ನವದೆಹಲಿ: ಆಂಧ್ರಪ್ರದೇಶ, ತೆಲಂಗಾಣ ಮತ್ತು ಒಡಿಶಾದಿಂದ ಹೊಸದಾಗಿ ಆಯ್ಕೆಯಾದ ಐವರು ಸಂಸದರಿಗೆ ರಾಜ್ಯಸಭಾ ಸಭಾಪತಿ ಎಂ ವೆಂಕಯ್ಯ ನಾಯ್ಡು ಶುಕ್ರವಾರ ಪ್ರಮಾಣ ವಚನ ಬೋಧಿಸಿದರು.
ಇಲ್ಲಿನ ಸಂಸತ್ ಭವನದಲ್ಲಿರುವ ರಾಜ್ಯಸಭಾ ಸಭಾಂಗಣದಲ್ಲಿ ಪ್ರಮಾಣ ವಚನ ಬೋಧಿಸಲಾಯಿತು.
ಆಂಧ್ರಪ್ರದೇಶದಿಂದ ನಿರಂಜನ್ ರೆಡ್ಡಿ ಸಿರ್ಗಾಪೂರ್ ಮತ್ತು ರಾಯ್ಗಾ ಕೃಷ್ಣಯ್ಯ (ಇಬ್ಬರೂ ವೈಎಸ್ಆರ್ಸಿಪಿ), ತೆಲಂಗಾಣದಿಂದ ದಾಮೋದರ್ ರಾವ್ ದೇವಕೊಂಡ ಮತ್ತು ಬಿ ಪಾರ್ಥಸಾರಥಿ ರೆಡ್ಡಿ (ಇಬ್ಬರೂ ಟಿಆರ್ಎಸ್) ಮತ್ತು ಒಡಿಶಾದಿಂದ ನಿರಂಜನ್ (ಬಿಜೆಡಿ) ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಕೃಷ್ಣಯ್ಯ, ದಾಮೋದರ್ ರಾವ್ ದೇವಕೊಂಡ ಮತ್ತು ಪಾರ್ಥಸಾರಥಿ ರೆಡ್ಡಿ ತೆಲುಗಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರೆ, ಸಿರ್ಗಾಪೂರ್ ಇಂಗ್ಲಿಷ್ನಲ್ಲಿ ಪ್ರಮಾಣವಚನ ಸ್ವೀಕರಿಸಿದರು.
ಸುಭಾಷ್ ಚಂದ್ರ ಸಿಂಗ್ ಅವರ ರಾಜೀನಾಮೆಯಿಂದ ರಾಜ್ಯಸಭೆಯಲ್ಲಿ ತೆರವಾದ ಸ್ಥಾನವನ್ನು ತುಂಬಲು ನಿರಂಜನ್ ಅವರು ಉಪಚುನಾವಣೆಯಲ್ಲಿ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಅವರು ಒರಿಯಾದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಇದನ್ನೂ ಓದಿ:ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 462 ಅಂಕ ಜಿಗಿತ; ವಾರಾಂತ್ಯದ ವಹಿವಾಟು ಅಂತ್ಯ
ರಾಜ್ಯಸಭಾ ಉಪ ಸಭಾಪತಿ ಹರಿವಂಶ್ ನಾರಾಯಣ ಸಿಂಗ್ ಮತ್ತು ಸಂಸದೀಯ ವ್ಯವಹಾರಗಳು ಮತ್ತು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ ಮುರಳೀಧರನ್, ರಾಜ್ಯಸಭೆಯ ಪ್ರಧಾನ ಕಾರ್ಯದರ್ಶಿ ಪಿ ಸಿ ಮೋದಿ ಮತ್ತು ರಾಜ್ಯಸಭಾ ಸಚಿವಾಲಯದ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.