ಮಂಗಳೂರು: ಚಳಿಗಾಲದ ಅವಧಿಗಾಗಿ ಜನವರಿ ಮಾಸಾಂತ್ಯ ತನಕ ಆರಂಭಿಸಲಾದ ಮುರ್ಡೇಶ್ವರ – ಪಡೀಲ್ ಬೈಪಾಸ್- ಯಶವಂತಪುರ ಸಾಪ್ತಾಹಿಕ ಸ್ಪೆಷಲ್ ಎಕ್ಸ್ಪ್ರೆಸ್ (06563/06564) ರೈಲನ್ನು ಕರಾವಳಿಯ ಜನರ ಬೇಡಿಕೆಯಂತೆ ಮುಂದಿನ ಐದು ತಿಂಗಳು ಮೇ (2023) ಕೊನೆಯ ತನಕ ವಿಸ್ತರಿಸಿ ನೈಋತ್ಯ ರೈಲ್ವೇ ಶುಕ್ರವಾರ ಅಧಿಸೂಚನೆ ಹೊರಡಿಸಿದೆ.
ವಾರಕ್ಕೊಮ್ಮೆ ಯಶವಂತಪುರದಿಂದ ಶನಿವಾರ ರಾತ್ರಿ 11.55ಕ್ಕೆ ಹೊರಡುವ ರೈಲು ಮರುದಿನ ಮಧ್ಯಾಹ್ನ 1 ಗಂಟೆಗೆ ಮುರ್ಡೇಶ್ವರ ತಲುಪುತ್ತಿದೆ. ಮುರ್ಡೇಶ್ವರ ದಿಂದ ರವಿವಾರ ಮಧ್ಯಾಹ್ನ 1.30ಕ್ಕೆ ಹೊರಡುವ ರೈಲು ಮರುದಿನ ಬೆಳಗ್ಗೆ 4ಕ್ಕೆ ಯಶವಂತಪುರ ತಲುಪುತ್ತಿದೆ.
ವಾರಾಂತ್ಯದ ಶನಿವಾರ ಬೆಂಗಳೂರಿನಿಂದ ರಾತ್ರಿ ತಡವಾಗಿ ಹೊರಡುವ ಕಾರಣ ಬೆಂಗಳೂರಿನಲ್ಲಿ ಇರುವ ದಕ್ಷಿಣ ಕನ್ನಡ, ಉಡುಪಿ, ಕುಂದಾಪುರ ಕಡೆಯ ಕರಾವಳಿಯ ಹೊಟೇಲ್ ಉದ್ಯಮಿಗಳು, ಕಾರ್ಮಿಕರು ದಿನದ ಕೆಲಸ ಮುಗಿಸಿ ಊರಿಗೆ ತೆರಳಲು ಹೆಚ್ಚು ಉಪಯುಕ್ತವಾಗಿತ್ತು. ಪ್ರತೀ ಪ್ರಯಾಣದಲ್ಲೂ ಈ ರೈಲು ಭರ್ತಿಯಾಗಿ ಟಿಕೆಟ್ಗಳು ವೈಟಿಂಗ್ ಲಿಸ್ಟ್ನಲ್ಲಿ ಇರುತ್ತಿತ್ತು. ಹೆಚ್ಚಿನ ಪ್ರಯಾಣಿಕರು ಇರುವ ಹಿನ್ನೆಲೆಯಲ್ಲಿ ಈ ರೈಲನ್ನು ದಿನಂಪ್ರತಿ ಓಡಿಸುವಂತೆ ಕುಂದಾಪುರ ರೈಲ್ವೇ ಹಿತರಕ್ಷಣ ಸಮಿತಿ ಆರಂಭದಿಂದಲೂ ಆಗ್ರಹಿಸುತ್ತಿದೆ.