Advertisement

ಕರುನಾಡ ಕರ್ಣನ ನೆನೆದ ಮುನಿರತ್ನ

10:02 AM Jul 09, 2019 | Lakshmi GovindaRaj |

ಬೆಂಗಳೂರು: ಈಗಾಗಲೇ ಬಹು ನಿರೀಕ್ಷೆ ಹುಟ್ಟಿಸಿರುವ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಭಿನಯದ “ಮುನಿರತ್ನ ಕುರುಕ್ಷೇತ್ರ’ ಚಿತ್ರದ ಆಡಿಯೋ, ಭಾನುವಾರ ಸಂಜೆ ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಬಿಡುಗಡೆಯಾಯಿತು. ಕಿಕ್ಕಿರಿದು ತುಂಬಿದ್ದ ಸಭಾಂಗಣದಲ್ಲಿ ಚಿತ್ರದ “ಸಾಹೋರೆ ಸಾಹೋ ಆಜಾನುಬಾಹು…’ ಹಾಡಿನ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ಕೊಡಲಾಯಿತು. ಕಲರ್‌ಫುಲ್‌ ವೇದಿಕೆಯಲ್ಲಿ ಚಿತ್ರದ ಹಾಡಿಗೆ ನೃತ್ಯ ಕಲಾವಿದರು ಹೆಜ್ಜೆ ಹಾಕುವ ಮೂಲಕ ಮೆರುಗು ನೀಡಿದರು.

Advertisement

ಕುರುಕ್ಷೇತ್ರದ ರೂವಾರಿ ದುಬಾರಿ ನಿರ್ಮಾಪಕ ಮುನಿರತ್ನ ಮಾತನಾಡಿ, “ಬಹುಶಃ ಕನ್ನಡ ಚಿತ್ರರಂಗದಲ್ಲಿ ಎಲ್ಲಾ ಕಲಾವಿದರನ್ನು ಒಟ್ಟಿಗೆ ನೋಡುವ ಚಿತ್ರವಿದು. ನಮ್ಮ ಕಲಾವಿದರು ಅದ್ಭುತ ನಟನೆ ಮಾಡಿ ಶ್ರಮಿಸಿದ್ದಾರೆ. ಮೊದಲನೆಯದಾಗಿ ಎಲ್ಲರೂ ಕನ್ನಡ ಚಿತ್ರರಂಗದ ಹಿರಿಯ ನಟ, ಭೀಷ್ಮ ಪಾತ್ರ ಮಾಡಿದ ರೆಬಲ್‌ ಸ್ಟಾರ್‌ ದಿ. ಅಂಬರೀಶ್‌ ಅವರನ್ನು ನೆನಪಿಸಿಕೊಳ್ಳಲೇಬೇಕು. ಚರಿತ್ರೆಯಲ್ಲಿ ಉಳಿಯುವ ಪಾತ್ರ ಮಾಡಿದ್ದಾರೆ. ನೋವೆಂದರೆ ಚಿತ್ರ ಬಿಡುಗಡೆ ವೇಳೆ ಇಲ್ಲ ಎಂಬ ಬೇಸರ ಇದೆ. ಆದರೆ, ಅವರು ನಮ್ಮೊಂದಿಗಿದ್ದಾರೆ. ಪ್ರಥಮ ಬಾರಿಗೆ ರವಿಚಂದ್ರನ್‌ ಕೃಷ್ಣನ ಪಾತ್ರ, ಅರ್ಜುನ್‌ ಸರ್ಜಾ ಕರ್ಣನ ಪಾತ್ರ, ದರ್ಶನ್‌ ದುರ್ಯೋಧನನ ಪಾತ್ರವನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ ಎಂದರು.

ಯುವ ಪ್ರತಿಭೆ ನಿಖಿಲ್‌ ನಿರ್ವಹಿಸಿರುವ ಅಭಿಮನ್ಯುವಿನ ಪಾತ್ರ ವಿಶೇಷವಾಗಿದೆ. ಆಗಸ್ಟ್ 2ರಂದು ಈ 3ಡಿ ಚಿತ್ರ ತೆರೆಗೆ ಬರಲಿದ್ದು, ಭೀಮನಾಗಿ ಡ್ಯಾನಿಶ್‌ ಅಖ್ತರ್‌, ಅರ್ಜುನನಾಗಿ ಸೋನುಸೂದ್‌ ಪ್ರೀತಿಯಿಂದ ನಟಿಸಿದ್ದಾರೆ. ಈ ಚಿತ್ರ ಮಾಡೋಕೆ ಕಾರಣ ಸಿನಿಮಾ ಪ್ರೀತಿ. ಭಾರತವಲ್ಲ ಪ್ರಪಂಚದಲ್ಲಿ ಹೆಸರು ಮಾಡಿದ ಬಾಹುಬಲಿ ಚಿತ್ರದಂತೆ ನಾವೇಕೆ ಕನ್ನಡದಲ್ಲಿ ಆ ರೀತಿಯ ಚಿತ್ರ ಮಾಡಬಾರದು ಎಂದು ಯೋಚಿಸಿದಾಗ ಕಣ್ಣ ಮುಂದೆ ಬಂದದ್ದು ಕುರುಕ್ಷೇತ್ರ. ಹಾಗಾಗಿ ಇದನ್ನೇ ಸಿನಿಮಾ ಮಾಡಲು ನಿರ್ಧರಿಸಿದೆ. ಈ ಚಿತ್ರ ನೋಡಿದವರು ಬಾಹುಬಲಿಗಿಂತ ಚೆನ್ನಾಗಿದೆ ಎಂದು ಹೇಳುವುದರಲ್ಲಿ ಅನುಮಾನವಿಲ್ಲ ಎಂದು ಮುನಿರತ್ನ ವಿಶ್ವಾಸ ವ್ಯಕ್ತಪಡಿಸಿದರು.

ಈ ಚಿತ್ರವನ್ನು ಪ್ರಪಂಚಾದ್ಯಂತ ಬಿಡುಗಡೆ ಮಾಡಲು ರಾಕ್‌ಲೈನ್‌ ವೆಂಕಟೇಶ್‌ ತಯಾರಿ ನಡೆಸಿದ್ದಾರೆ. ಕನ್ನಡದ ಹೆಮ್ಮೆಯ ಚಿತ್ರ, ಐದು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ. ಚಿತ್ರದ ಗ್ರಾಫಿಕ್ಸ್ ಮಾಡಿದ ದುರ್ಗಾ ಪ್ರಸಾದ್‌, ಕಲಾ ನಿರ್ದೇಶ ಕ ಕಿರಣ್‌, ಸಂಭಾಷಣೆ ಬರೆದ ಭಾರವಿ ಅವರನ್ನು ಸಮಾರಂಭದಲ್ಲಿ ಮುನಿರತ್ನ ಪರಿಚಯಿಸಿದರು. ಸಂಕಲನಕಾರ ಜೋ.ನಿ.ಹರ್ಷ, ನಿರ್ದೇಶಕ ನಾಗಣ್ಣ, ಅಸೋಸಿಯೇಟ್‌ ದೇವು ಇವರ ಶ್ರಮ ಇಲ್ಲಿದೆ. ಎಲ್ಲರೂ ಬೆನ್ನೆಲುಬಾಗಿ ನಿಂತಿದ್ದರಿಂದ ಈ ಚಿತ್ರ ಪೂರ್ಣಗೊಂಡಿದೆ ಎಂದರು.

ನಿರ್ದೇಶಕ ನಾಗಣ್ಣ ಮಾತನಾಡಿ, “ಧೈರ್ಯ ಇರುವ ನಿರ್ಮಾಪಕರಿಂದ ಈ ಬೃಹತ್‌, ಅದ್ಧೂರಿ ಚಿತ್ರ ನಿರ್ಮಾಣ ಸಾಧ್ಯವಾಗಿದೆ. ನಿರ್ಮಾಪಕರೇ ಕುರುಕ್ಷೇತ್ರ ಚಿತ್ರದ ನಿಜವಾದ ಹೀರೋ. ಚಿತ್ರದಂತೆ, ನಿರ್ಮಾಪಕರದ್ದೂ 3ಡಿ ಧೃಷ್ಟಿಕೋನ (ವಿಷನ್‌). ಸಿನಿಮಾ ರಚಿಕರಿಗೆ ಮನೋರಂಜನೆಯ ರಸದೌತಣ ಚಿತ್ರದ ಮೂಲಕ ಸಿಗಲಿದೆ ಎಂದರು. ಸಂಭಾಷಣೆಕಾರ ಭಾರವಿ ಮಾತನಾಡಿ, ಕುರುಕ್ಷೇತ್ರ ಚಿತ್ರ ಕನ್ನಡ ನಾಡಿನ ಹಬ್ಬವಾಗಲಿದೆ. ಜಯಶ್ರೀ ದೇವಿ ಜತೆ ಇದ್ದ ನನ್ನನ್ನು ಕರೆದು ನಿರ್ಮಾಪಕರು ಅವಕಾಶ ಕೊಟ್ಟಿದ್ದಾರೆ. ಇದು ಪ್ಯಾನ್‌ ಇಂಡಿಯಾ ಸಿನಿಮಾ ಎಂದರು.

Advertisement

ನಟ ಶ್ರೀನಾಥ್‌ ಮಾತನಾಡಿ, “ಚಿತ್ರದಲ್ಲಿ ಧೃತರಾಷ್ಟ್ರನ ಪಾತ್ರ ಮಾಡಿದ್ದೇನೆ. ನಾನು ಕಪ್ಪು ಬಿಳುಪು ಸಿನಿಮಾ ಕಾಲದಿಂದಲೂ ಇರುವವನು. ತಾಂತ್ರಿಕವಾಗಿ ಈಗ ಚಿತ್ರರಂಗ ಶ್ರೀಮಂತವಾಗಿದೆ. ಈ ಕುರುಕ್ಷೇತ್ರ 3ಡಿ ಎಫೆಕ್ಟ್ಸ್ ಕೊಡುವಾಗ, ಅದ್ಭುತ ಎನಿಸಿತ್ತು. ಕಲಾವಿದರಾಗಿ ನಾವು ಈ ಚಿತ್ರದಲ್ಲಿದ್ದೇವೆ ಅದೇ ಖುಷಿ. ಮುನಿರತ್ನ ಧೈರ್ಯ ಮಾಡಿದ್ದಾರೆ. ಅವರ ಪ್ರೋತ್ಸಾಹದಿಂದ ಇದು ಸಾಧ್ಯವಾಗಿದೆ. ಧೃತರಾಷ್ಟ್ರನ ಪಾತ್ರ ಮಾಡುವಾಗ ಒಂದೊಂದು ಶಾಟ್‌ ಆದ ನಂತವೂ ಬಳಿ ಬರುತ್ತಿದ್ದ ನಿರ್ಮಾಪಕರು ಉತ್ಸಾಹ ತುಂಬುತ್ತಿದ್ದರು ಎಂದು ಚಿತ್ರೀಕರಣದ ಕ್ಷಣಗಳನ್ನು ಮೆಲುಕು ಹಾಕಿದರು.

ಚಿತ್ರದಲ್ಲಿ ದ್ರೋಣಾಚಾರ್ಯರ ಪಾತ್ರ ನಿರ್ವಹಿಸಿರುವ ನಟ ಶ್ರೀನಿವಾಸಮೂರ್ತಿ ಅವರು ಮಾತನಾಡಿ, ಬಹಳ ದಿನಗಳ ನಂತರ ಕನ್ನಡದಲ್ಲಿ ಪೌರಾಣಿಕ ಸಿನಿಮಾ ಬರುತ್ತಿದೆ. ಕುರುಕ್ಷೇತ್ರ ಒಂದು ಅದ್ಭುತ ಚಿತ್ರ. ಇದಕ್ಕಾಗಿ ನಿರ್ಮಾಪಕ ಮುನಿರತ್ನ ಅವರನ್ನು ಅಭಿನಂದಿಸಬೇಕು. ದುರ್ಯೋಧನನ ಪಾತ್ರಕ್ಕೆ ದರ್ಶನ್‌ ಸರಿಯಾದ ಆಯ್ಕೆ. ಅವರನ್ನು ಆ ಪಾತ್ರದಲ್ಲಿ ನೋಡುತ್ತಿದ್ದರೆ ಎನ್‌.ಟಿ.ರಾಮರಾವ್‌ ನೆನಪಾಗುತ್ತಾರೆ. ಅವರನ್ನು ಮರೆಸುವ ನಟನೆಯನ್ನು ದರ್ಶನ್‌ ಮಾಡಿದ್ದಾರೆ ಎಂಬ ನಂಬಿಕೆ ನನ್ನದು ಎಂದು ಹೇಳಿದರು.

ರಾಕ್‌ಲೈನ್‌ ವೆಂಕಟೇಶ್‌ ಪುತ್ರ ಯತೀಶ್‌ ಮಾತನಾಡಿ, “ಕನ್ನಡ ಸಿನಿಮಾರಂಗಕ್ಕೆ ದಾಖಲೆ ಸಿನಿಮಾ ಇದು. ನಮ್ಮ ಮಾವನವರ ಸಿನಿಮಾವನ್ನು ನಾವು ವಿತರಣೆ ಮಾಡುತ್ತಿರುವುದೇ ಖುಷಿಯ ಸಂಗತಿ ಎಂದರು. ವಿಧುರನ ಪಾತ್ರ ಮಾಡಿರುವ ರಮೇಶ್‌ ಭಟ್‌ ಮಾತನಾಡಿ, ಈ ದಿನ ಸುದಿನ. ಕಾರಣ ಆಡಿಯೋ ಬಿಡುಗಡೆಗೆ ಇಷ್ಟು ಜನ ಬಂದಿದ್ದಾರೆ. ಸಿನಿಮಾಗೆ ಇನ್ನೆಷ್ಟು ಜನ ಬರುತ್ತಾರೆ ಎಂದು ಊಹೆ ಮಾಡೋಕೂ ಆಗಲ್ಲ. ಇದೊಂದು ಸದಾವಕಾಶ ಎಂದರು.

ಗೀತರಚನೆಕಾರ ನಾಗೇಂದ್ರ ಪ್ರಸಾದ್‌ ಮಾತನಾಡಿ, ಇಂತಹ ಪ್ರಯತ್ನ ಅಸಾಧ್ಯ. ಅದನ್ನು ಮುನಿರತ್ನ ಸಾಧ್ಯವಾಗಿಸಿದ್ದಾರೆ. ಅತಿರಥ ಮಹಾರಥರ ಜತೆ ಮಾಡಿದ ಕೆಲಸ, ಹಾಡು ಬರೆಯೋ ಅವಕಾಶ ಸಿಕ್ಕಿರುವುದು ಪುಣ್ಯದ ಫಲ. ಸಾಹೋರೆ ಸಾಹೋ ಹಾಡೊಂದೇ ಅಲ್ಲ, ಎಲ್ಲ ಹಾಡುಗಳ ಬಗ್ಗೆಯೂ ಒಂದೊಂದು ದಿನ ಹೇಳಬೇಕು. ಹಳಗನ್ನಡ, ಸಂಸ್ಕೃತ ಪದಗಳನ್ನು ಇಲ್ಲಿ ಕೇಳಬಹುದು. ದರ್ಶನ್‌ ಅವರ ಮೊದಲ ಚಿತ್ರಕ್ಕೆ ಎಲ್ಲಾ ಹಾಡುಗಳನ್ನು ನಾನೇ ಬರೆದಿದ್ದೆ. ಐವತ್ತನೇ ಸಿನಿಮಾಗೂ ಎಲ್ಲಾ ಹಾಡುಗಳನ್ನು ನಾನೇ ಬರೆದಿದ್ದೇನೆ. ಅವರ ನೂರನೇ ಸಿನಿಮಾಗೂ ನಾನೇ ಹಾಡು ಬರೆಯಬೇಕೆಂಬ ಬರೆಯಯವ ಆಸೆಯಿದೆ. ಕನ್ನಡ ಚಿತ್ರರಂಗದಲ್ಲಿ ಈ ಸಿನಿಮಾ ಮೈಲಿಗಲ್ಲು ಎಂದರು.

ನಟ ರವಿಶಂಕರ್‌ ಮಾತನಾಡಿ, ಇಷ್ಟು ದಿನ “ಆರ್ಮುಗ’ ಅಂತ ಪ್ರೀತಿಯಿಂದ ಕರೆದ ಕನ್ನಡ ಸಿನಿ ಪ್ರೇಮಿಗಳು, ಕುರು ಕ್ಷೇತ್ರ ಚಿತ್ರ ನೋಡಿದ ನಂತರ ನನ್ನನ್ನು “ಶಕುನಿ ಮಾಮಾ’ ಅಂತಾರೆ. ಚಿಕ್ಕಂದಿನಲ್ಲಿ ರಾಮಾಯಣ, ಮಹಾಭಾರತ ನೋಡಿಕೊಂಡು ಬಂದವನು ನಾನು. ಇಂತಹ ಸಿನಿಮಾ ಮಾಡೋಕೆ ಧಮ್‌ ಬೇಕು. ಇವತ್ತು ಕರ್ನಾಟಕದಲ್ಲಿ ದುರ್ಯೋಧನ ಅಂದರೆ ದರ್ಶನ್‌. ಈ ಕಾಲಘಟ್ಟದಲ್ಲಿ ಈ ರೀತಿಯ ಪಾತ್ರವನ್ನು ಅವರು ಮಾಡಿದ್ದಾರೆ ಎಂದ ರವಿಶಂಕರ್‌, ಚಿತ್ರದ ಮುಖ್ಯವಾದ ಸನ್ನಿವೇಶದ ಡೈಲಾಗ್‌ ಹೇಳಿ ರಂಜಿಸಿದರು.

“ಕುರುಕ್ಷೇತ್ರ’ದಲ್ಲಿ ಪಾಂಡವರ ಅಗ್ರಜ ಧರ್ಮರಾಯನ ಪಾತ್ರದಾರಿ ಶಶಿಕುಮಾರ್‌, ಅರ್ಜುನ ಪಾತ್ರಧಾರಿ ಸೋನುಸೂದ್‌, ಭೀಮ ಡ್ಯಾನಿಶ್‌ ಅಖ್ತರ್‌, ನಕುಲ ಯಶಸ್‌, ಮಾಯ ಪಾತ್ರ ಮಾಡಿರುವ ಹರಿಪ್ರಿಯಾ ಚಿತ್ರದ ಅನುಭವ ಹಂಚಿಕೊಂಡರು. ಆಡಿಯೋ ಬಿಡುಗಡೆ ವೇಳೆ ಸಚಿವ ಡಿ.ಕೆ.ಶಿವಕುಮಾರ್‌, ಸಂಸದ ಡಿ.ಕೆ.ಸುರೇಶ್‌ ಹಾಜರಿದ್ದರು. ನಟ ದರ್ಶನ್‌, ನಿಖಿಲ್‌, ರವಿಚಂದ್ರನ್‌, ಅವಿನಾಶ್‌ ಸೇರಿದಂತೆ ಅನೇಕ ನಟ, ನಟಿಯರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next