Advertisement

Mysuru Dasara: ವೀರನಹೊಸಹಳ್ಳಿಯಲ್ಲಿ ಗಜಪಯಣಕ್ಕೆ ಸಕಲ ತಯಾರಿ

08:39 PM Aug 20, 2024 | Team Udayavani |

ಹುಣಸೂರು: ವಿಶ್ವ ವಿಖ್ಯಾತ ದಸರಾ ಮಹೋತ್ಸವದ ಮುನ್ನುಡಿಯಾದ ಗಜಪಯಣಕ್ಕೆ ನಾಗರಹೊಳೆ ಉದ್ಯಾನದ ಹೆಬ್ಬಾಗಿಲು ವೀರನಹೊಸಹಳ್ಳಿಯಲ್ಲಿ ಸಕಲ ಸಿದ್ದತೆ ಕೈಗೊಳ್ಳಲಾಗಿದೆ.

Advertisement

ಗಜಪಯಣಕ್ಕೆ ಚಾಲನೆ ನೀಡುವ ನಾಗರಹೊಳೆ ಉದ್ಯಾನದ ಹೆಬ್ಬಾಗಿಲು ಸಿಂಗರಿಸಲಾಗಿದ್ದು, ರಸ್ತೆಯುದ್ದಕ್ಕೂ ಸ್ವಾಗತ ಕಮಾನು ಅಳವಡಿಸಲಾಗಿದೆ. ಇನ್ನು ಕಾರ್ಯಕ್ರಮ ನಡೆಯುವ ವೇದಿಕೆಯ ಆನೆಗಳ ಚಿತ್ತಾರ ಬಿಡಿಸಿ ಅಲಂಕಾರಗೊಳಿಸಲಾಗಿದೆ. ಜರ್ಮನ್ ಟೆಂಟ್‌ನ ವೇದಿಕೆ ಹಾಗೂ ವಿಐಪಿ ಗಳಿಗೆ ಹಾಗೂ ಸಾರ್ವಜನಿಕರಿಗೆ ಪ್ರತ್ಯೇಕ ಆಸನದ ವ್ಯವಸ್ಥೆ ಮಾಡಲಾಗಿದೆ. ಹಾಗೆಯೇ  3,500 ಮಂದಿಗೆ ಊಟದ ಪ್ಯಾಕೆಟ್ ವ್ಯವಸ್ಥೆ ಹಾಗೂ 900 ಮಂದಿ ವಿಐಪಿಗಳಿಗೆ ಭೋಜನ ವ್ಯವಸ್ಥೆ ಕಲ್ಪಿಸಲಾಗಿದೆ.

ಹಿರಿಯ ಅಧಿಕಾರಿಗಳ ಪರಿಶೀಲನೆ:
ವೀರನಹೊಸಹಳ್ಳಿಗೆ ಎಪಿಸಿಸಿಎಫ್ ಕುಮಾರ್ ಪುಷ್ಕರ್, ಪ್ರಾಜೆಕ್ಟ್ ಟೈಗರ್ ಹೆಡ್ ರಮೇಶ್‌ಕುಮಾರ್, ಮೈಸೂರು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಮಾಲತಿಪ್ರಿಯಾ, ಡಿಸಿಎಫ್‌ಗಳಾದ ಡಾ.ಐ.ಬಿ.ಪ್ರಭುಗೌಡ, ಡಾ.ಪಿ.ಎ.ಸೀಮಾ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಸಿದ್ದತೆ ಕುರಿತು ಪರಿಶೀಲಿಸಿದರು. ಈ ವೇಳೆ ಆರ್.ಎಫ್.ಒಗಳಾದ ಸಂತೋಷ್‌ಕುಮಾರ್, ಅಭಿಷೇಕ್, ಪಶುವೈದ್ಯ ಡಾ.ಮುಜೀಬ್ ರೆಹಮಾನ್ ಮತ್ತಿತರರಿದ್ದರು.

ಹಿರಿಯ ಪೊಲೀಸ್ ಅಧಿಕಾರಿಗಳು ಪ್ರತ್ಯೇಕವಾಗಿ ವೇದಿಕೆ, ಊಟದ ವ್ಯವಸ್ಥೆ ಕಲ್ಪಿಸಿರುವ ಶಾಲೆ, ಪಾರ್ಕಿಂಗ್ ವ್ಯವಸ್ಥೆ ಬಗ್ಗೆ ಪರಿಶೀಲನೆ ನಡೆಸಿದರು. ಗಜಪಯಣದಲ್ಲಿ ಭಾಗವಹಿಸುವ ಅಭಿಮನ್ಯು ಸೇರಿ ಮೊದಲ ಹಂತದ 9 ಆನೆಗಳು ಮಂಗಳವಾರ ಸಂಜೆ ವೇಳೆಗೆ ವೀರನಹೊಸಹಳ್ಳಿಗೆ ಬಂದಿಳಿದವು.

Advertisement
Advertisement

Udayavani is now on Telegram. Click here to join our channel and stay updated with the latest news.

Next