Advertisement

3 ತಿಂಗಳ ಬಳಿಕ ನಂದಿಗಿರಿಧಾಮ ವೀಕ್ಷಣೆಗೆ ಮುಕ್ತ

02:58 PM Dec 02, 2021 | Team Udayavani |

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಸುರಿದ ಮಳೆಯಿಂದಾಗಿ ಭೂಕುಸಿತದಿಂದ ನಂದಿಗಿರಿಧಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕುಸಿದು ಹೋಗಿತ್ತು. ಇದರಿಂದಾಗಿ ನಂದಿಗಿರಿಧಾಮಕ್ಕೆ ಸಾರ್ವಜನಿಕರಿಗೆ ಪ್ರವೇಶವನ್ನು ಜಿಲ್ಲಾಡಳಿತ ನಿಷೇಧಿಸಿತ್ತು.

Advertisement

ಹಿರಿಯರು, ಕಿರಿಯರು, ವಯೋವೃದ್ಧರು, ಯುವಕ ಮತ್ತು ಯುವತಿಯರು ವೀಕೆಂಡ್‌ ಬಂದ ತಕ್ಷಣ ಪ್ರಾಕೃತಿಕ ಸೌಂದರ್ಯ ನೋಡಲು ಅದರಲ್ಲೂ ವಿಶೇಷವಾಗಿ ನಂದಿಗಿರಿಧಾಮದಲ್ಲಿ ಸೂರ್ಯೋದಯ ದರ್ಶನ ಮಾಡುವ ಭಾಗ್ಯವನ್ನು ಕಳೆದುಕೊಂಡಿದ್ದರು. ಅಂತೂ ಮೂರು ತಿಂಗಳ ನಂತರ ನಂದಿಗಿರಿ ಧಾಮದಲ್ಲಿ ಕಡಿಮೆ ಸಂಖ್ಯೆಯಲ್ಲಿ ಪರವಾಸಿಗರು ನಂದಿಗಿರಿಧಾಮಕ್ಕೆ ಭೇಟಿ ನೀಡಿದರು.

ದರ್ಶನ ಭಾಗ್ಯ: ಬೆಟ್ಟಗುಡ್ಡಗಳ ಸಾಲು, ಔಷಧಿ ಗಿಡ ಮೂಲಿಕೆ, ಕೈ ಬೀಸಿ ಕರೆಯುತ್ತಿರುವ ಪರಿಸರವನ್ನು ಹೊಂದಿರುವ ನಂದಿಗಿರಿಧಾಮ ಚಿಕ್ಕಬಳ್ಳಾಪುರ ಜಿಲ್ಲೆಯ ಮತ್ತು ರಾಜ್ಯದ ಜನರ ಪಾಲಿಗೆ ಕರ್ನಾಟಕದ ಊಟಿ ಎಂದೇ ಖ್ಯಾತಿ ಹೊಂದಿದೆ. ಇಲ್ಲಿನ ಐತಿಹಾಸಿಕ ಮತ್ತು ಪ್ರಾಕೃತಿಕ ಸೌಂದರ್ಯವನ್ನು ವೀಕ್ಷಿಸಿಲು ಸಹಸ್ರಾರು ಸಂಖ್ಯೆಯಲ್ಲಿ ಪರವಾಸಿಗರು ಬರುತ್ತಾರೆ. ಕೊನೆಗೂ ಮೂರು ತಿಂಗಳ ನಂತರ ನಂದಿಗಿರಿಧಾಮಕ್ಕೆ ಪ್ರವಾಸಿಗರಿಗೆ ದರ್ಶನ ಭಾಗ್ಯ ಲಭಿಸಿದೆ.

ಪರಿಶೀಲಿಸಿದ್ದರು: ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್‌ ಮತ್ತು ಜಿಲ್ಲಾಧಿಕಾರಿ ಆರ್‌. ಲತಾ ಅವರ ವಿಶೇಷ ಕಾಳಜಿಯಿಂದ ನಂದಿಗಿರಿ ಧಾಮದ ರಸ್ತೆ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರದಿಂದ ಬಿಡುಗಡೆಯಾದ 80 ಲಕ್ಷ ರೂ.ಗಳ ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ರಸ್ತೆಯನ್ನು ನಿರ್ಮಿಸಿದ್ದಾರೆ. ಸ್ವತಃ ಜಿಲ್ಲಾಧಿಕಾರಿ ಆರ್‌.ಲತಾ ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್‌ ಅವರು ರಸ್ತೆ ಕಾಮಗಾರಿ ಪರಿಶೀಲಿಸಿ ನಂದಿಗಿರಿಧಾಮಕ್ಕೆ ಸಾರ್ವಜನಿಕರಿಗೆ ಪ್ರವೇಶಕ್ಕೆ ಮುಕ್ತಗೊಳಿಸಿದರು.

ಪ್ರವಾಸಿಗರ ಸಂಖ್ಯೆ ಹೆಚ್ಚಳ ಸಾಧ್ಯತೆ:

Advertisement

1000 ರಿಂದ 1500 ಮಂದಿ ಆಗಮನ: ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿಗಿರಿಧಾಮವನ್ನು ಸಾರ್ವಜನಿಕರಿಗೆ ಪ್ರವೇಶ ಮುಕ್ತಗೊಳಿಸಿದರೂ ನಿರೀಕ್ಷಿತ ಪ್ರಮಾಣದಲ್ಲಿ ಪ್ರವಾಸಿಗರು ಬಂದಿಲ್ಲ. ಸುಮಾರು ಒಂದು ಸಾವಿರದಿಂದ 1500 ಜನ ಮಾತ್ರ ನಂದಿಗಿರಿಧಾಮದತ್ತ ಮುಖ ಮಾಡಿದ್ದು ಇನ್ನೂ ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ಮಾಹಿತಿ ತಿಳಿದು ಪ್ರವಾಸಿಗರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಸಹಜವಾಗಿ ವೀಕೆಂಡ್‌ನ‌ಲ್ಲಿ ಪ್ರವಾಸಿಗರ ದಂಡೇ ಇಲ್ಲಿಗೆ ಆಗಮಿಸುತ್ತಾರೆ.

ಇದನ್ನೂ ಓದಿ:- 10ರಿಂದ 10 ದಿನ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ

ಹೀಗಾಗಿ ಜಿಲ್ಲಾಡಳಿತ ಅನೇಕ ಮುನ್ನೆಚ್ಚರಿಕೆ ಕ್ರಮ ಕೈಗೊಂಡು ಸಾರ್ವಜನಿಕರ ಪ್ರವೇಶಕ್ಕೆ ಮುಕ್ತ ಅವಕಾಶ ಕಲ್ಪಿಸಿದೆ.

ವ್ಯಾಪಾರ-ವಹಿವಾಟು: ಜಿಲ್ಲೆಯ ನಂದಿಗಿರಿಧಾಮಕ್ಕೆ ಸಾರ್ವಜನಿಕರಿಗೆ ಕಳೆದ ಮೂರು ತಿಂಗಳಿಂದ ಪ್ರವೇಶ ನಿಷೇಧಿಸಿದರಿಂದ ನಂದಿಗಿರಿಧಾಮದಲ್ಲಿ ಅಂಗಡಿ ಮತ್ತು ಹೋಟಲ್‌ ವ್ಯಾಪಾರ ಮಾಡುತ್ತಿದ್ದವರು ಬಹಳ ಕಷ್ಟ ಅನುಭವಿಸುವಂತಾಯಿತು. ಇದೀಗ ಜಿಲ್ಲಾಡಳಿತ ರಸ್ತೆಯನ್ನು ಅಭಿವೃದ್ಧಿಗೊಳಿಸಿ ಅವಕಾಶ ಕಲ್ಪಿಸಿದ್ದರಿಂದ ಸಂಕಷ್ಟದಲ್ಲಿದ್ದ ಅಂಗಡಿ ಮತ್ತು ಹೋಟಲ್‌ ಮಾಲಿಕರಿಗೆ ಸಮಾಧಾನ ತಂದಿದೆ.

ಟಿಕೆಟ್‌ ದುಬಾರಿ

ನಂದಿಗಿರಿಧಾಮದಲ್ಲಿ ಕೆಲ ಮುನ್ನೆಚ್ಚರಿಕೆ ಕ್ರಮ ಕೈಗೊಂಡು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಿರುವುದು ಸರಿ. ಆದರೆ, ಪ್ರವಾಸಿಗರು ಬರುವ ವಾಹನಗಳನ್ನು ಬಿಟ್ಟು ಬಸ್‌ನಲ್ಲಿ ಪ್ರಯಾಣಿಸುವ ಪರಿಸ್ಥಿತಿ ನಿರ್ಮಾಣಗೊಂಡಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನೂ ಪ್ರತಿಯೊಬ್ಬರಿಗೆ 20 ರೂ. ಟಿಕೆಟ್‌ ದರ ನಿಗದಿ ಮಾಡಿರುವುದು ಎಷ್ಟು ಸರಿ ಎಂದು ಪ್ರಶ್ನಿಸುತ್ತಿದ್ದಾರೆ.

ಜಿಲ್ಲೆಯ ವಿವಿಧ ಭಾಗಗಳಿಂದ ಮತ್ತು ಹೊರ ಜಿಲ್ಲೆಗಳಿಂದ ಪ್ರವಾಸಿಗರು ತಮ್ಮ ವಾಹನಗಳಲ್ಲಿ ಬರುವ ಜತೆಗೆ ವಾಹನ ನಿಲ್ಲಿಸಿ ಬಸ್‌ನಲ್ಲಿ ಸಂಚರಿಸುವಂತಾಗಿದೆ. ಈ ಕೂಡಲೇ ಟಿಕೆಟ್‌ ದರವನ್ನು ಕಡಿತಗೊಳಿಸಬೇಕೆಂದು ಪ್ರವಾಸಿಗರು ಮನವಿ ಮಾಡಿದ್ದಾರೆ.

ಮನವಿ ಬಂದರೆ ಬಸ್‌ ಟಿಕೆಟ್‌ ದರ ಪರಿಶೀಲನೆ

ಜಿಲ್ಲೆಯ ನಂದಿಗಿರಿಧಾಮದಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಂಡು ಸಾರ್ವಜನಿಕರಿಗೆ ಪ್ರವೇಶ ಕಲ್ಪಿಸಲಾಗಿದೆ. ಬುಧವಾರ ಸುಮಾರು ಸಾವಿರದಿಂದ ಒಂದೂವರೆ ಸಾವಿರ ಜನ ಬಂದಿದ್ದಾರೆ. ಆದರೂ ಸಂಖ್ಯೆ ಕಡಿಮೆಯಿದೆ. ನಂದಿಗಿರಿಧಾಮಕ್ಕೆ ಬರುವ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಹಾಗೆಯೇ ಬಸ್‌ ಟಿಕೆಟ್‌ ದರ ಕಡಿತಗೊಳಿಸುವ ವಿಚಾರದಲ್ಲಿ ಮನವಿ ಬಂದರೆ ಪರಿಶೀಲಿಸುತ್ತೇವೆ ಎಂದು ಜಿಲ್ಲಾಧಿಕಾರಿ ಆರ್‌.ಲತಾ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next