Advertisement

ಭೀಮಪಲಾಸ ಸಂಗೀತ ಮಹೋತ್ಸವ ಆರಂಭ

10:57 AM Mar 21, 2022 | Team Udayavani |

ಧಾರವಾಡ: ಭಾರತೀಯ ಸಂಗೀತಕ್ಕೆ ಭದ್ರ ಬುನಾದಿ ಹಾಗೂ ಭವಿಷ್ಯ ಇದ್ದು, ಸಂಗೀತದಲ್ಲಿನ ವಿವಿಧ ರಾಗಗಳ ಆಲಿಸುವುದರಿಂದ ರೋಗಗಳು ವಾಸಿ ಆಗಲಿವೆ ಎಂಬ ಮಾತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

Advertisement

ನಗರದ ಸೃಜನಾ ರಂಗಮಂದಿರದಲ್ಲಿ ಭಾರತರತ್ನ ಪಂ|ಭೀಮಸೇನ ಜೋಶಿ ಜನ್ಮಶತಮಾನೋತ್ಸವ ಪ್ರಯುಕ್ತ ಜಿ.ಬಿ. ಜೋಶಿ ಮೆಮೋರಿಯಲ್‌ ಟ್ರಸ್ಟ್‌, ಹುಬ್ಬಳ್ಳಿ ಕ್ಷಮತಾ ಸಂಸ್ಥೆಗಳು ಹಮ್ಮಿಕೊಂಡಿರುವ 11 ದಿನಗಳ ಸಂಗೀತೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಈ ನಿಟ್ಟಿನಲ್ಲಿ ಇದೀಗ ಸಂಗೀತ ಥೆರಪಿ ಸಹ ಶುರುವಾಗಿದೆ. ಈ ಕ್ಷೇತ್ರದಲ್ಲಿ ಹೆಚ್ಚು ಸಂಶೋಧನೆಗಳು ನಡೆಯಬೇಕು ಎಂದರು.

ಪಂಡಿತ ವಿಷ್ಣು ಭಾತಕಂಡೆ ಅವರು ಅನಂತ ರಾಗಗಳನ್ನು ಸೇರಿಸಿ ಬರೆದ ಹಿಂದೂಸ್ತಾನಿ ಸಂಗೀತ ಪದ್ಧತಿ ಎಂಬ ಗ್ರಂಥ ಇಂದಿಗೂ ಹಿಂದೂಸ್ತಾನಿ ಸಂಗೀತಕ್ಕೆ ಆಧಾರವಾಗಿದೆ. ಸಂಗೀತದ ಪ್ರತಿಯೊಂದು ರಾಗಗಳಿಗೂ ನಿಯಮಗಳಿವೆ. ಅವುಗಳನ್ನು ಕೇಳುವುದರಿಂದಲೂ ಮನುಷ್ಯನ ಆರೋಗ್ಯದಲ್ಲಿ ಸುಧಾರಣೆ ಆಗುತ್ತದೆ. ಹೀಗಾಗಿ ಸಂಗೀತದ ರಾಗಗಳ ಮೇಲೆ ಸಂಶೋಧನೆ ಆಗಬೇಕು. ನಮ್ಮ ಸಂಗೀತ, ಯೋಗ, ಜೀವನ ಪದ್ಧತಿಗೆ ದೇಶದಲ್ಲಿ ದೊಡ್ಡ ಬೆಲೆ ಇದೆ. ಜಗತ್ತಿನ ಅನೇಕ ದೇಶದ ಜನರು ಅಧ್ಯಯನ ಮಾಡುತ್ತಿದ್ದು, ಇದು ಹೆಮ್ಮೆಯ ಸಂಗತಿ ಎಂದರು. ಸಂಗೀತಕ್ಕೆ ಹೊಸ ವಿಧಾನ ಮತ್ತು ಆಯಾಮ ತಂದು ಕೊಟ್ಟ ಭಾರತರತ್ನ ಪಂ|ಭೀಮಸೇನ ಜೋಶಿ ಅವರಿಂದ ಮರಾಠಿ ಅಭಂಗ, ದಾಸವಾಣಿ ಸಾಕಷ್ಟು ಪ್ರಸಿದ್ಧಿ ಪಡೆದವು. ಈ ಸಾಧನೆಗೆ ಹಿನ್ನೆಲೆ ಬೇಕಿಲ್ಲ ಎಂಬುದನ್ನು ಅವರು ಸಾಬೀತು ಮಾಡಿದ್ದಾರೆ. ಮನೆ ಕೆಲಸದೊಂದಿಗೆ ಸಂಗೀತ ಕಲಿತು ಸಾಧನೆ ಮಾಡಿದ ಅವರು ಸಂಗೀತ ಕ್ಷೇತ್ರದಲ್ಲಿ ಚಿರಸ್ಥಾಯಿಯಾಗಿ ಉಳಿಸಿದ್ದಾರೆ. ಮನುಷ್ಯನಲ್ಲಿ ಕಲಿಕೆಯ ಆಸಕ್ತಿ ಇದ್ದರೆ ಜೀವನದಲ್ಲಿ ಯಾವ ಮಟ್ಟದಲ್ಲಿ ಸಾಧನೆ ಮಾಡಬಹುದು ಎಂಬುದಕ್ಕೆ ಇವರೇ ಸಾಕ್ಷಿ ಎಂದರು.

ಶಾಸಕ ಅರವಿಂದ ಬೆಲ್ಲದ ಮಾತನಾಡಿ, ರಾಜ್ಯ ಸರ್ಕಾರದಿಂದ ಭೀಮಸೇನ ಜೋಶಿ ಶತಮಾನೋತ್ಸವ ನಿಮಿತ್ತ 3 ದಿನದ ಸಮಾರಂಭ ಆಯೋಜಿಸಲು ಸಿಎಂಗೆ ಮನವಿ ಸಲ್ಲಿಸಲಾಗಿತ್ತು. ಆದರೆ ಅವರು ಒಂದು ವಾರದ ಕಾರ್ಯಕ್ರಮ ನಡೆಸಲು ಸೂಚಿಸಿ, ಬಜೆಟ್‌ನಲ್ಲಿ ಅನುದಾನ ಸಹ ನೀಡಿದ್ದಾರೆ. ಸಾಹಿತ್ಯ, ಕಲಾಭಿಮಾನಿಗಳ ತವರೂರಾದ ಧಾರವಾಡಕ್ಕೆ ಲಲಿತ ಕಲಾ ಅಕಾಡೆಮಿ ಬಂದಿದೆ. ಕಲಾ ಗ್ರಾಮಕ್ಕೆ ಜಾಗೆ ಹುಡುಕುತ್ತಿದ್ದು, ಶೀಘ್ರದಲ್ಲೇ ನಿಗದಿ ಮಾಡಲಾಗುವುದು ಎಂದರು.

Advertisement

ಇದೇ ಸಂದರ್ಭದಲ್ಲಿ ಭೀಮಫಲಾಸ್‌ ಸಂಗೀತ ಕಾರ್ಯಕ್ರಮಕ್ಕೆ ಸಹಕಾರ ನೀಡಿದವರನ್ನು ಸನ್ಮಾನಿಸಲಾಯಿತು. ಇದಕ್ಕೂ ಮುನ್ನ ನವದೆಹಲಿಯ ಪಂ|ರಾಜೇಂದ್ರ ಪ್ರಸನ್ನ ಬಾನ್ಸುರಿ ವಾದನ ಪ್ರಸ್ತುತಪಡಿಸಿದರೆ, ಮಧ್ಯಾಹ್ನ ಪಂ| ಜಯತೀರ್ಥ ಮೇವುಂಡಿ ಗಾಯನ, ಪುಣೆಯ ರಾಮದಾಸ ಫ‌ಳಸುಲೆ ತಬಲಾ ಸೋಲೊ, ಸಂಜೆ ಪುಣೆಯ ನಿಷಾದ ಬಾಕ್ರೆ, ವಿದುಷಿ ಅನುರಾಧಾ ಕುಬೇರ ಗಾಯನ ಪ್ರಸ್ತುತಪಡಿಸಿದರು. ಎಲ್‌ಐಸಿಯ ಹಿರಿಯ ವಿಭಾಗೀಯ ವ್ಯವಸ್ಥಾಪಕ ಎಂ.ಮನೋಹರ, ಡಾ|ರಮಾಕಾಂತ ಜೋಶಿ, ಸಮೀರ ಜೋಶಿ, ಅನಂತ ಹರಿಹರ ಇನ್ನಿತರರಿದ್ದರು. ಕ್ಷಮತಾ ಸಂಸ್ಥೆಯ ಗೋವಿಂದ ಜೋಶಿ ಸ್ವಾಗತಿಸಿದರು.

 

ನಮ್ಮದರ ಮೇಲೆ ನಮಗೆ ವಿಶ್ವಾಸ ಕಡಿಮೆ. ಭಗವದ್ಗೀತೆ ಇಂಗ್ಲಿಷ್‌ನಲ್ಲಿ ಬರೋವರೆಗೆ ಬಹಳ ಜನ ನಂಬಿರಲಿಲ್ಲ. ಈಗ ಭಗವದ್ಗೀತೆ ಬಗ್ಗೆ ಜಾಗೃತಿ ಆಗುತ್ತಿರುವುದು ಒಳ್ಳೆಯದು. ಅದರಲ್ಲೂ ಪಠ್ಯದಲ್ಲಿ ಭಗವದ್ಗೀತೆ ತರುವ ವಿಚಾರ ನಡೆದಿದ್ದು, ಈ ಬಗ್ಗೆ ಜಾತ್ಯತೀತರನ್ನು ಬಿಟ್ಟು ಉಳಿದವರೆಲ್ಲರೂ ಒಪ್ಪುತ್ತಿದ್ದಾರೆ. ಜಾತ್ಯತೀತತೆ ಅನ್ನೋದು ಒಂದು ವಿಚಿತ್ರ. ಅದೊಂದು ಧರ್ಮಾತೀತತೆ ಎಂದು ತಿಳಿದಿದ್ದಾರೆ. ಧರ್ಮದ ಆಧಾರದ ಮೇಲೆ ಜೀವನ ನಡೆಯಬೇಕು. ರಾಜಕೀಯದಲ್ಲಿಯೂ ಧರ್ಮ ಬೇಕು. ಧರ್ಮ ರಹಿತ ಜೀವನ, ರಾಜಕೀಯ ಶೂನ್ಯವಾಗುತ್ತದೆ. ಧರ್ಮ ಇಲ್ಲದೇ ಹೋದಲ್ಲಿ ಎರಡೂ ಶೂನ್ಯ ಆಗಿ ಬಿಡುತ್ತವೆ.

-ಪ್ರಹ್ಲಾದ ಜೋಶಿ, ಕೇಂದ್ರ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next