Advertisement

ನಾನು ಕೈಗೊಂಡ ಅಭಿವೃದ್ಧಿ ಆಧರಿಸಿ ಮತ್ತೂಂದು ಅವಕಾಶ ಕೇಳುತ್ತಿದ್ದೇನೆ

08:58 AM Apr 14, 2019 | Sriram |

ಐವತ್ತರ ಸಂಭ್ರಮದಲ್ಲಿರುವ ಉದಯವಾಣಿ ತನ್ನ ಮಂಗಳೂರು ಬ್ಯೂರೋ ಕಚೇರಿಯಲ್ಲಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳ ಜತೆ ಅಭ್ಯುದಯ ಸಂವಾದವನ್ನು ಹಮ್ಮಿಕೊಂಡಿತ್ತು. ಬಿಜೆಪಿ ಅಭ್ಯರ್ಥಿ ನಳಿನ್‌ ಕುಮಾರ್‌ ಕಟೀಲು ಪಾಲ್ಗೊಂಡು ತಮ್ಮ ಯೋಜನೆ-ಚಿಂತನೆಗಳನ್ನು ಸಂಪಾದಕೀಯ ಬಳಗದ ಸದಸ್ಯರೊಂದಿಗೆ ಹಂಚಿಕೊಂಡರು. ಅದರ ಸಂಗ್ರಹಿತ ರೂಪ ಇಲ್ಲಿ ನೀಡಲಾಗಿದೆ.

Advertisement

-ನಿಮ್ಮನ್ನು ಮತದಾರರು ಯಾವ ಕಾರಣಗಳಿಗೆ ಪುನರಾಯ್ಕೆ ಮಾಡಬೇಕು?
ಹತ್ತು ವರ್ಷಗಳಿಂದ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದನಾಗಿ ಜನರ ಸೇವೆ ಮಾಡುತ್ತಿದ್ದೇನೆ. ಮೊದಲ 5 ವರ್ಷ ನಾನು ವಿಪಕ್ಷದಲ್ಲಿದ್ದೆª. ಆದರೆ ಈ ಐದು ವರ್ಷ ಆಡಳಿತ ಪಕ್ಷದ ಸಂಸದನಾಗಿ ಜಿಲ್ಲೆಗೆ 16,520 ಕೋಟಿ ರೂ. ಅನುದಾನ ತರುವಲ್ಲಿ ಯಶಸ್ವಿಯಾಗಿದ್ದೇನೆ. ಸ್ಮಾರ್ಟ್‌ಸಿಟಿ, ಸಜ್ಜನಿಕೆಯ ರಾಜಕಾರಣ ಮಾಡಿದ್ದೇನೆ. ಲೋಕಸಭೆ ಅಧಿವೇಶನ ದಲ್ಲಿ ಭಾಗವಹಿಸುವಿಕೆ, ಪ್ರಶ್ನೆಗಳನ್ನು ಕೇಳುವುದು, ಅನುದಾನ ಸದ್ಬಳಕೆಯಲ್ಲಿ ಕ್ರಿಯಾಶೀಲ ಸಂಸದ ಎಂದು ಮಾಧ್ಯಮಗಳು ಹೇಳಿವೆ. ಮತ್ತೆ ಅವಕಾಶ ನೀಡಿದರೆ ಮತ್ತಷ್ಟು ಅಭಿವೃದ್ಧಿ ಕೆಲಸ ಮಾಡುವೆ.

– ನಿಮ್ಮ ಸಾಧನೆ ಶೂನ್ಯ ಎಂಬುದು ವಿಪಕ್ಷ‌ ಆರೋಪ ?ಆರೋಪ ಸಹಜ. ಆದರೆ 10 ವರ್ಷದಲ್ಲಿ ಅಭಿವೃದ್ಧಿ
ವಿಷಯದಲ್ಲಿ ಆಮೂಲಾಗ್ರ ಬದಲಾವಣೆ ಆಗಿದೆ. ಆರಂಭದ‌‌ 5 ವರ್ಷ ನಮ್ಮ ಸರಕಾರವಿರಲಿಲ್ಲ. 2ನೇ ಅವಧಿಯಲ್ಲಿ ಸಾಕಷ್ಟು ಕೆಲಸಗಳಾಗಿವೆ. ಪಾಸ್‌ ಪೋರ್ಟ್‌ ಕಚೇರಿ, ರೈಲು ನಿಲ್ದಾಣಗಳ ಮೇಲ್ದರ್ಜೆ,ಮಂಗಳೂರಿನಲ್ಲಿ ಕೊಂಕಣ ರೈಲ್ವೇ ಪ್ರಾದೇಶಿಕ ಕಚೇರಿ, ಆರ್‌ಎಂಎಸ್‌ ರೀಜನಲ್‌ ಕಚೇರಿ ಮಂಜೂರು, ರಾಷ್ಟ್ರೀಯ ಹೆದ್ದಾರಿಗಳ ಚತುಷ್ಪಥ, ಸ್ಮಾರ್ಟ್‌ಸಿಟಿ ಯೋಜನೆ, ನವಮಂಗಳೂರು ಸ್ಮಾರ್ಟ್‌ಪೋರ್ಟ್‌ ಯೋಜನೆ, ಕುಳಾç ಮೀನುಗಾರಿಕಾ ಜೆಟ್ಟಿಗೆ ಶಿಲಾನ್ಯಾಸ-ಇವೆಲ್ಲ ಅಭಿವೃದ್ಧಿ ಕೆಲಸಗಳಲ್ಲವೇ?

– ಮಂಗಳೂರು ರೈಲ್ವೇ ವಲಯ ಆಗಿಲ್ಲ ಏಕೆ?
ರೈಲ್ವೇಗೆ ಸಂಬಂಧಪಟ್ಟು ಮಂಗಳೂರು ತ್ರಿಶಂಕು ಸ್ಥಿತಿಯಲ್ಲಿದೆ. ದಕ್ಷಿಣ ರೈಲ್ವೇ, ನೈಋತ್ಯ ರೈಲ್ವೇ ವಲಯ ಹಾಗೂ ಕೊಂಕಣ ರೈಲ್ವೇ ವ್ಯಾಪ್ತಿಗೆ ಇದು ಒಳಪಟ್ಟಿದೆ. ಮಂಗಳೂರು ರೈಲ್ವೇ ವಿಭಾಗದ ಬೇಡಿಕೆ ಮಂಡಿಸಲಾಗಿತ್ತು. ಆದರೆ ತಾಂತ್ರಿಕ ಕಾರಣಗಳಿಂದ ಅದು ಕಷ್ಟ. ಈ ಕಾರಣಕ್ಕೆ ಮಂಗಳೂರನ್ನು ಪ್ರತ್ಯೇಕ ರೈಲ್ವೇ ರೀಜನ್‌ ಮಾಡುವ ಪ್ರಸ್ತಾವ ಮಂಡಿ ಸಲಾಗಿದೆ. ಇದು ಕಾರ್ಯಗತಗೊಂಡರೆ ರೈಲ್ವೇ ವಿಭಾಗಕ್ಕಿಂತಲೂ ಹೆಚ್ಚಿನ ಪ್ರಯೋಜನವಾಗಲಿದೆ.

– ಹೆದ್ದಾರಿಗಳ ಮೇಲ್ದರ್ಜೆಗೆ ನಿಮ್ಮ ಕೊಡುಗೆ?
ಕುಲಶೇಖರ-ಕಾರ್ಕಳ ನಡುವೆ ರಾಷ್ಟ್ರೀಯ ಹೆದ್ದಾರಿಯ ಅಗಲ ಕಡಿಮೆ ಮಾಡಬೇಕೆಂಬ ರಾಜ್ಯ ಸರಕಾರದ ತಗಾದೆಯಿಂದ ಅನುಷ್ಠಾನ ಪ್ರಕ್ರಿಯೆ ವಿಳಂಬವಾಗಿತ್ತು. ಆದರೆ ಈಗ ನಿವಾರಣೆಯಾಗಿ ಶಿಲಾನ್ಯಾಸ ನೆರವೇರಿದೆ. ಗುರುಪುರ ಹೊಸ ಸೇತುವೆ ಕಾಮಗಾರಿಯೂ ಪ್ರಾರಂಭವಾಗಿದೆ. ಬಿ.ಸಿ.ರೋಡ್‌-ಅಡ್ಡಹೊಳೆ ರಸ್ತೆ ಕಾಮಗಾರಿಗಿದ್ದ ಹೆಚ್ಚುವರಿ ಭೂ ಸ್ವಾಧೀನ ಸಮಸ್ಯೆಯೂ ಬಗೆಹರಿದಿದೆ. ಮೂಲ್ಕಿ- ಬಿ.ಸಿ.ರೋಡ್‌, ತೊಕ್ಕೊಟ್ಟು-ಮೆಲ್ಕಾರ್‌ ಸಹಿತ ರಸ್ತೆಗಳ ಉನ್ನತೀಕರಣಕ್ಕೆ ಶಿಲಾನ್ಯಾಸ ಆಗಿದೆ.ಮಾಣಿ- ಮೈಸೂರು ಹೆದ್ದಾರಿ ಮೇಲ್ದರ್ಜೆಗೇರಿಸಲು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಹಸ್ತಾಂತರ ಆಗಿದೆ.

Advertisement

– 10 ವರ್ಷಗಳ ಹಿಂದೆ ಆರಂಭವಾದ ಪಂಪ್‌ವೆಲ್‌- ತೊಕ್ಕೊಟ್ಟು ಮೇಲ್ಸೇತುವೆ ಪೂರ್ಣಗೊಳ್ಳ ದಿರುವುದು ನಿಮ್ಮ ಹೊಣೆಯಲ್ಲವೇ?
ಕಾಮಗಾರಿಯ ನಿಧಾನಗತಿಗೆ ಯುಪಿಎ ಸರಕಾರ, ರಾಜ್ಯದಲ್ಲಿನ ಈ ಹಿಂದಿನ ಕಾಂಗ್ರೆಸ್‌ ಸರಕಾರ ಹಾಗೂ ಸ್ಥಳೀಯ ಕಾಂಗ್ರೆಸ್‌ ಶಾಸಕರೇ ಕಾರಣ. ಯುಪಿಎ ಸರಕಾರವಿದ್ದಾಗ, ಬಿಒಟಿ (ಬಿಲ್ಡ್‌ ಆಪರೇಟ್‌ ಟ್ರಾನ್ಸ್‌ಫರ್‌) ನಿಯಮದಡಿ ನವಯುಗ ಸಂಸ್ಥೆ ಟೆಂಡರ್‌ ಪಡೆಯಿತು. 2012ರಲ್ಲಿ ಕಾಮಗಾರಿ ಆರಂಭವಾಗಿತ್ತಾದರೂ ಮಹಾವೀರ ವೃತ್ತದ ಬಳಿ ಇರುವ ಕಲಶ ಉಳಿಸಲು ಬೇಡಿಕೆ ಇತ್ತು. ಈ ಸಂಬಂಧ ಮಹಾನಗರ ಪಾಲಿಕೆ ಅರ್ಧ ಎಕರೆ ಜಾಗದ ಒಪ್ಪಂದದ ವಿಷಯವಾಗಿ 2016ರ ವರೆಗೆ ಕಾಮಗಾರಿ ಸ್ಥಗಿತಗೊಂಡಿತು. ಈ ಸಂದರ್ಭದಲ್ಲಿ ಪಾಲಿಕೆ ಮತ್ತು ಸ್ಥಳೀಯ ಶಾಸಕರು ಮೇಲ್ಸೇತುವೆ ವಿನ್ಯಾಸ ಬದಲಾಯಿಸಲು ಆಗ್ರಹಿಸಿದರು. ಶೇ. 60ರಷ್ಟು ಕಾಮಗಾರಿ ಪೂರ್ಣಗೊಂಡ ಕಾರಣ ಕೇಂದ್ರ ಸರಕಾರ ಒಪ್ಪಲಿಲ್ಲ. ಹಾಗಾಗಿ ಮತ್ತಷ್ಟು ತಡವಾಯಿತು. ಬಳಿಕ ನವಯುಗ ಸಂಸ್ಥೆಗೆ ಆರ್ಥಿಕ ಸಮಸ್ಯೆ ಎದುರಾಯಿತು. ಕೇಂದ್ರ ಸಚಿವ ನಿತಿನ್‌ ಗಡ್ಕರಿ ಸಮಕ್ಷಮದಲ್ಲಿ ಸಭೆ ಕರೆದು ನವಯುಗ ಸಂಸ್ಥೆಗೆ ಬ್ಯಾಂಕರ್ ಕರೆದು ಸಾಲ ನೀಡಲಾಗಿದೆ. ಎಪ್ರಿಲ್‌ 31ಕ್ಕೆ ತೊಕ್ಕೊಟ್ಟು ಮೇಲ್ಸೇತುವೆ ಪೂರ್ಣಗೊಳ್ಳಲಿದೆ. ಮೇ 31ರಿಂದ ಜೂ. 15ರ ಒಳಗೆ ಪಂಪ್‌ವೆಲ್‌ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳ್ಳುತ್ತದೆ. ಇನ್ನು ಸರ್ವಿಸ್‌ ರಸ್ತೆ ವಿಸ್ತರಣೆಗೂ 6 ಕೋಟಿ ರೂ. ಹೆಚ್ಚುವರಿ ನೀಡಿದ್ದು, ನಿರೀಕ್ಷಿತ ಅವಧಿಯೊಳಗೆ ಎಲ್ಲವೂ ಮುಗಿಯಲಿದೆ.

– ಮೂಲಸೌಕರ್ಯ ಹೊರತು ಸಾಮಾಜಿಕ ಭದ್ರತೆ, ಶಿಕ್ಷಣ, ಆರ್ಥಿಕ ಕ್ಷೇತ್ರಗಳಿಗೆ ಏನು ಮಾಡಿದ್ದೀರಿ?
ಮಂಗಳೂರಿನಲ್ಲಿ 2 ಕೇಂದ್ರೀಯ ವಿದ್ಯಾಲಯಗಳ ಸಹಿತ ಎನ್‌ಐಟಿಕೆಯಲ್ಲೂ ಕೇಂದ್ರೀಯ ಶಿಕ್ಷಣ ಸಂಸ್ಥೆಯಿದೆ. ಜಿಲ್ಲೆಯ ಎಲ್ಲ ಕಾಲೇಜುಗಳಿಗೆ ರೂಸಾ ಯೋಜನೆಯಡಿ 24 ಕೋಟಿ ರೂ. ಅನುದಾನ ಬಂದಿದೆ. ಜಿಲ್ಲೆಯಲ್ಲಿ 23 ಟಿಂಕರಿಂಗ್‌ ಲ್ಯಾಬ್‌ ನಿರ್ಮಾಣವಾಗಿದೆ. ಇಂಕ್ಯುಬೇಷನ್‌ ಸೆಂಟರ್‌ ಬಂದಿದೆ. ಮುದ್ರಾ ಯೋಜನೆಯಡಿ 94 ಸಾವಿರ ಮಂದಿಗೆ ಸಾಲ, 64 ಸಾವಿರ ಬಡವರ ಮನೆಗಳಿಗೆ ಗ್ಯಾಸ್‌ ಸಂಪರ್ಕ. 4 ಲಕ್ಷ ಜನಧನ್‌ ಖಾತೆಯಾಗಿದೆ.

– ಕರಾವಳಿಯಲ್ಲಿ ನಿರ್ಲಕ್ಷ್ಯಗೊಂಡಿರುವ ಪ್ರವಾ ಸೋದ್ಯಮ ಉತ್ತೇಜನಕ್ಕೆ ಏಕೆ ಮುಂದಾಗಲಿಲ್ಲ?
ಗೋವಾ ಮಾದರಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ನಮ್ಮಲ್ಲಿ ಕಾನೂನಿನ ತೊಡಕಿದೆ. ಸಿಆರ್‌ಝಡ್‌, ಅರಣ್ಯ ಕಾಯ್ದೆ, ಪಶ್ಚಿಮ ಘಟ್ಟ ವಲಯ ಇತ್ಯಾದಿ ಕಾರಣಗಳಿಗೆ ಬೀಚ್‌ ಟೂರಿಸಂಗೆ ನಿರೀಕ್ಷಿತ ಮಟ್ಟದಲ್ಲಿ ಒತ್ತು ನೀಡಲಾಗಿಲ್ಲ. ಆದರೆ ಧಾರ್ಮಿಕ ಟೂರಿಸಂ ಹೆಚ್ಚಳಕ್ಕೆ ಯೋಜಿಸಿದ್ದು, ಪುರಾತನ ಮತ್ತು ಪ್ರಸಿದ್ಧ ದೇವಸ್ಥಾನಗಳತ್ತ ಲಿಂಕ್‌ ರೂಟ್‌ಗಳನ್ನು ಅಭಿವೃದ್ಧಿ ಪಡಿಸಲಾಗುವುದು. ಸಿಆರ್‌ಝಡ್‌ ಸಮಸ್ಯೆ ಬಗೆಹರಿಸಿ ಪಿಪಿಪಿ ಮಾದರಿಯಲ್ಲಿ ಬೀಚ್‌ ಟೂರಿಸಂ ಅಭಿವೃದ್ಧಿ, ಅರಣ್ಯ ಕಾಯ್ದೆ ಯಲ್ಲಿನ ಅವಕಾಶವೂ ಬಳಸಿ ಪ್ರವಾಸೋದ್ಯಮ ಅಭಿವೃದ್ಧಿಗೆ ಪ್ರಯತ್ನಿಸುವೆ. ಜತೆಗೆ ಮಂಗಳೂರಿನಲ್ಲಿ ಮೆಡಿಕಲ್‌ ಟೂರಿಸಂಗೂ ಉತ್ತೇಜಿಸಲಾಗುವುದು.

– ಕಣ್ಣೂರು ವಿಮಾನ ನಿಲ್ದಾಣ ಬಂದ ಮೇಲೆ ಮಂಗಳೂರು ಏರ್‌ಪೋರ್ಟ್‌ಗೆ ಪ್ರಯಾಣಿಕರು ಕಡಿಮೆಯಾಗಿದ್ದು, ಜಿಲ್ಲೆಗೆ ದೊಡ್ಡ ಹಿನ್ನಡೆ ಅಲ್ಲವೇ?
ಕಣ್ಣೂರು ವಿಮಾನ ನಿಲ್ದಾಣಕ್ಕೂ ಮಂಗಳೂರು ವಿಮಾನ ನಿಲ್ದಾಣಕ್ಕೂ ಸಂಬಂಧ ಕಲ್ಪಿಸಬೇಡಿ. ಕಣ್ಣೂರು ವಿಮಾನ ನಿಲ್ದಾಣ ಕಣ್ಣೂರಿನಿಂದ 70 ಕಿ.ಮೀ. ದೂರದಲ್ಲಿದೆ. ಮಡಿಕೇರಿಯವರಿಗೆ 60 ಕಿ.ಮೀ. ದೂರ ಇದೆ. ಮಂಗಳೂರು ವಿಮಾನ ನಿಲ್ದಾಣಕ್ಕೆ ನೀಲೇಶ್ವರದವರೆಗಿನ ಪ್ರಯಾಣಿಕರು ಬರುತ್ತಾರೆ. ಅವರಿಗೆ ಮಂಗಳೂರು ಹತ್ತಿರವೇ ವಿನಾ ಕಣ್ಣೂರಲ್ಲ. ಹಾಗಾಗಿ ಮಂಗಳೂರಿಗೆ ಬರುವವರು ಕಣ್ಣೂರು ವಿಮಾನ ನಿಲ್ದಾಣಕ್ಕೆ ಹೋಗುವುದಿಲ್ಲ. ಕಣ್ಣೂರು ವಿಮಾನ ನಿಲ್ದಾಣದಲ್ಲಿ ಅಂತಾರಾಷ್ಟ್ರೀಯ ನಗರಗಳಿಗೆ ನೇರ ಸೇವೆ ಇರುವುದರಿಂದ ದೂರ ಆದರೂ ಕೆಲವರು ಬಳಸಬಹುದು. ನಮ್ಮಲ್ಲಿ ನೇರ ಅಂತಾರಾಷ್ಟ್ರೀಯ ವಿಮಾನ ಸೇವೆ ಹೆಚ್ಚಿಸಲು ರನ್‌ವೇ ಸಮಸ್ಯೆಯಿದೆ. ಇದರ ವಿಸ್ತರಣೆಗೆ ನಮ್ಮ ಸರಕಾರ 1,000 ಕೋಟಿ ರೂ. ನೀಡಿದೆ. 183 ಎಕರೆ ಜಾಗವನ್ನು ರಾಜ್ಯ ಸರಕಾರ ಕೊಡಬೇಕಿದೆ.

– ಪುನರಾಯ್ಕೆಯಾದರೆ ನಿಮ್ಮ ಆದ್ಯತೆಗಳೇನು?
ಜಿಲ್ಲೆಯನ್ನು ಆರ್ಥಿಕವಾಗಿ ಸಶಕ್ತವಾಗಿಸುವುದು, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ವಾಣಿಜ್ಯ ನಗರವಾಗಿ ಮಂಗಳೂರನ್ನು ರೂಪಿಸುವುದು, ಉದ್ದಿಮೆ ಸ್ಥಾಪನೆ ಮೂಲಕ ಉದ್ಯೋಗ ಸೃಷ್ಟಿ. ಮಂಗಳೂರಿನಿಂದ ಚೆನ್ನೈಗೆ ಎಕ್ಸ್‌ಪ್ರೆಸ್‌ ಹೈವೇ ಯೋಜನೆ ಅನುಷ್ಠಾನ, ಹೈಸ್ಪೀಡ್‌ ವಂದೇ ಭಾರತ್‌ ರೈಲು ಪ್ರಾರಂಭ, ಮಂಗಳೂರಿಗೆ ಇಂಟರ್‌ಸಿಟಿ ರೈಲು ಯೋಜನೆ, ಐಟಿ ಪಾರ್ಕ್‌, ವಿಶೇಷ ಕೃಷಿ ಆರ್ಥಿಕ ವಲಯ, ಕೋಲ್ಡ್‌ ಸ್ಟೋರೇಜ್‌ ಇತ್ಯಾದಿ ಯೋಜನೆ ಅನುಷ್ಠಾನಗೊಳಿಸುವೆ.

– ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ ಕೊಡಿಸಲು ಏಕೆ ಪ್ರಯತ್ನಿಸಿಲ್ಲ ?
ಎಂಆರ್‌ಪಿಎಲ್‌, ಎಸ್‌ಇಝಡ್‌, ಕೆಐಒಸಿಎಲ್‌ ಸಹಿತ ಕೇಂದ್ರ ಸರಕಾರಿ ಸ್ವಾಮ್ಯದ ಕಂಪೆನಿಗಳಲ್ಲಿ ಶೇ. 70ರಷ್ಟು ಸ್ಥಳೀಯರಿದ್ದಾರೆ. ಹೊಸದಾಗಿ ಬರುವ ಪ್ಲಾಸ್ಟಿಕ್‌ ಪಾರ್ಕ್‌, ಕೊಕೊನಟ್‌ ಪಾರ್ಕ್‌, ಎಸ್‌ಇಝಡ್‌, ಪಾದೂರು ತೈಲ ಸಂಗ್ರಹಾಗಾರದಂಥ ಸಂಸ್ಥೆಗಳಲ್ಲೂ ಸ್ಥಳೀಯರಿಗೆ ಆದ್ಯತೆ ನೀಡಲು ಷರತ್ತು ವಿಧಿಸಲಾಗುತ್ತಿದೆ.

ಅಭಿವೃದ್ಧಿ ಕುರಿತಾಗಿ ವಿಪಕ್ಷಗಳು ಆರೋಪ ಮಾಡುತ್ತಿರುವುದು ಸಹಜ. ಆದರೆ ಹತ್ತು ವರ್ಷಗಳ ನನ್ನ ಅವಧಿಯಲ್ಲಿ ಕೈಗೊಂಡ ಅಭಿವೃದ್ಧಿ ಯೋಜನೆಗಳು ಜನರ ಮುಂದಿವೆ. ಹಾಗಾಗಿ ಮತ್ತೂಂದು ಅವಕಾಶ ಕೊಟ್ಟರೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ದುಡಿಯುವೆ.
– ನಳಿನ್‌ ಕುಮಾರ್‌ ಕಟೀಲು,
ಬಿಜೆಪಿ ಅಭ್ಯರ್ಥಿ

Advertisement

Udayavani is now on Telegram. Click here to join our channel and stay updated with the latest news.

Next