Advertisement

ನಾಡೋಳಿ: ಕೃಷಿಕರಿಂದಲೇ ಕಿಂಡಿ ಅಣೆಕಟ್ಟಿಗೆ ಹಲಗೆ ಅಳವಡಿಕೆ

10:34 PM Jan 23, 2020 | mahesh |

ಸವಣೂರು: ಕಿಂಡಿ ಅಣೆಕಟ್ಟಿಗೆ ಊರಿನ ಕೃಷಿಕರು ಸೇರಿಕೊಂಡು ಹಲಗೆ ಅಳವಡಿಸುವ ಮೂಲಕ ಗೌರಿ ಹೊಳೆ ತುಂಬುವಂತೆ ಮಾಡಿದ್ದಾರೆ. ಪಾಲ್ತಾಡಿ ಗ್ರಾಮದ ನಾಡೋಳಿ, ಜಾಣಮೂಲೆಯ ಹೊಳೆಯಲ್ಲಿ ಹರಿದು ಹೋಗುತ್ತಿದ್ದ ನೀರನ್ನು ಸಂಗ್ರಹಿಸುವ ಮೂಲಕ ಜಲ ಸಂರಕ್ಷಣೆಯೊಂದಿಗೆ ಕೃಷಿಗೂ ಪೂರಕವಾಗುವಂತೆ ಮಾಡಿದ್ದಾರೆ.

Advertisement

ದ.ಕ.ಜಿ.ಪಂ. ಸಿಇಒ ಡಾ| ಆರ್‌. ಸೆಲ್ವಮಣಿ ಈ ಕಾರ್ಯವನ್ನು ಖುದ್ದು ವೀಕ್ಷಿಸಿ, ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಎಲ್ಲ ಕಡೆಗಳಲ್ಲಿ ಊರಿನವರೇ ಸೇರಿಕೊಂಡು ಇಂತಹ ಕಾರ್ಯ ಮಾಡಿದರೆ ಅಂತರ್ಜಲ ಹೆಚ್ಚಳದ ಜತೆಗೆ ಬೇಸಗೆಯಲ್ಲಿ ಕೃಷಿಗೆ ನೀರೊದಗಿಸಲು ನೆರವಾಗಲಿದೆ. ಇಂತಹ ಕಾರ್ಯಗಳು ಇನ್ನಷ್ಟು ನಡೆಯಬೇಕು ಎಂದಿದ್ದಾರೆ.

ಸವಣೂರು ಗ್ರಾ.ಪಂ. ವ್ಯಾಪ್ತಿಯ ಪುಣcಪ್ಪಾಡಿ, ಸವಣೂರು, ಪಾಲ್ತಾಡಿ ಗ್ರಾಮದಲ್ಲಿ ಗ್ರಾ.ಪಂ. ಸದಸ್ಯರೇ ಮುತುವರ್ಜಿ ವಹಿಸಿ ಕಿಂಡಿ ಅಣೆಕಟ್ಟಿಗೆ ಹಲಗೆ ಅಳವಡಿಸುತ್ತಿದ್ದಾರೆ ಎಂದು ಗ್ರಾ.ಪಂ. ಅಧ್ಯಕ್ಷೆ ಇಂದಿರಾ ಬಿ.ಕೆ. ಅವರು ಸಿಇಒ ಅವರಲ್ಲಿ ತಿಳಿಸಿದ್ದರು. ತಾ.ಪಂ. ಇಒ ನವೀನ್‌ ಭಂಡಾರಿ, ಸವಣೂರು ಗ್ರಾ.ಪಂ. ಸದಸ್ಯ ಸತೀಶ್‌ ಅಂಗಡಿಮೂಲೆ, ಪಿಡಿಒ ನಾರಾಯಣ ಬಿ., ಲೆಕ್ಕ ಸಹಾಯಕ ಎ. ಮನ್ಮಥ, ಸಿಬಂದಿ ಪ್ರಮೋದ್‌ ಕುಮಾರ್‌ ರೈ ಜತೆಗಿದ್ದರು.

ಮಾದರಿ ಕಾರ್ಯ
ಪ್ರಸ್ತುತ ಬೋರ್‌ವೆಲ್‌ 700 ಅಡಿ ಕೊರೆದರೂ ನೀರು ಸಿಗುವುದೇ ವಿರಳ. ಇಂತಹ ಸನ್ನಿವೇಶದಲ್ಲಿ ಹೊಳೆಯಲ್ಲಿ ಹರಿಯುತ್ತಿರುವ ನೀರನ್ನು ಕಿಂಡಿ ಅಣೆಕಟ್ಟಿಗೆ ಹಲಗೆ ಅಳವಡಿಸುವ ಮೂಲಕ ಮಾದರಿ ಕಾರ್ಯವನ್ನು ಇಲ್ಲಿನ ಕೃಷಿಕರು ತೋರಿಸಿ ಕೊಟಿದ್ದಾರೆ. ಜಲಸಂಪನ್ಮೂಲ ಇಲಾಖೆಯಿಂದ ನಿರ್ಮಿಸಿದ ಈ ಅಣೆಕಟ್ಟಿಗೆ ಗ್ರಾ.ಪಂ., ಜಿ.ಪಂ. ಇನ್ನಿತರ ಯಾವುದೋ ಇಲಾಖೆಯವರು ಹಲಗೆ ಅಳವಡಿಸಲಿ ಎಂದು ಕಾಯಲಿಲ್ಲ. ಯಾರಿಗೂ ದುಂಬಾಲು ಬಿದ್ದಿಲ್ಲ. ಕೃಷಿಕರು ಸೇರಿಕೊಂಡು ಕಿಂಡಿ ಅಣೆಕಟ್ಟಿಗೆ ಹಲಗೆ ಅಳವಡಿಸಿಕೊಂಡು ನೀರಿನ ಬರವನ್ನು ದೂರ ಮಾಡಿದ್ದಾರೆ.

ತೋಟಕ್ಕೆ ನೀರು
ಪಾಲ್ತಾಡಿ ಗ್ರಾಮದ ಮಂಜುನಾಥ ನಗರದ ನಾಡೋಳಿಯಲ್ಲಿ ಹರಿಯುವ ಗೌರಿ ಹೊಳೆಗೆ ನಿರ್ಮಿಸಿರುವ ಕಿಂಡಿ ಅಣೆಕಟ್ಟಿಗೆ ಹಲಗೆ ಅಳವಡಿಸುವ ಮೂಲಕ ಸುತ್ತಲಿನ 30ಕ್ಕೂ ಹೆಚ್ಚು ಕೃಷಿಕರ ತೋಟಗಳಿಗೆ ನೀರು ಸಿಗುತ್ತಿದೆ. ಇದರಿಂದ ಬಿರು ಬೇಸಗೆಯಲ್ಲಿ ತೋಟ ಒಣಗುವ ಸಮಸ್ಯೆ ದೂರವಾಗಿದೆ. ಈ ಮೂಲಕ ನೀರಿನ ಬರದಿಂದ ತಪ್ಪಿಸಲು ಇಲ್ಲಿನ ಕೃಷಿಕರು ಪರಿಹಾರ ಕಂಡುಕೊಂಡಿದ್ದಾರೆ. ಈ ಅಣೆಕಟ್ಟಿನಲ್ಲಿ ಎಪ್ರಿಲ್‌, ಮೇ ತಿಂಗಳವರೆಗೂ ನೀರು ಶೇಖರಣೆ ಗೊಳ್ಳುತ್ತಿವೆ. ಅಂತ ರ್ಜಲ ಮಟ್ಟ ಹೆಚ್ಚಳವಾಗಲೂ ಸಹಕಾರಿಯಾಗಿದೆ. ಸುತ್ತ ಮುತ್ತಲಿನ ಕೆರೆ, ಬಾವಿಗಳಲ್ಲಿ ನೀರಿನ ಮಟ್ಟ ಗಮನಾರ್ಹವಾಗಿ ಏರಿಕೆ ಕಂಡು ಬಂದಿದೆ.

Advertisement

ಕೃಷಿಕರಿಂದಲೇ ನಿರ್ವಹಣೆ
ಗ್ರಾಮದ ಅಡಿಕೆ ಕೃಷಿಕರೇ ಸೇರಿಕೊಂಡು ರಮೇಶ್‌ ರಾವ್‌ ಹಾಗೂ ಸತೀಶ್‌ ಬಂಬಿಲದೋಳ ಅವರ ನೇತೃತ್ವದಲ್ಲಿ ಹಲಗೆ ಅಳವಡಿಸಿದ್ದಾರೆ. ರೋಹಿತ್‌ ರೈ, ಸಂಜೀವ ರೈ ಕುಂಜಾಡಿ, ಬೆಳಿಯಪ್ಪ ಗೌಡ, ಹನೀಫ್‌, ರಝಾಕ್‌, ಸೋಮಪ್ಪ ಗೌಡ ಜಾಣಮೂಲೆ ಸಹಕಾರ ನೀಡಿದ್ದಾರೆ. ಕಿಂಡಿ ಅಣೆಕಟ್ಟಿಗೆ ಹಲಗೆ ಅಳವಡಿಕೆಗೆ 16ರಿಂದ 20,000 ರೂ. ವೆಚ್ಚವಾಗುತ್ತದೆ.

ಅಂತರ್ಜಲ ಮಟ್ಟ ಹೆಚ್ಚಳ
ಕೃಷಿಗೆ ನೀರೊದಗಿಸುವುದರೊಂದಿಗೆ ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಸಹಕಾರಿ ಯಾಗಲಿದೆ. ಸುತ್ತಲಿನ ಕೆರೆ, ಬಾವಿಗಳಲ್ಲೂ ನೀರಿನ ಮಟ್ಟ ಹೆಚ್ಚಳವಾಗಿರುವುದು ಗಮನಿಸಬೇಕಾದ ಅಂಶ.
ಈ ಅಣೆಕಟ್ಟಿನಿಂದಾಗಿ 2 ಕಿ.ಮೀ. ವ್ಯಾಪ್ತಿಯಲ್ಲಿ ಅಂತರ್ಜಲ ವೃದ್ಧಿಸಿದೆ. 40 ಅಡಿ ಅಗಲ, 9 ಅಡಿ ನೀರು ಶೇಖರಣೆಯಾಗಿದೆ. ಸುಮಾರು 10 ಅಡಿ ನೀರು ನಿಲ್ಲುವ ಸಾಮರ್ಥ್ಯವಿದೆ.

ದಶಕದ ಹಿಂದೆ ನಿರ್ಮಾಣ
ಈ ಅಣೆಕಟ್ಟು ಗ್ರಾಮ ವಿಕಾಸ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಬಿ.ಕೆ. ರಮೇಶ್‌ ಅವರ ವಿಶೇಷ ಮುತುವರ್ಜಿಯಿಂದ 10 ವರ್ಷಗಳ ಹಿಂದೆ ಜಲಸಂಪನ್ಮೂಲ ಇಲಾಖೆಯಿಂದ 25 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿತ್ತು.  ಅಂದಿನಿಂದ ಇಂದಿನವರೆಗೂ ಈ ನೀರು ಶೇಖರಿಸುವ ಕಾರ್ಯವನ್ನು ನಿರಂತರವಾಗಿ ಮಾಡಲಾಗುತ್ತಿದೆ. ಕಿಂಡಿ ಅಣೆಕಟ್ಟಿನ ಬದಿಯ ಕಾಂಕ್ರೀಟ್‌ ಕಿತ್ತು ಹೋಗಿ ನೀರು ಸೋರಿಕೆಯಾಗುತ್ತಿದ್ದು, ಇದರ ದುರಸ್ತಿ ಕುರಿತು ಸಂಬಂಧಪಟ್ಟ ಇಲಾಖೆ ಗಮನ ಹರಿಸಬೇಕಿದೆ.

ಜಲಸಂರಕ್ಷಣೆ
ಗ್ರಾಮ ವಿಕಾಸದ ಪಂಚ ಕಾರ್ಯಗಳಲ್ಲಿ ಜಲಸಂರಕ್ಷಣೆಯೂ ಒಂದು. ಈ ನಿಟ್ಟಿನಲ್ಲಿ ಜಲಸಂರಕ್ಷಣೆಯಲ್ಲಿ ಬಂಟ್ವಾಳದ ಇಡ್ಕಿದು ಗ್ರಾಮದ ಅನಂತರದ ಸ್ಥಾನವನ್ನು ಪುತ್ತೂರಿನ ಪಾಲ್ತಾಡಿ ಗ್ರಾಮ ಪಡೆದುಕೊಂಡಿದೆ. ಈ ಗ್ರಾಮದಲ್ಲಿ ಹಲವೆಡೆ ಸಣ್ಣ ಸಣ್ಣ ತೊರೆಗಳಿಗೂ ಮಣ್ಣು ಹಾಗೂ ಅಡಿಕೆ ಮರದ ಪಾಲವನ್ನು ಹಾಕಿ ತಾತ್ಕಾಲಿಕ ಕಟ್ಟಗಳನ್ನು ರಚಿಸಿದ್ದಾರೆ. ಅಲ್ಲದೆ ಸಣ್ಣ ಕಿಂಡಿ ಅಣೆಕಟ್ಟಗಳನ್ನು ನಿರ್ಮಿಸಿ ಜಲಸಂರಕ್ಷಣೆಯೂ ನಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next