Advertisement

ಜೆಎಸ್ಸೆಸ್‌ ಕಾಲೇಜಿಗೆ ನ್ಯಾಕ್‌ ಎ ಪ್ಲಸ್‌ ಗ್ರೇಡ್‌

10:02 AM Jun 24, 2022 | Team Udayavani |

ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಬರುವ 152 ಪದವಿ ಕಾಲೇಜುಗಳ ಪೈಕಿ ಜೆಎಸ್‌ಎಸ್‌ ಕಾಲೇಜು ಮಾತ್ರ “ಎ’ ಪ್ಲಸ್‌ ಗ್ರೇಡ್‌ ಪಡೆದಿದೆ ಎಂದು ಜೆಎಸ್ಸೆಸ್‌ ಸಂಸ್ಥೆಯ ಕಾರ್ಯದರ್ಶಿ ಡಾ|ನ.ವಜ್ರಕುಮಾರ ಹೇಳಿದರು.

Advertisement

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಧಾರವಾಡದ ಜೆಎಸ್‌ಎಸ್‌ ಬನಶಂಕರಿ ಕಲಾ, ವಾಣಿಜ್ಯ ಮತ್ತು ಶಾಂತಿಕುಮಾರ ಗುಬ್ಬಿ ವಿಜ್ಞಾನ ಮಹಾವಿದ್ಯಾಲಯಕ್ಕೆ 2016 ರಿಂದ 2021ರವರೆಗೆ ಸಲ್ಲಿಸಿದ ಸ್ವಯಂ ಮೌಲ್ಯಮಾಪನ ವರದಿಯನ್ನಾಧರಿಸಿ, ರಾಷ್ಟ್ರೀಯ ಮೌಲ್ಯಾಂಕನ ಮತ್ತು ಗುಣಮಟ್ಟ ಸಂಸ್ಥೆ(ನ್ಯಾಕ್‌) ಮೌಲ್ಯಮಾಪನ ಮಾಡಿ “ಎ’ ಪ್ಲಸ್‌ ಗ್ರೇಡ್‌ ನೀಡಿದೆ. ಮಹಾವಿದ್ಯಾಲಯವು ಕಳೆದ ಮೂರು ಬಾರಿ ಸತತವಾಗಿ “ಎ’ ಗ್ರೇಡ್‌ ಪಡೆಯುತ್ತ ಬಂದಿದ್ದು, ಇದೀಗ ನಾಲ್ಕನೇ ಬಾರಿ ಅದಕ್ಕಿಂತ ಹೆಚ್ಚಿನ “ಎ’ ಪ್ಲಸ್‌ ಗ್ರೇಡ್‌ ಅನ್ನು ಸಿಜಿಪಿಎ- 3.34 ಗಳೊಂದಿಗೆ ಪಡೆದು ಗುಣಮಟ್ಟ ಉತ್ತಮಗೊಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ ಎಂದರು.

ರಾಷ್ಟ್ರೀಯ ಮೌಲ್ಯಾಂಕನ ಮತ್ತು ಗುಣಮಟ್ಟ (ನ್ಯಾಕ್‌) ಸಂಸ್ಥೆ ಮೂರು ಜನರ ಸಮಿತಿ ರಚಿಸಿ ಮಹಾವಿದ್ಯಾಲಯಕ್ಕೆ ಜೂ.13 ಮತ್ತು ಜೂ.14ರಂದು ಪರಿಶೀಲನೆಗಾಗಿ ಕಳುಹಿಸಲಾಗಿತ್ತು. ಸಮಿತಿ ಚೇರಮನ್‌ ಇಂಫಾಲ್‌ (ಮಣಿಪುರ)ನ ಐಐಐಟಿ ನಿರ್ದೇಶಕ ಪ್ರೊ|ಕೃಷ್ಣನ್‌ ಭಾಸ್ಕರ, ಸಂಯೋಜಕ ಸದಸ್ಯ ಆಸ್ಸಾಂನ ಬೋಡೊಲ್ಯಾಂಡ್‌ ವಿಶ್ವವಿದ್ಯಾಲಯದ ಪ್ರೊ| ಎಲಿಂಗಬಾಮ್‌ ನಿಕ್ಸಾನ್‌ ಸಿಂಗ್‌ ಹಾಗೂ ಸದಸ್ಯ ಪಂಜಾಬಿನ ಹೋಷಿಯಾರ್‌ಪುರದ ಸನಾತನ ಧರ್ಮ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ|ನಂದ ಕಿಶೋರ ಭೇಟಿ ನೀಡಿ ಪರಿಶೀಲಿಸಿತ್ತು. ಈ ಸಮಿತಿಯ ವರದಿ ಅನ್ವಯ ಈಗ ಗ್ರೇಡ್‌ ಲಭಿಸಿದೆ ಎಂದರು.

ಜೆಎಸ್‌ಎಸ್‌ ವಿತ್ತಾಧಿಕಾರಿ ಡಾ|ಅಜಿತ ಪ್ರಸಾದ ಮಾತನಾಡಿ, ಕಳೆದ ಬಾರಿಗಿಂತ ಈ ಬಾರಿ ಉತ್ತಮ ಗ್ರೇಡ್‌ ಬರಲು 2016 ರಿಂದ 2021ರ ಈ ಐದು ವರ್ಷಗಳ ಅವಧಿಯಲ್ಲಿ 24 ವಿದ್ಯಾರ್ಥಿಗಳು ರ್‍ಯಾಂಕ್‌ ಪಡೆದಿದ್ದು, 9 ಚಿನ್ನದ ಪದಕ ಪಡೆದಿದ್ದಾರೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆದ 224 ಕ್ರೀಡಾ ಸ್ಪರ್ಧೆಗಳಲ್ಲಿ 479 ವಿದ್ಯಾರ್ಥಿಗಳು ಭಾಗವಹಿಸಿ 158 ಪಾರಿತೋಷಕ ಪದಕಗಳನ್ನು ಪಡೆದಿದ್ದರೆ 147 ವಿಶ್ವವಿದ್ಯಾಲಯ ಮಟ್ಟದ ಯುನಿವರ್ಸಿಟಿ ಬ್ಲೂಗಳಾಗಿ ಆಯ್ಕೆಯಾಗಿದ್ದಾರೆ. ಲಲಿತಕಲಾ ಸಂಘದ ವತಿಯಿಂದ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಿದ್ದಾರೆ. ಕಾಲೇಜಿನ ಎನ್‌.ಎಸ್‌.ಎಸ್‌. ಘಟಕವು ರಾಷ್ಟ್ರಮಟ್ಟದ ಪ್ರಶಸ್ತಿಯನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರಿಂದ ಪಡೆದಿದೆ. ಈ ಪ್ರಶಸ್ತಿ 1ಲಕ್ಷ ರೂ. ನಗದು ಬಹುಮಾನ ಹಾಗೂ ಫಲಕವನ್ನೊಳಗೊಂಡಿದೆ ಎಂದರು.

ಜೆಎಸ್ಸೆಸ್‌ನ ಎನ್ನೆಸ್ಸೆಸ್‌ ಅಧಿಕಾರಿಗೆ ಅತ್ಯುತ್ತಮ ಎನ್ನೆಸ್ಸೆಸ್‌ ಅಧಿಕಾರಿ ಪ್ರಶಸ್ತಿಯೂ ಲಭಿಸಿದೆ. ಮಹಾವಿದ್ಯಾಲಯದ ಪ್ರಾಧ್ಯಾಪಕರು ಉತ್ತಮ ರೀತಿಯಲ್ಲಿ ಸಂಶೋಧನೆ, ಪುಸ್ತಕ ಪ್ರಕಟಣೆಗಳಲ್ಲಿ ಭಾಗಿಯಾಗಿದ್ದು, ಪ್ರಾಧ್ಯಾಪಕರು 136ಕ್ಕೂ ಹೆಚ್ಚು ಸಂಶೋಧನಾ ಲೇಖನಗಳು, 100ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಐದು ವರ್ಷಗಳ ಅವ ಧಿಯಲ್ಲಿ ಮೂರು ಸಾವಿರಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಒಂದು ಕೋಟಿ ರೂಪಾಯಿಗಳಿಗಿಂತಲೂ ಹೆಚ್ಚು ಶಿಷ್ಯವೇತನಕ್ಕೆ ಭಾಜನರಾಗಿದ್ದಾರೆ.ಆಡಳಿತ ಮಂಡಳಿ ಅತ್ಯುತ್ತಮ ಕ್ರೀಡಾಪಟುಗಳಿಗೆ, ಇತರೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶೂನ್ಯ ಶುಲ್ಕದಡಿಯಲ್ಲಿ ಪ್ರವೇಶ ನೀಡಿವೆ. ಇದರಿಂದ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಅತ್ಯಂತ ಶ್ರೇಷ್ಠ ಪ್ರದರ್ಶನ ನೀಡಲು ಸಾಧ್ಯವಾಗಿದೆ. ಪಠ್ಯೇತರ ಜತೆಗೆ ವಿವಿಧ ವಿಷಯಗಳಲ್ಲಿ ಸರ್ಟಿಫಿಕೇಟ್‌ ಕೋರ್ಸ್‌ಗಳನ್ನು ಆರಂಭಿಸಿರುವುದರಿಂದ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಹೆಚ್ಚಾಗಿದೆ ಎಂದರು.

Advertisement

ಮಹಾವಿದ್ಯಾಲಯದಲ್ಲಿ ಮೂರು ಸ್ನಾತಕೋತ್ತರ ಕೋರ್ಸ್‌ಗಳು(ರಸಾಯನಶಾಸ್ತ್ರ, ವಾಣಿಜ್ಯಶಾಸ್ತ್ರ, ಭೌತಶಾಸ್ತ್ರ) ಲಭ್ಯವಿರುತ್ತವೆ. ಈ ಸ್ನಾತಕೋತ್ತರ ವಿಭಾಗದಲ್ಲಿ ಈ ಬಾರಿ ನಮಗೆ ರ್‍ಯಾಂಕ್‌ಗಳು ಸಹ ಲಭಿಸಿವೆ. ಮಹಾವಿದ್ಯಾಲಯವು ಅತ್ಯುತ್ತಮ ಪ್ರಯೋಗಾಲಯಗಳನ್ನು ಹೊಂದಿದೆ. ಇದಲ್ಲದೇ ಗ್ರಂಥಾಲಯ, ಸ್ಪರ್ಧಾತ್ಮಕ ಪರೀಕ್ಷೆ ಗ್ರಂಥಾಲಯ, ಐಸಿಟಿಯನ್ನೊಳಗೊಂಡ ಕೊಠಡಿಗಳು, ನಾಲ್ಕು ವಿದ್ಯಾರ್ಥಿನಿಯರ ವಸತಿ ನಿಲಯಗಳು, ಎರಡು ವಿದ್ಯಾರ್ಥಿ ವಸತಿ ನಿಲಯಗಳು, ಎರಡು ಆಟದ ಮೈದಾನಗಳು, ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಜಿಮ್‌ ಕೇಂದ್ರಗಳು, ಆರೋಗ್ಯ ಕೇಂದ್ರ, ಎರಡು ಬ್ಯಾಂಕ್‌ಗಳು, ಪೋಸ್ಟ್‌ ಆಫೀಸ್‌, ಮೂರು ಹವಾನಿಯಂತ್ರಿತ ಸಭಾಭವನಗಳು, ಬಯಲು ರಂಗ ಮಂದಿರಗಳ ಸೌಲಭ್ಯಗಳನ್ನು ಹೊಂದಿದೆ. 2022-2023ರ ಶೈಕ್ಷಣಿಕ ವರ್ಷದಲ್ಲಿ ಹೊಸದಾಗಿ ಗಣಿತಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಆರಂಭಿಸಲಾಗಿದೆ. ಈ ಎಲ್ಲ ಅಂಶಗಳು ಮಹಾವಿದ್ಯಾಲಯಕ್ಕೆ “ಎ’ ಪ್ಲಸ್‌ ಗ್ರೇಡ್‌ ಪಡೆಯುವಲ್ಲಿ ಪೂರಕವಾಗಿವೆ ಎಂದರು.

ಮಹಾವಿದ್ಯಾಲಯ ನ್ಯಾಕ್‌ನ ನಾಲ್ಕನೇ ಆವೃತ್ತಿಯ ಮೌಲ್ಯಮಾಪನದಲ್ಲಿ “ಎ’ ಪ್ಲಸ್‌ ಗ್ರೇಡ್‌ ಪಡೆದ ಸಂದರ್ಭದಲ್ಲಿ ಜನತಾ ಶಿಕ್ಷಣ ಸಮಿತಿ ಗೌರವ ಅಧ್ಯಕ್ಷರಾದ ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ಕಾರ್ಯಾಧ್ಯಕ್ಷರಾದ ಪದ್ಮವಿಭೂಷಣ ಡಾ|ಡಿ.ವೀರೇಂದ್ರ ಹೆಗ್ಗಡೆ ಅವರು ಮಹಾವಿದ್ಯಾಲಯದ ಆಡಳಿತ ಮಂಡಳಿ ಹಾಗೂ ಎಲ್ಲ ಸಿಬ್ಬಂದಿ ವರ್ಗದವರಿಗೆ ಹಾಗೂ ವಿದ್ಯಾರ್ಥಿಗಳಿಗೆ ಶುಭ ಕೋರಿದ್ದಾರೆ.

ಪ್ರಾಚಾರ್ಯರಾದ ಡಾ|ಇಂದು ಪಂಡಿತ, ಡಾ|ಜಗದೀಶ ಬರಗಿ, ಡಾ|ವೆಂಕಟೇಶ ಮುತಾಲಿಕ್‌, ಡಾ|ನಾಗಚಂದ್ರ, ಡಾ|ರತ್ನಾ ಐರಸಂಗ, ಡಾ|ಶ್ರೀಧರ, ಡಾ|ಆರ್‌.ವಿ. ಪಾಟೀಲ್‌, ವಿ.ಎಸ್‌ ಭೀಮರೆಡ್ಡಿ, ಡಾ|ಶೌಕತಲಿ, ಡಾ|ಆರ್‌.ಎಂ ಪತ್ತಾರ, ಮಹಾವೀರ ಉಪಾಧ್ಯೆ, ಜಿನೇಂದ್ರ ಕುಂದಗೋಳ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next