Advertisement

ನರಗುಂದದಲ್ಲಿ ಅಪರೂಪದ ಹಕ್ಕಿರೆಕ್ಕೆ ಚಿಟ್ಟೆ; ­ಬಹುದೂರ, ಎತ್ತರ ಹಾರುವ ಸಾಮರ್ಥ್ಯ

03:38 PM Oct 04, 2022 | Team Udayavani |

ನರಗುಂದ: ಪಟ್ಟಣದ ಗುಡ್ಡದ ವಾರೆಯಲ್ಲಿರುವ ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನದಲ್ಲಿ ಪ್ಯಾಪಿಲಿಯೋನಿಡೇ ಕುಟುಂಬಕ್ಕೆ ಸೇರಿದ ಕಾಮನ್‌ ಬರ್ಡ್‌ವಿಂಗ್‌(ಟ್ರಾಯ್ಡ್ಸ್ ಹೆಲೆನಾ)ಅಪರೂಪದ ಚಿಟ್ಟೆ ಪತ್ತೆಯಾಗಿದೆ. ನಮ್ಮ ದೇಶದಲ್ಲಿ ಅತಿ ದೊಡ್ಡ ಚಿಟ್ಟೆಯ ಜಾತಿಯ ಚಿಟ್ಟೆಗಳಲ್ಲಿ ಇದು ಒಂದು. ಇದರ ರೆಕ್ಕೆಗಳು 140 ರಿಂದ170 ಮಿಮೀ ಅಗಲವಾಗಿರುತ್ತವೆ. ಮುಂದಿನ ರೆಕ್ಕೆಗಳು ಕಪ್ಪಾಗಿದ್ದು, ಹಿಂದಿನ ರೆಕ್ಕೆಗಳು ಹಳದಿ ಬಣ್ಣದಿಂದ ಕೂಡಿದ್ದು ಕಪ್ಪುಚುಕ್ಕೆ ಇರುತ್ತವೆ. ಕಪ್ಪು-ಹಳದಿ ವರ್ಣದಿಂದ ಕೂಡಿದ್ದರಿಂದ ಈ ಚಿಟ್ಟೆ ನೋಡಲು ಆಕರ್ಷಕವಾಗಿರುತ್ತದೆ.

Advertisement

ಇತರೆ ಜಾತಿಯ ಚಿಟ್ಟೆಗಳ ಹಾರಾಟ ಹೋಲಿಸಿದರೆ ಈ ಚಿಟ್ಟೆ ಬಹುದೂರ ಮತ್ತು ಬಹು ಎತ್ತರ ಹಾರುವ ಸಾಮರ್ಥಯ ಹೊಂದಿದೆ. ಈ ಚಿಟ್ಟೆಗೆ ಬರ್ಡ್‌ವಿಂಗ್‌ ಚಿಟ್ಟೆ(ಹಕ್ಕಿರೆಕ್ಕೆ ಚಿಟ್ಟೆ)ಎಂದೇ ಕರೆಯುತ್ತಾರೆ. ಇದರ ಜೀವಿತಾವಧಿ 19 ದಿವಸವಾಗಿರುತ್ತದೆ. ಈ ಚಿಟ್ಟೆ ಸಾಮಾನ್ಯವಾಗಿ ಭಾರತದ ಎಲ್ಲ ಅರಣ್ಯ ಪ್ರದೇಶಗಳಲ್ಲಿ ಕಂಡು ಬರುತ್ತದೆ. ಅರಿಸ್ಟ್ಲೋಕಿಯಾ ಜಾತಿಯ ಸಸ್ಯಗಳು ಈ ಚಿಟ್ಟೆಯ ಲಾರ್ವಾಗಳಿಗೆ ಆತಿಥ್ಯ ಸಸ್ಯವಾಗಿದ್ದು, ಪ್ರಬುದ್ಧ ಚಿಟ್ಟೆಗಳು ಕ್ಲಿರೆಡೆಂಡ್ರಾನ್‌, ಅಕೇಶಿಯಾ ಮತ್ತು ರಥಪುಷ್ಪ ಜಾತಿ ಸಸ್ಯಗಳ ಹೂವಿನ ಮಕರಂದ ಸೇವಿಸುತ್ತವೆ. ಚಿಟ್ಟೆಗಳು ಪರಾಗಸ್ಪರ್ಶ ಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸಿ ಸಸ್ಯಗಳ ಸಂತತಿ ವೃದ್ಧಿಸುತ್ತವೆ. ಪಶ್ಚಿಮಘಟ್ಟದ ಸದರ್ನ್ ಬರ್ಡ್‌ವಿಂಗ್‌ ಚಿಟ್ಟೆಯನ್ನು 2019ರಲ್ಲಿ ಕರ್ನಾಟಕದ ರಾಜ್ಯ ಚಿಟ್ಟೆಯೆಂದು ಅಧಿಕೃತವಾಗಿ ಘೋಷಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಬರ್ಡ್‌ವಿಂಗ್‌ ಪ್ರಭೇದದ ಚಿಟ್ಟೆಗಳು ಸಹಾ ಐಯುಸಿಎನ್‌ ಪ್ರಕಾರ ಸಂರಕ್ಷಣೆ ಪಡೆದಿರುತ್ತವೆ.

ಜೀವವೈವಿಧ್ಯತೆ ಸೌಂದರ್ಯ ಹೆಚ್ಚಿಸುವುದಲ್ಲದೆ ಚಿಟ್ಟೆಗಳು ಸಹ ಆರೋಗ್ಯ ಪರಿಸರದ ಸೂಚಕಗಳಾಗಿವೆ. ಚಿಟ್ಟೆಗಳ ಸಂರಕ್ಷಣೆಗೆಂದೇ ಕರ್ನಾಟಕ ಅರಣ್ಯ ಇಲಾಖೆ ರಾಜ್ಯದ ಹಲವೆಡೆ ಚಿಟ್ಟೆ ಪಾರ್ಕ್‌ ನಿರ್ಮಿಸಿದೆ.

ಪಕ್ಷಿ, ಹಲ್ಲಿ ಇನ್ನಿತರೆ ಕೀಟಗಳಿಗೆ ಚಿಟ್ಟೆ ಮತ್ತು ಚಿಟ್ಟೆ ಲಾರ್ವಾ ಆಹಾರ ಪೂರೈಸುವ ಮೂಲಕ ಆಹಾರ ಸರಪಳಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಅರಣ್ಯನಾಶ, ನಗರೀಕರಣ, ಮಿತಿಮೀರಿದ ಕೀಟನಾಶಕ ಬಳಕೆ ಮತ್ತು ಪರಿಸರ ಮಾಲಿನ್ಯದಿಂದ ಅದೆಷ್ಟೋ ಚಿಟ್ಟೆಗಳು ಅಳಿವಿನಂಚಿಗೆ ತಲುಪಿವೆ.  –ಮಂಜುನಾಥ ಎಸ್‌. ನಾಯಕ್‌, ಜೈವಿಕ ವೈವಿಧ್ಯ ಸಂಶೋಧಕರು, ನರಗುಂದ

„ಸಿದ್ಧಲಿಂಗಯ್ಯ ಮಣ್ಣೂರಮಠ

Advertisement
Advertisement

Udayavani is now on Telegram. Click here to join our channel and stay updated with the latest news.

Next