Advertisement

ದಸರೆಗೆ 400 ಜನಮಿತಿ; ಮೈಸೂರು ಹೊರತುಪಡಿಸಿ ಇತರೆಡೆ ಹೆಚ್ಚು ಜನ ಸೇರುವಂತಿಲ್ಲ

02:30 AM Oct 06, 2021 | Team Udayavani |

ಬೆಂಗಳೂರು: ಇನ್ನೆರಡು ದಿನಗಳಲ್ಲಿ ರಾಜ್ಯಾದ್ಯಂತ ನವರಾತ್ರಿ ಸಡಗರ ಆರಂಭವಾಗಲಿದೆ. ಈ ಬಾರಿಯೂ ಮೈಸೂರಿನಲ್ಲಿ ಸರಳ ದಸರಾ ನಡೆಯಲಿದ್ದು, ರಾಜ್ಯದ ಇತರೆಡೆಗಳಲ್ಲೂ ಕೋವಿಡ್‌ ನಿಯಂತ್ರಣ ಕ್ರಮಗಳನ್ನು ಪಾಲನೆ ಮಾಡಲು ರಾಜ್ಯ ಸರಕಾರ ಸೂಚನೆ ನೀಡಿದೆ. ಈ ಸಂಬಂಧ ಮಾರ್ಗಸೂಚಿ ಹೊರಡಿಸಿರುವ ಸರಕಾರ, ಮೈಸೂರು ಹೊರತುಪಡಿಸಿ ಬೇರೆಡೆ ದಸರಾ ಕಾರ್ಯಕ್ರಮಗಳಲ್ಲಿ 400ಕ್ಕಿಂತ ಹೆಚ್ಚು ಜನ ಸೇರಬಾರದು ಎಂದು ಸೂಚನೆ ನೀಡಿದೆ.

Advertisement

ಸೋಂಕಿನ ಮೂರನೇ ಅಲೆಯ ಆತಂಕವನ್ನು ಗಮನದಲ್ಲಿ ಇರಿಸಿಕೊಂಡು ಮಾರ್ಗಸೂಚಿ ರೂಪಿಸಲಾಗಿದೆ. ಅ. 7ರಿಂದ 15ರ ವರೆಗೆ ಈ ನಿರ್ಬಂಧಗಳು ಜಾರಿಯಲ್ಲಿ ಇರಲಿವೆ. ಹೆಚ್ಚು ಜನ ಸೇರದೆ, ಸಾಮಾಜಿಕ ಅಂತರ ಕಾಪಾಡಿಕೊಂಡು ಹಬ್ಬ ಆಚರಿಸಬೇಕು. ಹಬ್ಬವನ್ನು ಸರಳವಾಗಿ ಆಚರಿಸುವ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವುದು, ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಲು ಜಿಲ್ಲಾಡಳಿತ, ಪ್ರಾಧಿಕಾರಗಳು ಕ್ರಮ ಕೈಗೊಳ್ಳಬೇಕು. ಸಾರ್ವಜನಿಕರು ಕೂಡ ಪೊಲೀಸ್‌ ಇಲಾಖೆ, ಆರೋಗ್ಯ ಇಲಾಖೆ, ಸ್ಥಳೀಯ ಆಡಳಿಯ ಸಂಸ್ಥೆಗಳು ನೀಡುವ ಸೂಚನೆಯನ್ನು ಪಾಲನೆ ಮಾಡುವುದು ಕಡ್ಡಾಯಗೊಳಿಸಲಾಗಿದೆ. ಈ ಸಂಬಂಧ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್‌ ಆದೇಶ ಹೊರಡಿಸಿದ್ದಾರೆ.

ಮೈಸೂರಿಗೆ ಪ್ರತ್ಯೇಕ
ಮೈಸೂರಿಗೆ ಪ್ರತ್ಯೇಕ ಮಾರ್ಗಸೂಚಿ ನೀಡಲಾಗಿದೆ. ಅರಮನೆ ಆವರಣದಲ್ಲಿ ನಡೆಸಲಾಗುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಬಳಕೆ, ಸ್ಯಾನಿಟೈಸರ್‌ ಕಡ್ಡಾಯಗೊಳಿಸಲಾಗಿದೆ.

ಪ್ರಮುಖ ಸ್ಥಳಗಳಲ್ಲಿ ಜನದಟ್ಟಣೆ ತಪ್ಪಿಸಬೇಕು ಮತ್ತು ಮಾಸ್ಕ್ ಧರಿಸಿರುವ ಕುರಿತು ಪೊಲೀಸರು ಪರಿಶೀಲನೆ ನಡೆಸಬೇಕು. ಮೈಸೂರಿನ ಕಾರ್ಯಕ್ರಮಗಳಿಗೆ ಹೆಚ್ಚಿನ ಸಂಖ್ಯೆಯ ಜನರನ್ನು ನಿಷೇಧಿಸಿದ್ದು, ದೃಶ್ಯ ಮಾಧ್ಯಮದ ಮೂಲಕ ಸಾರ್ವಜನಿಕರು ವೀಕ್ಷಿಸುವಂತೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.

ಇದನ್ನೂ ಓದಿ:ಐಪಿಎಲ್‌: ಯೋಜನೆಯಂತೆ ಗೆದ್ದ ಮುಂಬೈ ಇಂಡಿಯನ್ಸ್‌

Advertisement

ನೆಗೆಟಿವ್‌ ವರದಿ/ಲಸಿಕೆ ಪ್ರಮಾಣ ಪತ್ರ ಕಡ್ಡಾಯ
ಮೈಸೂರಿನ ಕಾರ್ಯಕ್ರಮದಲ್ಲಿ ಭಾಗವಹಿಸುವ ಪ್ರತಿಯೊಬ್ಬ ಅಧಿಕಾರಿ, ಸಿಬಂದಿ, ಕಲಾವಿದರು, ರಕ್ಷಣ ಸಿಬಂದಿ ಮತ್ತು ಮಾಧ್ಯಮದವರಿಗೆ ಅ. 4ರ ಅನಂತರ ಪಡೆದ ಕೊರೊನಾ ನೆಗೆಟಿವ್‌ ವರದಿ ಮತ್ತು ಕನಿಷ್ಠ ಒಂದು ಡೋಸ್‌ ಲಸಿಕೆ ಕಡ್ಡಾಯಗೊಳಿಸಲಾಗಿದೆ. ಕಲಾವಿದರು ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ತಂಡಗಳಲ್ಲಿ ಕಡ್ಡಾಯವಾಗಿ ಮೈಸೂರಿನವರಿಗೆ ಮತ್ತು ರಾಜ್ಯದ ಇತರ ಜಿಲ್ಲೆಗಳಿಂದ ಬಂದವರಿಗೆ ಮಾತ್ರ ಆದ್ಯತೆ ನೀಡಬೇಕು. ಮಾಸ್ಕ್ ಧರಿಸದಿದ್ದರೆ ಅಥವಾ ಸರಕಾರದ ನಿಯಮ ಪಾಲನೆ ಮಾಡದಿದ್ದರೆ ದಂಡ ವಿಧಿಸಬೇಕು.

ಮೈಸೂರಿಗೆ ಮಾರ್ಗಸೂಚಿ
ಅ.7-  ನಾಡಹಬ್ಬ ಉದ್ಘಾಟನೆ – 100 ಜನ ಮಿತಿ.
ಅ.7-15ರ ಸಂಜೆ – ಸಾಂಸ್ಕೃತಿಕ ಕಾರ್ಯಕ್ರಮ – 500 ಜನ ಮಿತಿ.
ಅ.15 -ಜಂಬೂ ಸವಾರಿ/ಪಂಜಿನ ಕವಾಯತು – 500 ಜನ ಮಿತಿ.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next