Advertisement

ಕಾಂಗ್ರೆಸ್‌ನಲ್ಲಿ ಒಬ್ಬರನ್ನೊಬ್ಬರು ಸೋಲಿಸುವ ಗುಂಪು ಕಾದಾಟ: ನಳಿನ್‌

04:17 PM May 08, 2023 | Team Udayavani |

ಮಂಗಳೂರು: ವರುಣಾ ಕ್ಷೇತ್ರದಲ್ಲಿ ಈ ಬಾರಿ ಸಿದ್ದರಾಮಯ್ಯ ಸೋಲಲಿದ್ದಾರೆ, ಕನಕಪುರದಲ್ಲಿ ಏನಾಗುತ್ತೋ ಎಂಬ ಭಯದಲ್ಲಿ ಡಿ.ಕೆ.ಶಿವಕುಮಾರ್‌ ಇದ್ದಾರೆ, ಸಿಎಂ ಆಗುವುದಕ್ಕಾಗಿ ಯಾರು ಯಾರನ್ನು ಸೋಲಿಸುವುದು ಎಂಬ ಕಾದಾಟದಲ್ಲಿ ಅವರ ಗುಂಪುಗಳು ಕೆಲಸ ಮಾಡುತ್ತಿವೆ, ಈ ಬಾರಿ ಮತ್ತೆ ಬಿಜೆಪಿ ಬಹುಮತದ ಸರಕಾರ ರಚಿಸುವುದರಲ್ಲಿ ಯಾವ ಸಂದೇಹವೂ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಹೇಳಿದ್ದಾರೆ.

Advertisement

ಮಂಗಳೂರಿನಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವರುಣಾದಲ್ಲಿ ಸಿದ್ದರಾಮಯ್ಯರ ಇಡೀ ತಂಡ ಬಂದರೂ ಜನರಸ್ಪಂದನೆ ಇಲ್ಲ, ಹಿಂದೆ ಮಲ್ಲಿಕಾರ್ಜುನ ಖರ್ಗೆ, ಡಾ.ಪರಮೇಶ್ವರ ಅವರನ್ನು ಸೋಲಿಸಿದಂತೆಯೇ ಈಗ ಕಾಂಗ್ರೆಸ್‌ನಲ್ಲಿ ಗುಂಪುಗಳು ಒಬ್ಬರನ್ನೊಬ್ಬರು ಸೋಲಿಸುವುದರಲ್ಲೇ ತೊಡಗಿಸಿಕೊಂಡಿದ್ದಾರೆ ಎಂದರು.

ರಾಜ್ಯ ಸರಕಾರದ ಕಾರ್ಯ, ಪ್ರಧಾನಿಯವರು ಮಾಡಿರುವ ಕೆಲಸಗಳು, ಅವರ ಪ್ರಭಾವ, ಪ್ರಧಾನಿಯವರ ವಿರುದ್ಧ ಕಾಂಗ್ರೆಸ್‌ ನಾಯಕರು ಬಳಸಿರುವ ಶಬ್ದಗಳು, ಬಜರಂಗದಳ ನಿಷೇಧ ಮಾಡುವ ಕಾಂಗ್ರೆಸ್‌ ಯೋಜನೆ, ಸುಳ್ಳು ಗ್ಯಾರಂಟಿ ಕಾರ್ಡ್‌ ಇವೆಲ್ಲದರಿಂದ ಕಾಂಗ್ರೆಸ್‌ ಸೋಲು ಖಚಿತವಾಗಿದೆ ಎಂದರು.

ದಕ್ಷಿಣ ಕನ್ನಡದಲ್ಲಿ 8ಕ್ಕೆ 8 ಸೀಟು ನಾವೇ ಗೆಲ್ಲಲಿದ್ದೇವೆ, ಪುತ್ತೂರಿನಲ್ಲೂ ಕಾಂಗ್ರೆಸ್‌ ಜೊತೆ ನಮಗೆ ನೇರ ಹೋರಾಟವಿದೆ, ಅಲ್ಲಿಯೂ ಗೆಲ್ಲುವುದು ನಿಶ್ಚಿತವಾಗಿ ನಾವೇ, 10 ದಿನದ ಹಿಂದೆ ಇದ್ದ ಸ್ಥಿತಿ ಈಗ ಇಲ್ಲ ಎನ್ನುವುದನ್ನು ಸರ್ವೆಗಳೂ ಶ್ರುತಪಡಿಸಿವೆ ಎಂದರು.

ಬಿಜೆಪಿ ನಾಯಕ ಸತೀಶ್‌ ಪ್ರಭು ಕಾಂಗ್ರೆಸ್‌ ಸೇರಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು ಕೆಲವರಿಗೆ ಅವಕಾಶ ಸಿಗದಿರುವಾಗ ಪಕ್ಷ ಬಿಟ್ಟು ಬೇರೆ ಪಕ್ಷಕ್ಕೆ ಸೇರುವುದು ಸಾಮಾನ್ಯ, ಆದರೆ ಮತದಾರರ ಬೆಂಬಲ ಇಡೀ ರಾಜ್ಯದಲ್ಲಿ ನಮ್ಮ ಪರವಾಗಿದೆ ಎಂದರು.

Advertisement

ನಡ್ಡಾ ಹೇಳಿರುವುದು ಸರಿಯಾಗಿದೆ
ಸಿದ್ದರಾಮಯ್ಯ ಸರಕಾರ ಬಂದರೆ ಕೇಂದ್ರದ ಯೋಜನೆಗಳಿಗೆ ತಡೆಯೊಡ್ಡಲಿದ್ದಾರೆ ಎಂಬ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಹೇಳಿಕೆಯನ್ನು ಅನುಮೋದಿಸಿದ ನಳಿನ್‌, ಹಿಂದೆ ಸಿದ್ದರಾಮಯ್ಯ ಸರಕಾರ ಇದ್ದಾಗ ಜನೆರಿಕ್‌ ಔಷಧಾಲಯ ತೆರೆಯಲು ಬಿಡಲಿಲ್ಲ, ಆಯುಷ್ಮಾನ್‌ ಭಾರತ ಯೋಜನೆ ಅಸಮರ್ಪಕವಾಗಿ ಮಾಡಿದರು, ಕಿಸಾನ್‌ ಸಮ್ಮಾನ್‌ ಯೋಜನೆಗೆ ಬೆಂಬಲಿಸಲಿಲ್ಲ, ಜಿಎಸ್‌ಟಿ ವಿಚಾರದಲ್ಲಿ ರಾಜಕಾರಣ ಮಾಡುತ್ತಾರೆ, ಹಾಗಾಗಿ ನಡ್ಡಾ ಹೇಳಿಕೆ ಸರಿಯಾಗಿದೆ ಎಂದರು.

ರಾಜ್ಯ ರಾಜಕಾರಣದ ಇಚ್ಛೆ ಇಲ್ಲ
ನಾನು ಸಿಎಂ ಆಗುವುದಾಗಲಿ ರಾಜ್ಯ ರಾಜಕಾರಣಕ್ಕೆ ಮರಳುವ ಇಚ್ಛೆಯನ್ನಾಗಲೀ ಹೊಂದಿಲ್ಲ. ನನ್ನ ರಾಜ್ಯಾಧ್ಯಕ್ಷ ಸ್ಥಾನದ ಅವಧಿ ಮುಗಿಯುತ್ತಾ ಬಂದಿದೆ, ಅದನ್ನು ಪೂರ್ಣಗೊಳಿಸುತ್ತೇನೆ ಎಂದು ನಳಿನ್‌ ಸ್ಪಷ್ಟಪಡಿಸಿದರು.
ಲೋಕಸಭಾ ಟಿಕೆಟ್‌ ಹಂಚಿಕೆಯಲ್ಲಿ ಅಸೆಂಬ್ಲಿ ಚುನಾವಣೆಯದ್ದೇ ಪ್ರಯೋಗ ನನ್ನಿಂದಲೇ ಶುರುವಾಗಲಿ ಎಂಬ ಹೇಳಿಕೆ ಪತ್ರಕರ್ತರಿಗೆ ನಾನೇ ಉತ್ತರಿಸಿದ್ದು. ನಾನು ಸ್ವಯಂಸೇವಕ, ಸಂಘದ, ಪಕ್ಷದ ಹಿರಿಯರು ಏನು ಜವಾಬ್ದಾರಿ ಕೊಡುತ್ತಾರೋ ಅದನ್ನು ನಡೆಸುವುದು ನನ್ನ ಕರ್ತವ್ಯ, ಪೂರ್ಣಕಾಲಿಕವಾಗಿ ಪಕ್ಷದಲ್ಲಿ ತೊಡಗಲು ಹೇಳಿದರೂ ಅದನ್ನು ಮಾಡುವೆ ಎಂದರು.

ಬಹುಮತದ ಸರಕಾರ ನಿಶ್ಚಿತ
ಮೋದಿಯವರು ಚುನಾವಣೆ ಘೋಷಣೆಗೆ ಮೊದಲು 16 ಸಲ, ಘೋಷಣೆ ಬಳಿಕ 20 ಬಾರಿ ರಾಜ್ಯದಲ್ಲಿ ಪ್ರವಾಸ ಮಾಡಿದ್ದಾರೆ, ಡºಲ್‌ ಎಂಜಿನ್‌ ಸರಕಾರದ ಸಾಧನೆಗಳು, ಮೋದಿಯವರ ಪ್ರಭಾವ, ಅಭೂತಪೂರ್ವ ಜನಬೆಂಬಲ ನೋಡಿದರೆ ನಮಗೆ ಬಹುಮತದ ಸರಕಾರ ಬರುವುದು ನಿಶ್ಚಿತ ಎಂದರು.

ನಮ್ಮ ಸರಕಾರದ ವಿವಿಧ ಸಮಾಜ ಕಲ್ಯಾಣ ಯೋಜನೆಗಳು ಮನೆಮನೆಗೆ ತಲಪಿವೆ, ಈ ಬಾರಿ ಹಳೆ ಮೈಸೂರು ಭಾಗದಲ್ಲೂ ಜನ ಬೆಂಬಲ ವ್ಯಕ್ತವಾಗಿದೆ, ಫಲಾನುಭವಿಗಳು ಬೆಂಬಲ ಕೊಡುತ್ತಿದ್ದಾರೆ. ಮೂಲಸೌಕರ್ಯ, ಜನಕಲ್ಯಾಣ ಯೋಜನೆ, ಸಾಮಾಜಿಕ ನ್ಯಾಯ ಈ ಮೂರೂ ವಿಚಾರಗಳಿಂದ ನಮಗೆ ಬಹುಮತ ಬರಲಿದೆ.
ಡಾ|ಅಂಬೇಡ್ಕರ್‌ ಅವರು ಕಂಡಿರತಕ್ಕಂತಹ ಮೀಸಲಾತಿಯನ್ನು ಜಾರಿಗೊಳಿಸಿದ್ದೇವೆ, ಒಳಮೀಸಲಾತಿ ನ್ಯಾಯ ಪರಿಹಾರ ಸಿಕ್ಕಿದೆ, ಬೆಟ್ಟ ಕುರುಬ, ಕಾಡುಕುರುಬರಿಗೆ ಎಸ್‌ಟಿ ಸ್ಥಾನಮಾನ ಕೊಟ್ಟಿದೆ, ಎಲ್ಲ ಸಮುದಾಯ ನಮ್ಮ ಪಕ್ಷದ ಪರವಾಗಿ ಇದ್ದಾರೆ. ಭರಸವೆ ಇದೆ. ಅಭ್ಯರ್ಥಿ ಘೋಷಣೆ ಸಂದರ್ಭದಲ್ಲೂ ಜನಮಾನಸಕ್ಕೆ ತಲಪಿವೆ ಎಂದರು.

ರಾಜ್ಯ ವಕ್ತಾರ ಕ್ಯಾ|ಗಣೇಶ್‌ ಕಾರ್ಣಿಕ್‌, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್‌ ಎಂ, ಜಿಲ್ಲಾ ವಕ್ತಾರ ಜಗದೀಶ್‌ ಶೇಣವ, ಎಂ.ಮೋನಪ್ಪ ಭಂಡಾರಿ, ಮೂಡಾ ಅಧ್ಯಕ್ಷ, ವಕ್ತಾರ ರವಿಶಂಕರ ಮಿಜಾರ್‌, ಸುಧಿಧೀರ್‌ ಶೆಟ್ಟಿ ಕಣ್ಣೂರು ಉಪಸ್ಥಿತರಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next