Advertisement

ನನ್ನ ಸೋಲಿಸಿದ್ದು ಕಲಬುರಗಿ ಜನರಲ್ಲ: ಖರ್ಗೆ

06:50 PM Oct 03, 2021 | Team Udayavani |

ಕಲಬುರಗಿ: 55 ವರ್ಷದ ರಾಜಕಾರಣ. 49 ವರ್ಷ ಚುನಾಯಿತ ಪ್ರತಿನಿಧಿಯಾಗಿ ಜನ ಸಂಪರ್ಕದಿಂದಲೇ ಬೆಳೆದವ ನಾನು. ಆ ಜನ ಸಂಪರ್ಕವೇ ಇಲ್ಲದೇ ಬಹಳ ದಿನ ದೂರ ಇರುವ ಮನುಷ್ಯ ನಾನಲ್ಲ. ಅಲ್ಲದೇ ಬದುಕುವುದೂ ನನಗೆ ಕಷ್ಟ. ನನಗೆ ಸತತ 11 ಬಾರಿ ಗೆಲುವು ತಂದ ಕೊಟ್ಟವರು ಕಲಬುರಗಿ ಜನತೆ. 12ನೇ ಬಾರಿಗೆ ಸೋಲಿಸಿದ್ದು ಕಲಬುರಗಿ ಜನರಲ್ಲ. ಅದು ನರೇಂದ್ರ ಮೋದಿ, ಅಮಿತ್‌ ಶಾ ಹಾಗೂ ಆರ್‌ಎಸ್‌ಎಸ್‌. ರಾಜ್ಯಸಭೆ ವಿರೋಧ ಪಕ್ಷದ ನಾಯಕರಾದ ಕಾಂಗ್ರೆಸ್‌ ಹಿರಿಯ ಮುಖಂಡ ಡಾ| ಮಲ್ಲಿಕಾರ್ಜುನ ಖರ್ಗೆ ಶನಿವಾರ ಹೀಗೆ ಗುಡುಗಿದರು.

Advertisement

ಕಳೆದ ವರ್ಷ ರಾಜ್ಯಸಭೆ ಸದಸ್ಯರಾಗಿ ಆಯ್ಕೆಯಾಗಿದ ಖರ್ಗೆ ಅವರು ನಂತರ ಸಂಸತ್ತಿನ ಮೇಲ್ಮನೆಯ ಅಧಿಕೃತ ವಿರೋಧ ಪಕ್ಷದ ನಾಯಕರಾಗಿ ನೇಮಕವಾಗಿದ್ದರು. ತದ ನಂತರ ಅವರು ಜಿಲ್ಲೆಗೆ ಆಗಮಿಸಿರಲಿಲ್ಲ. ಸುಮಾರು ಒಂದೂವರೆ ವರ್ಷದ ಬಳಿಕ ನಗರಕ್ಕೆ ಬಂದಿದ್ದಾರೆ. ಹೀಗಾಗಿಯೇ ಜಿಲ್ಲಾ ಕಾಂಗ್ರೆಸ್‌ ವತಿಯಿಂದ ಅವರಿಗೆ ಅದ್ಧೂರಿ ಸ್ವಾಗತ ಕೋರಿ ಅಭಿನಂದನಾ ಕಾರ್ಯಕ್ರಮ ಆಯೋಜಿಸಲಾಗಿತ್ತು.

ನಗರದ ಜೈಭವಾನಿ ಕನ್ವೆನ್‌ ಶನ್‌ ಹಾಲ್‌ನಲ್ಲಿ ನಡೆದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಪ್ರಜಾತಂತ್ರ ವ್ಯವಸ್ಥೆಯಲ್ಲಿ ಎಲ್ಲ ಧರ್ಮದ ಜಾತಿಯ ಜನರು ಜೀವಿಸಬೇಕು. ಆದರೆ ಆರ್‌ಎಸ್‌ಎಸ್‌ ಸಿದ್ಧಾಂತ ಇಂತದಕ್ಕೆಲ್ಲ ಅವಕಾಶ ನೀಡಲ್ಲ. ಇದನ್ನು ಜನಸಾಮಾನ್ಯರು
ಅರ್ಥ ಮಾಡಿಕೊಳ್ಳಬೇಕು. ಬುದ್ಧ, ಬಸವ, ಅಂಬೇಡ್ಕರ್‌ ತತ್ವ, ಸಿದ್ಧಾಂತದ ವಿರೋಧ ನೀತಿಗಳ ಬಗ್ಗೆ ಜನ ಜಾಗೃತರಾಗಿರಬೇಕು ಎಂದರು.

“ಖರ್ಗೆ ಚೆನ್ನಾಗಿ ಮಾತನಾಡುತ್ತಾರೆ. ಅನುಭವಿಗಳು, ಅವರ ಅನುಭವ ಅಗತ್ಯವಾಗಿದೆ. ಆದರೆ, ಮುಂದಿನ ಬಾರಿ ಲೋಕಸಭೆಯಲ್ಲಿ ಖರ್ಗೆ ಇರುತ್ತಾರೋ, ಇಲ್ಲವೋ’ ಎಂದು ಸಂಸತ್ತಿನಲ್ಲೇ ಮೋದಿ ಬಹಿರಂಗವಾಗಿ ನನ್ನ ಸೋಲಿನ ಬಗ್ಗೆ ಹೇಳಿದ್ದರು. ಕಲಬುರಗಿ ಜನತೆ ಖರ್ಗೆ ಅವರನ್ನು ಕೈಬಿಡಲ್ಲ ಎಂದು ನಮ್ಮವರು (ಕಾಂಗ್ರೆಸ್‌ನವರು) ನಿರೀಕ್ಷೆ ಮಾಡಿದ್ದರು. ಆದರೆ ಪ್ರಜಾಪ್ರಭುತ್ವ, ಜಾತ್ಯತೀತ ತತ್ವ-ಸಿದ್ಧಾಂತಗಳಿಗೆ ಬದ್ಧನಾದ ನನ್ನನ್ನು ಸೋಲಿಸಲು ಮೋದಿ, ಶಾ, ಆರ್‌ಎಸ್‌ ಎಸ್‌ನವರು ಪಣ ತೊಟ್ಟಿದ್ದರು. ಹೀಗಾಗಿಯೇ ಕುತಂತ್ರ ಮಾಡಿ ನನ್ನನ್ನು ಸೋಲಿಸಿದ್ದರು. ಕಲಬುರಗಿ ಜನ ಸೋಲಿಸಿದ್ದಲ್ಲ ಎಂದು ಹೇಳಿದರು.

ಇತ್ತೀಚೆಗೆ ಪ್ರಧಾನಿ ನಿವಾಸದಲ್ಲಿ ಮಾನವ ಹಕ್ಕುಗಳ ಕುರಿತಾದ ಸಭೆಯಲ್ಲಿ ಪ್ರಧಾನಿ, ಗೃಹ ಸಚಿವ, ಲೋಕಸಭಾ ಸ್ಪೀಕರ್‌, ರಾಜ್ಯಸಭಾ ಸಭಾಪತಿ ಹಾಗೂ ವಿರೋಧ ಪಕ್ಷದ ನಾಯಕನಾಗಿ ನಾನು ಸೇರಿ ಐದೇ ಜನರು ಭಾಗವಹಿಸಿದ್ದೆವು. ಆಗ ಮೋದಿ ಹೇಳಿದ್ದೇನೆಂದರೆ “ಖರ್ಗೆಜೀ ನೀವು ಹಲವಾರು ವರ್ಷದಿಂದ ಚುನಾವಣೆ ಗೆಲ್ಲುತ್ತಲೇ ಬಂದಿದ್ದೀರಲ್ಲ’ ಎಂದು ಹೇಳಿದರು. ಇದಕ್ಕೆ ನಾನು ಸತತ 49 ವರ್ಷದಿಂದ ಚುನಾಯಿತ ಪ್ರತಿನಿಧಿಯಾಗಿಯೇ ಬಂದಿದ್ದೇನೆ. ಆದರೆ ನೀವು ಅಡ್ಡಗಾಲು ಹಾಕದೇ ಇದ್ದಿದ್ದರೆ ಸತತ 50ನೇ ವರ್ಷವೂ ಚುನಾಯಿತ ಜನಪ್ರತಿನಿಧಿಯಾಗಿಯೇ ಇರುತ್ತಿದ್ದೆ ಎಂದು ಉತ್ತರ ಕೊಟ್ಟಿದ್ದೇನೆ ಎಂದರು.

Advertisement

ಒಂದಾಗಲು ಬಿಡಲ್ಲ: ಬಿಜೆಪಿ ಮತ್ತು ಆರ್‌ಎಸ್‌ಎಸ್‌ನವರು ಸಾಮಾಜಿಕ ನ್ಯಾಯದ ವಿರೋಧಿಗಳು. ಬಡವರು-ದೀನ ದಲಿತರು ಒಂದಾಗುವುದನ್ನು ಯಾವುದೇ ಕಾರಣಕ್ಕೂ ಸಹಿಸಲ್ಲ. ಜನರ ಮೇಲೆ ಒಡೆದು ಆಳುವ ನೀತಿಯನ್ನೇ ಅವರು ನಂಬಿದ್ದಾರೆಂದು ವಾಗ್ಧಾಳಿ ನಡೆಸಿದರು. ಕಾಂಗ್ರೆಸ್‌ ಅ ಧಿಕಾರದಲ್ಲಿದ್ದಾಗ ಎಲ್ಲ ಜನಾಂಗದ ನಾಯಕರಿಗೆ ಅವಕಾಶ ನೀಡಲಾಗಿತ್ತು. ಕರ್ನಾಟಕದಲ್ಲಿ ಪ್ರತಿ ಹಿಂದುಳಿದ ಸಮಾಜದ ನಾಯಕರಿಗೆ ಮಹತ್ವದ ಖಾತೆ ಕೊಡಲಾಗಿತ್ತು. ಕಾಂಗ್ರೆಸ್‌ ಸಾಮಾಜಿಕ ನ್ಯಾಯದ ಪರವಾದ ಪಕ್ಷ. ಸಂವಿಧಾನ ರಕ್ಷಣೆ ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ. ಸಂವಿಧಾನದಿಂದಾಗಿಯೇ ದೇಶದ ಜನತೆಗೆ ಮೂಲಭೂತ ಹಕ್ಕುಗಳು ಸಿಕ್ಕಿವೆ. ಗಾಂಧೀಜಿ, ನೆಹರು, ಅಂಬೇಡ್ಕರ್‌ ಪ್ರಜಾಪ್ರಭುತ್ವ, ಸಾಮಾಜಿಕ ನ್ಯಾಯವನ್ನೇ ಪ್ರತಿಪಾದಿಸುತ್ತಿದ್ದರು ಎಂಬುದನ್ನು ಮರೆಬಾರದು ಎಂದರು.

ಸುಳ್ಳನ್ನೇ ಸತ್ಯ ಎನ್ನುವರು: ಬಿಜೆಪಿ ಸರ್ಕಾರದ ಜನವಿರೋಧಿ ಧೋರಣೆ ಅನುಸರಿಸುತ್ತಿದ್ದರೂ ಸಾಮಾಜಿಕ ಜಾಲತಾಣಗಳಲ್ಲಿ ಮೋದಿ ಹೇಳಿದ ಸುಳ್ಳಗಳನ್ನೇ ಸತ್ಯ ಎಂದು ಬಿಂಬಿಸಿ ಹರಿದಾಡಿಸಲಾಗುತ್ತದೆ. ಸಾರ್ವಜನಿಕ ಇಲಾಖೆ, ಸಹಕಾರಿ ಸಂಘಗಳ ಸ್ಥಾಪನೆ, ಖಾಸಗಿ ವಲಯ, ಮೈಕ್ರೋ ಇಂಡಸ್ಟ್ರೀ ಹಾಗೂ ಮೈಕ್ರೋ ಎಕಾನಮಿ ಜವಾಹರಲಾಲ್‌ ನೆಹರು ಅವರ ಸಾಧನೆಯಾಗಿತ್ತು. ಆದರೆ, ಬಿಜೆಪಿಯವರ ಸಾಧನೆ ಏನು? ಸಾರ್ವಜನಿಕ ವಲಯದ ಉದ್ದಮೆಗಳನ್ನು ಖಾಸಗಿಯವರ ಪಾಲು ಮಾಡುವುದೇ ಎಂದು ವಾಗ್ಧಾಳಿ ನಡೆಸಿದರು.

ಬರೀ ತೊಂದರೆ ಕೊಡುವವರು: ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ಭೂ ಸುಧಾರಣೆ ಕಾಯ್ದೆ ಜಾರಿಗೆ ತಂದು ಉಳುವವನೇ ಒಡೆಯ ಎಂದು ಮಾಡಿ ಭೂಮಿ ಇಲ್ಲದವರಿಗೆ ಭೂಮಿ ನೀಡಲಾಗಿತ್ತು. ಆದರೆ ಈಗ ಮೋದಿ ಅವರು ಯಾರು ಬೇಕಾದರೂ ಎಷ್ಟು ಬೇಕಾದರೂ ಭೂಮಿ ಖರೀದಿಸಲು ಅನುಕೂಲ ಮಾಡಿಕೊಡುತ್ತಿದ್ದಾರೆಂದು ದೂರಿದರು. ಶ್ರೀಮಂತರೇ ಹೆಚ್ಚು-ಹೆಚ್ಚು ಭೂಮಿ ತೆಗೆದು ಕೊಳ್ಳಲು ಅನುಮತಿ ಕೊಟ್ಟು, ಕೃಷಿ ಭೂಮಿಯನ್ನು ಉಳ್ಳವರ ಪಾಲು ಮಾಡಿ, ಸಣ್ಣ-ಸಣ್ಣ ರೈತರಿಗೆ ತೊಂದರೆ ಕೊಡಲು ಹೊರಟಿದ್ದಾರೆ. ಕಾರ್ಖಾನೆಗಳು, ಕಟ್ಟಡಗಳನ್ನು ಕಟ್ಟಬಹುದು.

ಆದರೆ ಭೂಮಿಯನ್ನು ವಿಸ್ತರಿಸಲು ಸಾಧ್ಯವೇ? ಅದನ್ನು ವಿಸ್ತರಿಸಲು ಹೋದರೆ ಆ ಕಡೆ ಅರಬ್ಬಿ ಸಮುದ್ರ, ಈ ಕಡೆ ಹಿಂದೂ ಮಹಾ ಸಾಗರದಲ್ಲಿ ಬೀಳುತ್ತೇವೆಂಬ ಪರಿಜ್ಞಾನವಾದರೂ ಮೋದಿಗೆ ಬೇಡವೇ ಎಂದು ಟೀಕಿದರು. ಎಪಿಎಂಸಿ ಕಾಯ್ದೆ ತಿದ್ದುಪಡಿ ತಂದು ಯಾರು ಬೇಕಾದರೂ ಎಲ್ಲಿ ಬೇಕಾದರೂ ಖರೀದಿಸಲು ಅನುಮತಿ ಮಾಡಿಕೊಡುತ್ತಿದ್ದಾರೆ. ದವಸ ಧಾನ್ಯಗಳ ಸಂಗ್ರಹಕ್ಕೂ ಮಿತಿ ತೆಗೆದು ಹಾಕಿದ್ದಾರೆ.

ದನಸ ಧಾನ್ಯಗಳ ಬೆಲೆ ಗಗನಕ್ಕೆ ಏರಲಿದೆ. ಈಗಾಗಲೇ ಪೆಟ್ರೋಲ್‌, ಡಿಸೇಲ್‌, ಅಡುಗೆ ಅನಿಲ ಬೆಲೆ ಹೆಚ್ಚಳ ಮಾಡಿ ಜನರಿಗೆ ತೊಂದರೆ ಕೊಡುತ್ತಿದ್ದಾರೆ. ಬೆಲೆ ಹೆಚ್ಚಳವೇ ಬಿಜೆಪಿ, ಮೋದಿಯ ಪ್ರಗತಿ ಎಂದು ಕುಟುಕಿದ ಖರ್ಗೆ, ಸುಳ್ಳು ಹೇಳುವ ಮತ್ತು ತೊಂದರೆ ಕೊಡುವವರನ್ನು ಅಧಿಕಾರದಿಂದ ದೂರ ತಳ್ಳ ಬೇಕೆಂದು ಕರೆ ನೀಡಿದರು. ಮಹಾರಾಷ್ಟ್ರ ಕಾಂಗ್ರೆಸ್‌ ಕಾರ್ಯಾಧ್ಯಕ್ಷ ಬಸವರಾಜ ಪಾಟೀಲ ಮುರಮ್‌, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಶಾಸಕರಾದ ಶರಣಬಸಪ್ಪಗೌಡ ದರ್ಶನಾಪುರ, ರಾಜಶೇಖರ ಪಾಟೀಲ, ರಹೀಂ ಖಾನ್‌, ಮುಖಂಡರಾದ ಶರಣಪ್ಪ ಮಟ್ಟೂರು, ತಿಪ್ಪಣ್ಣಪ್ಪ ಕಮಕನೂರು, ವೆಂಕಟಪ್ಪ ನಾಯಕ, ನೀಲಕಂಠರಾವ ಮೂಲಗೆ, ಮಾರುತಿರಾವ್‌ ಮಾಲೆ, ಶಿವಾನಂದ ಪಾಟೀಲ ಹಾಗೂ ಮತ್ತಿತರರು ಇದ್ದರು.

ಆಗುವುದನ್ನು ಆಗುತ್ತದೆ, ಇಲ್ಲವಾದಲ್ಲಿ ಇಲ್ಲ ಎಂದು ನಾನು ಸ್ಪಷ್ಟವಾಗಿ ಹೇಳುವವನು. ಆದರೆ, ಬಿಜೆಪಿಯವರ ರೀತಿ ಸುಳ್ಳುಗಳನ್ನು ಹೇಳುವುದಿಲ್ಲ. ಕಲ್ಯಾಣ ಕರ್ನಾಟಕ ಭಾಗಕ್ಕೆ 371ನೇ (ಜೆ) ಕಲಂನ್ನು ಸುಲಭವಾಗಿ ಜಾರಿ ಮಾಡಿದ ಯಾರಾದರೂ ಸಂಸದರನ್ನು ತೋರಿಸಿದರೆ, ಇವತ್ತೇ ನಾನು ನನ್ನ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ.
ಡಾ| ಮಲ್ಲಿಕಾರ್ಜುನ ಖರ್ಗೆ,
ವಿರೋಧ ಪಕ್ಷದ ನಾಯಕ, ರಾಜ್ಯಸಭೆ

ಡಾ| ಮಲ್ಲಿಕಾರ್ಜುನ ಖರ್ಗೆ ಮತ್ತು ನಮ್ಮ ತಂದೆ ದಿ. ಧರ್ಮಸಿಂಗ್‌ ಒಟ್ಟಾಗಿ ವಿಧಾನಸಭೆ ಮತ್ತು ಲೋಕಸಭೆ ಪ್ರವೇಶಿದವರು. ಇಬ್ಬರು ರಾಜಕಾರಣದ ಲವ-ಕುಶ ಎಂದೇ ಖ್ಯಾತರಾದವರು. ಇವತ್ತು ಸಂಸತ್ತಿನಲ್ಲಿ ಖರ್ಗೆ ಮಾತನಾಡಲು ಎದ್ದು ನಿಂತರೆ, ಆಡಳಿತ ಪಕ್ಷ ಬಿಜೆಪಿಯವರ ಎದೆ ಢವ-ಢವ ಎನ್ನುತ್ತದೆ.
ಡಾ| ಅಜಯಸಿಂಗ್‌, ವಿರೋಧ ಪಕ್ಷದ
ಮುಖ್ಯಸಚೇತಕ, ವಿಧಾನಸಭೆ

ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅನುಪಸ್ಥಿತಿಯನ್ನೇ ಕೆಲವರು ಬಂಡವಾಳ ಮಾಡಿಕೊಂಡಿದ್ದರು. ಜಿಲ್ಲೆಯಲ್ಲಿ ಭ್ರಷ್ಟಾಚಾರ ಮಿತಿ ಮೀರಿ ಹೋಗಿದೆ. “ಬಾಸ್‌ ಈಸ್‌ ಬ್ಯಾಕ್‌’ ಆಗಿದ್ದು, ಎಲ್ಲದಕ್ಕೂ ಅಂಕುಶ ಬೀಳಲಿದೆ.
ಜಗದೇವ ಗುತ್ತೇದಾರ,
ಅಧ್ಯಕ್ಷ, ಜಿಲ್ಲಾ ಕಾಂಗ್ರೆಸ್

Advertisement

Udayavani is now on Telegram. Click here to join our channel and stay updated with the latest news.

Next