Advertisement

“ಅನರ್ಹ ಶಾಸಕರನ್ನು ಸೋಲಿಸುವುದೇ ನನ್ನ ಗುರಿ’

09:47 AM Nov 15, 2019 | Team Udayavani |

ಬೆಂಗಳೂರು: ಮೈತ್ರಿ ಸರಕಾರ ಪತನಗೊಳ್ಳಲು ಕಾರಣರಾದ ಹದಿನೈದು ಅನರ್ಹ ಶಾಸಕರನ್ನು ಸೋಲಿಸುವುದೇ ನನ್ನ ಮೊದಲ ಗುರಿ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

Advertisement

ಪತ್ರಕರ್ತರ ಜತೆ ಮಾತನಾಡಿದ ಅವರು, ನನಗೆ ಕಾಂಗ್ರೆಸ್‌ ಅಥವಾ ಸಿದ್ದರಾಮಯ್ಯ ಅವರು ಶತ್ರು ಅಲ್ಲ. ಸಿದ್ದರಾಮಯ್ಯ ಅವರು ಏನು ಬೇಕಾದರೂ ಹೇಳಿ ಕೊಳ್ಳಲಿ, ರಾಜಕೀಯವಾಗಿ ನಮಗೆ ವೈರತ್ವ ಇರಬಹುದು. ಆದರೆ ಉಪ ಚುನಾವಣೆಯಲ್ಲಿ ಅನರ್ಹರನ್ನು ಸೋಲಿಸಲು ಏನೆಲ್ಲ ಕಾರ್ಯತಂತ್ರ ಮಾಡಬಹುದೋ ಅವೆಲ್ಲವನ್ನೂ ಮಾಡು ತ್ತೇನೆ ಎಂದು ತಿಳಿಸಿದರು.

ಜೆಡಿಎಸ್‌ ಅಭ್ಯರ್ಥಿ ಗೆಲ್ಲಿಸಿಕೊಂಡು ಬರುವುದು ಮೊದಲ ಆದ್ಯತೆ. ನಮ್ಮ ಅಭ್ಯರ್ಥಿಗಳು ಗೆಲ್ಲಲು ಸಾಧ್ಯವಿಲ್ಲದ ಕಡೆ ಬಿಜೆಪಿ ಟಿಕೆಟ್‌ ಪಡೆದಿರುವ ಅನರ್ಹರನ್ನು ಸೋಲಿಸುತ್ತೇನೆ. ಇದರಲ್ಲಿ ಯಾವುದೇ ರಾಜಿ ಇಲ್ಲ. ಆದರೆ ಕಾಂಗ್ರೆಸ್‌-ಬಿಜೆಪಿ ಜತೆ ಒಪ್ಪಂದದ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.

ಶರತ್‌ ಬಚ್ಚೇಗೌಡರಿಗೆ ಬೆಂಬಲ ಸೂಚಿಸಿದ ತತ್‌ಕ್ಷಣ ಏನೇನೋ ವ್ಯಾಖ್ಯಾನ ಬರುತ್ತಿದೆ. ನಮ್ಮ ಸಮುದಾಯ ಎಂಬ ಕಾರಣಕ್ಕೆ ಬೆಂಬಲ ಸೂಚಿಸಿಲ್ಲ. ಅವರು ಮೊದಲಿನಿಂದಲೂ ಜನತಾ ಪರಿವಾರ, ಕೆಲವೊಂದು ವ್ಯತ್ಯಾಸ ಇರುವುದರಿಂದ ಬೇರೆ ಆಗಿದ್ದಾರೆ. ನಾನು ಕಳೆದ ಒಂದು ವಾರದಿಂದ ಶರತ್‌ ಸಂಪರ್ಕದಲ್ಲಿದ್ದೇನೆ. ಅವರು ಗೆಲ್ಲುವುದು ಖಚಿತ, ಬಯಸಿದರೆ ನಾನೂ ಒಂದು ದಿನ ಪ್ರಚಾರಕ್ಕೆ ಹೋಗುತ್ತೇನೆ ಎಂದು ಹೇಳಿದರು.

ಉಪ ಚುನಾವಣೆಯಲ್ಲಿ ಪಕ್ಷದ ಶಕ್ತಿ ನೋಡಿಕೊಂಡು ಮುಂದಿನ ಭವಿಷ್ಯ ನೋಡಿಕೊಂಡು ನಾನೂ ಕಾರ್ಯತಂತ್ರ ರೂಪಿಸುತ್ತೇನೆ. ನನ್ನೆಲ್ಲ ಶ್ರಮ ಹಾಕಿ ಪಕ್ಷದ ಅಭ್ಯರ್ಥಿಗಳ ಪರ ಹೋರಾಟ ಮಾಡುತ್ತೇನೆ ಎಂದು ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next