Advertisement

Mysuru;ಆಸ್ಪತ್ರೆಯಲ್ಲಿ 12ರ ಬಾಲಕಿ ಸಾವು:ವೈದ್ಯೆ ಸೇರಿ ಮೂವರ ವಿರುದ್ಧ ಕೇಸ್ ದಾಖಲು

11:25 PM Nov 06, 2023 | Team Udayavani |

ಮೈಸೂರು: ವೈದ್ಯರ ನಿರ್ಲಕ್ಷ್ಯದಿಂದ ಚೆಲುವಾಂಬ ಆಸ್ಪತ್ರೆಯಲ್ಲಿ 12 ವರ್ಷದ ಬಾಲಕಿ ಮೃತಪಟ್ಟ ಘಟನೆ ನಡೆದಿದ್ದು .ಮೈಸೂರಿನ ಒಂದನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಎ.ಜಿ.ಶಿಲ್ಪ ಅವರು ನೀಡಿದ ಆದೇಶದ ಮೇರೆಗೆ ಆಸ್ಪತ್ರೆಯ ವೈದ್ಯೆ ಡಾ.ಚೈತ್ರಾ ಸೇರಿದಂತೆ ಮೂವರ ವಿರುದ್ದ ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಕೊಡಗಿನ ಸಂಗೀತ ಅವರ ಪುತ್ರಿ ಸೋನಿಯಾ(12) ಮೃತ ಬಾಲಕಿ.ಶ್ವಾಸಕೋಶದ ಸೋಂಕು ಮತ್ತು ಉಸಿರಾಟದ ಸಮಸ್ಯೆಯಿದ್ದ ಸೋನಿಯಾಳನ್ನು ನ್ಯಾಯಾಧೀಶರಾದ ಶಿಲ್ಪ ಅವರು, ಮಗುವಿನ ತಾಯಿ ಸಂಗೀತ ಅವರ ಕೋರಿಕೆ ಮೇರೆಗೆ ಕಳೆದ ಅ. 26 ರಂದು ಚೆಲುವಾಂಬ ಆಸ್ಪತ್ರೆಗೆ ಕರೆ ತಂದಿದ್ದರು. ಕರ್ತವ್ಯದಲ್ಲಿದ್ದ ವೈದ್ಯರು, ಬೆಡ್ ಖಾಲಿ ಇಲ್ಲ ಎಂದು ಹೇಳಿ ಜೆಎಸ್‌ಎಸ್ ಆಸ್ಪತ್ರೆಗೆ ಕಳುಹಿಸಿದ್ದಾರೆ. ಮತ್ತೆ ಜೆಎಸ್‌ಎಸ್ ಆಸ್ಪತ್ರೆಯಲ್ಲಿ ದಿನಕ್ಕೆ 25 ರಿಂದ 30 ಸಾವಿರ ರೂ. ಚಿಕಿತ್ಸಾ ವೆಚ್ಚವಾಗಲಿದೆ ಎಂದು ಅಲ್ಲಿನ ವೈದ್ಯರು ಹೇಳಿದ್ದರಿಂದ ಮತ್ತೆ ಮಗುವನ್ನು ಚೆಲುವಾಂಬ ಆಸ್ಪತ್ರೆಗೆ ಕರೆ ತರಲಾಗಿದೆ. ಈ ವೇಳೆ ಕರ್ತವ್ಯದಲ್ಲಿದ್ದ ವೈದ್ಯಾಧಿಕಾರಿ ಡಾ.ಚೈತ್ರಾ ಅವರನ್ನು ಚಿಕಿತ್ಸೆಗೆ ದಾಖಲಿಸಿಕೊಳ್ಳುವಂತೆ ಕೇಳಿದಾಗ ಚಿಕಿತ್ಸೆ ನೀಡದೇ ನಿರ್ಲಕ್ಷ್ಯ ವಹಿಸಿದರು. ಕೆಲ ಗಂಟೆಗಳ ಬಳಿಕ ಆಸ್ಪತ್ರೆಗೆ ದಾಖಲಿಸಿಕೊಂಡರು. ಸಕಾಲದಲ್ಲಿ ಚಿಕಿತ್ಸೆ ನೀಡಲು ಮುಂದಾಗದ ಡಾ.ಚೈತ್ರಾ ಸೇರಿದಂತೆ ಮೂವರ ವಿರುದ್ದ ದೇವರಾಜ ಪೊಲೀಸ್ ಠಾಣೆಯಲ್ಲಿ ನ್ಯಾಯಾಧೀಶರಾದ ಶಿಲ್ಪ ದೂರು ನೀಡಿದ್ದಾರೆ. ಜತೆಗೆ ಲೋಕಾಯುಕ್ತಕ್ಕೂ ದೂರು ಸಲ್ಲಿಸಿದ್ದಾರೆ.

ದೂರಿನ ಹಿನ್ನಲೆಯಲ್ಲಿ ದೇವರಾಜ ಠಾಣೆ ಪೊಲೀಸರು ವೈದ್ಯರ ವಿರುದ್ದ ಐಪಿಸಿ ಕಲಂ 338 ಮತ್ತು 339 ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದರು. ಬಳಿಕ ಮಗುವಿಗೆ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕುಮಾರ ಸ್ವಾಮಿ, ಕೆ.ಆರ್. ಆಸ್ಪತ್ರೆಯ ಡೀನ್ ಅಂಡ್ ನಿರ್ದೇಶಕಿ ಡಾ.ದ್ರಾಕ್ಷಾಯಿಣಿ ಅವರ ಸೂಚನೆ ಮೇರೆಗೆ ಚಿಕಿತ್ಸೆಗೆ ಮುಂದುವರೆಸಲಾಗಿತ್ತು. ನ. 4 ರಂದು ಬಾಲಕಿ ಸೋನಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಮಗು ಮೃತಪಟ್ಟ ಹಿನ್ನಲೆಯಲ್ಲಿ ಡಾ.ಚೈತ್ರಾ ಸೇರಿದಂತೆ ಮೂವರ ವಿರುದ್ದ ಐಪಿಸಿ 306 ರಡಿ ಕೊಲೆ ಪ್ರಕರಣ ದಾಖಲಾಗಿದೆ ಎಂದು ಡಿಸಿಪಿ ಮುತ್ತುರಾಜು ತಿಳಿಸಿದ್ದಾರೆ. ವೈದ್ಯರ ನಿರ್ಲಕ್ಷ್ಯದ ಬಗ್ಗೆ ಲೋಕಾಯುಕ್ತ ಡಿವೈಎಸ್ಪಿ ನೇತೃತ್ವದಲ್ಲಿ ತನಿಖೆ ಕೂಡ ನಡೆಸಲಾಗಿದ್ದು, ಡಾ.ಚೈತ್ರಾ ಸೇರಿದಂತೆ ಮೂವರ ನಿರ್ಲಕ್ಷ್ಯ ಕಂಡು ಬಂದಿದೆ ಎಂಬುದರ ಬಗ್ಗೆ ಲೋಕಾಯುಕ್ತಕ್ಕೆ ವರದಿ ಸಲ್ಲಿಸಲಾಗಿದೆ ಎಂದು ಲೋಕಾಯುಕ್ತ ಎಸ್ಪಿ ಸುರೇಶ್ ಬಾಬು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next