Advertisement

ನಾಳೆ ನಾಡಹಬ್ಬದ ಜಂಬೂ ಸವಾರಿ

03:20 PM Oct 04, 2022 | Team Udayavani |

ಮೈಸೂರು: ನಾಡಿನ ಕಲೆ, ಸಂಸ್ಕೃತಿ, ಪರಂಪರೆ ಬಿಂಬಿಸುವ ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾದ ಪ್ರಮುಖ ಆಕರ್ಷಣೆ ಜಂಬೂ ಸವಾರಿಗೆ ಕ್ಷಣಗಣನೆ ಆರಂಭವಾಗಿದ್ದು, ಸಾಂಸ್ಕೃತಿಕ ನಗರಿ ಸಕಲ ರೀತಿಯಲ್ಲೂ ವಿಜಯದಶಮಿಗೆ ಸಜ್ಜಾಗಿದೆ.

Advertisement

ಕೊರೊನಾ ಸೋಂಕು ಹಿನ್ನೆಲೆ ಕಳೆದ ಎರಡು ವರ್ಷಗಳ ಕಾಲ ಅರಮನೆಗಷ್ಟೇ ಸೀಮಿತವಾಗಿದ್ದ ನಾಡಹಬ್ಬ ಮೈಸೂರು ದಸರಾ, ಈ ಬಾರಿ ವಿಜೃಂಭಣೆಯಿಂದ ನಡೆಯುತ್ತಿದೆ. ಚಾಮುಂಡೇಶ್ವರಿಯ ಅಗ್ರಪೂಜೆಯೊಡನೆ ಆರಂಭವಾಗಿದ್ದ ದಶ ದಿನಗಳ ದಸರಾ ಉತ್ಸವಕ್ಕೆ ಜಂಬೂಸವಾರಿ ಮತ್ತು ಪಂಜಿನ ಕವಾಯತಿನೊಂದಿಗೆ ತೆರೆ ಬೀಳಲಿದೆ. ಜಂಬೂ ಸವಾರಿ ವೀಕ್ಷಿಸಲು ದೇಶ-ವಿದೇಶದ ಲಕ್ಷಾಂತರ ಪ್ರವಾಸಿಗರು ಆಗಮಿಸುವುದರಿಂದ ಅರಮನೆ ಆವರಣ ಸೇರಿದಂತೆ ಜಂಬೂ ಸವಾರಿ ಸಾಗುವ ರಾಜಮಾರ್ಗದಲ್ಲಿ ಆಸನದ ವ್ಯವಸ್ಥೆ ಸೇರಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ನಾಳೆ ವಿಜಯ ದಶಮಿ ಮೆರವಣಿಗೆ:

ಬುಧವಾರ ಮಧ್ಯಾಹ್ನ 2.36ರಿಂದ 2.50ರ ಒಳಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಅರಮನೆಯ ಬಲರಾಮ ದ್ವಾರದಲ್ಲಿ ಮುಖ್ಯಮಂತ್ರಿಗಳು ನಂದಿಧ್ವಜಕ್ಕೆ ಪೂಜೆ ಸಲ್ಲಿಸುವರು. ಬಳಿಕ ಗಜಪಡೆಯ ಮಾಜಿ ಕ್ಯಾಪ್ಟನ್‌ ಅರ್ಜುನ ನಿಶಾನೆ ಆನೆಯಾಗಿ ದಸರಾ ಮೆರವಣಿಗೆಯನ್ನು ಮುನ್ನಡೆಸಲಿದ್ದಾನೆ. ನಂತರ ಸಂಜೆ 5.7ರಿಂದ 5.18ರ ಒಳಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ವಿಜಯದಶಮಿ (ಜಂಬೂಸವಾರಿ)ಮೆರವಣಿಗೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಹೈಕೋರ್ಟ್‌ ಮುಖ್ಯನ್ಯಾಯಮೂರ್ತಿ ಸೇರಿ ಎಂಟು ಮಂದಿ ಗಣ್ಯರು ಚಿನ್ನದಂಬಾರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಲಿದ್ದಾರೆ. ಈ ಬಾರಿ ಜಂಬೂಸವಾರಿ ತಡವಾಗಿ ಆರಂಭವಾಗುವುದರಿಂದ ಬನ್ನಿಮಂಟಪ ತಲುಪುವುದು ತಡವಾಗಲಿದೆ.

ಅಂಬಾರಿ ಹೊರಲಿದ್ದಾನೆ ಅಭಿಮನ್ಯು: 2019ರ ಬಳಿಕ ನಡೆದ ದಸರಾ ಉತ್ಸವಕ್ಕೆ ಕೊರೊನಾ ಕರಿಛಾಯೆ ಆವರಿಸಿದ್ದರಿಂದ ಅರಮನೆ ಆವರಣಕ್ಕೆ ದಸರೆ ಕಾರ್ಯಕ್ರಮ ಮತ್ತು ಜಂಬೂ ಸವಾರಿ ಸೀಮಿತವಾಗಿತ್ತು. ಜತೆಗೆ ಅರ್ಜುನ 2019ರಲ್ಲಿ ಅಂಬಾರಿ ಹೊರುವ ಆನೆಯಿಂದ ನಿವೃತ್ತಿಯಾಗಿದ್ದರಿಂದ ಕೂಬಿಂಗ್‌ ಸ್ಪೆಷಲಿಸ್ಟ್‌ ಎಂದೇ ಖ್ಯಾತಿಗಳಿಸಿದ್ದ ಅಭಿಮನ್ಯು 2020-21ರಲ್ಲಿ ಅರಮನೆ ಆವರಣದಲ್ಲಷ್ಟೇ ಅಂಬಾರಿ ಹೊತ್ತಿದ್ದ. ವಿಶೇಷ ಎಂದರೆ ಈ ಬಾರಿ ಅರಮನೆಯಿಂದ ಬನ್ನಿಮಂಟಪದ ಮೈದಾನದವರೆಗೆ ಮೆರವಣಿಗೆ ಸಾಗುತ್ತಿರುವುದರಿಂದ 750 ಕೆ.ಜಿ. ತೂಕದ ಅಂಬಾರಿ ಹಾಗೂ ಗಾದಿ ಮತ್ತು ನಮಾª 200 ಕೆ.ಜಿ. ಸೇರಿ ಒಟ್ಟು 950 ಕೆ.ಜಿ. ಭಾರ ಹೊತ್ತು ಸಾಗಲಿದ್ದಾನೆ. ಅಭಿಮನ್ಯು ಜತೆಗೆ 13 ಆನೆಗಳು, ಅಶ್ವರೋಹಿಪಡೆಗಳು, ಆನೆಗಾಡಿಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ. ಇದರ ಜತೆಗೆ ಮೆರವಣಿಗೆಯಲ್ಲಿ ರಾಜ್ಯದ 31 ಜಿಪಂ, ರಾಜ್ಯಮಟ್ಟದ ವಿವಿಧ ಇಲಾಖೆಗಳು, ನಿಗಮ ಮಂಡಳಿಗಳು, ಸ್ತಬ್ಧಚಿತ್ರ ಉಪಸಮಿತಿ ಸೇರಿ 43 ಸ್ತಬ್ಧಚಿತ್ರಗಳು ಹಾಗೂ 100ಕ್ಕೂ ಅಧಿಕ ಜಾನಪದ ತಂಡಗಳು ಭಾಗವಹಿಸಲಿವೆ.

Advertisement

ವಿಶ್ವವಿಖ್ಯಾತ ಜಂಬೂ ಸವಾರಿ ವೀಕ್ಷಣೆಗೆ ಅರಮನೆ ಆವರಣದಲ್ಲಿ 20 ಸಾವಿರ ಮಂದಿಗೆ ಆಸನ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ, ಜಂಬೂ ಸವಾರಿ ಸಾಗುವ ಮಾರ್ಗದಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಪೆಂಡಾಲ್‌ ಹಾಕಿ ಆಸನದ ವ್ಯವಸ್ಥೆ ಮಾಡಲಾಗಿದೆ. ಗೋಲ್ಡ್‌ ಕಾರ್ಡ್‌, ವಿವಿಐಪಿ, ವಿಐಪಿ ಪಾಸ್‌ವುಳ್ಳವರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.

ಅಂತಿಮ ತಾಲೀಮು: ಜಂಬೂ ಸವಾರಿಯಲ್ಲಿ ಭಾಗವಹಿಸಲು ಕಾಡಿನಿಂದ ನಾಡಿಗೆ ಆಗಮಿಸಿ 55 ದಿನದಿಂದ ವಿವಿಧ ಹಂತದ ತಾಲೀಮು ನಡೆಸಿದ್ದ ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ ಗಜಪಡೆ ಸೋಮವಾರ ಅಂತಿಮ ಹಂತದ ತಾಲೀಮು ನಡೆಸಿತು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂತ್ರಿಗೂ ಅವಕಾಶ

ಅರಮನೆ ಅಂಗಳದಲ್ಲಿ ಅಂಬಾರಿ ಆನೆಯ ಮೇಲಿನ ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾದ ದೇವಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವ ವೇಳೆ ಶಿಷ್ಟಾಚಾರದ ಪ್ರಕಾರ ಮುಖ್ಯಮಂತ್ರಿ, ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ, ಜಿಲ್ಲಾ ಉಸ್ತುವಾರಿ ಸಚಿವರು, ಮೇಯರ್‌, ಜಿಲ್ಲಾಧಿಕಾರಿ, ನಗರ ಪೊಲೀಸ್‌ ಆಯುಕ್ತರು ಹಾಗೂ ರಾಜವಂಶಸ್ಥ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರಿಗೆ ವೇದಿಕೆ ಏರಲು ಅವಕಾಶ ಕಲ್ಪಿಸಲಾಗುತ್ತದೆ. ಆದರೆ, ಇದೇ ಮೊದಲ ಬಾರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಿಗೂ ಅವಕಾಶ ಕಲ್ಪಿಸಲಾಗಿದ್ದು, ಅವರೂ ಅಂಬಾರಿಯಲ್ಲಿ ಆಸೀನಳಾದ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡಲಿದ್ದಾರೆ.

ಪಂಜಿನ ಕವಾಯತಿಗೆ ಸಕಲ ಸಿದ್ಧತೆ

ಚಾಮುಂಡಿಬೆಟ್ಟದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಚಾಮುಂಡೇಶ್ವರಿಗೆ ಅಗ್ರ ಪೂಜೆ ಹಾಗೂ ಪುಷ್ಪಾರ್ಚನೆ ಮೂಲಕ ಆರಂಭವಾಗಿದ್ದ ನವರಾತ್ರಿ ಉತ್ಸವ ಜಂಬೂಸವಾರಿ ಹಾಗೂ ಬನ್ನಿಮಂಟಪದ ಮೈದಾನದಲ್ಲಿ ನಡೆಯುವ ಪಂಜಿನ ಕವಾಯತಿನ ಮೂಲಕ ದಸರೆಗೆ ತೆರೆ ಬೀಳಲಿದೆ.

ವಿಜಯ ದಶಮಿಯಂದು ರಾತ್ರಿ ನಡೆಯುವ ಪಂಜಿನ ಪವಾಯತಿಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಅ.5ರಂದು ರಾತ್ರಿ 7.30ರಿಂದ ಪಂಜಿನ ಕವಾಯತು(ಟಾರ್ಚ್‌ಲೈಟ್‌ ಪೆರೇಡ್‌) ಆರಂಭವಾಗಲಿದ್ದು, ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಕವಾಯತು ವೀಕ್ಷಿಸಿ ಗೌರವ ವಂದನೆ ಸ್ವೀಕರಿಸುವರು. ನಾಡಗೀತೆ ಬಳಿಕ ಎರಡು ಗಂಟೆ ಪೊಲೀಸ್‌ ಸಿಬ್ಬಂದಿ ಸಾಹಸಮಯ ಪ್ರದರ್ಶನ ನೀಡಲಿದ್ದು, ಮೈನವಿರೇಳಿಸುವ ಬೈಕ್‌, ಅಶ್ವಾರೋಹಿ ಪಡೆಗಳ ಸಾಹಸ ಪ್ರದರ್ಶನ ಮಾಡಲಿದ್ದಾರೆ. ಕೊನೆಗೆ ಪಂಜಿನ ಕವಾಯತಿನ ಮೂಲಕ ಹತ್ತು ದಿನಗಳ ನವರಾತ್ರಿ ಉತ್ಸವಕ್ಕೆ ತೆರೆ ಬೀಳಲಿದೆ.

„ಸತೀಶ್‌ ದೇಪುರ

Advertisement

Udayavani is now on Telegram. Click here to join our channel and stay updated with the latest news.

Next