Advertisement

ಮೈಸೂರು ಅಸೋಸಿಯೇಶನ್‌ ಬಂಗಾರ ಹಬ್ಬ ದತ್ತಿನಿಧಿ ಉಪನ್ಯಾಸ ಕಾರ್ಯಕ್ರಮ

03:25 PM Feb 22, 2019 | |

ಮುಂಬಯಿ: ಸಿನಿಮಾದಲ್ಲಿ ಮುಖ್ಯವಾಗಿ ಮೂರು ಪ್ರಕಾರಗಳಿವೆ. ಒಂದು ಆರ್ಟ್‌ ಫಿಲ್ಮ್, ಕಲೆಗಾಗಿ ಕಲೆ ಎನ್ನುವ ಉದ್ದೇಶ ದಿಂದ ರಚಿತವಾಗುವಂತದ್ದು. ಇನ್ನೊಂದು ಕಮರ್ಷಿ ಯಲ್‌ ಮಾದರಿಯದ್ದು. ನನ್ನದು ಇವೆರಡರ ನಡುವಿನ ದಾರಿ. ಮಧ್ಯಮ ವರ್ಗದ ಸಿನೆಮಾವನ್ನು ಆರಿಸಿಕೊಂಡವನು ನಾನು. ಸಿನೆಮಾ ಅನ್ನುವುದು ಭಯಂಕರವಾದ ಜೂಜು. ಈ ಜೂಜಿನ ಆತಂಕದಲ್ಲಿ ನಾವು ಕೆಟ್ಟ ಸಿನೆಮಾವನ್ನು ಸೃಷ್ಠಿಸಬಾರದು. ಸಿನೆಮಾ ನಿರ್ದೇಶಕನಿಗೆ ಆರ್ಥಿಕ ಹೊಣೆಗಾರಿಕೆ ಇರುತ್ತದೆ. ಅಲ್ಲಿ ನಿರ್ದೇಶಕನೇ ನಿಜವಾದ ನಾಯಕ. ಎಲ್ಲವನ್ನೂ ನಿರ್ವಹಿಸುವ ಜಾಣ್ಮೆ ಅವನಿಗಿರಬೇಕು. ಸಿನಿಮಾ ಜನಸಾಮಾನ್ಯರಿಗೆ ಅರ್ಥವಾಗುವಂತೆ ಇರಬೇಕು ಎಂದು ಖ್ಯಾತ ಸಾಹಿತಿ, ಸಿನೆಮಾ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ ಅವರು ಅಭಿಪ್ರಾಯಪಟ್ಟರು.

Advertisement

ಫೆ. 17 ರಂದು ಬೆಳಗ್ಗೆ ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯ ಹಾಗೂ ಮೈಸೂರು ಅಸೋಸಿಯೇಶನ್‌ ಮುಂಬಯಿ ಜಂಟಿ ಆಯೋಜನೆಯಲ್ಲಿ ಮಾಟುಂಗ ಪೂರ್ವದ ಮೈಸೂರು ಅಸೋಸಿಯೇಶನ್‌ ಸಭಾಗೃಹದಲ್ಲಿ ಆಯೋಜಿಸಿದ್ದ ಮೈಸೂರು ಅಸೋಸಿಯೇಶನ್‌ ಬಂಗಾರ ಹಬ್ಬ ದತ್ತಿ ಉಪನ್ಯಾಸದ ಎರಡನೆ ದಿನ ನಾನು ಮತ್ತು ನನ್ನ ಸಿನಿಮಾ ವಿಷಯದ ಕುರಿತು ಉಪನ್ಯಾಸ ನೀಡಿದ ಅವರು, ತಾವು ನಿರ್ದೇಶಿಸಿದ ಕಾಡಿನ ಬೆಂಕಿಯಿಂದ ಹಿಡಿದು ಅಮೇರಿಕಾ ಅಮೇರಿಕಾ ಹಾಗೂ ಇತ್ತೀಚೆಗಿನ ಇಷ್ಟಕಾಮ್ಯದವರೆಗೆ ತಮ್ಮ ವಿವಿಧ ತರದ, ಸಿಹಿ- ಕಹಿ ಅನುಭವಗಳನ್ನು, ಸೋಲು ಗೆಲುವಿನ ದಾರಿಯನ್ನು ಸವೆಸಿದ ರೀತಿಯನ್ನು  ತೆರೆದಿಟ್ಟರು.

ಅಮೇರಿಕಾ ಅಮೇರಿಕಾ ದೊಡ್ಡ ವಿಸ್ಮಯವನ್ನು ಮಾಡಿದ ಚಿತ್ರ. ಹೊಸಬರನ್ನೇ ಆರಿಸಿಕೊಂಡ ಆ ಚಿತ್ರ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾದದ್ದು ಮಾತ್ರವಲ್ಲ ಅನೇಕ ಪ್ರಶಸ್ತಿಗಳನ್ನು ಬಾಚಿಕೊಂಡಿತು. ಅನಂತರ ಅದೆಷ್ಟು ಪರಿಶ್ರಮಪಟ್ಟು ಸಿನೆಮಾ ಮಾಡಿದರೂ ಕೂಡಾ ಪ್ರೇಕ್ಷಕರ ದೃಷ್ಟಿಯಲ್ಲಿ ಅಮೇರಿಕಾ ಅಮೇರಿಕಾ ಚಿತ್ರ ಮಾಡಿದ ಯಶಸ್ಸು ಗಳಿಸಾಗಲೇ ಇಲ್ಲ. ನಿರ್ದೇಶಕನ ಹೆಗಲ ಮೇಲೆ ನಿರ್ಮಾಪಕನ ಹಣದ ಜವಾಬ್ದಾರಿ ಇರುತ್ತದೆ. ಹೊತ್ತು ಗೊತ್ತಿಲ್ಲದೆ ಆತ ದುಡಿಯಬೇಕಾಗುತ್ತದೆ. ಆಯಾಯ ನಟ ನಟಿಯರ ಗುಣ ಸ್ವಭಾವಕ್ಕೆ ಹೊಂದಿಕೊಂಡು ಹೋಗುವ ತಾಳ್ಮೆ,  ಅವರಿಂದ ಉತ್ತಮವಾದ ಅಭಿನಯವನ್ನು ಹೊರಹಾಕಿಸುವ ಜಾಣ್ಮೆ ನಿರ್ದೇಶಕನಿರಬೇಕು ಎಂದರು. 

ಬೇರೆ ಬೇರೆ ಸಿನಿಮಾಗಳನ್ನು ವಿವಿಧ ಮಗ್ಗುಲು ಗಳಲ್ಲಿಟ್ಟು ನೋಡುವ, ವಿಮರ್ಶಿಸುವ ಕುರಿತು ಅವರು ಚರ್ಚಿಸಿ, ಅನಂತರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಪ್ರೇಕ್ಷಕರ ಸಿನೆಮಾ ಕ್ಷೇತ್ರದ ಕುತೂಹಲಕರ ಪ್ರಶ್ನೆಗಳಿಗೆ ಉತ್ತರಿಸುತ್ತಾ ನಿರ್ದೇಶಕನ ಕಲ್ಪನೆಗೆ ಸರಿಯಾದ ಚಿತ್ರ ಮೂಡಿಬರಬೇಕಾದರೆ ಪಟ್ಟಪಾಡನ್ನು ಅಮೇರಿಕಾ ಚಿತ್ರದ ಕೊನೆಯ ದೃಶ್ಯದ ಉದಾಹರಣೆ ನೀಡಿದರು.
ಮೈಸೂರು ಅಸೋಸಿಯೇಶನ್‌ನ ಜಾಗತಿಕ ಮಟ್ಟದ ಕಥಾ ಸ್ಪರ್ಧೆಯ ತೀರ್ಪುಗಾರರು ಹಾಗೂ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಖ್ಯಾತ ಸಾಹಿತಿ, ವಿಜ್ಞಾನಿ ಡಾ| ವ್ಯಾಸರಾವ್‌ ನಿಂಜೂರು ಅವರು ಕಥೆಗಾರರು ಇನ್ನಷ್ಟು ಮಾಗಬೇಕು. ಮಾಸ್ತಿಯವರನ್ನು ಅನುಸರಿಸಿದರೆ ಸಾಲದು. ಅವರ ಮಟ್ಟಕ್ಕೆ ಏರುವ ಪ್ರಯತ್ನ ಮಾಡಬೇಕು. ಅದಕ್ಕೆ ಸತತ ಓದು ಅಗತ್ಯ ಎಂದು ಸ್ಪರ್ಧಿಗಳಿಗೆ ಕಿವಿ ಮಾತು ಹೇಳಿದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ಮುಂಬಯಿ ವಿಶ್ವವಿದ್ಯಾಲಯ, ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ| ಜಿ. ಎನ್‌. ಉಪಾಧ್ಯ ಅವರು ಮಾತನಾಡಿ, ಮುಂಬಯಿಯಲ್ಲಿ ಕನ್ನಡವನ್ನು ಕಟ್ಟಿ ಬೆಳೆಸುವ 93 ವರ್ಷಗಳಿಂಡ ಸಕ್ರಿಯವಾಗಿ ತನ್ನನ್ನು ತೊಡಗಿಸಿಕೊಂಡಿದ್ದು ಕಳೆದ ಮೂರು ವರ್ಷಗಳಿಂದ ಕಥೆ, ಕಾವ್ಯ ಸ್ಪರ್ಧೆಗಳನ್ನು ರಾಷ್ಟ್ರೀಯ ಮಟ್ಟದಲ್ಲಿ ಆಯೋಜಿಸುತ್ತಿರುವುದು ಅಭಿಮಾನದ ಸಂಗತಿ. ಈ ಉಪಕ್ರಮ ಹೊಸ ಲೇಖಕರನ್ನು ಹುಟ್ಟು ಹಾಕುವಲ್ಲಿ ಯಶಸ್ಸು ಕಂಡಿದೆ ಎಂದರು.
ಬಹುಮುಖ ಪ್ರತಿಭೆಯ ನಾಗತಿಹಳ್ಳಿ ಚಂದ್ರಶೇಖರ ಅವರು ಸಿನೆಮಾ ಕ್ಷೇತ್ರಕ್ಕೆ ಹೊಸ ಆಯಾಮವನ್ನು ನೀಡಿದವರು. ಮೂಲತ: ಸಾಹಿತಿಯಾಗಿ ಸಿನೆಮಾ ಕ್ಷೇತ್ರಕ್ಕೆ ತಮ್ಮದೇ ಆದ ಮಹತ್ವದ ಯೋಗದಾನ ನೀಡಿದ್ದಾರೆ ಎಂದು ನಾಗತಿಹಳ್ಳಿ ಅವರನ್ನು ಅಭಿನಂದಿಸಿದರು.

Advertisement

ಇದೇ ಸಂದರ್ಭದಲ್ಲಿ ಬೇಂದ್ರೆ ಕಾವ್ಯಕೂಟ ಸ್ಪರ್ಧೆಯ ವಿದ್ಯಾರ್ಥಿ ವಿಭಾಗದಲ್ಲಿ ಬಹುಮಾನ ಪಡೆದ ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಎಂಎ ವಿದ್ಯಾರ್ಥಿನಿ ಅನಿತಾ ಪೂಜಾರಿ ತಾಕೋಡೆ ಅವರನ್ನು ಗೌರವಿಸಲಾಯಿತು ಪದ್ಮನಾಭ ಅವರು ಸ್ವಾಗತ ಗೀತೆ ಹಾಡಿದರು. ಕನ್ನಡ ವಿಭಾಗ  ಮುಂಬಯಿ ವಿಶ್ವವಿದ್ಯಾಲಯದ ಸಹಪ್ರಾಧ್ಯಾಪಕರಾದ ಡಾ| ಪೂರ್ಣಿಮಾ ಸುಧಾಕರ ಶೆಟ್ಟಿ ಅವರು ಕಾರ್ಯಕ್ರಮ ನಿರೂಪಿಸಿದರು. ಮೈಸೂರು ಅಸೋಸಿಯೇಶನ್‌ನ ಅಧ್ಯಕ್ಷರಾದ ಕೆ. ಕಮಲಾ ಅವರು ವಂದಿಸಿದರು.

ಇದೇ ಸಂದರ್ಭದಲ್ಲಿ ಮೈಸೂರು ಅಸೋಸಿಯೇಶನ್‌ ಆಯೋಜಿಸಿದ ಕಥಾ ಸ್ಪರ್ಧೆಯ ವಿಜೇತರಿಗೆ ಬಹುಮಾನವನ್ನು ನೀಡಲಾಯಿತು. ಮುಸ್ತಾಫ ಕೆ. ಎಚ್‌ ಮಂಗಳೂರು ಪ್ರಥಮ, ದಿವ್ಯಾ ಕಾರಂತ ಬೆಂಗಳೂರು ದ್ವಿತೀಯ, ಹುಳಗೋಳ ನಾಗಪತಿ ಹೆಗಡೆ, ಅಂಕೋಲಾ ತೃತೀಯ, ಪ್ರವೀಣ್‌ ಕುಮಾರ್‌ ಜಿ.  ಬೆಂಗಳೂರು ಹಾಗೂ ಎಸ್‌. ಜಿ. ಶಿವಶಂಕರ್‌ ಮೈಸೂರು ಅವರು ಪ್ರೋತ್ಸಾಹ ಬಹುಮಾನವನ್ನು ಪಡೆದುಕೊಂಡರು. ಖ್ಯಾತ ಸಾಹಿತಿ ಸುನಂದಾ ಕಡಮೆ ಹುಬ್ಬಳ್ಳಿ ಹಾಗೂ ಡಾ| ವ್ಯಾಸರಾವ್‌ ನಿಂಜೂರು ಮುಂಬಯಿ ಇವರು ತೀರ್ಪುಗಾರರಾಗಿ ಸಹಕರಿಸಿದ್ದರು. ನಾರಾಯಣ ನವಿಲೇಕರ್‌ ಅವರು ಕಥಾ ಸ್ಪರ್ಧೆಯ ವಿಜೇತರನ್ನು ಪರಿಚಯಿಸಿ ಯಾದಿಯನ್ನು ಓದಿದರು. ವಿಜೇತರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next