Advertisement

ಸಂಗೀತ ಹೃದಯದ ಭಾಷೆ

02:19 PM Nov 18, 2021 | Team Udayavani |

 ಚಿಕ್ಕಬಳ್ಳಾಪುರ: ಸಂಗೀತ ಹೃದಯದ ಭಾಷೆಯಾಗಿದ್ದು ಅವ್ಯಕ್ತ ರೂಪದಿಂದ ವ್ಯಕ್ತವಾಗಿ ಹೃದಯಕ್ಕೆ ಹೃದಯವನ್ನು ಬೆಸೆಯುವ ಮಾಂತ್ರಿಕ ಶಕ್ತಿಗೆ ಸಂಗೀತ ಎನ್ನುತ್ತಾರೆ ಎಂದು ಸದ್ಗುರು ಶ್ರೀಮಧುಸೂದನ ಸಾಯಿ ತಿಳಿಸಿದರು.

Advertisement

ತಾಲೂಕಿನ ಮುದ್ದೇನಹಳ್ಳಿಯ ಸಾಯಿ ಗ್ರಾಮದ ಸತ್ಯಸಾಯಿ ಪ್ರೇಮಾಮೃತಂ ಸಭಾ ಭವನದಲ್ಲಿ ಭಗವಾನ್‌ ಸತ್ಯಸಾಯಿಬಾಬಾ ಅವರ 96ನೇ ಜನ್ಮದಿನಾಚರಣೆ ಪ್ರಯುಕ್ತ ನಡೆದ 2 ದಿನಗಳ ಭಾರತ ಸಂಗೀತ ಸಮ್ಮೇಳನ ಉದ್ಘಾಟನೆಯಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ದೇಹ ಮತ್ತು ಬುದ್ಧಿಯನ್ನು ಏಕಕಾಲದಲ್ಲಿ ಏಕತ್ವದಲ್ಲಿ ವಿಲೀನಗೊಳಿಸಿ ಪರಮಾನಂದ ಸ್ವರೂಪಿಯ ಪರಮ ಆನಂದವನ್ನು ಕರುಣಿಸುವ ಚೈತನ್ಯವೇ ಸಂಗೀತ ಎಂದು ಹೇಳಿದರು. ಆಧ್ಯಾತ್ಮಿಕತೆ ಭಾರತದ ನೆಲೆಗಟ್ಟು. ಭಾವ, ರಾಗ, ತಾಳಗಳ ಮಿಡಿತದಿಂದ ಉಂಟಾದ ಸಂಸ್ಕಾರ- ಸಂಸ್ಕೃತಿಯೇ ಭಾರತದ ಜೀವಾಳ. ನಮ್ಮ ನಿತ್ಯ ಜೀವನದಲ್ಲಿ ಸಂಗೀತವನ್ನು ಅಳವಡಿಸಿದರೆ ಅಹಂಕಾರ ಮಮಕಾರ ಮರೆತು ಬಾಳಿನ ಅರ್ಥದ ಅರಿವಾಗುತ್ತದೆ ಎಂದರು. ಕೋವಿಡ್‌ ಮಾರ್ಗಸೂಚಿ ಅನುಸಾರ ಸಮ್ಮೇಳನದ ಲಾಂಛನ ಅನಾವರಣ ಮತ್ತು ಜ್ಯೋತಿ ಪ್ರಜ್ವಲನದೊಂದಿಗೆ ವಿದ್ಯುಕ್ತವಾಗಿ ಚಾಲನೆ ಪಡೆಯಿತು.

ಸಾಕಾರ ರೂಪ:ಶ್ರೀಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲ ಯದ ಕುಲಾಧಿಪತಿ ಬಿ.ಎನ್‌. ನರಸಿಂಹ ಮೂರ್ತಿ ಮಾತನಾಡಿ, ಸದಾಚಾರ, ಸತ್ಸಂಪ್ರದಾಯ ದೇಶದ ಜೀವಾಳ. ಇದನ್ನರಿತು ಬಾಳಿದವನ ಬದುಕು ಅರ್ಥ ಪೂರ್ಣವಾಗುತ್ತದೆ. ಭಕ್ತಿ ಜ್ಞಾನದ ಸರಳ ಪಥವೇ ಸಂಗೀತ. ಅದಕ್ಕೆ ಮಹತ್ವ ನೀಡಿ ಗತವೈಭವಕ್ಕೆ ಮರು ಮೆರುಗನ್ನು ಭಗವಾನ್‌ ಶ್ರೀಸತ್ಯಸಾಯಿಬಾಬಾ ಅವರ ಸಾಕಾರ ರೂಪವಾದ ಸದ್ಗುರು ಮಧುಸೂದನ ಸಾಯಿ ನೀಡುತ್ತಿದ್ದಾರೆಂದು ತಿಳಿಸಿದರು.

ಇದನ್ನೂ ಓದಿ:- ಶ್ರೀಕಿ ನಾಪತ್ತೆ ವಿಚಾರವನ್ನು ಪೊಲೀಸರು ನೋಡಿಕೊಳ್ಳುತ್ತಾರೆ: ಬೊಮ್ಮಾಯಿ

Advertisement

ಸಮ್ಮೇಳನಕ್ಕೆ ಗಾನಕಲಾ ಭೂಷಣ ಬಿರುದಾಂಕಿತ ಡಾಕ್ಟರ್‌ ಆರ್‌.ಕೆ.ಪದ್ಮನಾಭ ಮಾತನಾಡಿ, ಜಗತ್ತಿನ ಸಂಗೀತ ಪರಂಪರೆಯಲ್ಲಿ ಕರ್ನಾಟಕ ಸಂಗೀತ ಮತ್ತು ಹಿಂದುಸ್ತಾನಿ ಸಂಗೀತ ಪ್ರಮುಖ ಮಜಲು. ಅರ್ಥಪೂರ್ಣ ಬದುಕಿಗೆ ಸಾರ್ಥಕತೆ ಲೇಪನ ಪಡೆಯಬೇಕಾದರೆ ಸಂಗೀತ ಮನೆ ಮಾತಾಗಬೇಕು ಎಂದು ತಿಳಿಸಿದರು. ದೇಶದ ಪ್ರಸಿದ್ಧ ಕೊಳಲು ವಾದನ ಮಾಂತ್ರಿಕ ಪಂಡಿತ ರೋನು ಮಜುಂದಾರ್‌ ಮಾತನಾಡಿ, ನಿರಾಸೆ ಜೀವನಕ್ಕೆ ಸಂಗೀತ ಚೈತನ್ಯ ತುಂಬಬಲ್ಲ ಶಕ್ತಿ ಹೊಂದಿದೆ. ಸಂಗೀತದಲ್ಲಿ ತಲ್ಲೀನರಾದಾಗ ಅಹಂಕಾರ ಮಮಕಾರ ಮರೆಯಾಗುತ್ತದೆ ಎಂದು ತಿಳಿಸಿದರು.

ವೇದಿಕೆಯಲ್ಲಿ ಭಾರತ ಸಂಗೀತ ಸಮ್ಮೇಳನ ಸಂಘಟಕ ರಲ್ಲಿ ಒಬ್ಬರಾದ ಡಾ.ಮೈಸೂರು ಮಂಜುನಾಥ್‌, ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ ಉಪಕುಲಪತಿ ಗಳಾದ ಡಾಕ್ಟರ್‌ ಶಿವಕಂಠಮೂರ್ತಿ ಇದ್ದರು. ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ದೊರಕಿದ ನಂತರ ಮಾಂತ್ರಿಕ ಸ್ಪರ್ಶದ ಸಂಗೀತದ ಕುರಿತ ಗೋಷ್ಠಿ, ಸಂವಾದ ನೆರವೇರಿದವು. ಕಾರ್ಯಕ್ರಮದಲ್ಲಿ ವಿವಿ ವಿದ್ಯಾರ್ಥಿಗಳು, ಬೋಧಕರು, ಆಮಂತ್ರಿತ ಅತಿಥಿಗಳು, ಆಡಳಿತ ವರ್ಗದ ಸದಸ್ಯರು, ಹಿರಿಯ ತ್ಯಾಗ ಜೀವಿಗಳು, ಕಾರ್ಯಕರ್ತರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next