ್ದರೆ 398 ಕಾಮಗಾರಿಗಳು ಪ್ರಗತಿಯಲ್ಲಿದ್ದವು.

ಈ ಕಾಮಗಾರಿಗಳಿಗೆ 3543 ಕಾರ್ಮಿಕರನ್ನು ಬಳಸಿಕೊಳ್ಳಲಾಗಿದೆ. ಅದೇ ರೀತಿ 4887 ಬದು ನಿರ್ಮಾಣ ಕಾಮಗಾರಿ ಕೈಗೊಂಡಿದ್ದು, ಅದರಲ್ಲಿ ಈಗಾಗಲೇ 2450 ಕಾಮಗಾರಿಗಳು ಪೂರ್ಣಗೊಂಡಿವೆ. ಇದಕ್ಕಾಗಿ 1600 ಕ್ಕೂ ಹೆಚ್ಚು ಕಾರ್ಮಿಕರನ್ನು ಬಳಸಿಕೊಳ್ಳಲಾಗಿದೆ. ಅಥಣಿ ತಾಲೂಕಿನಲ್ಲಿ 180, ಬೆಳಗಾವಿಯಲ್ಲಿ 120, ಬೈಲಹೊಂಗಲದಲ್ಲಿ 22, ಚಿಕ್ಕೋಡಿಯಲ್ಲಿ 170, ಗೋಕಾಕದಲ್ಲಿ 140, ಹುಕ್ಕೇರಿಯಲ್ಲಿ 79, ಕಾಗವಾಡದಲ್ಲಿ ಆರು, ಖಾನಾಪುರದಲ್ಲಿ 28, ಕಿತ್ತೂರು ತಾಲೂಕಿನಲ್ಲಿ 32, ಮೂಡಲಗಿಯಲ್ಲಿ 244, ನಿಪ್ಪಾಣಿಯಲ್ಲಿ 32, ರಾಯಬಾಗದಲ್ಲಿ 560 ರಾಮದುರ್ಗ ತಾಲೂಕಿನಲ್ಲಿ 54 ಹಾಗೂ ಸವದತ್ತಿ ತಾಲೂಕಿನಲ್ಲಿ 251 ಕೃಷಿ ಹೊಂಡ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಅದೇ ರೀತಿ ಅಥಣಿ ತಾಲೂಕಿನಲ್ಲಿ 831, ಬೆಳಗಾವಿಯಲ್ಲಿ 590, ಬೈಲಹೊಂಗಲದಲ್ಲಿ 992,ಚಿಕ್ಕೋಡಿಯಲ್ಲಿ 110, ಗೋಕಾಕದಲ್ಲಿ 35, ಹುಕ್ಕೇರಿಯಲ್ಲಿ 614, ಕಾಗವಾಡದಲ್ಲಿ ಎಂಟು, ಖಾನಾಪುರದಲ್ಲಿ 32, ಕಿತ್ತೂರು ತಾಲೂಕಿನಲ್ಲಿ 34, ಮೂಡಲಗಿಯಲ್ಲಿ 12, ನಿಪ್ಪಾಣಿಯಲ್ಲಿ 10, ರಾಯಬಾಗದಲ್ಲಿ 370 ರಾಮದುರ್ಗ ತಾಲೂಕಿನಲ್ಲಿ 470 ಹಾಗೂ ಸವದತ್ತಿ ತಾಲೂಕಿನಲ್ಲಿ 779 ಬದು ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿದೆ.

ಅಂತರ್ಜಲ ಹೆಚ್ಚಿಸುವ ನಿಟ್ಟಿನಲ್ಲಿ ಕೃಷಿ ಹೊಂಡಗಳು ಹಾಗೂ ಬದು ನಿರ್ಮಾಣ ಯೋಜನೆ ಬಹಳ ಉಪಯೋಗಕಾರಿಯಾಗಿದೆ. ಇದರಲ್ಲಿ ಎಲ್ಲ ರೈತರನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳಬೇಕು. ಆಗ ಇದರ ನಿರ್ವಹಣೆಯ ಸಮಸ್ಯೆ ಬರಲ್ಲ. ಇದಲ್ಲದೆ ಯೋಜನೆಗೆ ವೆಚ್ಚ ಮಾಡಿದ ಹಣವೂ ಸದುಪಯೋಗವಾಗುತ್ತದೆ ಎಂಬುದು ರೈತ ಮುಖಂಡರ ಅಭಿಪ್ರಾಯ.

Advertisement

Udayavani is now on Telegram. Click here to join our channel and stay updated with the latest news.

Next