Advertisement

ನಾರಾಯಣಗೌಡ ಪ್ರತ್ಯಕ್ಷ: ಪ್ರಶ್ನೆಗಳಿಗೆ ಇನ್ನೂ ಸಿಗದ ಉತ್ತರ

11:48 AM Feb 14, 2019 | Team Udayavani |

ಮಂಡ್ಯ: ಅನಾರೋಗ್ಯದ ನೆಪವನ್ನು ಮುಂದಿಟ್ಟು ಕೊಂಡು ಜೆಡಿಎಸ್‌ನ ವರಿಷ್ಠರು ಹಾಗೂ ನಾಯಕರ ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿದ್ದ ಕೆ.ಆರ್‌.ಪೇಟೆ ಕ್ಷೇತ್ರದ ಶಾಸಕ ಕೆ.ಸಿ.ನಾರಾಯಣ ಗೌಡರು ಇದೀಗ ಪ್ರತ್ಯಕ್ಷರಾಗಿದ್ದರೂ ಜೆಡಿಎಸ್‌ ಆಂತರಿಕ ವಲಯದಲ್ಲಿ ಶಾಸಕರ ನಡೆ ಹಲವು ರಾಜಕೀಯ ಅನುಮಾನಗಳನ್ನು ಹುಟ್ಟುಹಾಕಿದೆ.

Advertisement

ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳಿಗೆ ಮುಖ್ಯ ಮಂತ್ರಿಗಳು ಸಮರ್ಪಕ ಅನುದಾನ ನೀಡದಿರುವ ಬಗ್ಗೆ ಸಹಜವಾಗಿಯೇ ಅಸಮಾಧಾನಗೊಂಡಿದ್ದ ಕೆ.ಸಿ.ನಾರಾಯಣಗೌಡರು ಬಜೆಟ್‌ನಿಂದ ದೂರ ಉಳಿದಿದ್ದಾರೆ ಹಾಗೂ ಶಾಸಕರು ಆಪರೇಷನ್‌ ಕಮಲಕ್ಕೆ ಒಳಗಾಗಿ ಸದನಕ್ಕೆ ಗೈರು ಹಾಜರಾಗಿದ್ದಾರೆ ಎಂಬ ಆರೋಪವೂ ಅವರ ವಿರುದ್ಧ ಕೇಳಿ ಬಂದಿತ್ತು.

ಅತೃಪ್ತ ಕಾಂಗ್ರೆಸ್‌ ಶಾಸಕರು ಗೈರಾದ ದಿನದಿಂದ ನಾಪತ್ತೆಯಾಗಿದ್ದ ಜೆಡಿಎಸ್‌ ಶಾಸಕ ನಾರಾಯಣ ಗೌಡರು ಬಿಜೆಪಿಯ ಶಾಸಕರ ಕಾರ್ಯಾಚರಣೆ ಆಪರೇಷನ್‌ ಸ್ಥಗಿತಗೊಂಡ ದಿನವೇ ಎಲ್ಲರೆದುರು ಪ್ರತ್ಯಕ್ಷರಾಗಿರುವುದು ಆಪರೇಷನ್‌ ಕಮಲಕ್ಕೆ ಇವರೂ ಒಳಗಾಗಿದ್ದರೇ ಎಂಬ ಸಂಶಯಕ್ಕೆ ಪುಷ್ಠಿ ನೀಡಿದಂತಾಗಿದೆ.
 
ಶಾಸಕರ ಅಸಮಾಧಾನ: ಕೆ.ಆರ್‌.ಪೇಟೆ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳಿಗೆ ನಾರಾಯಣಗೌಡರು ಬಯಸಿದ್ದ 55 ಕೋಟಿ ರೂ.ಗಳಿಗೆ ಬದಲಾಗಿ 5 ಕೋಟಿ ರೂ. ಹಣವನ್ನು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಬಿಡುಗಡೆ ಮಾಡಿದ್ದರಿಂದ ಶಾಸಕರು ತೀವ್ರ ಬೇಸರಗೊಂಡಿದ್ದರು. ಅಲ್ಲದೆ, ತಾಲೂಕು ಆಡಳಿತದಲ್ಲಿ ಜೆಡಿಎಸ್‌ ನಾಯಕರ ಹಸ್ತಕ್ಷೇಪವೂ ಅಸಮಾಧಾನಕ್ಕೆ ಮತ್ತೂಂದು ಕಾರಣ ಎಂದೂ ಹೇಳಲಾಗಿತ್ತು. ಇದೇ ಕಾರಣಕ್ಕೆ ಶಾಸಕ ಕೆ.ಸಿ.ನಾರಾಯಣಗೌಡರು ಮುಂಬೈನಲ್ಲಿದ್ದ ಅತೃಪ್ತ ಶಾಸಕರ ಬಣವನ್ನು ಸೇರಿಕೊಂಡಿದ್ದರು ಎಂಬ ವದಂತಿಗಳು ಹರಡಿದ್ದವು.
 
ನನಗೆ ಚಳಿ ಜ್ವರವಿದ್ದು ಸದನಕ್ಕೆ ಹಾಜರಾಗಲು ಸಾಧ್ಯವಾಗದಿರುವ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಸ್ಪೀಕರ್‌ ಅವರಿಗೆ ಶಾಸಕರು ಪತ್ರ ಬರೆದು ತಿಳಿಸಿದ್ದರೂ ಆಪರೇಷನ್‌ ಕಮಲಕ್ಕೆ ಒಳಗಾಗಿರುವ ಗುಮಾನಿ ಮಾತ್ರ ದೂರವಾಗಿರಲಿಲ್ಲ. ಜೆಡಿಎಸ್‌ ನಾಯಕರು ಮಾತ್ರ ಶಾಸಕರು ಅನಾರೋಗ್ಯಕ್ಕೆ ಒಳಗಾಗಿದ್ದು ಬೆಂಗಳೂರಿನಲ್ಲಿಯೇ ಇದ್ದಾರೆ. ಎಲ್ಲಿಗೂ ಹೋಗಿಲ್ಲ ಎಂದು ತೇಪೆ ಹಾಕುವ ಪ್ರಯತ್ನ ನಡೆಸಿದ್ದರು. ಆದರೆ, ಶಾಸಕರ ಬೆಂಬಲಿಗರು ಅವರು ಮುಂಬೈನಲ್ಲಿದ್ದಾರೆ. ಅನುದಾನ ತಾರತಮ್ಯದಿಂದ ಅವರು ಬೇಸರಗೊಂಡಿರುವುದು ನಿಜ ಎಂದು ಪತ್ರಿಕಾಗೋಷ್ಠಿ ನಡೆಸಿ ಹೇಳಿದ್ದು ಸಾಕಷ್ಟು ಶಾಸಕರು ಪಕ್ಷ ಬಿಡುವ ಸಾಧ್ಯತೆಗಳು ಮೂಡುವಂತೆ ಮಾಡಿತ್ತು.

ಸಂಶಯದ ಹುತ್ತ: ಆಪರೇಷನ್‌ ಕಮಲಕ್ಕೆ ಒಳಗಾಗಿರುವ ಅಪವಾದದಿಂದ ಪಾರಾಗಲು ಶಾಸಕ ನಾರಾಯಣಗೌಡರು ಆಸ್ಪತ್ರೆಗೆ ದಾಖಲಾಗಿರುವ ವಿಡಿಯೋ ಬಿಡುಗಡೆ ಮಾಡಿದರು. ಅದೂ ನಂಬುವುದಕ್ಕೆ ಅರ್ಹವೆಂಬಂತೆ ಕಂಡುಬರಲಿಲ್ಲ. ಇದರ ಜೊತೆಯಲ್ಲೇ ಮಂಡ್ಯದ ಜೆಡಿಎಸ್‌ನ ಆಪ್ತ ಬೆಂಬಲಿಗರೊಬ್ಬರ ಮನೆಗೆ ರಹಸ್ಯವಾಗಿ ನಾರಾಯಣಗೌಡರು ಬಂದು ಹೋದರೆಂಬ ಆರೋಪ ಕೇಳಿ ಬಂದು ಶಾಸಕರ ರಾಜಕೀಯ ನಡೆಯ ಬಗ್ಗೆ ಸಂಶಯದ ಹುತ್ತ ಇನ್ನಷ್ಟು ಬೆಳೆಯಲು ಕಾರಣವಾಯಿತು. 

ವರಿಷ್ಠರ ಕೆಂಗಣ್ಣಿಗೆ ಗುರಿ: ಅತೃಪ್ತ ಶಾಸಕರು ಸದನಕ್ಕೆ ಗೈರಾದ ದಿನದಿಂದಲೂ ಕೆ.ಆರ್‌.ಪೇಟೆ ಶಾಸಕ ನಾರಾಯಣಗೌಡರು ಜೆಡಿಎಸ್‌ ನಾಯಕರ ಸಂಪರ್ಕಕ್ಕೆ ಸಿಗದೆ ದೂರವೇ ಉಳಿಯುವು¨‌ ರೊಂದಿಗೆ ಜೆಡಿಎಸ್‌ ವರಿಷ್ಠರ ಕೆಂಗಣ್ಣಿಗೆ ಗುರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಜೆಡಿಎಸ್‌ ಶಾಸಕರ ಬಗ್ಗೆ ಅಪಾರ ವಿಶ್ವಾಸವನ್ನು ಇಟ್ಟುಕೊಂಡಿರುವ ಮುಖ್ಯಮಂತ್ರಿ ಹೆಚ್‌.ಡಿ. ಕುಮಾರಸ್ವಾಮಿ ಅವರ ನಂಬಿಕೆಗೆ ನಾರಾಯಣ ಗೌಡರು ದ್ರೋಹ ಬಗೆದಿದ್ದಾರೆ.

Advertisement

ಜೆಡಿಎಸ್‌ನ ಯಾವೊಬ್ಬ ಶಾಸಕರ ಮೇಲೂ ಆಪರೇಷನ್‌ ಕಮಲದ ಆಪಾದನೆ ಎದುರಾಗಿರಲಿಲ್ಲ. ಅದು ಕಾಂಗ್ರೆಸ್‌ ಶಾಸಕರಿಗೆ ಮಾತ್ರ ಸೀಮಿತವಾಗಿತ್ತು. ಆದರೆ, ಕೆ.ಸಿ.ನಾರಾಯಣಗೌಡರ ನಡೆ ಪಕ್ಷಕ್ಕೆ ಕಪ್ಪು ಚುಕ್ಕೆ ಇಟ್ಟಂತಾಗಿದೆ ಎಂಬ ಮಾತುಗಳು ಪಕ್ಷದ ಆಂತರಿಕ ವಲಯದಲ್ಲಿ ಕೇಳಿ ಬರುತ್ತಿವೆ. 

ಬಜೆಟ್‌ನಲ್ಲಿ ಕ್ಷೇತ್ರ ನಿರ್ಲಕ್ಷ್ಯ: ಈ ಬಾರಿಯ ಬಜೆಟ್‌ನಲ್ಲೂ ಕ್ಷೇತ್ರಕ್ಕೆ ಸಿಎಂ ಕುಮಾರಸ್ವಾಮಿ ಹೆಚ್ಚಿನ ಮಾನ್ಯತೆ ನೀಡದಿರುವುದಕ್ಕೆ ಶಾಸಕ ಕೆ.ಸಿ. ನಾರಾಯಣ ಗೌಡರ ನಡೆಯೂ ಕಾರಣವೆಂದು ಹೇಳಲಾಗುತ್ತಿದೆ. ಕಳೆದ ವಿಧಾನಸಭಾ ಚುನಾವಣೆ ಸಮಯದಲ್ಲೇ ಪಕ್ಷದ ವರಿಷ್ಠರನ್ನು ಕಾಡಿ-ಬೇಡಿ ಬಿ-ಫಾರಂ ಪಡೆದುಕೊಂಡಿದ್ದ ಕೆ.ಸಿ.ನಾರಾಯಣ ಗೌಡರು, ಇದೀಗ ಆಪರೇಷನ್‌ ಕಮಲಕ್ಕೆ ಒಳಗಾಗಿರುವ ಆರೋಪಕ್ಕೊಳಗಾಗಿ ವರಿಷ್ಠರ ಅವಿಶ್ವಾಸಕ್ಕೆ ಪಾತ್ರರಾಗಿದ್ದಾರೆ. ಇದರಿಂದ ಮುಂದಿನ ಚುನಾವಣೆಯಲ್ಲಿ ಅವರಿಗೆ ಬಿ-ಫಾರಂ ಸಿಗುವ ಬಗ್ಗೆ ಸಾಧ್ಯತೆಗಳು ಕ್ಷೀಣಿಸಿವೆ ಎಂಬುದು ಪಕ್ಷದ ವಲಯದಲ್ಲಿ ಕೇಳಿ ಬರುತ್ತಿರುವ ಮಾತಾಗಿದೆ.

ಕಳೆದ ಚುನಾವಣೆಗೂ ಮುನ್ನ ಮುಂಬೈನಲ್ಲಿ ನಡೆದ ಕನಕದಾಸರ ಜಯಂತಿ ಸಮಾರಂಭದಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬೆಳ್ಳಿ ಕತ್ತಿಯೊಂದನ್ನು ನೀಡಿ ಸನ್ಮಾನಿಸಿ ಗೌರವಿಸಿದ್ದ ಶಾಸಕ ನಾರಾಯಣಗೌಡರು ಜೆಡಿಎಸ್‌ ವರಿಷ್ಠರ ಕೋಪಕ್ಕೆ ಒಳಗಾಗಿದ್ದರು. ಇದೀಗ ಆಪರೇಷನ್‌ ಕಮಲಕ್ಕೆ ಒಳಗಾಗಿರುವ ಆರೋಪಕ್ಕೆ ಸಿಲುಕಿ ವರಿಷ್ಠರ ಸಿಟ್ಟಿಗೆ ಕಾರಣರಾಗಿದ್ದಾರೆ. ಇದರೊಂದಿಗೆ ಅವರ ರಾಜಕೀಯ ನಡೆ ಮುಂದಿನ ದಿನಗಳಲ್ಲಿ ಸಾಕಷ್ಟು ಕುತೂಹಲ ಕೆರಳಿಸಿದೆ.  

ಫ‌ುಡ್‌ ಪಾಯಿಸನ್‌ನಿಂದ ಆಸ್ಪತ್ರೆಗೆ ದಾಖಲು
ಸೊಲ್ಲಾಪುರದಿಂದ ಹೋಗುವಾಗ ನನಗೆ ಫ‌ುಡ್‌ ಪಾಯಿಸನ್‌ ಆಗಿತ್ತು. ಅದಕ್ಕಾಗಿ ನಾನು ಆಸ್ಪತ್ರೆಗೆ ದಾಖಲಾಗಿ ಈಗ ಡಿಸ್‌ಚಾರ್ಜ್‌ ಆಗಿ ಬಂದಿದ್ದೇನೆ. ಆಸ್ಪತ್ರೆಗೆ ದಾಖಲಾಗಿದ್ದ ಫೈಲ್‌ಗಳು ನನ್ನ ಬಳಿ ಇವೆ. ನಾನು ಸಿಎಂ ಕುಮಾರಸ್ವಾಮಿ ಹಾಗೂ ಸಾ.ರಾ.ಮಹೇಶ್‌ ಸಂಪರ್ಕದಲ್ಲಿದ್ದೆ ಎಂದು ಶಾಸಕ ಕೆ.ಸಿ.ನಾರಾಯಣಗೌಡ ಹೇಳಿದ್ದಾರೆ. 

ಹುಷಾರಿಲ್ಲದಿರುವಾಗ ನಾನೇಗೆ ಬರೋಕೆ ಸಾಧ್ಯ. ನನ್ನನ್ನು ಮುಟ್ಟೋಕೆ ಬಿಜೆಪಿಯ ಯಾರಿಗೂ ಧೈರ್ಯ ಇಲ್ಲ. ನಾನೂ ಮಹಾರಾಷ್ಟ್ರದವನೇ. ನಾನೇ ಬಿಜೆಪಿಯ ಹತ್ತು ಜನರನ್ನು ಕರೆದುಕೊಂಡು ಬರುತ್ತೇನೆ. ಬಿಜೆಪಿ ಆಪರೇಷನ್‌ಗೆ ಒಳಗಾಗಿ ಮುಂಬೈನಲ್ಲಿದ್ದೆ ಎನ್ನುವುದು ಸುಳ್ಳು.  ನಾನಿರುವುದೇ ಮುಂಬೈನಲ್ಲಿ. ಅದಕ್ಕೇ ಅಲ್ಲೇ ನೆಲೆಸಿದ್ದೆ. ಅನುದಾನ ನೀಡಿಲ್ಲವೆಂಬ ಕಾರಣಕ್ಕೆ ಅಸಮಾಧಾನವಿದೆ ಎನ್ನುವುದು ಸುಳ್ಳು. ಅದು ನಮ್ಮ ಮನೆಯ ವಿಷಯ. ನಾವೇ ಅದನ್ನೂ ಸರಿಪಡಿಸಿಕೊಳ್ಳುತ್ತೇವೆ. ಅನುದಾನ ಕಡಿಮೆಯಾದರೆ ಈಸ್ಕೋಳ್ತೀವಿ. ಬಿಜೆಪಿಯವರ ಆಪರೇಷನ್‌ಗೆ ನಾನು ಎಂದಿಗೂ ಬಲಿಯಾಗುವುದಿಲ್ಲ ಎಂದು ತಿಳಿಸಿದರು. 

ಶಾಸಕ ನಾರಾಯಣಗೌಡರ ರಾಜಕೀಯ ನಡೆ ಪಕ್ಷಕ್ಕೆ ಹಿನ್ನಡೆ ಉಂಟು ಮಾಡುತ್ತಿರುವಂತೆ ಕಂಡುಬಂದಿದ್ದ ಹಿನ್ನೆಲೆಯಲ್ಲಿ ಪಕ್ಷಕ್ಕೆ ಹಾನಿ ಉಂಟಾಗುವುದನ್ನು ತಪ್ಪಿಸಲು ಅವರ ವಿರುದ್ಧ ಪ್ರತಿಭಟನೆಗೆ ಸಜ್ಜಾಗಿದ್ದೆವು. ಈಗ ಅವರು ವಾಪಸಾಗಿದ್ದಾರೆ. ಪಕ್ಷದ ನಾಯಕರಿಗೆ ನಿಷ್ಠೆಯನ್ನು ತೋರಿದ್ದಾರೆ. ಇದೇ ವರ್ತನೆ ಪುನರಾವರ್ತನೆಯಾದರೆ ಸಹಿಸುವುದಿಲ್ಲ.
● ಕೆ.ಎಸ್‌.ಸಂತೋಷ್‌, ಪುರಸಭಾ ಸದಸ್ಯ, ಕೆ.ಆರ್‌.ಪೇಟ

ಮಂಡ್ಯ ಮಂಜುನಾಥ್‌

Advertisement

Udayavani is now on Telegram. Click here to join our channel and stay updated with the latest news.

Next