Advertisement

ನಾರಂಕೋಡಿ ಕೊರಗ ಕಾಲನಿಗೆ ಬೇಕಿದೆ ಸೌಲಭ್ಯ

12:46 PM Jun 15, 2022 | Team Udayavani |

ಬಂಟ್ವಾಳ: ಸಾಂಪ್ರದಾಯಿಕ ಪದ್ಧತಿಯ ಬುಟ್ಟಿ ಹೆಣೆಯುವ ವೃತ್ತಿ ಕುಸಿ ಯುತ್ತಿರುವ ಪ್ರಸ್ತುತ ದಿನಗಳಲ್ಲಿ ಬಂಟ್ವಾಳದ ಬೋಳಂತೂರಿನ ನಾರಂಕೋಡಿಯ ಕಾಲನಿ ಯೊಂದರಲ್ಲಿ ಆದಿವಾಸಿ ಕೊರಗ ಕುಟುಂಬಗಳು ಕಾಡು-ಗುಡ್ಡ ಸುತ್ತಾಡಿ ಬಳ್ಳಿ ತಂದು ಬುಟ್ಟಿ ಹೆಣೆದು ತಮ್ಮ ಬದುಕನ್ನು ಕಟ್ಟಿಕೊಳ್ಳುತ್ತಿದೆ. ಅಲ್ಲಿನ ಕುಟುಂಬಗಳು ತಮ್ಮ ವೃತ್ತಿ ನಿರ್ವಹಿಸಲು ಶೆಡ್‌ನ‌ ಜತೆಗೆ ತಮ್ಮ ಹಲವು ಬೇಡಿಕೆಗಳ ಈಡೇರಿಕೆಗಾಗಿ ಮನವಿ ಮಾಡುತ್ತಿವೆ.

Advertisement

ವಿವಿಧ ಜಾತಿಯ ಬಳ್ಳಿಗಳನ್ನು ಬಳಸಿ ಬುಟ್ಟಿ ಮಾಡುವ ಆದಿವಾಸಿ ಕೊರಗ ಸಮುದಾಯವು ಹಲವು ಕಾರಣಕ್ಕೆ ತಮ್ಮ ವೃತ್ತಿಯಿಂದ ಹಿಂದೆ ಸರಿಯುತ್ತಿದ್ದು, ಇಂತಹ ಪರಿಸ್ಥಿತಿಯಲ್ಲಿ ನಾರಂಕೋಡಿಯ ಕೊರಗ ಕಾಲನಿಯ ಐದಾರು ಮನೆಯ ಬಹುತೇಕ ಮಂದಿ ಸಾಂಪ್ರದಾಯಿಕ ವೃತ್ತಿಯನ್ನೇ ಮುಂದುವರಿಸುತ್ತಿದ್ದಾರೆ.

ಶೆಡ್‌ ಯಾಕೆ ಬೇಕು? ಕಾಲನಿಯು ಪೂರ್ಣ ಪ್ರಮಾಣದಲ್ಲಿ ಸುಸಜ್ಜಿತವಾಗಿಲ್ಲ. ಚಿಕ್ಕದಾದ ಮನೆಗಳಲ್ಲಿ ಅವರ ವಾಸ ಒಂದೆಡೆಯಾದರೆ ಇನ್ನು ಬುಟ್ಟಿ ಹೆಣೆಯುವುದು ಎಲ್ಲಿ ಎಂಬ ಪ್ರಶ್ನೆ ಕಾಡದೆ ಇರದು. ಬೇಸಗೆಯಲ್ಲಾದರೆ ಹೊರಗೆ ಕೂತು ಬುಟ್ಟಿ ಹೆಣೆಯಬಹುದು. ಮಳೆಗಾಲದಲ್ಲಿ ಅದು ಸಾಧ್ಯವಿಲ್ಲ. ಕಾಡಿನಿಂದ ಹೊತ್ತು ತಂದ ಬಳ್ಳಿಗಳಿಗೆ ಸ್ವಲ್ಪ ನೀರು ಬಿದ್ದು ಕಪ್ಪಾದರೂ, ಮುಂದೆ ಅದರಿಂದ ಹೆಣೆದ ಬುಟ್ಟಿಗಳಿಗೆ ಬೇಡಿಕೆಯೇ ಇಲ್ಲ. ಹೀಗಾಗಿ ಎಲ್ಲ ಮನೆಯವರೂ ಜತೆ ಸೇರಿ ಬುಟ್ಟಿ ಹೆಣೆಯುವ ವೃತ್ತಿ ನಿರ್ವಹಿಸಲು ತಮಗೊಂದು ಶೆಡ್‌ ನಿರ್ಮಾಣ ಮಾಡಬೇಕು. ಇದರಿಂದ ಬಳ್ಳಿಗಳ ಜತೆಗೆ ಹೆಣೆದ ಬುಟ್ಟಿಗಳನ್ನೂ ರಕ್ಷಿಸಬಹುದು ಎಂಬುದು ಸ್ಥಳೀಯರ ಅಭಿಪ್ರಾಯ.

ಕಾಡು ಹಾದಿ ಪಯಣ: ನಾರಂಕೋಡಿ ಕೊರಗ ಕಾಲನಿಯಲ್ಲಿ 20 ವರ್ಷಗಳಿಂದ ಕೊರಗರು ವಾಸವಾಗಿದ್ದಾರೆ. 6 ಮನೆಗಳಲ್ಲಿ 13 ಮಂದಿ ಇದ್ದಾರೆ. ಕಾಲನಿಯ ನಿವಾಸಿಗಳಾದ ಮೈರೆ, ಬಲ್ಲು, ಅಂಗಾರೆ, ಸುಜಿತ್‌ ಕುಮಾರ್‌ ಅವರ ಕುಟುಂಬಗಳು ಬುಟ್ಟಿ ಹೆಣೆಯುವ ಕಾಯಕವನ್ನೇ ಮಾಡುತ್ತಿದೆ. ಮನೆ ಮಂದಿ ಬಹುತೇಕ ಎಲ್ಲರೂ ಬುಟ್ಟಿ ಹೆಣೆಯುವ ಕಾಯಕದಲ್ಲಿ ತೊಡಗಿದ್ದು, ಬೆಳಗ್ಗೆ 7ರ ಸುಮಾರಿಗೆ ಕಾಡಿಗೆ ಹೊರಡುತ್ತಾರೆ. ಪ್ರತಿನಿತ್ಯವೂ ಗುಂಡಿಮಜಲು, ಚನಿಲ, ಅಪ್ಪುಕೋಡಿ ಮೊದಲಾದ ಪ್ರದೇಶದ ನಾಲ್ಕೈದು ಕಿ.ಮೀ. ಕಾಡು ಹಾದಿಯಲ್ಲಿ ಸಂಚರಿಸಿ ಬಳ್ಳಿಗಳನ್ನು ಸಂಗ್ರಹಿಸುತ್ತಾರೆ. ಅಪರಾಹ್ನ 2.30ರ ಸುಮಾರಿಗೆ ಮನೆಗೆ ಮರಳಿ ಊಟ ಮುಗಿಸಿ ಬಳಿಕ ಬುಟ್ಟಿ ಹೆಣೆಯಲು ಆರಂಭಿಸುತ್ತಾರೆ. ಕಾಡಿನಲ್ಲಿ ಸಿಗುವ ಎಂಜಿರ್‌, ಮಾದೇರ್‌, ಪೇರ್‌ ಎಂಬ ಬಳ್ಳಿಗಳಿಂದ ಬುಟ್ಟಿ, ಕಾಂಟ್ಯ, ಕುಡುಪು, ಕುರುವೆ, ತೊಟ್ಟೆ, ಕುತ್ತರಿ ಮೊದಲಾದ ಉತ್ಪನ್ನಗಳನ್ನು ಹೆಣೆದು ಕಲ್ಲಡ್ಕ ಪ್ರದೇಶದಲ್ಲಿ ಮಾರಾಟ ಮಾಡುತ್ತಾರೆ.

ಬೇಡಿಕೆ ಪೂರೈಸಿ: ಬುಟ್ಟಿ ಹೆಣೆಯುವ ಕಾರ್ಯ ನಿರ್ವಹಿಸಲು ಶೆಡ್‌ ಬೇಕು ಎಂಬುದು ನಮ್ಮ ಬೇಡಿಕೆ. ಕೃಷಿ ಭೂಮಿ ಹಂಚಿಕೆಗೂ ಹೋರಾಟ ಮಾಡುತ್ತ ಬಂದಿದ್ದೇವೆ. ಮುಖ್ಯವಾಗಿ ಕುಡಿಯುವ ನೀರು ಸರಿಯಾಗಿ ಪೂರೈಕೆಯಾಗುತ್ತಿಲ್ಲ. ಜತೆಗೆ ಕೃಷಿಯ ನೀರಿಗಾಗಿನೀಡಿದ ಕೊಳವೆ ಬಾವಿಯನ್ನು ಬೇರೆ ಕಡೆಗೆ ನೀರು ಪೂರೈಸಲು ಉಪಯೋಗಿಸುತ್ತಿದ್ದಾರೆ. -ಮೈರೆ, ನಾರಂಕೋಡಿ ಕಾಲನಿ ನಿವಾಸಿ

Advertisement

ಶೆಡ್‌ ನಿರ್ಮಾಣಕ್ಕೆ ಯತ್ನ ಬುಟ್ಟಿ ತಯಾರಿಸುವುದಕ್ಕೆ ಶೆಡ್‌ ಮಾಡಲು ಸ್ಥಳಾವಕಾಶ ಇದ್ದಲ್ಲಿ ಇಲಾಖೆಯ ಸಹಾಯಕ ನಿರ್ದೇಶಕರನ್ನು ಸ್ಥಳಕ್ಕೆ ಕಳುಹಿಸಿ ಪರಿಶೀಲನೆ ಮಾಡಿಸುತ್ತೇನೆ. ಕೊರಗ ಸಮುದಾಯಕ್ಕೆ ಕೃಷಿ ಭೂಮಿ ಹಂಚಿಕೆಯ ವಿಚಾರ ಈಗಾಗಲೇ ಜಿಲ್ಲಾಧಿಕಾರಿ ಮಟ್ಟದಲ್ಲಿ ಮಾತುಕತೆಯ ಹಂತದಲ್ಲಿದೆ. -ಗಾಯತ್ರಿ, ಯೋಜನ ಸಮನ್ವಯಾಧಿಕಾರಿ, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ, ದ.ಕ.

  • ವಿವಿಧ ಜಾತಿಯ ಬಳ್ಳಿಗಳನ್ನು ಬಳಸಿ ಬುಟ್ಟಿ ತಯಾರಿ
  • ನಾಲ್ಕೈದು ಕಿ.ಮೀ. ಕಾಡಿನಲ್ಲಿ ಸಂಚರಿಸಿ ಬಳ್ಳಿ ಸಂಗ್ರಹ
  • ತೀರಾ ಪುಟ್ಟ ಮನೆಯಲ್ಲಿ ಬುಟ್ಟಿ ಹೆಣೆಯುವುದು ಕಷ್ಟ

ಬೇಡಿಕೆಗಳೇನು?

20 ವರ್ಷಗಳಿಂದ ಈ ಕಾಲನಿಯಲ್ಲಿ ವಾಸಿಸುವ ಮಂದಿಗೆ ಕೃಷಿ ಭೂಮಿ ಹಂಚಿಕೆ ಮಾಡಬೇಕು ಎಂಬುದು ಪ್ರಮುಖ ಬೇಡಿಕೆಯಾಗಿದ್ದು, ಈಗಾಗಲೇ 5 ಸೆಂಟ್ಸ್‌ ಮನೆ ಅಡಿ ಸ್ಥಳ ಈಗಾಗಲೇ ಅವರ ಹೆಸರಿಗಾಗಿದೆ. ಆದರೆ ತಮ್ಮ ಸ್ವಾಧೀನದಲ್ಲಿರುವ ಒಂದಷ್ಟು ಸರಕಾರಿ ಭೂಮಿಯನ್ನು ತಮಗೆ ನೀಡಬೇಕು ಎಂಬ ಬೇಡಿಕೆಯನ್ನು ಇಡುತ್ತಿದ್ದಾರೆ. ಸುಜಿತ್‌ ಕುಮಾರ್‌ ಅವರ ಮನೆ ಮುರುಕಲು ಸ್ಥಿತಿಯಲ್ಲಿದ್ದು, ಅದರ ಅಡಿ ಸ್ಥಳಕ್ಕೂ ದಾಖಲೆ ಇಲ್ಲ. ಯಾವುದೇ ಯೋಜನೆಯಲ್ಲಿ ಮನೆ ಮಂಜೂರಾಗಬೇಕಾದರೆ ಅಡಿ ಸ್ಥಳದ ದಾಖಲೆ ಕೇಳುತ್ತಿದ್ದಾರೆ. ಮನೆಗೆ ಶೌಚಾಲಯ, ವಿದ್ಯುತ್‌ ಸಂಪರ್ಕವೂ ಇಲ್ಲ ಎನ್ನುತ್ತಾರೆ ಕಾಲನಿ ನಿವಾಸಿಗಳು. ಕಾಲನಿಯ ಮನೆಗಳಿಗೆ ಉಚಿತ ಗ್ಯಾಸ್‌ ಸಂಪರ್ಕ ಸಿಕ್ಕರೂ, ಬೆಲೆ ಏರಿಕೆಯ ಪರಿಣಾಮ 6 ತಿಂಗಳಿನಿಂದ ಗ್ಯಾಸ್‌ ಉಪಯೋಗಿಸದೆ ಕಟ್ಟಿಗೆಯಲ್ಲೇ ಅಡುಗೆ ಮಾಡುತ್ತಿದ್ದಾರೆ. ಪ್ರಸ್ತುತ ಕಾಲನಿಗೆ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿಲ್ಲ. ಐಟಿಡಿಪಿಯಿಂದ ನಮಗೆ ಮಂಜೂರಾದ ಕೊಳವೆಬಾವಿಯಿಂದಲೂ ಬೇರೆಯವರಿಗೆ ನೀರು ಕೊಡುತ್ತಾರೆ ಎಂಬುದು ಸ್ಥಳೀಯ ನಿವಾಸಿಗಳ ಆರೋಪ.

-ಕಿರಣ್‌ ಸರಪಾಡಿ

 

Advertisement

Udayavani is now on Telegram. Click here to join our channel and stay updated with the latest news.

Next