Advertisement

ನಮೋದ್ಘೋಷಕ್ಕೆ ನಮೋದ್ವೇಷ ಉತ್ತರವಲ್ಲ!

11:04 AM Mar 13, 2017 | Team Udayavani |

ಜನ ತಾಸುಗಟ್ಟಲೇ ಬಿಸಿಲಲ್ಲಿ ನಿಂತು ಹೈರಾಣಾದರೂ,”ವಿಫ‌ಲವಾಗಲಿ- ಸಫ‌ಲವಾಗಲಿ, ಮೋದಿ ಬದಲಾವಣೆಗಾಗಿ ದೊಡ್ಡ ರಿಸ್ಕ್ ತೆಗೆದುಕೊಳ್ಳುವ ನಾಯಕ ‘ ಎನ್ನುತ್ತಿದ್ದಾರೆ. ಇಂದು ಎಲ್ಲಾ ರಾಜ್ಯಗಳು ಬಯಸುತ್ತಿರುವುದು ಇಂಥ ರಿಸ್ಕ್ ತೆಗೆದುಕೊಳ್ಳುವ ಗುಣ ಇರುವವರನ್ನೇ.

Advertisement

“ಎಟಿಎಂ ಮುಂದೆ ಸಾಲುಸಾಲಾಗಿ ನಿಂತ ಜನರೆಲ್ಲ ಮೋದಿಗೆ ಹಿಡಿಶಾಪ ಹಾಕುತ್ತಿದ್ದಾರೆ’ಪ್ರತಿಪಕ್ಷಗಳು, ದೇಶದ ಪ್ರಖ್ಯಾತ ರಾಜಕೀಯ ಪಂಡಿತರು/ ವಿಶ್ಲೇಷಕರು ಕೆಲವು ತಿಂಗಳಿಂದ ಒಕ್ಕೊರಲಲ್ಲಿ ಸಾರುತ್ತಲೇ ಬಂದ ಘೋಷವಿದು. ಆದರೆ ಅದೇ ಜನತೆ ಮೊನ್ನೆ ಮತಗಟ್ಟೆಯ ಸಾಲುಗಳಲ್ಲಿ ನಿಂತು ಮೋದಿಯನ್ನು ಮೆಚ್ಚಿ ಮತ ಹಾಕಿದರು. ಜನರ ತೀರ್ಪು ಪಂಡಿತೋತ್ತಮರನ್ನೆಲ್ಲ ತತ್ತರಿಸುವಂತೆ ಮಾಡಿದೆ. ಪಂಚ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಎರಡೇ ರಾಜ್ಯಗಳಲ್ಲಿ ಸ್ಪಷ್ಟ ಬಹುಮತ ಪಡೆದಿದೆ ಎನ್ನುವುದೇನೋ ಖರೆ, ಆದರೆ ವಿಶ್ಲೇಷಕರು, ಪ್ರತಿಪಕ್ಷಗಳು ಹೇಳಿದಂತೆ, ನೋಟು ಅಮಾನ್ಯದಂಥ “ತ್ರಾಸು’ ಕೊಟ್ಟ ವಿದ್ಯಮಾನದ ನಂತರವೂ ಅದೇಕೆ ಜನ ಬಿಜೆಪಿಯಿಂದ ಕೈಕೊಡವಿ ಎದ್ದೇಳಲಿಲ್ಲ(ಪಂಜಾಬ್‌ ಬಿಟ್ಟು)? 

ಈಗ ಇದೇ ಪ್ರಶ್ನೆಯನ್ನೇ ಚುನಾವಣಾ ಭವಿಷ್ಯ ನುಡಿದವರ ಬಳಿ ಕೇಳಿ ನೋಡಿ. ಯಾಕೆ ಬಿಜೆಪಿ ಗೆದ್ದಿತು ಎನ್ನುವುದಕ್ಕೆ ಅವರು ಹಲವು ಆಯಾಮಗಳನ್ನು ಎದುರಿಡುತ್ತಾರೆ. ಒಂದು ಕ್ಷಣಕ್ಕೆ ರಾಜಕೀಯ ಪಂಡಿತರನ್ನು ಪಕ್ಕಕ್ಕೆ ಸರಿಸೋಣ. ಸೋಲುಂಡ ಪಕ್ಷಗಳ ರಾಜಕಾರಣಿಗಳು ಹೇಗೆ ಈ ವಿದ್ಯಮಾನವನ್ನು ವಿಶ್ಲೇಷಿಸುತ್ತಾರೆ ಎನ್ನುವುದೇ ಬಹಳ ಮುಖ್ಯವಾಗುತ್ತದೆ. ಏಕೆಂದರೆ ಈ ವಿಶ್ಲೇಷಣೆಯ ಮೇಲೆಯೇ ಭಾರತದ ಭವಿಷ್ಯದ ರಾಜಕೀಯ ಚಿತ್ರಣ ರೂಪಪಡೆಯಲಿದೆ.

ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯನವರು “ಉತ್ತರಪ್ರದೇಶದಲ್ಲಿ ಕೋಮು ಭಾವನೆ ಕೆರಳಿಸುವ ವಿಷಯಗಳನ್ನು ಮುಂದಿಟ್ಟು, ಚುನಾವಣೆ ಪ್ರಚಾರ ನಡೆಸಿ ಬಿಜೆಪಿ ಗೆದ್ದಿದೆ. ಬಿಜೆಪಿ ಗೆದ್ದಿರುವುದಕ್ಕೆ ಪ್ರಧಾನಿ ಮೋದಿ ಅಲೆ ಎಂದು ಪ್ರಚಾರ ಮಾಡುವುದು ಸರಿಯಲ್ಲ’ ಎನ್ನುತ್ತಾರೆ. ಆದರೆ ಅವರದ್ದೇ ಪಕ್ಷದ ಹಿರಿಯ ನಾಯಕ, ಮಾಜಿ ವಿತ್ತ ಸಚಿವ ಪಿ.ಚಿದಂಬರಂ, “ಮೋದಿ ಭಾರತದ ಅತಿ ಬಲಿಷ್ಠ ರಾಜಕೀಯ ಚಹರೆ ಎನ್ನುವುದನ್ನು ಈ ಚುನಾವಣೆಗಳು ಸಾಬೀತು ಮಾಡಿವೆ’ ಎಂದು ಒಪ್ಪಿಕೊಳ್ಳುತ್ತಾರೆ!  ವಾಸ್ತವವನ್ನು ಒಪ್ಪಿಕೊಂಡಾಗ ಮಾತ್ರ ಬದಲಾವಣೆಗೆ ತೆರೆದುಕೊಳ್ಳಲು ಸಾಧ್ಯ. ಇದೇ ಮಾತನ್ನೇ ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಓಮರ್‌ ಅಬ್ದುಲ್ಲಾ ಹೇಳಿರುವುದು.  ನಾವು 2019ನ್ನು ಮರೆತು, 2024ಕ್ಕೆ ಸಿದ್ಧತೆ ನಡೆಸಬೇಕಿದೆ ಎನ್ನುವ ಅವರ ಮಾತುಗಳು ಭಾರತದ ರಾಜಕೀಯ ಪಕ್ಷಗಳಲ್ಲಿ ಆಗಲೇಬೇಕಾದ ಬದಲಾವಣೆಯನ್ನು ಸ್ಪಷ್ಟವಾಗಿ ಬಿಂಬಿಸುತ್ತಿವೆ.

“ನಮ್ಮ ಪಕ್ಷ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ, ಕಾಮರೂಪ್‌ನಿಂದ ಕಛ…ನವರೆಗೂ’ ಇರಲಿದೆ ಎನ್ನುವ ಅಮಿತ್‌ ಶಾ ಮಾತು, ನಿಧ ನಿಧಾನಕ್ಕೆ ಸತ್ಯವಾಗುತ್ತಾ ಹೋಗುತ್ತಿರುವ ವೇಳೆಯಲ್ಲೇ, ಕಾಂಗ್ರೆಸ್‌, ಎಡಪಕ್ಷಗಳು ಮತ್ತು ಸ್ಥಳೀಯ ಪಕ್ಷಗಳು ಆತ್ಮಾವಲೋಕನ ಮಾಡಿಕೊಂಡು ಬದಲಾವಣೆಗೆ ತೆರೆದುಕೊಳ್ಳಲೇಬೇಕಿದೆ.  

Advertisement

“ದೇಶವನ್ನು ಕಾಂಗ್ರೆಸ್‌ ಮುಕ್ತ ಮಾಡುತ್ತೇವೆ’ ಎಂಬ ಬಿಜೆಪಿಯ ಮಾತಿಗೆ ಸಡ್ಡು ಹೊಡೆಯುವ ಕೆಲಸವಂತೂ ಕಾಂಗ್ರೆಸ್ಸಿಗರಿಂದ ಆಗುತ್ತಲೇ ಇಲ್ಲ. ಸದ್ಯಕ್ಕೆ ಬಿಜೆಪಿಯ ವೇಗ ಹೇಗಿದೆಯೆಂದರೆ  ದಶಕಗಳಿಂದ ಕೇಂದ್ರ ಸರಕಾರಗಳಿಂದ ಅಸಡ್ಡೆಗೆ ಗುರಿಯಾಗುತ್ತಾ ಬಂದ, ಭಾರತದಿಂದ ಮುಕ್ತಿ ಬೇಕೆಂದು ಧ್ವನಿಯೆತ್ತುತ್ತಿದ್ದ ಈಶಾನ್ಯ ರಾಜ್ಯಗಳಲ್ಲೂ ಅದು ಝಂಡಾ ಊರತೊಡಗಿದೆ. ಈಗ ಮಣಿಪುರದಲ್ಲಿ ಅಧಿಕಾರಕ್ಕೆ ಬರುತ್ತೇವೆ ಎನ್ನುತ್ತಿರುವ ಕಮಲದಳ ಅದಾಗಲೇ ಅಸ್ಸಾಂ ಮತ್ತು ಅರುಣಾಚಲ ಪ್ರದೇಶದಲ್ಲಿ ನೆಲೆಯೂರಿದೆ. 2018ರ ತ್ರಿಪುರಾ ವಿಧಾನಸಭಾ ಚುನಾವಣೆಯಲ್ಲಿ ಸಿಪಿಐ-ಎಂ ಸರಕಾರವನ್ನು ಕಿತ್ತೆಸೆದು ಅಧಿಕಾರಕ್ಕೆ ಬರುತ್ತೇವೆ ಎಂಬ ಭರವಸೆಯೂ ಅದರದ್ದು. ಬಿಜೆಪಿಯ ಮಾಸ್ಟರ್‌ ಸ್ಟ್ರೋಕ್‌ ಅನ್ನು ಎದುರಿಸಲು ಎಡಪಕ್ಷ ಸಿದ್ಧವಾಗಿದೆಯೇ ಎಂದು ತ್ರಿಪುರಾದತ್ತ ನೋಡಿದಾಗ, ಸಿಪಿಐ-ಎಂ ಮಂದಿ ಒಳಜಗಳಗಳಲ್ಲೇ ಬ್ಯುಸಿಯಾಗಿದ್ದಾರೆ ಎನ್ನುವುದು ಕಾಣಿಸುತ್ತದೆ. 

ಬಿಜೆಪಿಯನ್ನು ಎದುರಿಸುವುದಕ್ಕೆ ಅವರ ಬಳಿ ಯಾವ ಅಸ್ತ್ರವಿದೆ ಎಂದು ಕಾದು ನೋಡಿ. ಎಂದಿನಂತೆ, “ಮೋದಿ ಕೋಮುವಾದಿ’, “ಬಂಡವಾಳಶಾಹಿಗಳ ಕೈಗೊಂಬೆ’ ಇತ್ಯಾದಿ ಜಂಗು ಹಿಡಿದ ಬಾಣಗಳನ್ನೇ ಅದು ಹೊರತೆಗೆಯುತ್ತದೆ. ಇಂದು ಬಿಜೆಪಿಯನ್ನು ಎದುರಿಸುತ್ತಿರುವ ಎಲ್ಲಾ ರಾಜಕೀಯ ಪಕ್ಷಗಳೂ, ಮುಖ್ಯವಾಗಿ ಕಾಂಗ್ರೆಸ್‌ ಬಳಸಿಕೊಳ್ಳುತ್ತಿರುವುದು ಇದೇ ಅಸ್ತ್ರವನ್ನೇ.. ಈ ವಿಷಯಗಳನ್ನು ಹಿಡಿದುಕೊಂಡು ಚುನಾವಣೆಗಳನ್ನು ಗೆದ್ದುಬಿಡುತ್ತೇವೆ ಎಂದು ಭಾವಿಸಿದರೆ ಕೈ ಪಕ್ಷದ ಅಳಿದುಳಿದ ಬೆರಳುಗಳೂ ಮುರಿಯುವುದು ಖಚಿತ. ಬಿಜೆಪಿ ಹೇಗಿದೆ ಎಂದು ಬೆರಳು ತೋರಿಸುವ ಬದಲು,  ತಾವು ಬಿಜೆಪಿಗಿಂತ ಹೇಗೆ  ಭಿನ್ನವಾಗಿ ಆಡಳಿತ(ಅಭಿವೃದ್ಧಿಪರ) ನೀಡುತ್ತೇವೆ ಎನ್ನುವುದನ್ನು ಜನರಿಗೆ ತೋರಿಸಿದಾಗ ಮಾತ್ರ ಅದರ ಮಾತುಗಳಿಗೆ ಮನ್ನಣೆ ಸಿಗುತ್ತದೆ. 

ದೇಶಾದ್ಯಂತ ಬಿಜೆಪಿಯ ತೀವ್ರ ವಿಸ್ತರಣೆಗೆ ಕಾರಣವನ್ನು ಹುಡುಕುವುದು ಕಷ್ಟವೇನಲ್ಲ. ಉಳಿದ ಪಕ್ಷಗಳಿಗೆ ಹೋಲಿಸಿದರೆ ಅದು ಮತದಾರರ ನಾಡಿಮಿಡಿತವನ್ನು ಸುಲಭವಾಗಿ ಪತ್ತೆ ಹಚ್ಚುತ್ತಿದೆ. ಅಂದರೆ 2014ರ ಲೋಕಸಭಾ ಚುನಾವಣೆಯ ನಂತರ ಬದಲಾಗಿದ್ದು ಕಾಂಗ್ರೆಸ್‌ ಸರಕಾರವಷ್ಟೇ ಅಲ್ಲ, ಭಾರತದ ಮತದಾರ ವರ್ಗವೂ ಹೊಸ ರೂಪ ಪಡೆದಿದೆ ಎನ್ನುವುದನ್ನು ಅದು ಗುರುತಿಸಿದೆ. ಇಂದು ಮತದಾರರಿಗೆ ಸ್ಥಳೀಯ ಸಮಸ್ಯೆಗಳು ಎಷ್ಟು ಮುಖ್ಯವೋ, ರಾಷ್ಟ್ರೀಯ ಸಮಸ್ಯೆಗಳೂ ಅಷ್ಟೇ ಮುಖ್ಯ. ಸಿದ್ದರಾಮಯ್ಯ ಏನು ಮಾಡುತ್ತಿದ್ದಾರೆ ಎನ್ನುವುದನ್ನಷ್ಟೇ ಅಲ್ಲ, ಅಲ್ಲಿ ದೂರದ ದೆಹಲಿಯಲ್ಲಿ ಕುಳಿತ ಕೇಜ್ರಿವಾಲ್‌ ಏನು ಮಾತನಾಡುತ್ತಿದ್ದಾರೆ ಎನ್ನುವುದನ್ನೂ  ಮತದಾರರು ನಿರಂತರವಾಗಿ ತಿಳಿದುಕೊಳ್ಳುತ್ತಿದ್ದಾರೆ. ಮತದಾರರ ರಾಜಕೀಯ ಪ್ರಜ್ಞೆ ಸ್ಥಳೀಯ ಸಮಸ್ಯೆಗಳ‌ ಗಡಿ ದಾಟಿ ರಾಷ್ಟ್ರ ಮಟ್ಟಕ್ಕೆ ಕಾಲಿಟ್ಟಿದೆ. ಜೆಎನ್‌ಯು ಸಮಸ್ಯೆ, ಸರ್ಜಿಕಲ್‌ ಸ್ಟ್ರೈಕ್‌, ಚೀನಾಕ್ಕೆ ಖಡಕ್‌ ಉತ್ತರ ರವಾನಿಸುವುದೆಲ್ಲ ನಮಗೆ ಸಂಬಂಧಿಸಿದ ವಿಷಯವಲ್ಲ ಎನ್ನುವ ಮತದಾರರ ಸಂಖ್ಯೆಯೀಗ ಗಣನೀಯವಾಗಿ ಕಡಿಮೆಯಾಗಿದೆ.

ಈ ಕಾರಣಕ್ಕಾಗಿಯೇ ಉತ್ತರ ಪ್ರದೇಶ, ಉತ್ತರಾಖಂಡದ ವಿಧಾನಸಭಾ ಚುನಾವಣೆಗಳಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯ ಹೆಸರು ಘೋಷಿಸದೆಯೇ, ಮೋದಿ ಚಹರೆಯನ್ನು ಮುಂದಿಟ್ಟು ಚುನಾವಣೆ ಗೆದ್ದುಬಿಡುತ್ತದೆ ಬಿಜೆಪಿ! ಅಷ್ಟೇಕೆ, ಡಿಮಾನಿಟೈಸೇಷನ್‌ ನಂತರ ಮಹಾರಾಷ್ಟ್ರದಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆ ಮತ್ತು ಒಡಿಶಾದಲ್ಲಾದ ಪಂಚಾಯತ್‌ ಚುನಾವಣೆಯ ಉದಾಹರಣೆಯನ್ನೇ ನೋಡಿ. ಸಾಮಾನ್ಯವಾಗಿ ಇಂಥ ಚುನಾವಣೆಗಳು ಸ್ಥಳೀಯ ವಿಷಯಗಳ ಆಧಾರದಲ್ಲೇ ನಿರ್ಧರಿತವಾಗುತ್ತವಾದರೂ, ನೋಟು ಅಮಾನ್ಯದ ನಂತರ ನಡೆದ ಬಹುತೇಕ ಸ್ಥಳೀಯ ಸಂಸ್ಥೆಯ ಚುನಾವಣೆಗಳಲ್ಲಿ(ಹರ್ಯಾಣ ಸೇರಿದಂತೆ) ಬಿಜೆಪಿ ಅದ್ಭುತ ಯಶಸ್ಸು ಗಳಿಸಿದೆ. ಇದರ ಹಿಂದೆ ಆ ಪಕ್ಷ ರಾಷ್ಟ್ರೀಯ ಸ್ತರದಲ್ಲಿ ಕಟ್ಟಿಕೊಳ್ಳುತ್ತಿರುವ ಚಹರೆಯೂ ಬಹುಪಾಲು ಕಾರಣ.

ಈ ಅಂಶವನ್ನು ಅರ್ಥಮಾಡಿಕೊಳ್ಳಲು ಸ್ಥಳೀಯ ಪಕ್ಷಗಳು ಎಡವುತ್ತಿವೆ ಎನ್ನುವುದಕ್ಕೆ ಮಾಯಾವತಿಯವರ ಬಿಎಸ್‌ಪಿಗೆ ಈಗ ಬಂದೊದಗಿರುವ ಸ್ಥಿತಿಯೇ ಸಾಕ್ಷಿ. ಜಾತಿ ಸಮೀಕರಣವೊಂದೇ ಮದ್ದು ಎನ್ನುವ ಕಾರ್ಯತಂತ್ರ ಈಗ ಹಳಸಲಾಗುತ್ತಿದೆ. ಈ ವಿಷಯವನ್ನು ಅರ್ಥಮಾಡಿಕೊಳ್ಳದಿದ್ದರೆ ಅಸ್ತಿತ್ವದಲ್ಲುಳಿಯಲು ಹೆಣಗಬೇಕಾಗುತ್ತದಷ್ಟೆ. 

ಹಾಗೆಂದು ಯಾವ ಸರಕಾರವೂ ಮಾಡದ ಕೆಲಸವನ್ನು ಬಿಜೆಪಿ ನೇತೃತ್ವದ ಎನ್‌ಡಿಎ ಮಾಡುತ್ತಿದೆ ಎಂದೇನೂ ಅಲ್ಲ, ಮಾಡುತ್ತಿದೆ ಆದರೆ ವಿಭಿನ್ನವಾಗಿ. ಉದಾಹರಣೆಗೆ ಸ್ವತ್ಛ ಭಾರತ ಅಭಿಯಾನವನ್ನೇ ತೆಗೆದುಕೊಳ್ಳಿ. ಇದೇನೂ ಭಾರತಕ್ಕೆ ಹೊಸ ಕಲ್ಪನೆಯಲ್ಲ. 1999ರಲ್ಲಿ ವಾಜಪೇಯಿ ಆಡಳಿತದಲ್ಲಿ ಆರಂಭವಾಗಿ ಮನಮೋಹನ್‌ ಅಧಿಕಾರದೊಂದಿಗೆ 2014ರಲ್ಲಿ ಅಂತ್ಯಕಂಡ ನಿರ್ಮಲ ಭಾರತ ಅಭಿಯಾನದ ಮುಂದುವರಿದ ರೂಪವೇ ಇದು. ಆದರೆ ಅಂದಿನ ಸರಕಾರಗಳು ಇದನ್ನು ಕೇವಲ ಒಂದು “ಸರಕಾರಿ ಯೋಜನೆ’ ಎಂದು ನೋಡಿದವೇ ಹೊರತು, ಮೋದಿಯವರಂತೆ ಅದಕ್ಕೆ  ಒಂದು ಚಳವಳಿಯ ರೂಪ ಕೊಟ್ಟು, ಜನರನ್ನು ಅದರಲ್ಲಿ ಭಾಗೀದಾರರನ್ನಾಗಿಸುವ ಕೆಲಸಕ್ಕೆ ಮುಂದಾಗಿಯೇ ಇರಲಿಲ್ಲ. ದೇಶ ಸ್ವತ್ಛವಾಗುತ್ತಿದೆಯೋ ಇಲ್ಲವೋ ಬೇರೆ ವಿಷಯ, ಆದರೆ ಸ್ವತ್ಛವಾಗುತ್ತಿದೆ ಎನ್ನುವ ನಂಬಿಕೆ ಹುಟ್ಟುವುದಕ್ಕೆ ಮೋದಿ ಕಾರಣರಾಗಿದ್ದಾರೆ.
 
ಇನ್ನು ಡಿಮಾನಿಟೈಸೇಷನ್‌ ವಿಷಯಕ್ಕೆ ಬಂದರೆ ಟೀಕಾಕಾರರು ಇದನ್ನು ಬೃಹತ್‌ ವೈಫ‌ಲ್ಯ ಎಂದು ಕರೆಯುತ್ತಾರೆ. ಆದರೆ ಮೋದಿ ಅವರ ಪಾಲಿಗೆ ಈ ನಡೆ ವರವಾಗಿ ಪರಿಣಮಿಸಿದೆ. ನೋಟು, ದೇಶದ ಪ್ರತಿಯೊಬ್ಬರ ಕೈಯಲ್ಲೂ ಹರಿದಾಡುತ್ತದೆ. ಹೀಗಾಗಿ ಡಿಮಾನಿಟೈಸೇಷನ್‌ ನಂತರ ಭಾರತದ ಪ್ರತಿಯೊಬ್ಬ ಮತದಾರನ ನಾಲಿಗೆಯಲ್ಲೂ ಮೋದಿ ಹೆಸರು ಅಚ್ಚಾಗಿಬಿಟ್ಟಿದೆ. ಅಮ್ಮ-ಅಯ್ಯನ ಹೊರತು ಬೇರೆ ಲೋಕವೇ ಇಲ್ಲ ಎಂಬಂತೆ ಬದುಕಿದ್ದ ತಮಿಳು ಮತದಾರರಿಗೂ ಈಗ ಮೋದಿ ಬಗ್ಗೆ ಕುತೂಹಲವಿದೆ ಎಂದರೆ ಯೋಚಿಸಿ!  

ಜನ ತಾಸುಗಟ್ಟಲೇ ಬಿಸಿಲಲ್ಲಿ ನಿಂತು ಹೈರಾಣಾದರೂ,  “ವಿಫ‌ಲವಾಗಲಿ, ಸಫ‌ಲವಾಗಲಿ, ಮೋದಿ ಬದಲಾವಣೆಗಾಗಿ ದೊಡ್ಡ ರಿಸ್ಕ್ ತೆಗೆದುಕೊಳ್ಳುವ ನಾಯಕ’ ಎನ್ನುತ್ತಿದ್ದಾರೆ. ಇಂದು ಎಲ್ಲಾ ರಾಜ್ಯಗಳು ಬಯಸುತ್ತಿರುವುದು ಇಂಥ ರಿಸ್ಕ್ ತೆಗೆದುಕೊಳ್ಳುವ ಗುಣ ಇರುವವರನ್ನೇ. ಅಂದರೆ “ಅಭಿವೃದ್ಧಿ’ ಮಂತ್ರವನ್ನು ಜಪಿಸುವವರಿಗೆ ಜೈ ಅನ್ನುತ್ತಿದ್ದಾರೆ ಮತದಾರರು. ಬಿಹಾರದಲ್ಲಿ ನಿತೀಶ್‌ ಕುಮಾರ್‌ರ ಗೆಲುವು ಇದಕ್ಕೆ ಅತ್ಯುತ್ತಮ ಉದಾಹರಣೆ. ಈ ರೀತಿಯ ವರ್ಚಸ್ವಿ ನಾಯಕತ್ವ ಇರುವವರು ಕಾಂಗ್ರೆಸ್‌ನಲ್ಲಿ ಈಗ ಯಾರಿದ್ದಾರೆ? 

ರಾಹುಲ್‌ ಗಾಂಧಿ ಪಕ್ಷವನ್ನು ಎತ್ತಿನಿಲ್ಲಿಸುತ್ತೇನೆ ಎಂದು ಮುಂದಾಗಿ, ಅದಕ್ಕೆ ಹೆಚ್ಚು ಲುಕ್ಸಾನು ಮಾಡುತ್ತಿದ್ದಾರೆ. ನಾಯಕತ್ವದಲ್ಲಿ ಬದಲಾವಣೆ ತರದಿದ್ದರೆ ಕಾಂಗ್ರೆಸ್‌ಗೆ ರಾಷ್ಟ್ರೀಯ ಸ್ತರದಲ್ಲಿ ಉಳಿಗಾಲವಿಲ್ಲ. ಉತ್ತರ ಪ್ರದೇಶ ಚುನಾವಣೆಯ ಸೋಲು ಈ ವಿಷಯದಲ್ಲಿ ಕಾಂಗ್ರೆಸ್ಸಿಗರಿಗೆ ಧ್ವನಿ ತರುವ ಸಾಧ್ಯತೆಯಿದೆ. ಮುಂದಿನ ಕೆಲವೇ ದಿನಗಳಲ್ಲಿ ಪ್ರಿಯಾಂಕಾ  ವಾದ್ರಾ ಆ ಪಕ್ಷದ ಮುಖ್ಯ ಚಹರೆಯಾದರೂ ಆಶ್ಚರ್ಯವಿಲ್ಲ. 

ಬದಲಾಗಬೇಕಿದೆ ರಣತಂತ್ರ:  ಬಿಜೆಪಿ ಪಾಲಿನ ಧನಾತ್ಮಕ ಅಂಶವೆಂದರೆ ಬೇರು ಮಟ್ಟದಲ್ಲಿರುವ ಅದರ ಕಾರ್ಯಕರ್ತರ ಸಂಖ್ಯೆ. 60 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್‌ಗಿಂತಲೂ, ಆರ್‌ಎಸ್‌ಎಸ್‌, ವಿಎಚ್‌ಪಿಯಂಥ ಬಲಿಷ್ಠ ಬೇಸ್‌ ಹೊಂದಿರುವ ಬಿಜೆಪಿಗೆ ತನ್ನ ರಣತಂತ್ರಗಳನ್ನು ಅನುಷ್ಠಾನಕ್ಕೆ ತರುವುದೂ ಈಗ ಸರಳ. ಇದಷ್ಟೇ ಅಲ್ಲ, ದೇಶದ ಟ್ರೆಂಡ್‌ ಅನ್ನು ನಿರ್ಧರಿಸಲಾರಂಭಿಸಿರುವ ಸಾಮಾಜಿಕ ಮಾಧ್ಯಮಗಳಲ್ಲೂ ಬಿಜೆಪಿಯ ಬೆಂಬಲಿಗರದ್ದೇ ಮೇಲುಗೈ. ಇಂದು ವಾಟ್ಸಾಪ್‌, ಫೇಸ್‌ಬುಕ್‌, ಟ್ವಿಟರ್‌ನಲ್ಲಿ ಹರಿದಾಡುವ ಪ್ರೊಪಗಾಂಡಾಗಳು ಆ ಲೋಕಕ್ಕಷ್ಟೇ ಸೀಮಿತವಾಗಿ ಉಳಿದಿಲ್ಲ, ಹಳ್ಳಿಯಲ್ಲಿ ಕುಳಿತ ಯುವಕನೊಬ್ಬನ ಮೊಬೈಲ್‌ಗ‌ೂ ಅವು ತಲುಪುತ್ತಿವೆ. ಬಿಜೆಪಿಯ ಯುವ ಬೇಸ್‌ ನಿರ್ಮಾಣವಾಗುವಲ್ಲಿ ಡಿಜಿಟಲ್‌ ಇಂಡಿಯಾ, ಸ್ಟಾರ್ಟ್‌ಅಪ್‌ ಇಂಡಿಯಾದಂಥ ಕಾರ್ಯಕ್ರಮಗಳಷ್ಟೇ ಅಲದೆÉ, ಸಾಮಾಜಿಕ ಮಾಧ್ಯಮದ ಪ್ರಬಲ ಬಳಕೆಯೂ ಉಪಯೋಗಕ್ಕೆ ಬರುತ್ತಿದೆ. ಒಟ್ಟಲ್ಲಿ ಬಿಜೆಪಿ ಏನೋ ಮಾಡುತ್ತಿದೆ ಎನ್ನುವ ನಿರಂತರ ಭಾವ ಮತದಾರರ ಮನದಲ್ಲಿ ಅಚ್ಚೊತ್ತುತ್ತಿದೆ. ಈ ವಿಷಯದಲ್ಲಿ ಕಾಂಗ್ರೆಸ್‌ಗಿಂತಲೂ ಆಮ್‌ ಆದ್ಮಿ ಪಕ್ಷ ಉತ್ತಮವಾಗಿದೆ ಎನ್ನಬಹುದು. ಆದರೆ ತಾನು ಕೇಂದ್ರ ಮಟ್ಟದಲ್ಲಿ ಬಿಜೆಪಿಗೆ ಪರ್ಯಾಯ ಎಂದು ಬಿಂಬಿಸಿಕೊಳ್ಳಲು ಅದು ಪ್ರಯತ್ನಿಸುತ್ತಿರುವುದು ದುರಂತ. ಬಲಿಷ್ಠ ಬುನಾದಿಯಿಲ್ಲದೇ ಗಟ್ಟಿಮುಟ್ಟು ಕಟ್ಟಡಗಳನ್ನು ನಿರ್ಮಿಸಲು ಸಾಧ್ಯವಿಲ್ಲ ಎನ್ನುವ ಮಾತು ಪಂಜಾಬ್‌ ಮತ್ತು ಗೋವಾದ ಫ‌ಲಿತಾಂಶ ಆಪ್‌ಗೆ ತೋರಿಸಿಕೊಟ್ಟಿದೆ. ಈ ಸೋಲಿನ ನಂತರ ಕೇಜ್ರಿವಾಲ್‌ ಮಿತಿಮೀರಿದ ಮಹತ್ವಾಕಾಂಕ್ಷೆಯನ್ನು ಕಡಿಮೆ ಮಾಡಿ, ದೆಹಲಿಯಲ್ಲೇ ಹೆಚ್ಚು ಕಾಲ ಕಳೆಯಬಹುದು. ಕಳೆಯಬೇಕೂ ಕೂಡ. 

ಇನ್ನು ಪ್ರಶಾಂತ್‌ ಕಿಶೋರ್‌ರಂಥ ಚುನಾವಣಾ ರಣತಂತ್ರಗಾರರನ್ನು ಈಗ ಬಹುತೇಕ ಪಕ್ಷಗಳು ಕರೆತರುತ್ತಿವೆ. ಆದರೆ ಇವರಿಂದಲೇ ಪಕ್ಷದ ದಿಕ್ಕನ್ನು ಬದಲಿಸಲು ಸಾಧ್ಯವಿಲ್ಲ. ಬೇರು ಮಟ್ಟದ ಕಾರ್ಯಕರ್ತರ ಬೃಹತ್‌ ಪಡೆಯನ್ನು ಕಟ್ಟಿನಿಲ್ಲಿಸಿದ್ದಾಗ ಮಾತ್ರ, ಇಂಥವರೆಲ್ಲ ಪಕ್ಷಗಳಿಗೆ ಉಪಯೋಗಕ್ಕೆ ಬರುತ್ತಾರೆ. 
 
ಇವೆಲ್ಲದರ ನಡುವೆಯೇ ಬಿಜೆಪಿಯು ಕೇರಳ, ಪಶ್ಚಿಮ ಬಂಗಾಳ, ತಮಿಳುನಾಡು, ಆಂಧ್ರ, ತೆಲಂಗಾಣದಲ್ಲಿ ದುರ್ಬಲವಾಗಿದೆ  ಎನ್ನುವುದು ನಿಜ. ಈ ಭಾಗಗಳಲ್ಲಿ ನೆಲೆಯೂರುವುದು ಅಷ್ಟು ಸುಲಭ ಕೆಲಸವೇನೂ ಅಲ್ಲ. ಆದರೆ ಈಗ  ಕಾಂಗ್ರೆಸ್‌ನ ಭದ್ರಕೋಟೆಯಂತಾಗಿರುವ ಕರ್ನಾಟಕದ ವಿಚಾರದಲ್ಲಿ ಈ ಮಾತು ಹೇಳುವುದಕ್ಕೆ ಸಾಧ್ಯವಿಲ್ಲ. ಮುಂದಿನ ವಿಧಾನಸಭಾ ಚುನಾವಣೆಗಳಲ್ಲಿ ಕೈ ಪಾಳಯಕ್ಕೆ ಕಮಲ ಹೊರೆಯಾಗಲಿರುವ ಲಕ್ಷಣಗಳೂ ಇವೆ. 

ಕಾಂಗ್ರೆಸ್‌ ಸೇರಿದಂತೆ,  ಅಸ್ತಿತ್ವದಲ್ಲುಳಿಯಲು ಬಯಸುತ್ತಿರುವ ಪಕ್ಷಗಳೆಲ್ಲ ಬದಲಾಗಿರುವ ಮತದಾರರ ನಾಡಿಮಿಡಿತಕ್ಕೆ ಸ್ಪಂದಿಸುವ ಕಲೆಯನ್ನು ತುರ್ತಾಗಿ ಕೈವಶ ಮಾಡಿಕೊಳ್ಳಲೇಬೇಕು. ದೇಶಾದ್ಯಂತ ನಮೋದ್ಘೋಷ ಮೊಳಗುತ್ತಿರುವುದು ಸತ್ಯ. ಅದು ಸರಿಯೇ ತಪ್ಪೋ ಬೇರೆ ವಿಚಾರ. ಆದರೆ ವಾಸ್ತವವನ್ನು ಅರಿಯದೇ ಕಿವಿ ಮುಚ್ಚಿಕೊಂಡು ನಮೋದ್ವೇಷ  ಮಾಡುತ್ತಾ ಹೋಗುವುದರಿಂದ ಯಾವ ಪ್ರಯೋಜನವೂ ಇಲ್ಲ. 

ಈ ವಿಷಯದಲ್ಲಿ ಓಮರ್‌ ಅಬ್ದುಲ್ಲಾ ಅವರ ಈ ಮಾತು ಬಿಜೆಪಿಯೇತರ ಪಕ್ಷಗಳಿಗೆ ಪಾಠವಾಗಬೇಕು: “”ಬಿಜೆಪಿಯನ್ನು ಮಣಿಸುವುದು ಅಸಾಧ್ಯವೇನೂ ಅಲ್ಲ ಎನ್ನುವುದನ್ನು ಪಂಜಾಬ್‌, ಗೋವಾ, ಮಣಿಪುರದ ಫ‌ಲಿತಾಂಶಗಳು ಸಾರುತ್ತಿವೆ. ಆದರೆ ಪಕ್ಷಗಳು ತಮ್ಮ ಕಾರ್ಯತಂತ್ರವನ್ನು ಬಿಜೆಪಿಯನ್ನು ಟೀಕಿಸಲು ಬಳಸುವ ಬದಲು ಧನಾತ್ಮಕ ಪರ್ಯಾಯ ರಚಿಸಲು ಉಪಯೋಗಿಸಬೇಕು”

– ರಾಘವೇಂದ್ರ ಆಚಾರ್ಯ

Advertisement

Udayavani is now on Telegram. Click here to join our channel and stay updated with the latest news.

Next