ಮಂಗಳೂರು: ಅಪಘಾತ ತಾಣವಾಗಿರುವ ರಾಷ್ಟ್ರೀಯ ಹೆದ್ದಾರಿ 66ರ ನಂತೂರು ಜಂಕ್ಷನ್ನಲ್ಲಿ ಓವರ್ಪಾಸ್ ನಿರ್ಮಾಣಕ್ಕೆ ಕಳೆದ ವರ್ಷ ಫೆ. 28ರಂದು ಕೇಂದ್ರ ಸರಕಾರ ಅನುಮೋದನೆ ನೀಡಿತ್ತು. ಆದರೆ ಇಂದಿಗೂ ಕಾಮಗಾರಿ ಆರಂಭಗೊಂಡಿಲ್ಲ.
ನಂತೂರಿನಲ್ಲಿ ಓವರ್ಪಾಸ್ ನಿರ್ಮಾಣಕ್ಕೆ ಯೋಜನೆ ಸಿದ್ಧಗೊಂಡಿದೆ. ಆದರೆ ಅಲ್ಲಿನ ಜಾಗಕ್ಕೆ ಸಂಬಂಧಿಸಿ ನ್ಯಾಯಾಲಯದಲ್ಲಿ ಪ್ರಕರಣ ಇದೆ. ಆದಾರೂ ಟೆಂಡರ್ ಪ್ರಕ್ರಿಯೆ ನಡೆದಿದ್ದು, ಗುತ್ತಿಗೆದಾರರು ಭದ್ರತ ಠೇವಣಿ ಪಾವತಿ ಮಾಡಲು ಸಮಯ ನಿಗದಿ ಮಾಡಲಾಗಿದೆ. ಅನಂತರ ಕಾರ್ಯಾದೇಶ ನೀಡಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಲಿಂಗೇಗೌಡ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಕೆಪಿಟಿ ಓವರ್ಪಾಸ್ಗೆ ಕಾರ್ಯಾದೇಶ
ಕೆಪಿಟಿಯಲ್ಲಿ 22 ಕೋ.ರೂ. ವೆಚ್ಚದಲ್ಲಿ ಓವರ್ಪಾಸ್ ನಿರ್ಮಾಣವಾಗಲಿದೆ. ಕಾರ್ಯಾದೇಶ ನೀಡಲಾಗಿದೆ. ಮರ ಕಡಿಯುವುದಕ್ಕೆ ಸಂಬಂಧಿಸಿ ಪರವಾನಿಗೆ ಪಡೆಯುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಲಿಂಗೇಗೌಡ ಅವರು ತಿಳಿಸಿದ್ದಾರೆ.
ಸಿಗ್ನಲ್ ಲೈಟ್ ಆರಂಭಿಸಲು ಗೊಂದಲ
ಒಂದೆಡೆ ಹೆದ್ದಾರಿ ಪ್ರಾಧಿಕಾರದವರು ಕಾಮಗಾರಿ ಇಂದು-ನಾಳೆ ಆರಂಭಿಸುತ್ತೇವೆ ಎಂದು ಭರವಸೆ ನೀಡುತ್ತಿದ್ದಾರೆ. ಇನ್ನೊಂದೆಡೆ ಸಿಗ್ನಲ್ ವ್ಯವಸ್ಥೆ ಕಾರ್ಯಾಚರಿಸುತ್ತಿಲ್ಲ. ಸಿಗ್ನಲ್ ವ್ಯವಸ್ಥೆಯ ನಿರ್ವಹಣೆ ಮಾಡದ ಹಿನ್ನೆಲೆಯಲ್ಲಿ ಅದು ಸ್ಥಗಿತಗೊಂಡಿದೆ. ಈಗ ಪೊಲೀಸರು ಸಿಗ್ನಲ್ ಕಾರ್ಯಾರಂಭ ಮಾಡುವುದೇ ಎಂಬ ಗೊಂದಲದಲ್ಲಿದ್ದಾರೆ.
Related Articles
ಸಾಮಾಜಿಕ ಜಾಲತಾಣಗಳಲ್ಲಿಯೂ ಆಕ್ರೋಶ
ನಂತೂರು ವೃತ್ತದಲ್ಲಿ ನಿರಂತರ ಅಪಘಾತಗಳು ಸಂಭವಿಸುತ್ತಿದ್ದು, ಶನಿವಾರ ಇಬ್ಬರು ಮೃತಪಟ್ಟಿದ್ದರು. ನಂತೂರು ವೃತ್ತದ ಅವ್ಯವಸ್ಥೆ, ಘನ ವಾಹನಗಳ ಚಾಲಕರ ನಿರ್ಲಕ್ಷ್ಯದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿಯೂ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.